ಚಿತ್ರದುರ್ಗ, ಡಿ.25: ಚಿತ್ರದುರ್ಗ (Chitradurga Bus Accident) ಜಿಲ್ಲೆಯ ಹಿರಿಯೂರು ತಾಲ್ಲೂಕಿನ ರಾಷ್ಟ್ರೀಯ ಹೆದ್ದಾರಿ 48ರ ಜವನಗೊಂಡನಹಳ್ಳಿ ಬಳಿ ಗುರುವಾರ ಮುಂಜಾನೆ ಸಂಭವಿಸಿದ ರಸ್ತೆ ಅಪಘಾತ ರಾಜ್ಯವನ್ನೇ ನಡುಗಿಸಿದೆ. ಕ್ರಿಸ್ಮಸ್ ಸಂಭ್ರಮದಲ್ಲಿದ್ದ ರಾಜ್ಯದಲ್ಲಿ ವಿಷಣ್ಣತೆ ಕವಿದಿದ್ದು, ಕ್ರಿಸ್ಮಸ್ ರಜೆಗೆ ಹೊರಟಿದ್ದವರನ್ನು ಜವರಾಯ ಹೊತ್ತೊಯ್ದಿದ್ದಾನೆ. ನಿದ್ದೆ ಮಂಪರಿನಲ್ಲಿದ್ದವರು ಶಾಶ್ವತ ನಿದ್ದೆಗೆ ಜಾರಿದ್ದಾರೆ. ಪೊಲೀಸರ ಮಾಹಿತಿ ಪ್ರಕಾರ 9 ಮಂದಿ ಸಜೀವ ದಹನವಾಗಿದ್ದು, ಮೃತರ ಗುರುತು ಹಚ್ಚುವುದೇ ಕಷ್ಟವಾಗಿದೆ. ಹೀಗಾಗಿ ಪೊಲೀಸರು ಡಿಎನ್ಎ ಪರೀಕ್ಷೆ ಮೊರೆ ಹೋಗಲಿದ್ದಾರೆ.
ಬೆಂಗಳೂರಿನಿಂದ ಗೋಕರ್ಣಕ್ಕೆ ತೆರಳುತ್ತಿದ್ದ 'ಸೀ ಬರ್ಡ್' (Sea Bird) ಟ್ರಾವೆಲ್ಸ್ಗೆ ಸೇರಿದ ಖಾಸಗಿ ಸ್ಲೀಪರ್ ಕೋಚ್ ಬಸ್ ಮತ್ತು ಲಾರಿ ನಡುವೆ ಡಿಕ್ಕಿ ಸಂಭವಿಸಿ, ಬಸ್ ಸಂಪೂರ್ಣವಾಗಿ ಹೊತ್ತಿ ಉರಿದಿದೆ. ಈ ದುರ್ಘಟನೆಯಲ್ಲಿ 9 ಮಂದಿ ಸಜೀವ ದಹನವಾಗಿದ್ದು, ಹಲವರು ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾರೆ.
ಪೂರ್ವ ವಲಯದ ಐಜಿಪಿ ರವಿಕಾಂತೇಗೌಡ ಅವರು ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ನೀಡಿದ್ದು, ‘ಬೆಂಗಳೂರಿನಿಂದ ಗೋಕರ್ಣಕ್ಕೆ ಹೊರಟಿದ್ದ ಬಸ್ (KA 01 AE 5217) ಸುಗಮವಾಗಿ ಸಂಚರಿಸುತ್ತಿತ್ತು. ಆದರೆ ಎದುರಿನಿಂದ ಬರುತ್ತಿದ್ದ ಕಂಟೇನರ್ ಲಾರಿ ಚಾಲಕನ ನಿರ್ಲಕ್ಷ್ಯದಿಂದ ಡಿವೈಡರ್ ದಾಟಿ ಬಂದು ಬಸ್ಸಿನ ಡೀಸೆಲ್ ಟ್ಯಾಂಕ್ಗೆ ನೇರವಾಗಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಬೆಂಕಿ ಕಿಡಿ ಉಂಟಾಗಿ ಕ್ಷಣಾರ್ಧದಲ್ಲಿ ಇಡೀ ಬಸ್ ಬೆಂಕಿಯ ಕೆನ್ನಾಲಿಗೆಗೆ ತುತ್ತಾಗಿದೆ’ ಎಂದು ವಿವರಿಸಿದ್ದಾರೆ.
Chitradurga Bus Accident: ಸ್ಲೀಪರ್ ಬಸ್ ಬೆಂಕಿಗಾಹುತಿ: 9 ಪ್ರಯಾಣಿಕರು ಸಜೀವ ದಹನ, ನಡೆದದ್ದೇನು?
ಸದ್ಯದ ಮಾಹಿತಿ ಪ್ರಕಾರ ಲಾರಿ ಚಾಲಕ ಸೇರಿದಂತೆ ಒಟ್ಟು 9 ಮಂದಿ ಸಾವನ್ನಪ್ಪಿದ್ದಾರೆ. ಬೆಂಕಿಯ ತೀವ್ರತೆ ಎಷ್ಟಿತ್ತೆಂದರೆ ಮೃತ ದೇಹಗಳು ಗುರುತು ಹಿಡಿಯಲಾರದಷ್ಟು ಸುಟ್ಟು ಕರಕಲಾಗಿವೆ. ಬಸ್ಸಿನಿಂದ ಎಂಟು ಮೃತದೇಹಗಳನ್ನು ಹೊರತೆಗೆಯಲಾಗಿದೆ. ಮೃತರ ಗುರುತು ಪತ್ತೆ ಹಚ್ಚುವುದು ಕಷ್ಟವಾಗಿರುವುದರಿಂದ ಬೆಂಗಳೂರಿನಿಂದ ವಿಧಿವಿಜ್ಞಾನ ಮತ್ತು ಡಿಎನ್ಎ (DNA) ತಂಡಗಳನ್ನು ಕರೆಸಲಾಗಿದೆ' ಎಂದು ಐಜಿಪಿ ತಿಳಿಸಿದ್ದಾರೆ.
ಬಸ್ಸಿನಲ್ಲಿ ಬೆಂಗಳೂರಿನ ಮಾವಳ್ಳಿ ಭಾಗದ 7 ಮಂದಿ ಗೆಳೆಯರು ಗೋಕರ್ಣಕ್ಕೆ ಪ್ರವಾಸಕ್ಕೆ ಹೊರಟಿದ್ದರು. ದುರದೃಷ್ಟವಶಾತ್, ಈ ತಂಡದ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. 24 ವರ್ಷದ ಮಂಜುನಾಥ್ ಎಂಬುವವರು ಶೇ. 23ರಷ್ಟು ಸುಟ್ಟ ಗಾಯಗಳೊಂದಿಗೆ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯ ಬರ್ನ್ ವಾರ್ಡ್ನಲ್ಲಿ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾರೆ. ಅವರ ಹೊಟ್ಟೆಯ ಕೆಳಭಾಗ ಸಂಪೂರ್ಣ ಸುಟ್ಟು ಹೋಗಿದೆ ಎಂದು ಕುಟುಂಬಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ.
Chitradurga Accident: ಹಿರಿಯೂರಿನ ಬಳಿ ಭೀಕರ ಅಪಘಾತ; ಕಾರು ಪಲ್ಟಿಯಾಗಿ ಮಗು ಸೇರಿ ಮೂವರ ಸಾವು
ಬದುಕುಳಿದವರ ನುಡಿ
ಅಪಘಾತದಿಂದ ಪ್ರಾಣಾಪಾಯದಿಂದ ಪಾರಾದ ಈಶಾ ಎಂಬುವವರ ತಾಯಿ ನಳಿನಿ ಮಾತನಾಡಿ, 'ನಮ್ಮ ಮಗಳು ಮತ್ತು ಆಕೆಯ ಸ್ನೇಹಿತರು ಕ್ರಿಸ್ಮಸ್ ರಜೆ ಹಿನ್ನೆಲೆ ಗೋಕರ್ಣಕ್ಕೆ ಹೋಗುತ್ತಿದ್ದರು.ಈಶಾ, ಅಮೃತ ಮತ್ತು ಅನಿರುದ್ಧ್ ಬಸ್ಸಿನ ಹಿಂಬದಿಯ ಸೀಟಿನಲ್ಲಿ ಮಲಗಿದ್ದರಿಂದ, ಅಪಘಾತವಾದಾಗ ಅಪ್ಪರ್ ಸೀಟ್ನಿಂದ ಜಂಪ್ ಮಾಡಿ ಪ್ರಾಣ ಉಳಿಸಿಕೊಂಡಿದ್ದಾರೆ. ಆದರೆ ಮುಂದಿನ ಸೀಟಿನಲ್ಲಿದ್ದವರು ಹೊರಬರಲಾಗದೆ ಬೆಂಕಿಗಾಹುತಿಯಾಗಿದ್ದಾರೆ' ಎಂದು ಕಣ್ಣೀರು ಹಾಕಿದ್ದಾರೆ.
ಗಾಯಾಳುಗಳಿಗೆ ಶಿರಾ ಮತ್ತು ಹಿರಿಯೂರು ಆಸ್ಪತ್ರೆಗಳಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದ್ದು, ಗಂಭೀರವಾಗಿ ಗಾಯಗೊಂಡವರನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ. ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಭೇಟಿ ನೀಡಿದ್ದು, ಹಿರಿಯೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.