ಮಂಗಳೂರು, ಜೂ. 4: ಭಾರತಕ್ಕೆ ಮುಂಗಾರಿನ ಪ್ರವೇಶವಾಗಿದೆ. ನೈಋತ್ಯ ಮುಂಗಾರು ಮಾರುತಗಳು ಗುರುವಾರ ಕೇರಳವನ್ನು ಅಧಿಕೃತವಾಗಿ ಪ್ರವೇಶಿಸುವ ಮೂಲಕ ಮಳೆಗಾಲ ಆರಂಭವಾಗಿದೆ. ಈ ಮುಂಗಾರು ಅವಧಿಯಲ್ಲಿ ಪಶ್ಚಿಮ ಘಟ್ಟಗಳು ಸೇರಿ ಕರಾವಳಿ ಭಾಗದಲ್ಲಿ ನಿರಂತರ ಮಳೆ ಸುರಿಯುತ್ತದೆ. ಈ ಕಾರಣದಿಂದ ಕೊಂಕಣ ಮಾರ್ಗದಲ್ಲಿ (Konkan Railway) ಚಲಿಸುವ ರೈಲುಗಳ ವೇಳಾಪಟ್ಟಿಯನ್ನು ಬದಲಾಯಿಸಲಾಗಿದ್ದು, ಪರಿಷ್ಕೃತ ಟೈಮ್ ಟೇಬಲ್ ಪ್ರಕಟಿಸಲಾಗಿದೆ. ಇದು ಜೂನ್ 15ರಂದು ಜಾರಿಗೆ ಬರಲಿದ್ದು, ಅಕ್ಟೋಬರ್ 20ರ ತನಕ ಮುಂದುವರಿಯಲಿದೆ ಎಂದು ಪ್ರಕಟಣೆ ತಿಳಿಸಿದೆ.
ʼʼಕೊಂಕಣ ರೈಲ್ವೆ ಮಾರ್ಗದಲ್ಲಿ ಮುಂಗಾರು ಮಳೆಯ ಅವಧಿಯಲ್ಲಿ ರೈಲುಗಳ ಸುರಕ್ಷಿತ ಕಾರ್ಯಾಚರಣೆಯನ್ನು ಖಚಿತಪಡಿಸಿಕೊಳ್ಳಲು ಜೂನ್ 15ರಿಂದ ಅಕ್ಟೋಬರ್ 20ರವರೆಗೆ ಜಾರಿಗೆ ಬರುವಂತೆ ಮುಂಗಾರು ವೇಳಾಪಟ್ಟಿಯನ್ನು ಪ್ರಕಟಿಸಲಾಗಿದೆʼʼ ಎಂದು ಕೊಂಕಣ ರೈಲ್ವೆ ಕಾರ್ಪೊರೇಷನ್ ಲಿಮಿಟೆಡ್ ಎಕ್ಸ್ ಪೋಸ್ಟ್ನಲ್ಲಿ ತಿಳಿಸಿದೆ.
ಹೊಸ ವೇಳಾಪಟ್ಟಿ ಪ್ರಕಟಿಸಿದ ಕೊಂಕಣ ರೈಲ್ವೆ:
ಈ ಪರಿಷ್ಕೃತ ಮುಂಗಾರು ವೆಳಾಪಟ್ಟಿಯು ಜೂನ್ 15ರಂದು ಅಥವಾ ಆ ನಂತರ ತಮ್ಮ ಮೂಲ ನಿಲ್ದಾಣಗಳಿಂದ ಹೊರಡುವ ರೈಲುಗಳಿಗೆ ಅನ್ವಯವಾಗಲಿದೆ. ಮುಂಗಾರು ಅವಧಿಯಲ್ಲಿ ಕೊಂಕಣ ರೈಲ್ವೆ ವಿಭಾಗದಲ್ಲಿ ವಿಧಿಸಲಾಗುವ ವೇಗದ ನಿರ್ಬಂಧಗಳಿಗೆ ಅನುಗುಣವಾಗಿ ಸುರಕ್ಷಿತ ಪ್ರಯಾಣಕ್ಕಾಗಿ ವಿವಿಧ ರೈಲುಗಳ ಸಮಯವನ್ನು ಬದಲಾಯಿಸಲಾಗಿದೆ. ನೈಋತ್ಯ ರೈಲ್ವೆ ಚಲಿಸುವ ಈ ಕೆಳಗಿನ ರೈಲುಗಳಿಗೆ ಹೊಸ ವೇಳಾಪಟ್ಟಿ ಅನ್ವಯವಾಗಲಿದೆ.
- ಕೆಎಸ್ಆರ್ ಬೆಂಗಳೂರು-ಕಾರವಾರ-ಕೆಎಸ್ಆರ್ ಬೆಂಗಳೂರು ಡೈಲಿ ಎಕ್ಸ್ಪ್ರೆಸ್ (16595/16596)
- ಎಸ್ಎಂವಿಟಿ ಬೆಂಗಳೂರು-ಮುರಡೇಶ್ವರ-ಎಸ್ಎಂವಿಟಿ ಬೆಂಗಳೂರು ಡೈಲಿ ಎಕ್ಸ್ಪ್ರೆಸ್ (16585/16586)
- ಯಶವಂತಪುರ-ಕಾರವಾರ-ಯಶವಂತಪುರ ಟ್ರೈ-ವೀಕ್ಲಿ ಎಕ್ಸ್ಪ್ರೆಸ್ (16515/16516)
- ವಾಸ್ಕೋ ಡ ಗ್ಲಾಮಾ-ಪಾಟ್ನಾ-ವಾಸ್ಕೋ ಡ ಗ್ಲಾಮಾ ವೀಕ್ಲಿ ಸೂಪರ್ ಫಾಸ್ಟ್ ಎಕ್ಸ್ಪ್ರೆಸ್ (12741/12742)
- ಪುಣೆ-ಎರ್ನಾಕುಲಂ-ಪುಣೆ ಸಾಪ್ತಾಹಿಕ ಎಕ್ಸ್ಪ್ರೆಸ್ ರೈಲು (11097/11098)
ಒಟ್ಟು 40 ಪ್ರಮುಖ ರೈಲುಗಳ ಸಂಚಾರದಲ್ಲಿನ ಈ ಬದಲಾವಣೆವನ್ನು ಮಂಗಳೂರು, ಕಾರವಾರ, ಗೋವಾ ಮತ್ತು ಮುಂಬೈ ಮಾರ್ಗದ ಸಾವಿರಾರು ಪ್ರಯಾಣಿಕರು ಗಮನಿಸುವಂತೆ ಸೂಚಿಸಿಲಾಗಿದೆ.
ಹುಬ್ಬಳ್ಳಿಗೆ 10 ಹೊಸ ಮೆಮು ರೈಲು, ಪ್ಯಾಸೆಂಜರ್ ರೈಲು, ರೈಲ್ವೆ ಬ್ರಿಡ್ಜ್ ಒದಗಿಸಲು ಪ್ರಲ್ಹಾದ್ ಜೋಶಿ ಆಗ್ರಹ
ಕಾರಣವೇನು?
ಕೊಂಕಣ ರೈಲ್ವೆ ಮಾರ್ಗ ಸಾಗುವ ಕರಾವಳಿಯಲ್ಲಿ ಮುಂಗಾರ ಮಳೆ ಅತ್ಯಂತ ಶಕ್ತವಾಗಿ ಬೀಳುತ್ತದೆ. ಅಲ್ಲದೆ ಇದು ಬೆಟ್ಟ-ಗುಡ್ಡಗಳಿಂದ ಕೂಡಿದ ಮಾರ್ಗವಾಗಿದ್ದು, ಮಳೆಗಾಲದಲ್ಲಿ ಗುಡ್ಡ ಕುಸಿತ, ಹಳಿಗಳ ಮೇಲೆ ನೀರು ನಿಲ್ಲುವುದು ಮತ್ತು ಮರಗಳು ಉರುಳುವಂತಹ ಘಟನೆಗಳು ಆಗಾಗ ಸಂಭವಿಸುತ್ತದೆ. ಹೀಗಾಗಿ, ಯಾವುದೇ ರೀತಿಯ ಅಪಘಾತಗಳು ಸಂಭವಿಸದಂತೆ ಮುನ್ನೆಚ್ಚರಿಕೆ ವಹಿಸಲು ಮತ್ತು ಪ್ರಯಾಣಿಕರ ಸುರಕ್ಷತೆಯನ್ನು ಕಾಪಾಡಲು ಈ ಬದಲಾವಣೆ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.
ಕೊಂಕಣಿ ರೈಲ್ವೆ ಬಂದರು ನಗರಿ ಮಂಗಳೂರನ್ನು ಮುಂಬೈಯೊಂದಿಗೆ ಜೋಡಿಸುತ್ತದೆ. ಕರಾವಳಿಯ ಸಮುದ್ರ ತೀರದಲ್ಲಿ ಸಾಗುವ ಈ ರೈಲು ಹಳಿ ಹಲವು ಗುಹೆಗಳ ಮೂಲಕ ತೆರಳುತ್ತದೆ. ಸುಮಾರು 2,000 ಸೇತುವೆಗಳು, 91 ಸುರಂಗಗಳನ್ನೊಳಗೊಂಡ ಈ ರೈಲು ಹಳಿಯ ನಿರ್ಮಾಣ ಎಂಜಿನಿಯರ್ ಅದ್ಭುತ ಎಂದು ಪರಿಗಣಿಸಲಾಗಿದೆ. 736 ಕಿ.ಮೀ. ಉದ್ದದ ಈ ರೈಲು ಮಾರ್ಗ 1998ರಲ್ಲಿ ಸಂಚಾರಕ್ಕೆ ಮುಕ್ತವಾಯಿತು.
ರಾಜ್ಯದ ಇನ್ನಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
ʼಪ್ರವಾಸಿ ಪ್ರಪಂಚʼ ವೆಬ್ಸೈಟ್ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ.