ಕಲಬುರಗಿ: ತಾಯಿಯನ್ನು ಬಿಟ್ಟು ವಸತಿ ನಿಲಯದಲ್ಲಿ ಇರುವುದಿಲ್ಲ. ವಸತಿ ನಿಲಯಕ್ಕೆ ಸೇರಿಸಬೇಡಿ ಎಂದು ಹಠ ಹಿಡಿದ್ದ ಬಾಲಕನೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಜಿಲ್ಲೆಯ ಸೇಡಂ ತಾಲೂಕಿನ ಮುಧೋಳ ಗ್ರಾಮದಲ್ಲಿ ನಡೆದಿದೆ (Self Harming). ತನ್ನ ಇಚ್ಛೆಗೆ ವಿರುದ್ಧವಾಗಿ ಇಂದಿರಾ ಗಾಂಧಿ ರೆಸಿಡೆನ್ಶಿಯಲ್ ಶಾಲೆಯಲ್ಲಿ 7ನೇ ತರಗತಿಯ ಅಡ್ಮಿಶನ್ ಮಾಡಿಸಿದ್ದಕ್ಕೆ ವಿದ್ಯಾರ್ಥಿ ನಾರಾಯಣ ರಾಠೋಡ್ (13) ಮನನೊಂದು ಗುರುವಾರ (ಜು. 10) ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ತಾಯಿಯನ್ನು ಬಿಟ್ಟು ವಸತಿ ನಿಲಯದಲ್ಲಿ ಇರಲಾಗದೆ ಮುಗ್ಧ ಬಾಲಕ ಜೀವ ಕಳೆದುಕೊಂಡಿದ್ದಾನೆ.
ಕಲಬುರಗಿ ತಾಲೂಕಿನ ಪಾಣೆಗಾಂವ ಗ್ರಾಮದ ಬಾಲಕ ನಾರಾಯಣ ರಾಠೋಡ್ ತಾಯಿಯನ್ನು ಬಿಟ್ಟಿರಲಾರೆ, ವಸತಿ ನಿಲಯಕ್ಕೆ ಸೇರಿಸಿದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಈ ಹಿಂದಯೇ ಪಾಲಕರ ಬಳಿ ಹೇಳಿದ್ದ. ಆದರೆ ಬಾಲಕನ ಮನವೋಲಿಸಿ ಪಾಲಕರು ಶಾಲೆಯ ವಸತಿ ನಿಲಯಕ್ಕೆ ಪ್ರವೇಶ ಕೊಡಿಸಿ ಬಿಟ್ಟು ಹೋಗಿದ್ದರು. ಇಷ್ಟಾದರೂ ತಾಯಿಯನ್ನು ಬಿಟ್ಟು ಇರಲಾರದ ಈ ಪುಟ್ಟ ಜೀವ ತನ್ನ ಪ್ರಾಣ ಕಳೆದುಕೊಂಡಿದೆ.
ಇದಲ್ಲದೇ 15 ದಿನಗಳ ಹಿಂದಯೂ ಈತ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದ ಎಂದು ತಿಳಿದುಬಂದಿದೆ.
ವಿಷ ಸೇವಿಸಿ ಒಂದೇ ಕುಟುಂಬದ ಮೂವರು ಆತ್ಮಹತ್ಯೆ
ಬೆಳಗಾವಿ: ಬೆಳಗಾವಿಯಲ್ಲಿ ವಿಷ ಸೇವಿಸಿ ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆಗೆ ಯತ್ನಿಸಿ, ಅವರಲ್ಲಿ ಮೂವರು ಸಾವನ್ನಪ್ಪಿದ ಘಟನೆ ಬುಧವಾರ ನಡೆದಿತ್ತು. ಮತ್ತೊಬ್ಬಳ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಬೆಳಗಾವಿ ನಗರದ ಜೋಶಿಮಾಳ್ನಲ್ಲಿ ಈ ದುರ್ಘಟನೆ ನಡೆದಿದೆ. ಮೃತ ದುರ್ದೈವಿಗಳನ್ನು ಸಂತೋಷ ಕುರುಡೇಕರ್ (44), ಸುವರ್ಣಾ ಹಾಗು ಮಂಗಳಾ ಎಂದು ಗುರುತಿಸಲಾಗಿದೆ. ವಿಷ ಸೇವಿಸಿದ ಸುನಂದಾ ಕುರುಡೇಕರ್ ಎಂಬವರ ಸ್ಥಿತಿ ಗಂಭೀರವಾಗಿದೆ.
ಸುನಂದಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಶಹಾಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಆತ್ಮಹತ್ಯೆಗೆ ಕಾರಣ ಏನು ಎಂಬುದನ್ನು ಪರಿಶೀಲನೆ ನಡೆಸಿದ್ದಾರೆ. ಸಾಲದ ಹೊರೆ ಸಾಮೂಹಿಕ ಆತ್ಮಹತ್ಯೆಗೆ ಕಾರಣ ಇರಬಹುದು ಎಂದು ಶಂಕಿಸಲಾಗಿದೆ.