ಕಲಬುರಗಿ: ಕೆಕೆಆರ್ಟಿಸಿ ಬಸ್ನ ಹೆಡ್ಲೈನ್ ಮಂದವಾಗಿದ್ದರಿಂದ ಮೊಬೈಲ್ ಟಾರ್ಚ್ ಬಳಸಿ ಬಸ್ ಚಾಲನೆ ಮಾಡಿ ಪ್ರಯಾಣಿಕರ ಜೀವದ ಜತೆ ಚೆಲ್ಲಾಟವಾಡಿದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ನಿಗಮದ ಕಲಬುರಗಿ ವಿಭಾಗ-1ರ ವಿಭಾಗೀಯ ನಿಯಂತ್ರಣಾಧಿಕಾರಿ ಅವರು, ಬಸ್ ಚಾಲಕ ಹಾಗೂ ಇಬ್ಬರು ತಾಂತ್ರಿಕ ಸಿಬ್ಬಂದಿಯನ್ನು ಸೇವೆಯಿಂದ ಅಮಾನತುಗೊಳಿಸಿದ್ದಾರೆ.
ಜುಲೈ 4ರಂದು ರಾತ್ರಿ ಕಲಬುರಗಿಯಿಂದ ಚಿಂಚೋಳಿಗೆ ಹೊರಟಿದ್ದ ಬಸ್ನ ಹೆಡ್ಲೈಟ್ ಸಮಸ್ಯೆಯಾಗಿತ್ತು. ಹೀಗಾಗಿ ಬಸ್ ನಿರ್ವಾಹಕ ಹಾಗೂ ಇತರ ಪ್ರಯಾಣಿಕರ ಮೊಬೈಲ್ ಟಾರ್ಚ್ ಬೆಳಕಲ್ಲೇ ಬಸ್ ಚಿಂಚೋಳಿ ತಲುಪಿತ್ತು.
ಬಸ್ನ ಹೆಡ್ಲೈಟನ್ನು ಸರಿಯಾಗಿ ದುರಸ್ತಿ ಮಾಡದ ಚಿಂಚೋಳಿ ಘಟಕದ ತಾಂತ್ರಿಕ ಸಿಬ್ಬಂದಿ ಶಿವಾನಂದ, ದುರಸ್ತಿ ಮಾಡಿದ್ದನ್ನು ಸರಿಯಾಗಿ ಪರಿಶೀಲಿಸದ ತಾಂತ್ರಿಕ ಮೇಲ್ವಿಚಾರಕ ಬಸವರಾಜ ಹಾಗೂ ಹೆಡ್ಲೈಟ್ನ ತಾಂತ್ರಿಕ ಸಮಸ್ಯೆ ಇದ್ದರೂ ಬಸ್ ಚಾಲನೆ ಮಾಡಿದ ಆಕಾಶ್ ಎಂಬುವವರನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ.
ಘಟನೆ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾದ ಹಿನ್ನೆಲೆ ಎಚ್ಚೆತ್ತ ಕೆಕೆಆರ್ಟಿಸಿ ಅಧಿಕಾರಿಗಳು ಇಲಾಖಾ ತನಿಖೆ ನಡೆಸಿದ್ದರು. ತನಿಖೆಯಲ್ಲಿ ಡಿಪೋ ಸಿಬ್ಬಂದಿ ಹಾಗೂ ಚಾಲಕನ ಅಜಾಗರೂಕತೆಯೇ ಘಟನೆಗೆ ಕಾರಣ ಎನ್ನುವುದು ದೃಢವಾಗಿದೆ. ಹೀಗಾಗಿ ಮೂವರನ್ನು ಅಮಾನತು ಮಾಡಲಾಗಿದೆ.
ಆಡಳಿತ ನಿಷ್ಕ್ರಿಯತೆ ಎದ್ದು ಕಾಣುತ್ತಿದೆ: ನಿಖಿಲ್
ಬೆಂಗಳೂರು: ಮೊಬೈಲ್ ಟಾರ್ಚ್ ಬಳಸಿ ಬಸ್ ಚಾಲನೆ ಮಾಡಿದ ಪ್ರಕರಣಕ್ಕೆ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಕಿಡಿಕಾರಿದ್ದಾರೆ. ರಾಜ್ಯ ಕಾಂಗ್ರೆಸ್ ಸರ್ಕಾರದ ಆಡಳಿತ ವೈಫಲ್ಯಕ್ಕೆ ಇದಕ್ಕಿಂತ ಸಾಕ್ಷಿ ಬೇಕೇ? ಒಂದೆಡೆ ಕೆಕೆಆರ್ಟಿಸಿ ಬಸ್ ಹೆಡ್ಲೈಟ್ ಇಲ್ಲದೆ ಮೊಬೈಲ್ ಟಾರ್ಚ್ ಬೆಳಕಿನಲ್ಲಿ ಚಲಿಸುತ್ತಿದ್ದರೆ, ಇನ್ನೊಂದೆಡೆ ಬೆಂಗಳೂರಿಗೆ ಬರಬೇಕಿದ್ದ 4,500 ಎಲೆಕ್ಟ್ರಿಕ್ ಬಸ್ಗಳನ್ನು ರಸ್ತೆಗಿಳಿಸಲಾಗದಷ್ಟು ಆಡಳಿತ ನಿಷ್ಕ್ರಿಯತೆ ಎದ್ದು ಕಾಣುತ್ತಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ.
ಕೇಂದ್ರ ಬೃಹತ್ ಕೈಗಾರಿಕಾ ಸಚಿವ ಎಚ್. ಡಿ. ಕುಮಾರಸ್ವಾಮಿ ಅವರ ಸಚಿವಾಲಯವು 'PM E-DRIVE' ಯೋಜನೆಯಡಿ BMTCಗೆ ಬರೋಬ್ಬರಿ 4,500 ಇ-ಬಸ್ಗಳನ್ನು ಮಂಜೂರು ಮಾಡಿದೆ. ಡಿಸೆಂಬರ್ 2025ರಲ್ಲೇ ಇದಕ್ಕೆ ಅನುಮೋದನೆ ಸಿಕ್ಕಿದ್ದರೂ, ರಾಜ್ಯ ಸಾರಿಗೆ ಇಲಾಖೆಯು ಇದುವರೆಗೂ 'Letter of Award (LoA)' ನೀಡದೆ ಕಾಲಹರಣ ಮಾಡುತ್ತಿದೆ ಎಂದು ಕೇಂದ್ರ ಸರ್ಕಾರವು ಅಧಿಕೃತ ಪತ್ರದ ಮೂಲಕ ತರಾಟೆಗೆ ತೆಗೆದುಕೊಂಡಿದೆ.
ಚಲಿಸುವ ಲೋಕಲ್ ರೈಲಿನ ಮೇಲೆ ಕಲ್ಲು ಎಸೆದ ಮಹಿಳೆ! ಚಾಲಕನ ಕ್ಯಾಬಿನ್ ಗ್ಲಾಸ್ ಗೆ ಹಾನಿ!
'ಶಕ್ತಿ' ಯೋಜನೆಯ ₹4,573 ಕೋಟಿ ಬಾಕಿ ಹಣವನ್ನು ಸಾರಿಗೆ ಸಂಸ್ಥೆಗಳಿಗೆ ಮರುಪಾವತಿಸದೆ ವ್ಯವಸ್ಥೆಯನ್ನೇ ಆರ್ಥಿಕವಾಗಿ ಜರ್ಜರಿತಗೊಳಿಸಿರುವ ರಾಜ್ಯ ಸರ್ಕಾರ, ಇತ್ತ ಕೇಂದ್ರ ಸರ್ಕಾರ ಸಾರ್ವಜನಿಕರ ಹಿತದೃಷ್ಟಿಯಿಂದ ನೀಡಿದ ಬೃಹತ್ ಕೊಡುಗೆಯನ್ನು ಬಳಸಿಕೊಳ್ಳಲಾಗದಷ್ಟು ನಿಷ್ಕ್ರಿಯವಾಗಿದೆ ಎಂದು ಟೀಕಿಸಿದ್ದಾರೆ.