ಬೆಂಗಳೂರು, ಡಿ.02 : ರಾಜ್ಯದಲ್ಲಿ ಕಳೆದ 15 ದಿನಗಳಿಂದ ಜೋರಾಗಿದ್ದ ಕುರ್ಚಿ ಕದನ (Karnataka Politics), ಕಳೆದ ಶನಿವಾರವಷ್ಟೇ ಬೆಂಗಳೂರಿನ ಕಾವೇರಿ ನಿವಾಸದಲ್ಲಿ ನಡೆದ ಬ್ರೇಕ್ಫಾಸ್ಟ್ ಮೀಟಿಂಗ್ (Breakfast meeting) ಬಳಿಕ ಇನ್ನೊಂದು ಆಯಾಮ ಪಡೆದಿದೆ. ಡಿಸಿಎಂ ಡಿಕೆ ಶಿವಕುಮಾರ್ (DCM DK Shivakumar) ಅವರ ಮನೆಯಲ್ಲಿ ಇಂದು ಸಿಎಂ ಸಿದ್ದರಾಮಯ್ಯ (CM Siddaramaiah) ಅವರನ್ನು ಆಹ್ವಾನಿಸಿ ಇನ್ನೊಂದು ಸುತ್ತಿನ ಬ್ರೇಕ್ಫಾಸ್ಟ್ ಮೀಟಿಂಗ್ ನಡೆಯಲಿದ್ದು, ಸಿಎಂಗಾಗಿ ಡಿಸಿಎಂ ವಿಶೇಷ ನಾಟಿ ಕೋಳಿ ಸಾರು ಮಾಡಿಸಲಿದ್ದಾರೆ ಎಂದು ತಿಳಿದುಬಂದಿದೆ.
ಕಳೆದ ಶನಿವಾರ ಸಿಎಂ ಸಿದ್ದರಾಮಯ್ಯ ಅವರು ಡಿಸಿಎಂ ಡಿಕೆ ಶಿವಕುಮಾರ್ ಅವರನ್ನು ಬ್ರೇಕ್ ಫಾಸ್ಟ್ ಮೀಟಿಂಗ್ಗೆ ಆಹ್ವಾನಿಸಿದ್ದರು. ಬಳಿಕ ಸುದ್ದಿಗೋಷ್ಠಿಯಲ್ಲಿ ನಮ್ಮ ನಡುವೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ ಎಂದು ಕುರ್ಚಿ ಕದನಕ್ಕೆ ಫುಲ್ ಸ್ಟಾಪ್ ಹಾಕಿದ್ದರು. ಬಳಿಕ ಬೆಂಗಳೂರಿನ ಸದಾಶಿವನಗರದಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಅವರ ಖಾಸಗಿ ನಿವಾಸಕ್ಕೆ ನಿನ್ನೆ ಸಿಎಂ ಸಿದ್ದರಾಮಯ್ಯ ಅವರನ್ನು ಡಿಕೆ ಶಿವಕುಮಾರ್ ಉಪಹಾರ ಕೂಟಕ್ಕೆ ಅಧಿಕೃತವಾಗಿ ಆಹ್ವಾನಿಸಿದ್ದರು.
ಇಂದು ಬೆಳಗ್ಗಿನ ಉಪಾಹಾರದ ಜೊತೆಗೆ ಒಂದಷ್ಟು ರಾಜಕೀಯ ಬೆಳವಣಿಗೆಗಳ ಚರ್ಚೆ ನಡೆಸಲಿದ್ದಾರೆ. ಅಧಿಕಾರ ಹಂಚಿಕೆಗೆ ಕಿತ್ತಾಡಿದ್ದ ಉಭಯ ನಾಯಕರಿಂದ ಬ್ರೇಕ್ ಫಾಸ್ಟ್ ಪಾಲಿಟಿಕ್ಸ್ ಶುರುವಾಗಿದೆ ಎಂದು ವಿಪಕ್ಷ ನಾಯಕರು ಮಾತನಾಡಿಕೊಳ್ಳುತ್ತಿದ್ದಾರೆ. ಹೈಕಮಾಂಡ್ ನಾಯಕರು ಈ ಬೆಳವಣಿಗೆಗಳನ್ನು ಎಚ್ಚರಿಕೆಯಿಂದ ಗಮನಿಸುತ್ತಿದ್ದು, ನಿಗಾ ಇಟ್ಟಿದ್ದಾರೆ.
ಮತ್ತೊಂದು ಬ್ರೇಕ್ಫಾಸ್ಟ್ ಮೀಟಿಂಗ್; ಈ ಬಾರಿ ಡಿಕೆಶಿ ಮನೆಯಲ್ಲಿ!
ಡಿಸಿಎಂ ನಿವಾಸದಲ್ಲಿ ಎಲ್ಲ ತಯಾರಿ ಮಾಡಿಕೊಳ್ಳಲಾಗಿದೆ. ಕನಕಪುರದಿಂದ ನಾಟಿ ಕೋಳಿಗಳನ್ನು ತರಲಾಗಿದೆ. ಮುಖ್ಯಮಂತ್ರಿಗಳಿಗೆ ನಾಟಿ ಕೋಳಿ ಸಾರು ಇಷ್ಟ. ನಾಳೆಯ ಉಪಹಾರದಲ್ಲಿ ವೆಜ್ ಜೊತೆಗೆ ನಾಜ್ ವೆಜ್ ಉಪಹಾರ ಸಹ ಇರಲಿದೆ. ಇಡ್ಲಿ, ಪೂರಿ, ಸಿಹಿ ತಿಂಡಿ ಜೊತೆಗೆ ನಾಟಿ ಕೋಳಿ ಸಾರು ಸಹಿತ ಸಿದ್ಧವಾಗಲಿದೆ ಎಂಬ ಮಾಹಿತಿ ಲಭ್ಯವಾಗಿದೆ.