ಹಾವೇರಿ, ಜೂ. 6: ಜಿಲ್ಲೆಯ ಹಲವೆಡೆ ಶನಿವಾರ ಸಂಜೆ ಮುಂಗಾರು ಮಳೆ ಅಬ್ಬರಿಸಿದೆ. ಇದರಿಂದ ವಿವಿಧೆಡೆ ಸಂಚಾರಕ್ಕೆ ಅಡ್ಡಿಯಾಗಿದ್ದು, ಮನೆಗಳಿಗೆ ನೀರು ನುಗ್ಗಿ ಹಾನಿ ಸಂಭವಿಸಿದೆ. ಅಗಡಿ ಗ್ರಾಮದ ಮುಖ್ಯ ರಸ್ತೆಯಲ್ಲಿ ಅಡ್ಡಲಾಗಿ ಹರಿಯುವ ಹಳ್ಳವು ಭಾರೀ ಮಳೆಗೆ (Haveri Rains) ತುಂಬಿ ಹರಿದು ಗುತ್ತಲ- ಹಾವೇರಿ ಮುಖ್ಯ ರಸ್ತೆ ಮೇಲೆ ಹಳ್ಳದ ನೀರು ನುಗ್ಗಿ ಸಂಚಾರಕ್ಕೆ ಸ್ಥಗಿತಗೊಂಡಿತ್ತು.
ಸತತ ಎರಡು ಗಂಟೆಗೂ ಹೆಚ್ಚಿನ ಸಮಯ ಸುರಿದ ಮಳೆಯಿಂದಾಗಿ ಅಗಡಿ ಗ್ರಾಮದ ಕೆಲ ಮನೆಗಳಿಗೆ ನೀರು ನುಗ್ಗಿ ಮನೆಯಲ್ಲಿನ ಸಾಮಗ್ರಿಗಳು ನೆನೆದು ಹಾನಿ ಉಂಟಾಗಿದೆ. ಕಳೆದ ಹದಿನೈದು ದಿನಗಳ ಹಿಂದೆ ಆರಂಭದಲ್ಲಿ ಮುಂಗಾರು ಪೂರ್ವ ಮಳೆಗೆ ಹೊಲ, ಗದ್ದೆಗಳನ್ನು ಹಸನು ಮಾಡಿಕೊಂಡು ಕೆಲವರು ಗೋವಿನ ಜೋಳ, ಸೋಯಾಬೀನ್, ಹತ್ತಿ ಬಿತ್ತನೆ ಮಾಡಿದ್ದರು. ತದನಂತರ ಮಳೆ ಏಕಾಏಕಿ ಕೈಕೊಟ್ಟು ಬಿರು ಬಿಸಿಲು ಆವರಿಸಿಕೊಂಡಿತ್ತು. ಬಿತ್ತನೆಯಾದ ಬೀಜಗಳು ಮೊಳಕೆಯಾಗದೆ ಹಾನಿ ಕೂಡಾ ಆಗಿದ್ದವು. ನಿನ್ನೆ ಮುಂಗಾರು ಜೋರಾಗಿ ರೈತರ ಬಾಳಲ್ಲಿ ಮಂದಹಾಸ ಮೂಡಿಸಿದೆ.
ಬೆಂಗಳೂರಿಗೆ ಮುಂಗಾರು ಮಳೆ ಎಂಟ್ರಿ ಯಾವಾಗ? ಹವಾಮಾನ ಇಲಾಖೆ ನೀಡಿದ ಮುನ್ಸೂಚನೆ ಏನು?
ಮುಂಗಾರು ದುರ್ಬಲ ಭಯದಿಂದ ಕಂಗಾಲಾಗಿದ್ದ ಅನ್ನದಾತನಿಗೆ ಮುಂಗಾರು ಸಂತಸ ನೀಡಿದೆ. ಈಗ ಸುರಿದ ಮಳೆಯಿಂದ ಕೃಷಿ ಭೂಮಿಗಳ ಬಿತ್ತನೆ ಕಾರ್ಯ ಚುರುಕುಗೊಳ್ಳಲಿವೆ. ಬಿತ್ತನೆ ಕೆಲಸಕ್ಕೆ ರೈತರು ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ. ಆದರೆ ರಸಗೊಬ್ಬರ ಕೊರತೆ, ಬೆಲೆ ಹೆಚ್ಚಳದಿಂದ ರೈತರು ಸಾಕಷ್ಟು ತೊಂದರೆಯನ್ನು ಅನುಭವಿಸುತ್ತಿದ್ದಾರೆ. ಬಿತ್ತನೆ ಬೀಜಕ್ಕಾಗಿ ಜಿಲ್ಲೆಯ ರೈತರು ಈಗಾಗಲೇ ಮುಗಿ ಬಿದ್ದು ಕಷ್ಟಪಟ್ಟು ಬೀಜ ಪಡೆದರೂ ಮಳೆ ಕೈಕೊಟ್ಟಿತ್ತು. ಕಡೆಗೂ ಮುಂಗಾರು ಸಕಾಲಕ್ಕೆ ಸುರಿದು ರೈತರ ಕೃಷಿಗೆ ಬಲ ತುಂಬಿದೆ.