ಕೋಲಾರ, ಮೇ 25: ಬೇಸಗೆ ರಜೆಗೆಂದು ತಾತನ ಮನೆಗೆ ಬಂದಿದ್ದ ಇಬ್ಬರು ಪುಟ್ಟ ಮಕ್ಕಳು ಕೃಷಿ ಹೊಂಡದಲ್ಲಿ ಬಿದ್ದು ಸಾವನ್ನಪ್ಪಿರುವ ಹೃದಯವಿದ್ರಾವಕ ಘಟನೆ ಜಿಲ್ಲೆಯ (Kolar News) ಮಾಲೂರು ತಾಲೂಕಿನ ಕೊತ್ತೂರು ಗ್ರಾಮದಲ್ಲಿ ಜರುಗಿದೆ. ದೇವಕಿರಣ್ (12) ಹಾಗೂ ವಿನುತ್ (9) ಮೃತ ಸಹೋದರರು.
ಇಬ್ಬರೂ ವಸತಿ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದು, ರಜೆ ಹಿನ್ನೆಲೆ ತಾತನ ಮನೆಗೆ ಬಂದಿದ್ದರು. ಆಟವಾಡುವ ವೇಳೆ ಕೃಷಿ ಹೊಂಡದ ಬಳಿ ಕಾಲು ಜಾರಿ ಬಿದ್ದು, ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಮಕ್ಕಳ ಅಕಾಲಿಕ ಸಾವಿನಿಂದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಈ ಕುರಿತು ಮಾಸ್ತಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಹದಿನೈದು ದಿನಗಳಲ್ಲಿ ಕೃಷಿ ಹೊಂಡಕ್ಕೆ ಬಿದ್ದು ಮೃತಪಟ್ಟವರ ಸಂಖ್ಯೆ 9ಕ್ಕೆ ಏರಿಕೆ ಆಗಿದೆ. ಕೃಷಿಹೊಂಡಗಳಿಗೆ ತಂತಿ ಬೇಲಿ ಅಳವಡಿಸಿ, ಸುರಕ್ಷಿತ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಆದೇಶದ ನಡುವೆಯೂ ಮತ್ತೊಂದು ದುರ್ಘಟನೆ ನಡೆದಿದೆ.
ಭಟ್ಕಳ ನದಿ ದುರಂತ; ಮೃತರ ಕುಟುಂಬಗಳಿಗೆ ತಲಾ 5 ಲಕ್ಷ ಪರಿಹಾರ ಘೋಷಿಸಿದ ಸಿಎಂ
ಜಾನುವಾರಿಗೆ ಮೇವು ತರಲು ಹೋಗಿದ್ದ ತಾಯಿ, ಮಗ ಕೃಷಿ ಹೊಂಡಕ್ಕೆ ಕಾಲುಜಾರಿ ಬಿದ್ದು ಸಾವು
ಕೃಷಿ ಹೊಂಡದಲ್ಲಿ ಕಾಲು ಜಾರಿ ಬಿದ್ದು ತಾಯಿ, ಮಗು ಸಾವನ್ನಪ್ಪಿರುವ ಧಾರುಣ ಘಟನೆ ಕೋಲಾರದಲ್ಲಿ ಕೆಲವು ತಿಂಗಳ ಹಿಂದೆಯೂ ನಡೆದಿತ್ತು. ಕೋಲಾರ ತಾಲೂಕಿನ ಹೊಗರಿಗೊಲ್ಲಹಳ್ಳಿಯಲ್ಲಿ ಜಾನುವಾರುಗಳಿಗೆ ಮೇವು ತರಲು ಹೋಗಿದ್ದ ವೇಳೆ ಕಾಲು ಜಾರಿ ಕೃಷಿ ಹೊಂಡಕ್ಕೆ ಬಿದ್ದು ತಾಯಿ ಮಾಲಾ (30) ಹಾಗೂ ಮಗು ಚಕ್ರವರ್ತಿ (6) ಸಾವನ್ನಪ್ಪಿದ್ದರು. ಮಾಲಾ ಅವರ ಮಗ ಆಟವಾಡುತ್ತಾ ಕೃಷಿ ಹೊಂಡದ ಬಳಿ ತೆರಳಿದ್ದಾನೆ. ಮೇವು ಕಟಾವು ಮಾಡುತ್ತಿದ್ದ ಮಾಲಾ ಇದನ್ನು ಗಮನಿಸಿರಲಿಲ್ಲ. ಮಗ ಕೃಷಿ ಹೊಂಡಕ್ಕೆ ಬಿದ್ದ ಬಳಿಕ ಆತನನ್ನು ಕಾಪಾಡಲು ಮಾಲಾ ಹೋಗಿದ್ದರು. ಮಗನನ್ನು ರಕ್ಷಿಸಲು ಹೋಗಿ ಮಾಲಾ ಕೂಡ ಸಾವನ್ನಪ್ಪಿದ್ದು, ಕೋಲಾರ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿತ್ತು.