ಹಾನಗಲ್: ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ನರೇಗಲ್ ಗ್ರಾಮದಲ್ಲಿ ಕಾರ ಹುಣ್ಣಿಮೆ ಹಬ್ಬದ ಹಿನ್ನೆಲೆಯಲ್ಲಿ ಸಂಪ್ರದಾಯದಂತೆ ಹೋರಿಗಳನ್ನು ಓಡಿಸುವ ಸಂದರ್ಭದಲ್ಲಿ ಪಟಾಕಿ ಸಿಡಿಸಿದ ಕಾರಣಕ್ಕೆ ಎರಡು ಕೋಮುಗಳ ನಡುವೆ ಮಾರಾಮಾರಿ (Haveri Clash) ನಡೆದಿದ್ದು, ಇಬ್ಬರ ಕೈ ಕಡಿಯಲಾಗಿದೆ. ಗಲಾಟೆಯಲ್ಲಿ ಒಟ್ಟು 8 ಮಂದಿ ಗಾಯಗೊಂಡಿದ್ದು, ಈ ಪೈಕಿ ಮೂವರ ಸ್ಥಿತಿ ಗಂಭೀರವಾಗಿದೆ.
ಕಾರ ಹುಣ್ಣಿಮೆ ಅಂಗವಾಗಿ ನರೇಗಲ್ ಗ್ರಾಮದಲ್ಲಿ ಪ್ರತಿ ವರ್ಷದಂತೆ ಸೋಮವಾರ ಕೂಡ ಹೋರಿ ಓಡಿಸುವ ಕಾರ್ಯಕ್ರಮವಿತ್ತು. ಅದರಂತೆ ಮಧ್ಯಾಹ್ನ ರೈತರು ತಮ್ಮ ಎತ್ತುಗಳನ್ನು ಓಡಿಸುವ ಸಂದರ್ಭದಲ್ಲಿ ಗ್ರಾಮದ ಮಸೀದಿ ಬಳಿ ಪಟಾಕಿ ಸಿಡಿಸಿದ್ದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಬಾಷಾಸಾಬ ಗೌಂಡಿ ಎಂಬಾತ ‘ನಮ್ಮ ಮಸೀದಿ ಬಳಿ ಯಾಕೆ ಪಟಾಕಿ ಸಿಡಿಸುತ್ತೀರಾ’ ಎಂದು ಪ್ರಶ್ನಿಸಿದ್ದಾನೆ. ಈ ವೇಳೆ ಮಾತಿಗೆ ಮಾತು ಬೆಳೆದು ಹೋರಿ ಹಿಂದೆ ಬಂದಿದ್ದ ಲೋಹಿತ್ ಜಯಪ್ಪ ಎಂಬಾತನನ್ನು ಅನ್ಯಕೋಮಿನವರು ಥಳಿಸಿದ್ದಾರೆ. ಇದರಿಂದ ರೊಚ್ಚಿಗೆದ್ದ ಹಿಂದೂ ಯುವಕರ ಗುಂಪು ಪ್ರತಿದಾಳಿ ನಡೆಸಿದೆ.
ಘರ್ಷಣೆಯಲ್ಲಿ ಕುಡುಗೋಲು ಸೇರಿ ಹರಿತವಾದ ಆಯುಧಗಳಿಂದ ಎರಡು ಕೋಮುಗಳ ನಡುವೆ ಹೊಡೆದಾಟ ನಡೆದಿದ್ದು, ಶಿವರಾಜ್ ಕುರುಬರ (27), ನಾಗಪ್ಪ ಹನುಮಂತಪ್ಪ ಕುರುಬರ (34), ಮಲ್ಲಪ್ಪ ರಾಯಪ್ಪ ಕೊಡಸಂಗಿ (30), ನಿಂಗರಾಜ ಮಹಾಂತೇಶ ಕುರುಬರ (30), ಜಯಪ್ಪ ಸಂಗಪ್ಪ ಕುರುಬರ (20), ಲೋಹಿತ ರೇವಣಪ್ಪ ಕುರುಬರ (24), ಬಾಷಾಸಾಬ ಗೌಂಡಿ (55), ಖಾಜಾ ಗೌಂಡಿ (18) ಎಂಬುವರು ಗಾಯಗೊಂಡಿದ್ದಾರೆ. ಗಂಭೀರವಾಗಿ ಗಾಯಗೊಂಡ ಶಿವರಾಜ ಕುರುಬರ, ಜಯಪ್ಪ ಕುರುಬರ ಹಾಗೂ ಲೋಹಿತ ಕುರುಬರ ಅವರನ್ನು ಹುಬ್ಬಳ್ಳಿ ಕಿಮ್ಸ್ಗೆ ದಾಖಲಿಸಲಾಗಿದೆ. ಗಲಾಟೆಯಲ್ಲಿ ಇಬ್ಬರ ಕೈ ಕಡಿಯಲಾಗಿದೆ. ಉಳಿದವರು ಹಾವೇರಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಘಟನೆಯಿಂದಾಗಿ ನರೇಗಲ್ಲ ಗ್ರಾಮದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಘಟನೆ ಸಂಬಂಧ ಒಟ್ಟು 26 ಜನರ ವಿರುದ್ಧ ಎಫ್ಐಆರ್ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.