ಬೆಂಗಳೂರು, ಮಾ.19: ರಾಜ್ಯದಲ್ಲಿ (Karnataka) ಹೆಚ್ಚುತ್ತಿರುವ ಎಲ್ಪಿಜಿ ಕೊರತೆಯ (lpg crisis) ಬಿಕ್ಕಟ್ಟು ಹಾಗೂ ಅದರಿಂದ ಹೋಟೆಲ್ ಉದ್ಯಮದಲ್ಲಿ ಉಂಟಾಗಿರುವ ಅಲ್ಲೋಲಕಲ್ಲೋಗಳ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರು ಕೇಂದ್ರ ಪೆಟ್ರೋಲಿಯಂ ಸಚಿವ ಹರದೀಪ್ ಸಿಂಗ್ ಪುರಿ (Hardeep singh puri) ಅವರಿಗೆ ಪತ್ರ ಬರೆದಿದ್ದು, ಕೂಡಲೇ ಸೂಕ್ತ ಎಲ್ಪಿಜಿ ಪೂರೈಕೆಗೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.
ಮುಖ್ಯಮಂತ್ರಿಗಳು ಬರೆದ ಪತ್ರ ಹೀಗಿದೆ:
ಇತ್ತೀಚೆಗೆ ಗೃಹ ಬಳಕೆದಾರರಿಗೆ LPG ಪೂರೈಕೆಯನ್ನು ಆದ್ಯತೆಯಾಗಿ ನೀಡುವಂತೆ ಸಚಿವಾಲಯ ನೀಡಿದ ನಿರ್ದೇಶನಗಳ ಹಿನ್ನೆಲೆಯಲ್ಲಿ ವಾಣಿಜ್ಯ LPG ಲಭ್ಯತೆಯ ಕೊರತೆ ಕುರಿತ ಬೆಳವಣಿಗೆಗಳನ್ನು ದಯವಿಟ್ಟು ಗಮನಿಸಿ. ಭಾರತ ಸರ್ಕಾರ ಹೊರಡಿಸಿರುವ ಸೂಚನಾ ಮಾರ್ಗಸೂಚಿಗಳ ಪ್ರಕಾರ, ಈ ಪರಿಸ್ಥಿತಿಯನ್ನು ನಿರ್ವಹಿಸಲು ಅಗತ್ಯ ಕ್ಷೇತ್ರಗಳಿಗೆ ಹಂಚಿಕೆಯನ್ನು ನಿಯಂತ್ರಿಸಿ ಆದ್ಯತೆ ನೀಡುವ ಕ್ರಮಗಳನ್ನು ಕರ್ನಾಟಕ ಸರ್ಕಾರ ಕೈಗೊಂಡಿದೆ.
ಆದಾಗ್ಯೂ, ರೆಸ್ಟೋರೆಂಟ್ಗಳು, ಹೋಟೆಲ್ಗಳು, ಕ್ಯಾಟರಿಂಗ್ ಸಂಸ್ಥೆಗಳು ಹಾಗೂ ಪಿಜಿ ವಸತಿಗಳಿಂದ ದಿನಕ್ಕೆ 50,000 LPG ಸಿಲಿಂಡರ್ಗಳ ಬೇಡಿಕೆ ಇದೆ. ಆದರೆ ನಾವು ದಿನಕ್ಕೆ ಕೇವಲ 1,000 ಸಿಲಿಂಡರ್ಗಳನ್ನು ಮಾತ್ರ ಪೂರೈಸಲು ಸಾಧ್ಯವಾಗುತ್ತಿದೆ. ಇದರ ಪರಿಣಾಮವಾಗಿ, ವಾಣಿಜ್ಯ LPG ಲಭ್ಯತೆಯ ಕೊರತೆಯಿಂದ ಅನೇಕ ಸಂಸ್ಥೆಗಳು ಮುಚ್ಚುವ ಪರಿಸ್ಥಿತಿ ಸ್ಪಷ್ಟವಾಗಿ ಹೆಚ್ಚುತ್ತಿದೆ. ಇದು ವಿದ್ಯಾರ್ಥಿಗಳು, ಐಟಿ ವೃತ್ತಿಪರರು, ರೈತರು, ಹಾಲು ಉತ್ಪಾದಕರು ಸೇರಿದಂತೆ ಆತಿಥ್ಯ ಕ್ಷೇತ್ರದ ಮೇಲೆ ಅವಲಂಬಿತವಾಗಿರುವ ಜನರ ದೊಡ್ಡ ವಲಯದ ಮೇಲೆ ಪರಿಣಾಮ ಬೀರುತ್ತಿದೆ.
ಗೃಹ ಬಳಕೆಯ ಅನಿಲ ಪೂರೈಕೆಯನ್ನು ಮೇಲ್ವಿಚಾರಣೆ ಮಾಡಲು ಈಗಾಗಲೇ ಐಟಿ ವ್ಯವಸ್ಥೆ ಇದ್ದರೂ, ವಾಣಿಜ್ಯ ಪೂರೈಕೆಯನ್ನು ಮೇಲ್ವಿಚಾರಣೆ ಮಾಡಲು ಸಮಗ್ರ ವೇದಿಕೆ ಲಭ್ಯವಿಲ್ಲ.
LPG black market: ಮನೆಬಳಕೆ ಎಲ್ಪಿಜಿ ಕಾಳಸಂತೆಯಲ್ಲಿ ಬಿಕರಿ, 12 ಸಾವಿರ ಸಿಲಿಂಡರ್ ವಶ
ಅದೇ ರೀತಿಯಲ್ಲಿ, ಆಟೋ LPG ಅನೇಕ ಆಟೋ ರಿಕ್ಷಾಗಳಿಗೆ ಅತ್ಯಂತ ಪ್ರಮುಖ ಇಂಧನವಾಗಿದ್ದು, ಇದು ನಗರದ ಕಟ್ಟಕಡೆಯ ಸಂಪರ್ಕ ವ್ಯವಸ್ಥೆಯ ಮುಖ್ಯ ಭಾಗವಾಗಿದ್ದು ಅನೇಕ ಚಾಲಕರ ಜೀವನೋಪಾಯವನ್ನು ಬೆಂಬಲಿಸುತ್ತದೆ. ಆದರೆ ಆಟೋ LPG ವಿತರಣೆಯನ್ನು ಮೇಲ್ವಿಚಾರಣೆ ಮಾಡಲು ಸಮಗ್ರ ವ್ಯವಸ್ಥೆ ಇಲ್ಲದ ಕಾರಣ ಪಾರದರ್ಶಕತೆ ಮತ್ತು ಹೊಣೆಗಾರಿಕೆಯ ಕೊರತೆ ಉಂಟಾಗಿದೆ.
ಭಾರತಕ್ಕೆ ಶೀಘ್ರದಲ್ಲೇ 2 ಟ್ಯಾಂಕರ್ಗಳು ಬರಲಿರುವುದಾಗಿ ನಮಗೆ ತಿಳಿದುಬಂದಿದೆ, ಇದು ಮೇಲ್ಕಂಡ ಸಮಸ್ಯೆಗಳನ್ನು ಬಹಳ ಮಟ್ಟಿಗೆ ಕಡಿಮೆ ಮಾಡಬಹುದು. ಆದ್ದರಿಂದ, ರಾಜ್ಯದ ಕಾರ್ಯಾಚರಣಾ ಅಗತ್ಯತೆಗಳು ಹಾಗೂ ವಿಶೇಷ ಅವಲಂಬನೆ ಮಾದರಿಗಳನ್ನು ಗಮನದಲ್ಲಿಟ್ಟುಕೊಂಡು, ವಿಶೇಷವಾಗಿ ಬೆಂಗಳೂರು ನಗರದ ದೃಷ್ಟಿಯಿಂದ, ಕರ್ನಾಟಕಕ್ಕೆ ಸಮರ್ಪಕ ಪ್ರಮಾಣದಲ್ಲಿ ವಾಣಿಜ್ಯ LPG ಮತ್ತು ಆಟೋ LPG ಹಂಚಿಕೆ ಮತ್ತು ಲಭ್ಯತೆಯನ್ನು ಖಚಿತಪಡಿಸಲು ನಿಮ್ಮ ಮಧ್ಯಸ್ಥಿಕೆಯನ್ನು ವಿನಂತಿಸುತ್ತೇನೆ ಎಂದು ಸಿಎಂ ಬರೆದಿದ್ದಾರೆ.
LPG Crisis: ಮಂಗಳೂರಿಗೆ ಬಂತು 26 ಸಾವಿರ ಟನ್ ಎಲ್ಪಿಜಿ ತುಂಬಿದ ಹಡಗು