ಪುತ್ತೂರು: ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಶಾಸಕ ಅಶೋಕ ರೈ ನೇತೃತ್ವದಲ್ಲಿ ಸಿಎಂ ಸಿದ್ದರಾಮಯ್ಯ (CM Siddaramaiah) ಉಪಸ್ಥಿತಿಯಲ್ಲಿ ಪುತ್ತೂರಿನ (Putturu) ಕೊಂಬೆಟ್ಟು ಮೈದಾನದಲ್ಲಿ ಹಮ್ಮಿಕೊಂಡ 'ಅಶೋಕ ಜನಮನ -2025' ಕಾರ್ಯಕ್ರಮದಲ್ಲಿ ಸಾಮರ್ಥ್ಯಕ್ಕಿಂತ ಹೆಚ್ಚು ಜನ ಭಾಗಿಯಾದ ಪರಿಣಾಮ ನೂಕು ನುಗ್ಗಲು (Stampede) ಉಂಟಾಗಿ ಕೆಲವು ಜನರು ಅಸ್ವಸ್ಥರಾದ ಘಟನೆ ನಡೆದಿದೆ. ಅಸ್ವಸ್ಥರಾದವರಿಗೆ ಪುತ್ತೂರು ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.
ರೈ ಎಸ್ಟೇಟ್ ಎಜುಕೇಶನ್ ಮತ್ತು ಚ್ಯಾರಿಟೇಬಲ್ ಟ್ರಸ್ಟ್ ಇದರ ವತಿಯಿಂದ ಶಾಸಕ ಅಶೋಕ ರೈ ನೇತೃತ್ವದಲ್ಲಿ ಪುತ್ತೂರಿನ ಕೊಂಬೆಟ್ಟು ಮೈದಾನದಲ್ಲಿ ದೀಪಾವಳಿ ಪ್ರಯುಕ್ತ 13ನೆ ವರ್ಷದ (ವಸ್ತ್ರ ವಿತರಣಾ) ಜನಮನ ಕಾರ್ಯಕ್ರಮದಲ್ಲಿ ಈ ಘಟನೆ ನಡೆದಿದೆ. ಈ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ಭಾಗವಹಿಸಿದ್ದರು.
ಇದನ್ನೂ ಓದಿ: Puttur News: ಪುತ್ತೂರು ಪ್ರೇಮ ವಂಚನೆ ಪ್ರಕರಣ; ಮಗು ಕೃಷ್ಣ ರಾವ್ನದ್ದೇ ಎಂದು ಡಿಎನ್ಎ ವರದಿಯಲ್ಲಿ ದೃಢ
ಪುತ್ತೂರಿನ ಕೊಂಬೆಟ್ಟು ಮೈದಾನದಲ್ಲಿ ನಡೆದ ಜನಮನ ಕಾರ್ಯಕ್ರಮದಲ್ಲಿ ಅಲ್ಲಿ ಸೇರಿದ್ದ ಜನರಿಗೆ ದೇಹ ನಿರ್ಜಲೀಕರಣಗೊಂಡ ಕಾರಣ ಕೆಲವು ಜನರು ಅಸ್ವಸ್ಥಗೊಂಡಿದ್ದು ಅವರನ್ನು ಅದೇ ಸ್ಥಳದಲ್ಲಿ ಚಿಕಿತ್ಸೆಗೆ ಒಳಪಡಿಸಿದ ನಂತರ ಗುಣಮುಖರಾಗಿ ಮನೆಗೆ ತೆರಳಿರುತ್ತಾರೆ. ಆಸ್ಪತ್ರೆಯಲ್ಲಿ 13 ಜನ ಹೊರರೋಗಿಯಾಗಿ ಚಿಕಿತ್ಸೆಗೆ ಒಳಪಟ್ಟಿರುತ್ತಾರೆ. ಪ್ರಸ್ತುತ ಎಲ್ಲರೂ ಚೇತರಿಸಿಕೊಂಡಿರುತ್ತಾರೆ. ಯಾರಿಗೂ ಯಾವುದೇ ರೀತಿಯ ತೀವ್ರತರ ತೊಂದರೆಗಳು ಉಂಟಾಗಿರುವುದಿಲ್ಲ, ಈ ಬಗ್ಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದವರಿಂದ ಹೇಳಿಕೆ ಪಡೆದುಕೊಳ್ಳಲಾಗಿದೆ ಎಂದು ದ.ಕ. ಜಿಲ್ಲಾ ಎಸ್ಪಿ ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.