ಕಲಬುರಗಿ, ಏ.4: ಅಪರಿಚಿತ ಯುವತಿಯೊಬ್ಬಳ ಶವ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ಜಿಲ್ಲೆಯ (Kalaburagi News) ಕಮಲಾಪುರ ತಾಲೂಕಿನ ಕಲ್ಮೂಡ ಗ್ರಾಮದ ಬಳಿ ಜರುಗಿದೆ. ಅಂದಾಜು 23 ವರ್ಷದ ಯುವತಿಯ ಶವ ಇದಾಗಿದ್ದು, ದುಷ್ಕರ್ಮಿಗಳು ಮಹಿಳೆಯನ್ನು ಬೇರೆಡೆ ಕೊಲೆ ಮಾಡಿ, ಸಾಕ್ಷ್ಯ ನಾಶಪಡಿಸುವ ಉದ್ದೇಶದಿಂದ ಕಲ್ಮೂಡ ಗ್ರಾಮದ ಹೊರವಲಯಕ್ಕೆ ತಂದು ಸುಟ್ಟು ಹಾಕಿದ್ದಾರೆ ಎಂದು ಶಂಕಿಸಲಾಗಿದೆ.
ಇಡೀ ದೇಹ ಸುಟ್ಟು ಕರಕಲಾಗಿದ್ದು, ಕೇವಲ ಕಾಲುಗಳು ಮಾತ್ರ ಉಳಿದುಕೊಂಡಿವೆ. ಸುಟ್ಟ ದೇಹದ ಸ್ಥಿತಿಯನ್ನು ಕಂಡು ಸ್ಥಳೀಯರು ಆತಂಕಕ್ಕೊಳಗಾಗಿದ್ದಾರೆ. ವಿಷಯ ತಿಳಿಯುತ್ತಿದ್ದಂತೆಯೇ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಡ್ಡೂರು ಶ್ರೀನಿವಾಸಲು ಹಾಗೂ ಶ್ವಾನದಳ ಹಾಗೂ ಬೆರಳಚ್ಚು ತಜ್ಞರ ತಂಡದೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸುಳಿವುಗಳಿಗಾಗಿ ಸುತ್ತಮುತ್ತಲಿನ ಪ್ರದೇಶದಲ್ಲಿ ತೀವ್ರ ಶೋಧ ನಡೆಸಲಾಗುತ್ತಿದೆ.
ಘಟನೆಗೆ ಸಂಬಂಧಿಸಿದಂತೆ ಕಮಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮೃತ ಮಹಿಳೆಯ ಗುರುತು ಪತ್ತೆ ಹಚ್ಚಲು ಮತ್ತು ಹಂತಕರನ್ನು ಪತ್ತೆ ಹಚ್ಚಲು ಪೊಲೀಸರು ಜಾಲ ಬೀಸಿದ್ದಾರೆ.
ಸುರಪುರದಲ್ಲಿ ಬಡವರ ಅನ್ನಕ್ಕೆ ಕನ್ನ, ಪಡಿತರ ಅಕ್ಕಿ ಅಕ್ರಮ ಮಾರಾಟ; ತಹಸೀಲ್ದಾರ್ಗೆ ದೂರು
ಯಾದಗಿರಿ: ಬಡವರ ಹಸಿವು ನೀಗಿಸುವ ಉದ್ದೇಶದಿಂದ ಸರ್ಕಾರ ಉಚಿತವಾಗಿ ನೀಡುತ್ತಿರುವ ಪಡಿತರ ಅಕ್ಕಿಯನ್ನು ಅಕ್ರಮವಾಗಿ ಮಾರಾಟ (Ration Rice Smuggling) ಮಾಡುತ್ತಿರುವ ಆರೋಪ ಯಾದಗಿರಿ ಜಿಲ್ಲೆಯ ಸುರಪುರ ನಗರದ ಕಬಡಗೇರಾದಲ್ಲಿ ಕೇಳಿಬಂದಿದೆ. ಈ ಬಗ್ಗೆ ಸೂಕ್ತ ತನಿಖೆ ನಡೆಸಿ, ಅಂಗಡಿಯ ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಜಯ ಕರ್ನಾಟಕ ಸಂಘಟನೆಯ ತಾಲೂಕು ಘಟಕ ಅಧ್ಯಕ್ಷ ಯಲ್ಲಪ್ಪ ನಾಯಕ ಕಬಾಡಿಗೇರ ಅವರು ತಹಸಿಲ್ದಾರ್ ಅವರಿಗೆ ಮನವಿ ಸಲ್ಲಿಸಿದ್ದಾರೆ.
ನಗರದ ನ್ಯಾಯಬೆಲೆ ಅಂಗಡಿಯಲ್ಲಿ (123) ಪ್ರತಿ ತಿಂಗಳು ಪಡಿತರ ವಿತರಿಸುವಾಗ ಪ್ರತಿಯೊಬ್ಬರಿಂದ 2 ಕೆಜಿ ಕಡಿತಗೊಳಿಸಿವುದಲ್ಲದೆ, ಕೆಲ ಪಡಿತರ ಚೀಟಿದಾರರಿಂದ ಅಕ್ಕಿ ಖರೀದಿಸಿ ಕಾಳ ಸಂತೆಯಲ್ಲಿ ಮಾರಾಟ ಮಾಡಲಾಗುತ್ತಿದೆ ಎಂದು ಆರೋಪಿಸಿರುವ ಅವರು, ಇಂತಹ ನ್ಯಾಯಬೆಲೆ ಅಂಗಡಿಗಳ ಮಾಲೀಕರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಮತ್ತು ಅಕ್ರಮಕ್ಕೆ ಕಡಿವಾಣ ಹಾಕಲು ಸಿಸಿಟಿವಿ ಕ್ಯಾಮೆರಾ ಅಳವಡಿಸಿಸುವಂತೆ ಆಗ್ರಹಿಸಿದ್ದಾರೆ.
ಇನ್ನು ನ್ಯಾಯಬೆಲೆ ಅಂಗಡಿಯಿಂದ ರಾತ್ರಿ ಹೊತ್ತಿನಲ್ಲಿ ಅಂದಾಜು 30 ಕ್ವಿಂಟಲ್ ಅಕ್ಕಿಯನ್ನು ಅಕ್ರಮವಾಗಿ ಸಾಗಿಸುತ್ತಿರಿವ ವಿಡಿಯೊ ವೈರಲ್ ಆಗಿದೆ.
ಮನವಿ ಪತ್ರದಲ್ಲಿ ಏನಿದೆ?
ಸುರಪುರ ನಗರಸಭೆ ವ್ಯಾಪ್ತಿಯಲ್ಲಿನ ಕಬಾಡಗೇರಾದ ನ್ಯಾಯಬೆಲೆ ಅಂಗಡಿ ಸಂಖ್ಯೆ : 123 ಎಸ್ಸಿ, ಎಸ್ಟಿ ಹೆಣ್ಣು ಮಕ್ಕಳ ವಿವಿಧೋದ್ದೇಶ ಸಂಘದಲ್ಲಿ ಪ್ರತಿ ತಿಂಗಳು ಪಡಿತರ ಚೀಟಿದಾರರಿಗೆ ಬರುವ ಆಹಾರ ಧಾನ್ಯವನ್ನು ಪ್ರತಿ ಕಾರ್ಡಿಗೆ 2 ಕೆ.ಜಿ.ಯಂತೆ ಕಡಿತಗೊಳಿಸಿ ನೀಡುತ್ತಿದ್ದು, ಮತ್ತು ಯಾರೂ ಆಹಾರ ಧಾನ್ಯ ತೆಗೆದುಕೊಳ್ಳುವುದಿಲ್ಲವೋ ಅಂತವರಿಗೆ ಹಣ ಕೊಟ್ಟು ಮಾಲೀಕನೇ ಖರೀದಿ ಮಾಡುತ್ತಿದ್ದಾನೆ. ನ್ಯಾಯಬೆಲೆ ಅಂಗಡಿಯಿಂದ ಪ್ರತಿ ತಿಂಗಳು 30 ರಿಂದ 40 ಕ್ವಿಂಟಲ್ ಆಹಾರ ಧಾನ್ಯವನ್ನು ಬೇರೆಡೆ ಕಳ್ಳ ಸಾಗಾಣಿಕೆ ಮಾಡಿ, ಮಾರಾಟ ಮಾಡಿ ವಂಚನೆ ಮಾಡುತ್ತಿದ್ದಾನೆ.
ಮದುವೆಯಾಗಲಿಲ್ಲ ಅಂತ ನೊಂದು ತೆಂಗಿನಮರಕ್ಕೆ ನೇಣು ಹಾಕಿಕೊಂಡು ಯುವಕ ಆತ್ಮಹತ್ಯೆ
ಅಕ್ರಮ ಬಗ್ಗೆ ಯಾರಾದರೂ ಪ್ರಶ್ನಿಸಿದರೆ ನಿಮಗೆ ಈ ತಿಂಗಳು ಆಹಾರ ಧಾನ್ಯ ಬಂದಿರುವುದಿಲ್ಲ ಎಂದು ಹೇಳಿ, ಆಹಾರ ಧಾನ್ಯವನ್ನು ಅಕ್ರಮವಾಗಿ ಮಾರಾಟ ಮಾಡುತ್ತಿದ್ದಾನೆ. ಹೀಗಾಗಿ ಈ ಡೀಲರ್ ವಿರುದ್ಧ ಕಾನೂನು ಕ್ರಮ ಜರುಗಿಸಿ, ಲೈಸೆನ್ಸ್ ರದ್ದುಪಡಿಸಬೇಕು. ಹಾಗೆಯೇ ತಾಲೂಕಿನ ಎಲ್ಲಾ ನ್ಯಾಯಬೆಲೆ ಅಂಗಡಿಗಳಿಗೆ ಸಿ.ಸಿ.ಕ್ಯಾಮೆರಾ ಅಳವಡಿಸಿ, ಪಡಿತರ ಚೀಟಿದಾರರಿಗೆ ಪಾರದರ್ಶಕವಾಗಿ ಆಹಾರ ಧಾನ್ಯವನ್ನು ದೊರೆಯುವಂತೆ ಮಾಡಬೇಕು. ಒಂದು ವಾರದೊಳಗೆ ಸೂಕ್ತ ಕಾನೂನು ಕ್ರಮ ಕೈಗೊಳ್ಳದಿದ್ದರೆ ಉಗ್ರ ಹೋರಾಟ ಮಾಡಲಾಗುತ್ತದೆ ಎಂದು ಯಲ್ಲಪ್ಪ ನಾಯಕ ಕಬಾಡಿಗೇರ ಪತ್ರದಲ್ಲಿ ತಿಳಿಸಿದ್ದಾರೆ.