ಬೆಂಗಳೂರು, ಮಾ. 26: ಕರ್ನಾಟಕದಾದ್ಯಂತ ಮಾರ್ಚ್ 18ರಂದು ಎಸ್ಎಸ್ಎಲ್ಸಿ ಪರೀಕ್ಷೆ (SSLC Examination) ಆರಂಭವಾಗಿದೆ. ಈಗಾಗಲೇ 3 ಪರೀಕ್ಷೆ ಯಶಸ್ವಿಯಾಗಿ ನಡೆದಿವೆ. ಇದೀಗ ಮಾರ್ಚ್ 30ರಂದು ನಡೆಯಬೇಕಿದ್ದ ತೃತೀಯ ಭಾಷೆ ಹಿಂದಿ ಪರೀಕ್ಷೆಯನ್ನು ಮುಂದೂಡಲಾಗಿದೆ. ಮಹಾವೀರ ಜಯಂತಿ (Mahavir Jayanti 2026) ಹಿನ್ನೆಲೆ ಈ ಕ್ರಮ ಕೈಗೊಳ್ಳಲಾಗಿದ್ದು, ಅದರ ಬದಲು ಮಾರ್ಚ್ 31ರಂದು ಪರೀಕ್ಷೆ ನಡೆಯಲಿದೆ ಎಂದು ಕರ್ನಾಟಕ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.
2025 ನವೆಂಬರ್ 4ರಂದು ಪ್ರಕಟಿಸಿದ 2026ರ ಎಸ್ಎಸ್ಎಲ್ಸಿ ಪರೀಕ್ಷೆ-1ರ ಅಂತಿಮ ವೇಳಾಪಟ್ಟಿಯಲ್ಲಿ ತೃತೀಯ ಭಾಷೆ ಹಿಂದಿ ಪರೀಕ್ಷೆಯನ್ನು ಮಾರ್ಚ್ 30ರಂದು ನಿಗದಿಪಡಿಸಲಾಗಿತ್ತು. ಇದೀಗ ಈ ಪರೀಕ್ಷೆಯ ದಿನಾಂಕ ಬದಲಾಗಿದ್ದು, ಉಳಿದೆಲ್ಲ ಪರೀಕ್ಷೆಗಳು ಯಥಾಪ್ರಕಾರ ನಡೆಯಲಿದೆ.
ಕಾರಣವೇನು?
ಮಹಾವೀರ ಜಯಂತಿ ಪ್ರಯುಕ್ತ ಮಾರ್ಚ್ 30 ಸಾರ್ವತ್ರಿಕ ರಜಾ ದಿನ. ಹೀಗಾಗಿ ಮಾರ್ಚ್ 30ರ ಬದಲು ಮರುದಿನ ಪರೀಕ್ಷೆ ನಡೆಸಲು ತೀರ್ಮಾನಿಸಲಾಗಿದೆ. ಈ ಹಿಂದೆ ಮಹಾವೀರ ಜಯಂತಿಯ ಸಾರ್ವತ್ರಿಕ ರಜೆಯನ್ನು ಮಾರ್ಚ್ 31ಕ್ಕೆ ಘೋಷಿಸಲಾಗಿತ್ತು. ಇದೀಗ ರಜೆಯನ್ನು ಮಾರ್ಚ್ 30ಕ್ಕೆ ಬದಲಾಯಿಸಿರುವುದರಿಂದ ಪರೀಕ್ಷೆಯ ದಿನಾಂಕವೂ ಬದಲಾಗಿದೆ. ʼʼಮಹಾವೀರ ಜಯಂತಿ ಪ್ರಯುಕ್ತ ಮಾರ್ಚ್ 30ರಂದು ನಿಗದಿಪಡಿಸಲಾಗಿದ್ದ ತೃತೀಯ ಭಾಷೆಯ ಪರೀಕ್ಷೆಯನ್ನು ಮಾರ್ಚ್ 31ರಂದು ಈಗಾಗಲೇ ನಿಗದಿಪಡಿಸಿರುವ ಅವಧಿಯಲ್ಲಿ ನಡೆಸಲಾಗುವುದು. ಉಳಿದ ವಿಷಯದ ಪರೀಕ್ಷೆಗಳು ವೇಳಾಪಟ್ಟಿಯಂತೆ ಯಥಾವತ್ತಾಗಿ ನಡೆಯಲಿವೆʼʼ ಎಂದು ಕರ್ನಾಟಕ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಸುತ್ತೋಲೆಯಲ್ಲಿ ತಿಳಿಸಿದೆ.
ಪಾಲಕರಿಗೆ ಗುಡ್ನ್ಯೂಸ್; 1ನೇ ತರಗತಿ ದಾಖಲಾತಿ ವಯೋಮಿತಿಯಲ್ಲಿ 60 ದಿನಗಳ ಸಡಿಲಿಕೆ
2,871 ಪರೀಕ್ಷಾ ಕೇಂದ್ರಗಳು
ಎಸ್ಎಸ್ಎಲ್ಸಿ ಪರೀಕ್ಷೆ ಬರೆಯಲು ಒಟ್ಟು ವಿದ್ಯಾರ್ಥಿಗಳು 9,02,889 ಹೆಸರು ನೋಂದಾಯಿಸಿದ್ದಾರೆ. ಈ ಪೈಕಿ ಹೊಸಬರು-8,12,855, ಪುನರಾವರ್ತಿತರು-62,845 ಮತ್ತು ಖಾಸಗಿ ಅಭ್ಯರ್ಥಿಗಳು-27,189. ಒಟ್ಟು 2,871 ಪರೀಕ್ಷಾ ಕೇಂದ್ರಗಳಿವೆ. ಬೆಳಗ್ಗೆ 10ರಿಂದ ಮಧ್ಯಾಹ್ನ 1:15 ಗಂಟೆವರೆಗೆ ಪರೀಕ್ಷೆಗಳು ನಡೆಯುತ್ತಿವೆ.
ಯಾವೆಲ್ಲ ಪರೀಕ್ಷೆ?
ಮಾರ್ಚ್ 18: ಪ್ರಥಮ ಭಾಷೆ (ಕನ್ನಡ, ಇಂಗ್ಲಿಷ್, ಹಿಂದಿ ಇತ್ಯಾದಿ), ಮಾರ್ಚ್ 23: ವಿಜ್ಞಾನ, ಮಾರ್ಚ್ 25: ದ್ವಿತೀಯ ಭಾಷೆ (ಇಂಗ್ಲಿಷ್, ಕನ್ನಡ) ಪರೀಕ್ಷೆ ನಡೆದಿದೆ. ಮಾರ್ಚ್ 28: ಗಣಿತ, ಮಾರ್ಚ್ 31: ತೃತೀಯ ಭಾಷೆ (ಹಿಂದಿ) ಮತ್ತು ಏಪ್ರಿಲ್ 2: ಸಮಾಜ ವಿಜ್ಞಾನ ಪರೀಕ್ಷೆ ನಡೆಯಲಿದೆ.
ರಾಜ್ಯದ ಇನ್ನಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
ʼಪ್ರವಾಸಿ ಪ್ರಪಂಚʼ ವೆಬ್ಸೈಟ್ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ.