ಬೆಂಗಳೂರು, ಜ.28 : ಬಾರಾಮತಿಯಲ್ಲಿ ಸಂಭವಿಸಿದ ವಿಮಾನಾಪಘಾತದಲ್ಲಿ (plane crash) ಮಹಾರಾಷ್ಟ್ರ ಡಿಸಿಎಂ ಅಜಿತ್ ಪವಾರ್ (Ajit Pawar Death) ಅವರ ನಿಧನಕ್ಕೆ ಇಂದು ಕರ್ನಾಟಕ ವಿಧಾನಸಭೆ ಅಧಿವೇಶನದಲ್ಲಿ ಸಂತಾಪ ಸೂಚಿಸಲಾಯಿತು. ವಿಧಾನಸಭೆ ಕಲಾಪ ಆರಂಭವಾಗುತ್ತಿದ್ದಂತೆ ಅಜಿತ್ ಪವಾರ್ ಅವರ ನಿಧನಕ್ಕೆ ಸಂತಾಪ ಸೂಚಿಸಲಾಯಿತು.
ವಿಧಾನಸಭೆ ಸ್ಪೀಕರ್ ಯುಟಿ ಖಾದರ್ ಅವರು ಉಪಮುಖ್ಯಮಂತ್ರಿ ಅಜಿತ್ ಪವಾರ್ ಮತ್ತು ಐವರು ಸಹ ಪ್ರಯಾಣಿಕರು ಇಂದಿನ ಬೆಳಗ್ಗೆ ನಡೆದ ವಿಮಾನ ಅಪಘಾತದಲ್ಲಿ ನಿಧನರಾಗಿರುವುದು ಅತ್ಯಂತ ವಿಷಾದಕರ ಸಂಗತಿ ಎಂದು ತಿಳಿಸಬಯಸುತ್ತೇನೆ ಎಂದು ಸಂತಾಪ ಸೂಚಿಸಿದರು.
ಅಜಿತ್ ಪವಾರ್ ಜುಲೈ 7 1959 ರಂದು ಅಹಮದ್ ನಗರದಲ್ಲಿ ಜನಿಸಿದ್ದು, 1982 ರಲ್ಲಿ ಸಹಕಾರಿ ಸಕ್ಕರೆ ಕಾರ್ಖಾನೆಯ ಮಂಡಳಿಗೆ ಆಯ್ಕೆಯಾಗುವ ಮೂಲಕ ರಾಜ್ಯ ರಾಜಕಾರಣಕ್ಕೆ ಪ್ರವೇಶಿಸಿದರು. ಪುಣೆ ಜಿಲ್ಲಾ ಸಹಕಾರಿ ಬ್ಯಾಂಕಿನ ಅಧ್ಯಕ್ಷರಾಗಿ 14 ವರ್ಷಗಳ ಕಾಲ ಸೇವೆ ಸಲ್ಲಿಸಿದರು. 1991ರಲ್ಲಿ ಬಾರಾಮತಿ ಕ್ಷೇತ್ರದಿಂದ ಮೊದಲ ಬಾರಿ ಲೋಕಸಭೆಗೆ ಆಯ್ಕೆಯಾಗಿದ್ದ ಅವರು ಕೇಂದ್ರ ರಕ್ಷಣಾ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ.
ನಂತರ ಬಾರಾಮಾತಿ ವಿಧಾನ ಪರಿಷತ್ ಕ್ಷೇತ್ರದಿಂದ ಎರಡು ಬಾರಿ ಮಹಾರಾಷ್ಟ್ರ ವಿಧಾನಸಭೆಗೆ ಆಯ್ಕೆಯಾಗಿದ್ದರು. ಕೃಷಿ ಮತ್ತು ವಿದ್ಯುತ್ ಖಾತೆ ರಾಜ್ಯ ಸಚಿವರಾಗಿ, ವಿದ್ಯುತ್ ಮತ್ತು ಯೋಜನಾ ರಾಜ್ಯ ಸಚಿವರಾಗಿ, ನೀರಾವರಿ ಇಲಾಖೆಯ ಸಚಿವರಾಗಿ, ಗ್ರಾಮೀಣ ಅಭಿವೃದ್ಧಿ ಸಚಿವರಾಗಿ ಹಾಗೂ ಮಹಾರಾಷ್ಟ್ರದ ವಿಧಾನಸಭೆಯ ವಿರೋಧ ಪಕ್ಷದ ನಾಯಕನಾಗಿ ಸೇವೆ ಸಲ್ಲಿಸಿದ್ದಾರೆ.
Ajit Pawar Death: ರನ್ವೇಗೆ 100 ಮೀಟರ್ ಮೊದಲೇ ನೆಲಕ್ಕಪ್ಪಳಿಸಿದ ಅಜಿತ್ ಪವಾರ್ ವಿಮಾನ
ಮಹಾರಾಷ್ಟ್ರ ರಾಜ್ಯದ ವಿವಿಧ ಸರ್ಕಾರದಲ್ಲಿ ಆರು ಅವಧಿಯಲ್ಲಿ ಉಪಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದು ಪ್ರಸ್ತುತ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಸಂಪುಟದಲ್ಲಿಯೂ ಉಪಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದಾರೆ. ಬಡವರ ದೀನ ದಲಿತರ ಮತ್ತು ರೈತರ ಧ್ವನಿಯಾಗಿ ನೇರ ನಿಷ್ಠುರ ಮತ್ತು ದಿಟ್ಟ ರಾಜಕಾರಣಿಯಾಗಿದ್ದರು.
ಅಜಿತ್ ದಾದಾ ಎಂದೇ ಖ್ಯಾತರಾಗಿದ್ದ ಅವರು ಅವರ ಕ್ಷೇತ್ರದಲ್ಲಿ ಬಾರಾಮತಿಯಲ್ಲಿ ಹಮ್ಮಿಕೊಂಡಿದ್ದ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ವಿಮಾನದಲ್ಲಿ ತೆರಳುತ್ತಿದ್ದಾಗ ಇಂದು ವಿಮಾನ ಅಪಘಾತದಲ್ಲಿ ಮೃತಪಟ್ಟಿದ್ದಾರೆ ಎಂದು ನೆನಪಿಸಿಕೊಂಡ ಅವರು, ಮೃತ ಹಿರಿಯ ರಾಜಕಾರಣಿ ಅಜಿತ್ ಪವಾರ್ ಅವರಿಗೆ ಸಂತಾಪ ಸೂಚಿಸಿದರು.
ಅಜಿತ್ ಪವಾರ್ ಜನ ನಾಯಕರಾಗಿದ್ದರು; ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ನಿಧನಕ್ಕೆ ಕಂಬನಿ ಮಿಡಿದ ಪ್ರಧಾನಿ ಮೋದಿ