ಕಲಬುರಗಿ: ಕಲಬುರಗಿಯ ಶರಣಬಸವೇಶ್ವರ ಸಂಸ್ಥಾನದ 8ನೇ ಪೀಠಾಧಿಪತಿ ಡಾ. ಶ್ರೀ ಶರಣಬಸವಪ್ಪ ಅಪ್ಪ (92) (Dr. Sharanabasappa Appa) ಅವರ ಅಂತ್ಯಸಂಸ್ಕಾರವು ಶರಣಬಸವೇಶ್ವರ ಮಠದ ಆವರಣದಲ್ಲಿ ಶುಕ್ರವಾರ ಸಂಜೆ ನೆರವೇರಿತು. ವೀರಶೈವ ಲಿಂಗಾಯತ ಸಂಪ್ರದಾಯದಂತೆ ವಿವಿಧ ಮಠಾಧೀಶರು, ಸಾವಿರಾರು ಭಕ್ತರ ಸಮ್ಮುಖದಲ್ಲಿ ಕ್ರಿಯಾಸಮಾಧಿ ಮಾಡಲಾಯಿತು.
ಸೋಮನಾಥ ಶಾಸ್ತ್ರಿಯವರು ಪಂಚಾಚಾರ್ಯರ ಕಳಸವನ್ನು ಸ್ಥಾಪಿಸಿ, ಸ್ವಸ್ತಿ ಪುಣ್ಯ ವಾಚನೆ ಮಾಡಿದರು. ಈ ಅಂತ್ಯಕ್ರಿಯೆಯಲ್ಲಿ ಸಚಿವರಾದ ಶರಣ ಪ್ರಕಾಶ ಪಾಟೀಲ್, ಈಶ್ವರ ಖಂಡ್ರೆ, ರಾಜ್ಯ ಬಿಜೆಪಿ ಅಧ್ಯಕ್ಷ ವಿಜಯೇಂದ್ರ, ಕೆಕೆಆರ್ಡಿಬಿ ಅಧ್ಯಕ್ಷ ಅಜಯ್ ಸಿಂಗ್ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು.
ಅಂತ್ಯ ಸಂಸ್ಕಾರಕ್ಕೂ ಮುನ್ನ ಶರಣಬಸಪ್ಪ ಅಪ್ಪ ಅವರಿಗೆ ಸರ್ಕಾರದಿಂದ ಗೌರವ ಸಲ್ಲಿಸಲಾಯಿತು. ಕಲಬುರಗಿ ನಗರದ ಶ್ರೀ ಶರಣಬಸವೇಶ್ವರ ದೇವಸ್ಥಾನದ ಶಿವಾನುಭವ ಮಂಟಪದ ಮುಂದೆ ಪೊಲೀಸರಿಂದ ಗೌರವ ಸಲ್ಲಿಕೆಯಾಯಿತು. ಗಾಳಿಯಲ್ಲಿ ಮೂರು ಸುತ್ತು ಗುಂಡು ಹಾರಿಸಿ ಅಪ್ಪಾಜಿಗೆ ಗೌರವ ಸಲ್ಲಿಸಲಾಯಿತು. ಈ ವೇಳೆ ಡಿಸಿಎಂ ಡಿಕೆ ಶಿವಕುಮಾರ್, ಸಚಿವ ಪ್ರಿಯಾಂಕ್ ಖರ್ಗೆ ಸೇರಿದಂತೆ ಶಾಸಕರು, ಅಪ್ಪಾಜಿ ಕುಟುಂಬಸ್ಥರು ಉಪಸ್ಥಿತರಿದ್ದರು. ವಿವಿಧ ಗಣ್ಯರು ಸೇರಿ ಸಾವಿರಾರು ಭಕ್ತರು ಬೆಳಿಗ್ಗೆಯಿಂದಲೇ ಶರಣಬಸವಪ್ಪ ಅಪ್ಪನವರ ಅಂತಿಮ ದರ್ಶನ ಪಡೆದರು.
ಅಂತಿಮ ದರ್ಶನದ ಬಳಿಕ ಮಾತನಾಡಿದ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು, ಸರ್ಕಾರ ಶರಣಬಸಪ್ಪ ಅಪ್ಪ ಅವರ ಕುಟುಂಬ ಮತ್ತು ಭಕ್ತರ ಜತೆ ಇದೆ. ಅಪ್ಪಾಜಿಗೆ ಸರ್ಕಾರದಿಂದ ಸಕಲ ಗೌರವ ನೀಡಲು ಬಂದಿದ್ದೇನೆ. ರಾಷ್ಟ್ರಧ್ವಜ ಹಾರಿಸೋ ದಿನ ಕುಟುಂಬಕ್ಕೆ ಸರ್ಕಾರ ರಾಷ್ಟ್ರ ಧ್ವಜ ಸಮರ್ಪಣೆ ಮಾಡಿದೆ. ಇಂತಹ ಭಾಗ್ಯ ಯಾರಿಗೂ ಸಿಗಲ್ಲ. ಎಲ್ಲಾ ಭಕ್ತರು ಈ ಮಠ ಉಳಿಸಿಕೊಂಡು ಹೋಗುವ ಕೆಲಸ ಮಾಡಬೇಕು ಎಂದು ಮನವಿ ಮಾಡಿದರು.

ಈ ಸುದ್ದಿಯನ್ನೂ ಓದಿ | Dr. Sharanabasappa Appa: ಡಾ. ಶರಣಬಸವಪ್ಪ ಅಪ್ಪಾ ಲಿಂಗೈಕ್ಯ; ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿ ಗಣ್ಯರಿಂದ ಶ್ರದ್ಧಾಂಜಲಿ
ಚಿ. ದೊಡ್ಡಪ್ಪಗೆ ಅಧಿಕಾರ ಹಸ್ತಾಂತರ
ನಾಡಿನಲ್ಲಿ ಶಿಕ್ಷಣ ಕ್ರಾಂತಿ ಮಾಡಿದ ಶ್ರೇಷ್ಠ ಸಂತ, ಜ್ಞಾನ ದಾಸೋಹಿ ಶ್ರೀ ಡಾ. ಶರಣಬಸವಪ್ಪ ಅಪ್ಪ ಅವರು ಗುರುವಾರ ವಯೋಸಹಜ ಅನಾರೋಗ್ಯದಿಂದ ಲಿಂಗೈಕ್ಯರಾಗಿದ್ದರು. ಹೀಗಾಗಿ ಶರಣಬಸವಪ್ಪ ಅಪ್ಪ ಅವರ ಅಂತ್ಯಕ್ರಿಯೆ ಬಳಿಕ ಅವರ ಪೇಟ, ಕಡಗ, ಕೊರಳಲ್ಲಿದ್ದ ಲಿಂಗ, ಪರುಷ ಬಟ್ಟಲು ನೀಡಿ ಶರಣಬಸಪ್ಪ ಅಪ್ಪ ಅವರ ಪುತ್ರ 9ನೇ ಪೀಠಾಧಿಪತಿ ಚಿ. ದೊಡ್ಡಪ್ಪಗೆ ಅಧಿಕಾರ ಹಸ್ತಾಂತರಿಸಲಾಯಿತು.