ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Karnataka Budget 2026: ರಾಷ್ಟ್ರಕವಿ ಜಿಎಸ್‌ ಶಿವರುದ್ರಪ್ಪ ಜನ್ಮಶತಮಾನೋತ್ಸವಕ್ಕೆ 2 ಕೋಟಿ ರೂ.

ರಾಜ್ಯದ ವಿವಿಧ ಕಲಾ ಪ್ರಕಾರಗಳನ್ನು ಒಂದೆಡೆ ಸೇರಿಸಿ ʻಬೆಂಗಳೂರು ಹಬ್ಬʼ ಸಂಯೋಜಕರ ಸಹಯೋಗದೊಂದಿಗೆ ಪ್ರತಿ ವರ್ಷ ರಂಗಭೂಮಿ, ಲಲಿತಕಲೆ, ಚಿತ್ರಕಲೆ, ಶಿಲ್ಪಕಲೆ ಇತ್ಯಾದಿ ಕಲಾಪ್ರಕಾರಗಳ ಕಾರ್ಯಕ್ರಮಗಳನ್ನು ಆಯೋಜಿಸಲು ಐದು ಕೋಟಿ ರೂ.ಗಳನ್ನು ನೀಡಲು ಹಾಗೂ ಎಲ್ಲಾ ಜಾನಪದ ಹಾಗೂ ಬುಡಕಟ್ಟು ಕಲಾವಿದರು, ವಿದ್ವಾಂಸರು ಹಾಗೂ ಜಾನಪದ ವಾದ್ಯಗಾರರನ್ನು ಒಳಗೊಂಡ ಸಮಾವೇಶಗಳನ್ನು ʻಜಾನಪದ ಸಂಗಮ’ ಶೀರ್ಷಿಕೆಯಲ್ಲಿ ಎರಡು ಕೋಟಿ ರೂ.ಗಳ ವೆಚ್ಚದಲ್ಲಿ ಆಯೋಜಿಸಲು ಸರಕಾರ ಮುಂದಾಗಿದೆ.

ಕರ್ನಾಟಕ ಬಜೆಟ್

ಬೆಂಗಳೂರು, ಮಾರ್ಚ್‌ 06: ರಾಷ್ಟ್ರಕವಿ ಜಿಎಸ್‌ ಶಿವರುದ್ರಪ್ಪ ಅವರ ಜನ್ಮಶತಮಾನೋತ್ಸವ ಕಾರ್ಯಕ್ರಮಗಳಿಗೆ 2 ಕೋಟಿ ರೂ. ಮೀಸಲು, ದಲಿತ ಸಾಹಿತ್ಯಕ್ಕೆ 50 ವರ್ಷ ತುಂಬಿದ ಹಿನ್ನೆಲೆಯಲ್ಲಿ ಸಾಹಿತ್ಯ ಕೃತಿಗಳ ಪ್ರಕಟಣೆ, ಯುಆರ್‌ ಅನಂತಮೂರ್ತಿ ಹೆಸರಿನಲ್ಲಿ ಅಧ್ಯಯನ ಪೀಠ, ದಲಿತ ಕವಿ ಸಿದ್ದಲಿಂಗಯ್ಯ- ವಿಮರ್ಶಕ ಡಿಆರ್‌ ನಾಗರಾಜ್‌ ಹೆಸರಿನಲ್ಲಿ ಟ್ರಸ್ಟ್‌ಗಳ ಸ್ಥಾಪನೆಗೆ ಸರಕಾರ ಮುಂದಾಗಿದೆ.

2026ರ ಬಜೆಟ್‌ನಲ್ಲಿ (Karnataka Budget 2026) ಮುಖ್ಯಮಂತ್ರಿ ಸಿದ್ದರಾಮಯ್ಯ (cm siddaramaiah) ಅವರು ಕನ್ನಡ ಸಾಹಿತ್ಯ- ಸಂಸ್ಕೃತಿ ಕ್ಷೇತ್ರಕ್ಕೆ ಹಲವಾರು ಕೊಡುಗೆ ನೀಡಿದ್ದಾರೆ. ಆ ಪ್ರಸ್ತಾವಗಳು ಈ ಕೆಳಗಿನಂತಿವೆ:

ರಾಜ್ಯದ ವಿವಿಧ ಕಲಾ ಪ್ರಕಾರಗಳನ್ನು ಒಂದೆಡೆ ಸೇರಿಸಿ ʻಬೆಂಗಳೂರು ಹಬ್ಬʼ ಸಂಯೋಜಕರ ಸಹಯೋಗದೊಂದಿಗೆ ಪ್ರತಿ ವರ್ಷ ರಂಗಭೂಮಿ, ಲಲಿತಕಲೆ, ಚಿತ್ರಕಲೆ, ಶಿಲ್ಪಕಲೆ ಇತ್ಯಾದಿ ಕಲಾಪ್ರಕಾರಗಳ ಕಾರ್ಯಕ್ರಮಗಳನ್ನು ಆಯೋಜಿಸಲು ಐದು ಕೋಟಿ ರೂ.ಗಳನ್ನು ನೀಡಲಾಗುವುದು.

ಎಲ್ಲಾ ಜಾನಪದ ಹಾಗೂ ಬುಡಕಟ್ಟು ಕಲಾವಿದರು, ವಿದ್ವಾಂಸರು ಹಾಗೂ ಜಾನಪದ ವಾದ್ಯಗಾರರನ್ನು ಒಳಗೊಂಡ ಸಮಾವೇಶಗಳನ್ನು ʻಜಾನಪದ ಸಂಗಮ’ ಶೀರ್ಷಿಕೆಯಲ್ಲಿ ಎರಡು ಕೋಟಿ ರೂ.ಗಳ ವೆಚ್ಚದಲ್ಲಿ ಆಯೋಜಿಸಲಾಗುವುದು.

ರಾಷ್ಟ್ರಕವಿ ಡಾ|| ಜಿ.ಎಸ್.‌ಶಿವರುದ್ರಪ್ಪರವರ ಜನ್ಮಶತಮಾನೋತ್ಸವ ಅಂಗವಾಗಿ ಅವರ ಗೀತೆಗಳ ಗಾಯನ, ವಿಚಾರ ಸಂಕಿರಣ, ಕವಿಗೋಷ್ಠಿ, ಆಯ್ದ ಕೃತಿಗಳ ಇಂಗ್ಲೀಷ್‌ ಅನುವಾದ, ಸಾಹಿತ್ಯ ವಾಚಿಕೆ ಹಾಗೂ ಜಿಎಸ್ಎಸ್‌ ಪ್ರಶಸ್ತಿ ನೀಡಲು ಎರಡು ಕೋಟಿ ರೂ. ಒದಗಿಸಲಾಗುವುದು.

Karnataka Budget 2026: ಸಮಗ್ರ ಕರಾವಳಿ ಪ್ರವಾಸೋದ್ಯಮ ಅಭಿವೃದ್ಧಿ ಯೋಜನೆ ಘೋಷಣೆ; ಪ್ರವಾಸಿ ತಾಣಗಳಲ್ಲಿ ಸೀ ಪ್ಲೇನ್, ಹೆಲಿ ಟ್ಯಾಕ್ಸಿ ಸೇವೆ

ಭಾವೈಕ್ಯತೆಯ ಹರಿಕಾರ ಸಂತ ಶಿಶುನಾಳ ಶರೀಫ‌ ಹಾಗೂ ವೀರರಾಣಿ ಬೆಳವಡಿ ಮಲ್ಲಮ್ಮ ಇವರುಗಳ ಹೆಸರಿನಲ್ಲಿ ಪ್ರತ್ಯೇಕವಾಗಿ ಪ್ರತಿಷ್ಠಾನ ಸ್ಥಾಪಿಸಲಾಗುವುದು. ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ|| ಯು.ಆರ್. ಅನಂತಮೂರ್ತಿಯವರ ಹೆಸರಿನಲ್ಲಿ ಕುವೆಂಪು ವಿಶ್ವವಿದ್ಯಾಲಯದಲ್ಲಿ ಒಂದು ಅಧ್ಯಯನ ಪೀಠವನ್ನು ಸ್ಥಾಪಿಸಲಾಗುವುದು.

ಮಕ್ಕಳಿಗಾಗಿ ಪಂಪ, ರನ್ನ, ಜನ್ನ, ಬಸವಾದಿ ಶರಣರು, ಸರ್ವಜ್ಞ, ಕನಕ, ಪುರಂದರ, ಲಕ್ಷ್ಮೀಶ, ಸಂಚಿ ಹೊನ್ನಮ್ಮ ಇತ್ಯಾದಿ ಪ್ರಾಚೀನ ಕವಿಗಳ ಹಾಗೂ ಕುವೆಂಪು, ಶಿವರಾಮ ಕಾರಂತ, ದೇವನೂರು ಮಹದೇವ ಮುಂತಾದವರ ಕೃತಿಗಳ ಬಣ್ಣದ ಚಿತ್ರಗಳು ಮತ್ತು ಸಣ್ಣ ವಾಕ್ಯಗಳ ಪುಸ್ತಕಗಳನ್ನು ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ ಮುದ್ರಿಸಿ ಪ್ರಕಟಿಸಲಾಗುವುದು.

ಗೋರ್‌ ಬಂಜಾರ ಸಮುದಾಯದ ಇತಿಹಾಸ, ಸಂಸ್ಕೃತಿ, ಭಾಷೆ, ಆಚಾರ-ವಿಚಾರ, ಉಡುಗೆ, ಆಹಾರ ಪದ್ದತಿ, ಕಸುಬು ಇತ್ಯಾದಿಗಳನ್ನು ದಾಖಲಿಸಲು ಬಂಜಾರ ವಿಶ್ವಕೋಶವನ್ನು ಪ್ರಕಟಿಸಲಾಗುವುದು.

Karnataka Budget 2026: ಕಾರವಾರಕ್ಕೆ ಹೈಟೆಕ್ ಸ್ಪರ್ಶ: ಕೊನೆಗೂ ಈಡೇರಿತು 'ಸೂಪರ್ ಸ್ಪೆಷಾಲಿಟಿ' ಕನಸು

ದಲಿತ ಸಾಹಿತ್ಯ ಚಳುವಳಿಗೆ 50 ವರ್ಷ ತುಂಬಿದ ಸಂದರ್ಭದಲ್ಲಿ ದಲಿತ ಕವಿ ಸಿದ್ದಲಿಂಗಯ್ಯರವರ ಸಾಹಿತ್ಯವೂ ಸೇರಿದಂತೆ 50 ವರ್ಷಗಳಲ್ಲಿ ರಚನೆಯಾದ ದಲಿತ ಸಾಹಿತ್ಯವನ್ನು ಸಂಪಾದಿಸಿ ʻಅರ್ಧಶತಮಾನದ ದಲಿತ ಸಾಹಿತ್ಯʼ ಎಂಬ ಹೆಸರಿನಲ್ಲಿ ಪುಸ್ತಕವನ್ನು ಪ್ರಕಟಿಸಲಾಗುವುದು. ಇದಕ್ಕಾಗಿ ಒಂದು ಕೋಟಿ ರೂ. ಒದಗಿಸಲಾಗುವುದು. ದಲಿತ ಕವಿ ಸಿದ್ದಲಿಂಗಯ್ಯ ಮತ್ತು ಡಾ. ಡಿ.ಆರ್‌. ನಾಗರಾಜ ರವರುಗಳ ಹೆಸರಿನಲ್ಲಿ ಟ್ರಸ್ಟ್‌ ರಚಿಸಲು ಕ್ರಮ ಕೈಗೊಳ್ಳಲಾಗುವುದು.

ಕಾಗೋಡು ಸತ್ಯಾಗ್ರಹಕ್ಕೆ ಸಂಬಂಧಿಸಿದ ಕಥಾವಸ್ತುವನ್ನು ಒಳಗೊಂಡ ನಾ. ಡಿಸೋಜ ವಿರಚಿತ ʻಕೊಳಗʼ ಕಾದಂಬರಿಯನ್ನು ಆಧರಿಸಿದ ನಾಟಕವನ್ನು ರಾಜ್ಯಾದ್ಯಂತ ಪ್ರದರ್ಶಿಸಲಾಗುವುದು.

ರಾಷ್ಟ್ರಕವಿ ಕುವೆಂಪುರವರ ಮಲೆಗಳಲ್ಲಿ ಮದುಮಗಳು ರಂಗರೂಪಕದಂತೆ ಖ್ವಾಜಾ ಬಂದೇ ನವಾಜ್‌ರವರ ಕುರಿತು ಅಹೋರಾತ್ರಿ ನಾಟಕವನ್ನು ಏರ್ಪಡಿಸಲಾಗುವುದು.

ಚಾಮರಾಜೇಂದ್ರ ದೃಶ್ಯ ಕಲಾ ಕಾಲೇಜಿನ (ಕಾವಾ) ಸಂಸ್ಥೆಯ ಆವರಣದಲ್ಲಿ ಸುಸಜ್ಜಿತ ಕಲಾ ಗ್ಯಾಲರಿ ಸಭಾಂಗಣ ನಿರ್ಮಾಣ, ಲ್ಯಾಂಡ್‌ಸ್ಕೇಪಿಂಗ್‌ ಶಿಲ್ಪಕಲಾ ಕೃತಿಗಳ ಪೆಡೆಸ್ಟಲ್‌ಗಳ ನಿರ್ಮಾಣ ಇತ್ಯಾದಿ ಮೂಲಸೌಕರ್ಯಗಳನ್ನು ಕಲ್ಪಿಸಲು ಎರಡು ಕೋಟಿ ರೂ. ಗಳನ್ನು ಒದಗಿಸಲಾಗುವುದು.

Karnataka Budget 2026: ಗರ್ಭಿಣಿ, ಬಾಣಂತಿಯರಿಗೆ ಅಂಗನವಾಡಿಗಳಲ್ಲಿ ರೇಷನ್‌ ಬದಲಿಗೆ ಮಧ್ಯಾಹ್ನದ ಬಿಸಿಯೂಟ ವ್ಯವಸ್ಥೆ

ಕರ್ನಾಟಕ ರಾಜ್ಯದ ಸಂಸ್ಕೃತಿಯ ಅಂಗವಾಗಿರುವ ಹವ್ಯಕ ಭಾಷೆಯ ಬೆಳವಣಿಗೆಗೆ ಹವ್ಯಕ ಭಾಷಾ ಅಕಾಡೆಮಿಯನ್ನು ಸ್ಥಾಪಿಸಲಾಗುವುದು.

ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿ ಅಂಡಮಾನ್‌ ದ್ವೀಪದಲ್ಲಿ ಕರಾಳ ಶಿಕ್ಷೆಗೊಳಗಾದ ಕರ್ನಾಟಕದ 59 ಕನ್ನಡಿಗರ ವೀರಗಾಥೆಯ ಕುರಿತು ʻಅನಾಮಿಕ ಸ್ವಾತಂತ್ರ್ಯ ಹೋರಾಟಗಾರರುʼ ಎಂಬ ಕೃತಿಯನ್ನು ಕರ್ನಾಟಕ ಸಾಹಿತ್ಯ ಅಕಾಡೆಮಿ ವತಿಯಿಂದ ಪ್ರಕಟಿಸಲಾಗುವುದು.

ಕರ್ನಾಟಕ ಏಕೀಕರಣಕ್ಕೆ ಪ್ರಮುಖ ಕಾರಣವಾದ ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದ ವಿವಿಧ ಚಟುವಟಿಕೆಗಳಿಗಾಗಿ ಎರಡು ಕೋಟಿ ರೂ. ಅನುದಾನ ಒದಗಿಸಲಾಗುವುದು.

ಕೋಲಾರದ ʻಆದಿಮʼ, ಮೈಸೂರಿನ ʻರಂಗನಿರಂತರʼ ಮತ್ತು ಬೆಂಗಳೂರಿನ ʻಸಮುದಾಯʼ ಸಂಸ್ಥೆಗಳಿಗೆ ಅನುದಾನ ನೀಡುವುದರ ಮೂಲಕ ವಿವಿಧ ಸಾಂಸ್ಕೃತಿಕ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡಲಾಗುವುದು.

ತಿಗಳ ಸಮಾಜವು ರಾಜ್ಯದಲ್ಲಿ 180 ಕರಗ ಉತ್ಸವಗಳನ್ನು ಆಚರಿಸುತ್ತ ಬಂದಿರುತ್ತಾರೆ. ಸದರಿ ಉತ್ಸವಕ್ಕೆ ಪ್ರಸಕ್ತ ಸಾಲಿನಲ್ಲಿ ಎರಡು ಕೋಟಿ ರೂ.ಗಳ ಅನುದಾನವನ್ನು ಒದಗಿಸಲಾಗುವುದು.ತುಮಕೂರಿನ ಡಾ|| ಗುಬ್ಬಿ ವೀರಣ್ಣ ಕಲಾಮಂದಿರವನ್ನು ಉನ್ನತೀಕರಿಸಲು ಮೂರು ಕೋಟಿ ರೂ. ಅನುದಾನವನ್ನು ಒದಗಿಸಲಾಗುವುದು.

ಹರೀಶ್‌ ಕೇರ

View all posts by this author