ಕೋಲಾರ, ಜ.26: ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ತೋಟಗಾರಿಕೆ ಇಲಾಖೆಯಿಂದ (Kolar News) ಜಿಲ್ಲಾ ನರ್ಸರಿಯಲ್ಲಿ ಆಯೋಜಿಸಿರುವ ಮೂರು ದಿನಗಳ ಜಿಲ್ಲಾ ಮಟ್ಟದ ಫಲಪುಷ್ಪ ಪ್ರದರ್ಶನಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಬಿ.ಎಸ್. ಸುರೇಶ್ ಸೋಮವಾರ ಚಾಲನೆ ನೀಡಿದರು. ಈ ವೇಳೆ ಮಳಿಗೆಗಳನ್ನು ವೀಕ್ಷಿಸಿದ ಸಚಿವರು, ಹೂವು ಹಾಗೂ ತರಕಾರಿಗಳಲ್ಲಿ ಅರಳಿದ ಕಲಾಕೃತಿಗಳನ್ನು ಕಂಡು ಸಂತಸ ವ್ಯಕ್ತಪಡಿಸಿದರು. ಜಿಲ್ಲೆಯ ರೈತರು ಹಾಗೂ ತೋಟಗಾರಿಕೆ ಆಸಕ್ತರಿಗೆ ಇಂತಹ ಪ್ರದರ್ಶನಗಳು ಸ್ಫೂರ್ತಿದಾಯಕವಾಗಿವೆ ಎಂದು ಶ್ಲಾಘಿಸಿದರು.
ಜನವರಿ 28 ರವರೆಗೆ ನಡೆಯಲಿರುವ ಪ್ರದರ್ಶನದಲ್ಲಿ ಹೂವುಗಳಿಂದ ಸಿದ್ಧಗೊಂಡ ಹಸು-ಕರು, ರೈತ ಮಹಿಳೆಯ ಕಲಾಕೃತಿಗಳು ಹಾಗೂ ಮರಳಿನಲ್ಲಿ ಅರಳಿದ ಸಾಲುಮರದ ತಿಮ್ಮಕ್ಕ ಅವರ ಮರಳಿನ ಕೃತಿಗಳು ಜನರನ್ನು ಆಕರ್ಷಿಸುತ್ತಿವೆ. ಅಂಬೇಡ್ಕರ್ ಅವರ ಜೀವನ ಗಾಥೆಯನ್ನು ಬಿಂಬಿಸುವ ಛಾಯಾಚಿತ್ರ ಪ್ರದರ್ಶನ ಹಾಗೂ ರಂಗೋಲಿಯಲ್ಲಿ ಮೂಡಿಬಂದಿರುವ ಮಹನೀಯರ ಚಿತ್ರಗಳು ಗಮನ ಸೆಳೆಯುತ್ತಿವೆ.
ತೋಟಗಾರಿಕಾ ಆಸಕ್ತರಿಗಾಗಿ ವಿವಿಧ ತಳಿಗಳ ಹಣ್ಣು, ಹೂವು ಹಾಗೂ ಅಲಂಕಾರಿಕ ಗಿಡಗಳ ಸಸ್ಯ ಸಂತೆ ಏರ್ಪಡಿಸಲಾಗಿದ್ದು, ಗಿಡಗಳ ಖರೀದಿಗೆ ಅವಕಾಶವಿದೆ. ನುರಿತ ತೋಟಗಾರರಿಂದ ಕಸಿ ಕಟ್ಟುವ ವಿಧಾನದ ಪ್ರಾತ್ಯಕ್ಷಿಕೆ, ಸಾವಯವ ಕೃಷಿ ಪರಿಕರಗಳ ಪ್ರದರ್ಶನ ಹಾಗೂ ವಿವಿಧ ಇಲಾಖೆಗಳ ಮಾಹಿತಿ ಮಳಿಗೆಗಳು ಪ್ರದರ್ಶನದ ಮೆರುಗು ಹೆಚ್ಚಿಸಿವೆ ಎಂದು ಸಚಿವರು ಶ್ಲಾಘಿಸಿದರು.
Jewel Fashion 2026: ಜೆಮೆಟ್ರಿಕ್ ಡಿಸೈನ್ ಜ್ಯುವೆಲರಿಗಳ ಜಾದೂ
ಪ್ರದರ್ಶನ ಪ್ರವೇಶಕ್ಕೆ ಸಾರ್ವಜನಿಕರಿಗೆ ಉಚಿತವಾಗಿದ್ದು ಶಾಲಾ-ಕಾಲೇಜು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಪುಷ್ಪ ಲೋಕವನ್ನು ಸವಿಯಬೇಕು ಎಂದು ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಎಸ್.ಆರ್. ಕುಮಾರಸ್ವಾಮಿ ಕೋರಿದ್ದಾರೆ.
ಈ ವೇಳೆ ಮುಳಬಾಗಲು ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕರಾದ ಎಸ್.ಕೆ. ರವಿಕುಮಾರ್, ಬಂಗಾರಪೇಟೆಯ ಶಿವಕುಮಾರಿ, ಮಾಲೂರು ದಿವ್ಯಾ, ಕೋಲಾರ ಶಿವಾರೆಡ್ಡಿ, ಮಂಜುನಾಥ್, ಸಹಾಯಕ ತೋಟಗಾರಿಕಾ ಅಧಿಕಾರಿ ಶಿವಕುಮಾರ್, ಮುರಗೇಶ್, ಪುನೀತ್, ವೀರೇಶ್ ಮತ್ತಿತರರು ಇದ್ದರು.