ಹಾವೇರಿ, ಜೂ. 21: ಯೋಗವು ಇಂದಿನ ದೈನಂದಿನ ಬದುಕಿಗೆ ಅತ್ಯವಶ್ಯಕವಾಗಿದ್ದು, ದೇಹ ಮತ್ತು ಮನಸ್ಸಿನ ಸಮತೋಲನ ಕಾಯ್ದುಕೊಳ್ಳಲು ಸಹಕರಿಯಾಗಿದೆ ಎಂದು ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ್ ದಾನಮ್ಮನವರ ಹೇಳಿದರು. ನಗರದ ರಜನಿ ಸಭಾಂಗಣದಲ್ಲಿ ಭಾನುವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆಯುಷ್ ಇಲಾಖೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಶಾಲಾ ಶಿಕ್ಷಣ ಇಲಾಖೆ ಹಾಗೂ ವಿವಿಧ ಯೋಗ ಸಂಸ್ಥೆಗಳ ಸಹಯೋದಲ್ಲಿ ಆಯೋಜಿಸಿದ್ದ 12ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ (Yoga Day 2026) ಉದ್ಘಾಟಿಸಿ ಅವರು ಮಾತನಾಡಿದರು.
ಯೋಗವು ಪ್ರಾಚೀನ ಭಾರತದ ಅಮೂಲ್ಯ ಪರಂಪರೆ ಹಾಗೂ ಜೀವನ ಕೌಶಲ್ಯವಾಗಿದ್ದು, ಆದಿಕಾಲದ ಪತಂಜಲಿ ಮಹರ್ಷಿಗಳು ಯೋಗದ ಸಂಸ್ಥಾಪಕರು ಮತ್ತು ಪಿತಾಮಹರಾಗಿದ್ದಾರೆ ಎಂದು ಹೇಳಿದರು.
ದೇಹ ಮತ್ತು ಮನಸ್ಸು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಆರೋಗ್ಯ ಎಷ್ಟು ಮುಖ್ಯವೋ, ಮನಸ್ಸು ಸಹ ಅಷ್ಟೇ ಮುಖ್ಯವಾಗುತ್ತದೆ. ದೇಹ ಸದೃಢವಾಗಿದ್ದರೂ ಮನಸ್ಸು ಆರೋಗ್ಯಕರವಾಗಿರದಿದ್ದರೆ ವ್ಯಕ್ತಿ ಮಾನಸಿಕವಾಗಿ ದೃಢವಾಗಲು ಸಾಧ್ಯವಿಲ್ಲ. ಈ ಕಾರಣದಿಂದ ಯೋಗ ಅತ್ಯಂತ ಅವಶ್ಯಕವಾಗಿದೆ ಎಂದು ಅವರು ತಿಳಿಸಿದರು.

ದೈನಂದಿನ ಜೀವನದಲ್ಲಿ ನಾವು ಮಾಡುವ ಅನೇಕ ಚಟುವಟಿಕೆಗಳು ದೈಹಿಕ ಶ್ರಮಕ್ಕೆ ಸಂಬಂಧಿಸಿದವುಗಳಾಗಿದ್ದರೂ, ಯೋಗವು ಅದಕ್ಕಿಂತ ಭಿನ್ನವಾಗಿದೆ. ಯೋಗ ಕೇವಲ ದೈಹಿಕ ವ್ಯಾಯಾಮವಲ್ಲ ಅದು ದೇಹ ಮತ್ತು ಮನಸ್ಸಿನ್ನು ಒಂದು ಗುಡಿಸುವ ಮಾರ್ಗವಾಗಿದೆ. ಮನಸ್ಸು ಮತ್ತು ದೇಹವನ್ನು ಒಂದುಗೂಡಿಸುವ ಶಕ್ತಿಯು ಯೋಗಕ್ಕಿದೆ ಎಂದು ಹೇಳಿದರು.
ಪತಂಜಲಿ ಮಹರ್ಷಿಗಳು ಆತ್ಮಸಾಧನೆಗಾಗಿ ಅಷ್ಟಾಂಗ ಯೋಗವನ್ನು ಪ್ರತಿಪಾದಿಸಿದ್ದು, ಯಮ, ನಿಯಮ, ಆಸನ, ಪ್ರಾಣಾಯಾಮ, ಪ್ರತ್ಯಾಹಾರ, ಧಾರಣ, ಧ್ಯಾನ ಹಾಗೂ ಸಮಾಧಿ ಎಂಬ ಎಂಟು ಅಂಗಗಳ ಮೂಲಕ ವ್ಯಕ್ತಿಯ ಸರ್ವಾಂಗೀಣ ಅಭಿವೃದ್ಧಿಗೆ ಪೂರಕವಾಗಿದ್ದವು ಎಂದು ವಿವರಿಸಿದರು.
ವ್ಯಾಯಾಮವು ನೈತಿಕ ಶಿಸ್ತುಗಳನ್ನು, ನಿಯಮವು ಸಕಾರಾತ್ಮಕ ಚಿಂತನೆ ಮತ್ತು ಸ್ವಯಂ ಶಿಸ್ತನ್ನು ಪ್ರತಿಪಾದಿಸುತ್ತದೆ. ಆಸನಗಳು ದೇಹದ ನರಮಂಡಲದ ಮೇಲೆ ಉತ್ತಮ ಪ್ರಭಾವ ಬೀರಿ ಮಾನಸಿಕ ಏಕಾಗ್ರತೆಯನ್ನು ವೃದ್ಧಿಸುತ್ತವೆ. ಪ್ರಾಣಾಯಾಮವು ಉಸಿರಾಟ ನಿಯಂತ್ರಣಕ್ಕೆ ನೆರವಾಗುತ್ತದೆ. ಪ್ರತ್ಯಾಹಾರವು ಬಾಹ್ಯ ಗೊಂದಲಗಳಿಂದ ಇಂದ್ರಿಯಗಳನ್ನು ಹಿಂತೆಗೆದುಕೊಳ್ಳುವ ಅಭ್ಯಾಸವಾಗಿದ್ದರೆ ಧಾರಣವು ಏಕಾಗ್ರತೆಯನ್ನು ಬೆಳೆಸುತ್ತದೆ. ಧ್ಯಾನವು ಮನಸ್ಸಿನ ಸ್ಥಿರತೆಗೆ ಸಹಕಾರಿಯಾಗಿದರೆ, ಸಮಾಧಿಯು ಆತ್ಮಸಾಕ್ಷಾತ್ಕಾರದ ಪರಮಾವಸ್ಥೆಯಾಗಿದೆ ಎಂದು ತಿಳಿಸಿದರು.
ಭಾರತದ ಸಂಸ್ಕೃತಿಯ ಭಾಗವಾಗಿರುವ ಯೋಗವನ್ನು ವಿಶ್ವದಾದ್ಯಂತ ಪರಿಚಯಿಸುವ ಉದ್ದೇಶದಿಂದ 2014ರಲ್ಲಿ ಪ್ರಧಾನಮಂತ್ರಿಗಳು ವಿಶ್ವಸಂಸ್ಥೆಯಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆಗೆ ಸಂಬಂಧಿಸಿದ ನಿರ್ಣಯ ಮಂಡಿಸಿದ್ದರು. ವಿಶ್ವಸಂಸ್ಥೆಯ 193 ಸದಸ್ಯ ರಾಷ್ಟ್ರಗಳ ಪೈಕಿ 175 ರಾಷ್ಟ್ರಗಳು ಯಾವುದೇ ವಿರೋಧವಿಲ್ಲದೆ ಆ ನಿರ್ಣಯವನ್ನು ಬೆಂಬಲಿಸಿದ್ದವು. ಇದು ಯೋಗದ ಮಹತ್ವವನ್ನು ವಿಶ್ವವೇ ಒಪ್ಪಿಕೊಂಡಿರುವುದಕ್ಕೆ ಸಾಕ್ಷಿಯಾಗಿದೆ ಎಂದು ಹೇಳಿದರು.
ಪ್ರತಿ ವರ್ಷ ವಿಭಿನ್ನ ಧ್ಯೇಯವಾಕ್ಯದೊಂದಿಗೆ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. 2024ರಲ್ಲಿ “Yoga for Self and Society” ಎಂಬ ಧ್ಯೇಯವಾಕ್ಯದಡಿ ವ್ಯಕ್ತಿ ಹಾಗೂ ಸಮಾಜದ ಅಭಿವೃದ್ಧಿಯಲ್ಲಿ ಯೋಗದ ಪಾತ್ರವನ್ನು ಪ್ರತಿಪಾದಿಸಲಾಗಿತ್ತು. 2025ರಲ್ಲಿ “Yoga for One Earth, One Health” ಎಂಬ ಪರಿಕಲ್ಪನೆಯಡಿ ಮಾನವ ಆರೋಗ್ಯ ಮತ್ತು ಪರಿಸರದ ಸಮತೋಲನದ ಮಹತ್ವವನ್ನು ವಿವರಿಸಿತ್ತು. ಈ ವರ್ಷ “Yoga for Healthy Ageing” ಎಂಬ ವಿಷಯದಡಿ ಆರೋಗ್ಯಕರ ವೃದ್ಧಾಪ್ಯದ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ ಎಂದು ತಿಳಿಸಿದರು.
ಮನುಷ್ಯನಿಗೆ ವಯಸ್ಸಾಗುವುದು ನೈಸರ್ಗಿಕ ಪ್ರಕ್ರಿಯೆಯಾಗಿದ್ದರೂ, ವೃದ್ಧಾಪ್ಯದಲ್ಲಿಯೂ ಆರೋಗ್ಯಕರ ಹಾಗೂ ಚಟುವಟಿಕೆಯಿಂದ ಕೂಡಿದ ಜೀವನ ನಡೆಸುವುದು ಪ್ರತಿಯೊಬ್ಬರ ಆಶಯವಾಗಿದೆ. ಆರೋಗ್ಯ ಸಮಸ್ಯೆಗಳನ್ನು ಕಡಿಮೆ ಮಾಡಿ, ಆರೋಗ್ಯಕರ ಜೀವನ ನಡೆಸಲು ಯೋಗ ನೆರವಾಗುತ್ತದೆ ಎಂದು ಹೇಳಿದರು.
2022ರಲ್ಲಿ ಭಾರತ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ದೇಶದ 75 ಐತಿಹಾಸಿಕ ಸ್ಥಳಗಳಲ್ಲಿ ಸಾಮೂಹಿಕ ಯೋಗಾಭ್ಯಾಸ ಕಾರ್ಯಕ್ರಮಗಳನ್ನು ನಡೆಸಲಾಗಿತ್ತು. ಅದೇ ರೀತಿ ಕರ್ನಾಟಕದಲ್ಲಿ ಆಯೋಜಿಸಲಾದ ‘ಯೋಗಥಾನ್’ ಕಾರ್ಯಕ್ರಮದಲ್ಲಿ ಸುಮಾರು 10 ಸಾವಿರ ಯೋಗ ಶಿಕ್ಷಕರು ಹಾಗೂ 5 ಲಕ್ಷಕ್ಕೂ ಹೆಚ್ಚು ಜನರು ಏಕಕಾಲದಲ್ಲಿ ಯೋಗಾಭ್ಯಾಸ ನಡೆಸುವ ಮೂಲಕ ದಾಖಲೆ ನಿರ್ಮಿಸಲಾಗಿತ್ತು ಎಂದರು.
ಈ ಸಂದರ್ಭದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಎಸ್ ಎಫ್ ಏನ್ ಗಾಜಿಗೌಡ್ರ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ದಲ್ಜಿತ ಕುಮಾರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಶೋಧ ವಂಟಗೋಡಿ, ಅಪರ ಜಿಲ್ಲಾಧಿಕಾರಿ ಡಾ ಎಲ್ ನಾಗರಾಜ್, ಆಯುಷ್ ಇಲಾಖೆ ಜಿಲ್ಲಾ ಅಧಿಕಾರಿ ಡಾ. ಸಿ ಜಿ ನಿಡಗುಂದಿ, ಡಿಡಿಪಿಐ ಮೋಹನ ದಂಡಿನ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆವೈ ಸಹಾಯಕ ನಿರ್ದೇಶಕಿ ಬಿ ಹೆಚ್ ಲತಾ ಹಾಗೂ ಜಿಲ್ಲಾಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು, ಯೋಗ ಶಿಕ್ಷಕರು, ಶಾಲಾ-ಕಾಲೇಜು ವಿದ್ಯಾರ್ಥಿಗಳು, ಯೋಗಾಸಕ್ತರು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.