ದಾವಣಗೆರೆ: ಹರಿಹರದ ಪಂಚಮಸಾಲಿ ಮಠದಲ್ಲಿ (Panchamasali Mutt) ಸೋಮವಾರ ಭಾರಿ ಹೈಡ್ರಾಮಾ ನಡೆದಿದೆ. ಲೆಕ್ಕ ಕೊಡುವ ಸಮಾವೇಶದಲ್ಲಿ ವಚನಾನಂದ ಸ್ವಾಮೀಜಿ ಮತ್ತು ಟ್ರಸ್ಟಿಗಳ ಬೆಂಬಲಿಗರ ನಡುವೆ ತಳ್ಳಾಟ-ನೂಕಾಟ ನಡೆದಿದ್ದು, ಪರ-ವಿರೋಧದ ಘೋಷಣೆಗಳು ಮೊಳಗಿದವು. ಗಲಾಟೆ ಗದ್ದಲದ ಬಳಿಕ ಟ್ರಸ್ಟಿಗಳು ಲೆಕ್ಕ ಕೊಡುವ ಪ್ರಕ್ರಿಯೆನ್ನು ಶುರು ಮಾಡಿದರು.
ಮಠದ ದೇಣಿಗೆ ಹಾಗೂ ಅನುದಾನ ಬಳಕೆಯಲ್ಲಿ ಅವ್ಯವಹಾರ ನಡೆದಿದೆ. ಹೀಗಾಗಿ ಹಣದ ಲೆಕ್ಕ ನೀಡಬೇಕು ಎಂದು ವಚನಾನಂದ ಸ್ವಾಮೀಜಿ ಹಾಗೂ ಭಕ್ತರು, ಲೆಕ್ಕ ಕೊಡಿ ಅಭಿಯಾನ ನಡೆಸಿದ್ದರು. ಈ ಹಿನ್ನೆಲೆಯಲ್ಲಿ 2008ರಿಂದ 2026ರವರೆಗೆ ಮಠದ ಆರ್ಥಿಕ ವ್ಯವಹಾರಗಳ ಲೆಕ್ಕವನ್ನು ಟ್ರಸ್ಟಿಗಳು ನೀಡಿದರು.
ಹರಿಹರದ ಪಂಚಮಸಾಲಿ ಮಠದಲ್ಲಿ ಗಲಾಟೆ, ಧಿಕ್ಕಾರ ಘೋಷಣೆ ಮಧ್ಯೆ ಪ್ರಧಾನ ಧರ್ಮದರ್ಶಿ ಉಮಾಪತಿ ಲೆಕ್ಕ ಕೊಟ್ಟಿದ್ದಾರೆ. 2008 ರಿಂದ 2026ರವರೆಗಿನ ಲೆಕ್ಕಾಚಾರವನ್ನು ತೆರೆದಿಟ್ಟಿದ್ದಾರೆ. ಪೀಠದ ಟ್ರಸ್ಟ್ ಪ್ರಾರಂಭವಾದಾಗಿನಿಂದ ಇಲ್ಲಿಯವರೆಗೂ ಭಕ್ತರು ನೀಡಿದ ಕಾಣಿಕೆ, ಸರ್ಕಾರದ ಅನುದಾನದ ಬಗ್ಗೆ ಮಾಹಿತಿ ನೀಡಿದ ಅವರು, ಕಳೆದ 2008 ರಿಂದ 2026ರವರೆಗೆ 27,61,51,518 ರೂ. ಜಮಾ ಆಗಿದೆ. ಸರ್ಕಾರದ ಅನುದಾನ ಸೇರಿ 27 ಕೋಟಿ 61 ಲಕ್ಷ ರೂ. ಅನುದಾನ ಜಮಾ ಆಗಿದೆ ಎಂದು ಮಾಹಿತಿ ನೀಡಿದರು.
ಇದಿಷ್ಟೇ ಅಲ್ಲದೇ ಮಠ ಬೆಳೆದು ಬಂದ ಹಾದಿಯ ಬಗ್ಗೆ ಬಿ.ಸಿ ಉಮಾಪತಿ ವಿವರಿಸಿ, ಮಾಜಿ ಸಚಿವ ದಿವಂಗತ ಶಿವಪ್ಪನವರು ತೆಗೆದುಕೊಳ್ಳಬೇಕು ಎಂದುಕೊಂಡಿದ್ದ ಜಮೀನನ್ನು ಹಣ ಕೊಟ್ಟು ಮಠಕ್ಕೆ ತೆಗೆದುಕೊಳ್ಳಲಾಗಿದೆ. ಆದರೆ ಶಿವಪ್ಪನವರೇ ದಾನ ಕೊಟ್ಟಿದ್ದೇವೆ ಎಂದು ಹೇಳಿಕೊಂಡು ಹೋಗುತ್ತಿದ್ದಾರೆ. ದಾನ ನೀಡಿಲ್ಲ ಅವರು ತೆಗೆದುಕೊಳ್ಳಬೇಕಿದ್ದ ಜಮೀನನ್ನು ನಾವು ಹಣ ಕೊಟ್ಟು ತೆಗೆದುಕೊಂಡಿದ್ದೇವೆ ಎಂದು ತಿಳಿಸಿದರು.
ಈ ಲೆಕ್ಕ ಕೊಡಿ ಅಭಿಯಾನ ಸ್ವಾಮೀಜಿಗಳ ತಪ್ಪನ್ನು ಮರೆಮಾಚಿಸುವ ಅಭಿಯಾನವಾಗಿದೆ. ಪ್ರತಿ ವರ್ಷ ಕೂಡ ಲೆಕ್ಕವನ್ನು ಕೊಡುವ ಕೆಲಸ ಮಾಡುತ್ತೇವೆ ಎಂದು ಇದೇ ವೇಳೆ ಅವರು ತೀವ್ರವಾಗಿ ಪ್ರತಿಕ್ರಿಯಿಸಿದರು.
ಸ್ವಾಮೀಜಿ ಬೆಂಬಲಿಗರ ವಿರೋಧ
ಮತ್ತೊಂದೆಡೆ ಲೆಕ್ಕಪತ್ರ ಮಂಡನೆ ಮಾಡುವುದಕ್ಕೆ ವಚನಾನಂದ ಸ್ವಾಮೀಜಿ ಬೆಂಬಲಿಗರು ವಿರೋಧ ವ್ಯಕ್ತಪಡಿಸಿದರು. ತರಾತುರಿಯಲ್ಲಿ ಲೆಕ್ಕ ಪತ್ರ ಮಂಡನೆ ಮಾಡುವುದು ಸರಿವಲ್ಲ. ಮೂರು ತಿಂಗಳ ಕಾಲಾವಕಾಶ ಪಡೆದು ವಿಸ್ತಾರವಾದ ಲೆಕ್ಕಪತ್ರ ವರದಿ ಮಂಡನೆ ಮಾಡಬೇಕು. ಮೊದಲು ಪೀಠಕ್ಕೆ ಕಾಣಿಕೆ ನೀಡಿದ ಭಕ್ತರ ಪಟ್ಟಿ ಬಿಡುಗಡೆ ಮಾಡಬೇಕು. ನಂತರ ಸರ್ಕಾರದಿಂದ ಬಂದ ಅನುದಾನದ ಲೆಕ್ಕಪತ್ರ ನೀಡಬೇಕು ಎಂದು ಆಗ್ರಹಿಸಿದರು.
Minister D Sudhakar: ಸಚಿವ ಡಿ ಸುಧಾಕರ್ ಆರೋಗ್ಯ ಯಥಾಸ್ಥಿತಿ, ಆಸ್ಪತ್ರೆಗೆ ಸಿಎಂ- ಡಿಸಿಎಂ ಭೇಟಿ
ಲೆಕ್ಕ ಕೊಡುವ ಮೊದಲು ಮಠದಲ್ಲಿ ಗಲಾಟೆ ನಡೆಯಿತು. ವಚನಾನಂದ ಶ್ರೀಗಳಿದ್ದ ಮಠಕ್ಕೆ ಟ್ರಸ್ಟಿಗಳು ಎಂಟ್ರಿ ಕೊಡುತ್ತಿದ್ದಂತೆ ಭಾರೀ ಹೈಡ್ರಾಮಾ ನಡೆಯಿತು. ವಚನಾನಂದ ಸ್ವಾಮಿ ಹಾಗೂ ಬಿ.ಸಿ ಉಮಾಪತಿ ಮುಖಾಮುಖಿ ಆದರು. ಟ್ರಸ್ಟಿಗಳನ್ನು ಕಂಡ ಸ್ವಾಮೀಜಿ ಬೆಂಬಲಿಗರು ಕಳ್ಳ ಕಳ್ಳ ಎಂದು ಕೂಗಿದರು. ಮಠದ ಒಳಗೆ ಮಹಂತ ಸ್ವಾಮಿ ಪುತ್ಥಳಿಗೆ ಕೈ ಮುಗಿದ ಬಿಸಿ ಉಮಾಪತಿ ಹಾಗೂ ತಂಡ ಮುಂದೆ ಸಾಗಿತು. ಈ ವೇಳೆ ಮಹಂತ ಸ್ವಾಮಿ ಪುತ್ಥಳಿ ಬಳಿ ವಚನಾನಂದ ಶ್ರೀಗಳು ಇದ್ದರು. ಈ ವೇಳೆ ಗೊಂದಲದ ವಾತಾವರಣ ಸೃಷ್ಟಿಯಾಗಿದ್ದು, ಸ್ವಾಮಿಜಿ ಪರವಾಗಿ ಭಕ್ತರು ಘೋಷಣೆ ಕೂಗಲು ಶುರು ಮಾಡಿದರು. ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಟ್ರಸ್ಟಿಗಳನ್ನು ಹೊರಗೆ ಕರೆದೊಯ್ದರು.