G Parameshwara: ವಲಸೆ ಕಾರ್ಮಿಕರಿಂದ ಅಪರಾಧ: ಕ್ರಮದ ಬಗ್ಗೆ ಚರ್ಚೆಗೆ ಗೃಹ ಸಚಿವರ ಇಂಗಿತ
ಬಿಹಾರದ ಪಾಟ್ನಾ ಮೂಲದ 35 ವರ್ಷದ ರಿತೇಶ್ ಕುಮಾರ್ ಎಂಬಾತ ಹುಬ್ಬಳ್ಳಿಯಲ್ಲಿ ಐದು ವರ್ಷದ ಬಾಲಕಿಯನ್ನು ಅಪಹರಿಸಿ ಕೊಲೆ ಮಾಡಿರುವ ಹಿನ್ನೆಲೆಯಲ್ಲಿ ಗೃಹ ಸಚಿವರು ಈ ಬಗ್ಗೆ ಕಾರ್ಮಿಕರ ಸಚಿವರ ಜೊತೆಗೂ ಚರ್ಚೆಗೆ ಮುಂದಾಗಿದ್ದಾರೆ. ರಿತೇಶ್ ಕುಮಾರ್ನನ್ನು ಎನ್ಕೌಂಟರ್ನಲ್ಲಿ ಕೊಲ್ಲಲಾಗಿದೆ.

ಜಿ ಪರಮೇಶ್ವರ್

ಬೆಂಗಳೂರು: ಇತರ ರಾಜ್ಯಗಳಿಂದ ವಲಸೆ ಬಂದ ಕಾರ್ಮಿಕರು (migrant labourers) ಭಾಗಿಯಾಗಿರುವ ಅಪರಾಧ ಕೃತ್ಯಗಳು (crimes) ಹೆಚ್ಚುತ್ತಿರುವ ಬಗ್ಗೆ, ಈ ಕುರಿತು ತೆಗೆದುಕೊಳ್ಳಬಹುದಾದ ಕ್ರಮಗಳ ಕುರಿತು ಕಾರ್ಮಿಕ ಸಚಿವ ಸಂತೋಷ್ ಲಾಡ್ (Santosh Lad) ಅವರೊಂದಿಗೆ ಗೃಹ ಮತ್ತು ಕಾರ್ಮಿಕ ಇಲಾಖೆಗಳ ಜಂಟಿ ಸಭೆ ನಡೆಸುವುದಾಗಿ ಗೃಹ ಸಚಿವ ಜಿ ಪರಮೇಶ್ವರ (g parameshwara, home minister) ಸೋಮವಾರ ಹೇಳಿದ್ದಾರೆ. ಬಿಹಾರದ ಪಾಟ್ನಾ ಮೂಲದ 35 ವರ್ಷದ ರಿತೇಶ್ ಕುಮಾರ್ ಎಂಬಾತ ಹುಬ್ಬಳ್ಳಿಯಲ್ಲಿ ಐದು ವರ್ಷದ ಬಾಲಕಿಯನ್ನು ಅಪಹರಿಸಿ, ಕೊಲೆ ಮಾಡಿದ್ದಾನೆ ಎಂಬ ಆರೋಪದ ಬೆನ್ನಲ್ಲೇ ಗೃಹ ಸಚಿವರು ಈ ಹೇಳಿಕೆ ನೀಡಿದ್ದಾರೆ. ಭಾನುವಾರ ರಿತೇಶ್ ಕುಮಾರ್ ಪೊಲೀಸರ ಗುಂಡಿಗೆ ಬಲಿಯಾಗಿದ್ದಾನೆ.
ಇತರ ರಾಜ್ಯಗಳಿಂದ ಕರ್ನಾಟಕಕ್ಕೆ ಬರುವ ಕಾರ್ಮಿಕ ಬಲವನ್ನು ತಡೆಯಲು ಸಾಧ್ಯವಿಲ್ಲ. ಆದರೆ, ಅವರು ಒಳಗೊಂಡಿರುವ ಅಪರಾಧ ಚಟುವಟಿಕೆಗಳನ್ನು ಗಮನಿಸಿ ಅದರ ವಿರುದ್ಧ ಕ್ರಮಗಳನ್ನು ತೆಗೆದುಕೊಳ್ಳುವ ಅವಶ್ಯಕತೆಯಿದೆ ಎಂದು ಹೇಳಿದರು. 'ಬೆಂಗಳೂರು ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ನಗರವಾಗಿರುವುದರಿಂದ ಮತ್ತು ದೇಶದ ವಿವಿಧ ಭಾಗಗಳಿಂದ ರಾಜ್ಯಕ್ಕೆ ಕಾರ್ಮಿಕರು ಬರುತ್ತಿದ್ದಾರೆ. ಅನೇಕ ಸಂದರ್ಭಗಳಲ್ಲಿ ಅವರು ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾಗಿರುವುದನ್ನು ನಾವು ನೋಡುತ್ತೇವೆ. ನಾವು ಈ ಬಗ್ಗೆ ಖಂಡಿತವಾಗಿಯೂ ಗಮನ ಹರಿಸುತ್ತೇವೆ' ಎಂದು ದೇಶದ ಇತರ ಭಾಗಗಳಿಂದ ಬರುವ ಜನರು ಇಂತಹ ಅಪರಾಧಗಳಲ್ಲಿ ಹೆಚ್ಚು ಭಾಗಿಯಾಗಿದ್ದಾರೆ ಎಂಬ ಪ್ರಶ್ನೆಗೆ ಉತ್ತರಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ನಾನು ಕಾರ್ಮಿಕ ಸಚಿವರು ಮತ್ತು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸುತ್ತೇನೆ. ಇದನ್ನು ತಡೆಯಲು ನಾವು ಏನು ಮಾಡಬಹುದು ಎಂದು ನೋಡುತ್ತೇನೆ. ವಿವಿಧ ರಾಜ್ಯಗಳಿಂದ ಬರುವ ಕಾರ್ಮಿಕ ಬಲವನ್ನು ನಾವು ತಡೆಯಲು ಸಾಧ್ಯವಿಲ್ಲ. ಆದರೆ, ನಾವು ಕೆಲವು ಕ್ರಮಗಳನ್ನು ತೆಗೆದುಕೊಳ್ಳಬಹುದು. ನಾನು ಕಾರ್ಮಿಕ ಸಚಿವರೊಂದಿಗೆ ಚರ್ಚಿಸುತ್ತೇನೆ. ತೆಗೆದುಕೊಳ್ಳಬಹುದಾದ ಕ್ರಮಗಳ ಕುರಿತು ನಾವು (ಗೃಹ ಮತ್ತು ಕಾರ್ಮಿಕ ಇಲಾಖೆಗಳ) ಜಂಟಿ ಸಭೆ ನಡೆಸುತ್ತೇವೆ' ಎಂದರು.
ಭಾನುವಾರ ಹುಬ್ಬಳ್ಳಿಯಲ್ಲಿ ಬಿಹಾರದ ವ್ಯಕ್ತಿಯೊಬ್ಬ ಐದು ವರ್ಷದ ಬಾಲಕಿಯನ್ನು ಅಪಹರಿಸಿ ಕೊಂದ ಘಟನೆಯನ್ನು 'ಭಯಾನಕ' ಎಂದು ಕರೆದ ಗೃಹ ಸಚಿವರು, ಪೊಲೀಸರು ಆರೋಪಿಯನ್ನು ತಕ್ಷಣವೇ ಬಂಧಿಸಿದರು ಮತ್ತು ಸಾಕ್ಷ್ಯಗಳನ್ನು ಸಂಗ್ರಹಿಸಲು ಆತ ವಾಸಿಸುತ್ತಿದ್ದ ಸ್ಥಳಕ್ಕೆ ಕರೆದೊಯ್ಯುವಾಗ, ಆತ ಇದ್ದಕ್ಕಿದ್ದಂತೆ ಪೊಲೀಸರ ಮೇಲೆ ದಾಳಿ ಮಾಡಿದ್ದಾನೆ. ಈ ವೇಳೆ ಪೊಲೀಸರು ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಆತನ ಮೇಲೆ ಗುಂಡು ಹಾರಿಸಿದ್ದಾರೆ. ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಆತ ಸಾವಿಗೀಡಾಗಿದ್ದಾನೆ' ಎಂದು ಹೇಳಿದರು.
'ಸತ್ಯಾಂಶ ಹೊರಬರಲು ಹಿರಿಯ ಅಧಿಕಾರಿಯಿಂದ ತನಿಖೆಗೆ ಆದೇಶಿಸಿದ್ದೇನೆ. ವರದಿ ಬರಲಿ' ಎಂದು ಅವರು ಹೇಳಿದರು.ಈ ತಿಂಗಳ ಆರಂಭದಲ್ಲಿ ಸುದ್ದುಗುಂಟೆಪಾಳ್ಯದಲ್ಲಿ ಮಹಿಳೆಯೊಬ್ಬರ ಮೇಲೆ ನಡೆದ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ, ಶಂಕಿತನನ್ನು ಕೇರಳದಲ್ಲಿ ಬಂಧಿಸಲಾಗಿದ್ದು, ಬೆಂಗಳೂರಿಗೆ ಕರೆತರಲಾಗುತ್ತಿದೆ ಮತ್ತು ಹೆಚ್ಚಿನ ತನಿಖೆಗಳು ನಡೆಯಲಿವೆ ಎಂದು ಹೇಳಿದರು.
ವಾರಪೂರ್ತಿ ನಡೆದ ಹುಡುಕಾಟದ ನಂತರ, ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ತಿಲಕ್ನಗರ ಬಳಿಯ ಗುಲ್ಬರ್ಗ ಕಾಲೋನಿಯ ನಿವಾಸಿ ಸಂತೋಷ್ ಡಿ (29) ಎಂಬ ವ್ಯಕ್ತಿಯನ್ನು ಕೇರಳದ ಕೋಯಿಕ್ಕೋಡ್ನಲ್ಲಿ ಬಂಧಿಸಲಾಗಿದೆ ಎಂದು ನಗರ ಪೊಲೀಸರು ಭಾನುವಾರ ತಿಳಿಸಿದ್ದಾರೆ. ಪೊಲೀಸರ ಪ್ರಕಾರ, ಶಂಕಿತ ಬ್ರೂಕ್ಫೀಲ್ಡ್ ಬಳಿಯ ಆಟೋಮೊಬೈಲ್ ಶೋ ರೂಂನಲ್ಲಿ ಚಾಲಕನಾಗಿ ಕೆಲಸ ಮಾಡುತ್ತಿದ್ದ.
ಇದನ್ನೂ ಓದಿ: Hubli Girl Murder: ಹುಬ್ಬಳ್ಳಿ ಬಾಲಕಿ ಕೊಲೆ ಪ್ರಕರಣ; ಎನ್ಕೌಂಟರ್ನಲ್ಲಿ ಬಿಹಾರದ ಆರೋಪಿ ಹತ್ಯೆ!