Heart Attack: ಕುಷ್ಟಗಿ ಶಾಸಕರ ಪಿಎ ಚಂದ್ರಕಾಂತ ವಡ್ಡಿಗೇರಿ ಹೃದಯಾಘಾತದಿಂದ ನಿಧನ
Heart Attack: ಕುಷ್ಟಗಿ ಬಿಜೆಪಿ ಶಾಸಕ ದೊಡ್ಡನಗೌಡ ಪಾಟೀಲ್ ಅವರ ಪಿಎ ಚಂದ್ರಕಾಂತ ವಡ್ಡಿಗೇರಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಎದೆ ನೋವು ಕಾಣಿಸಿಕೊಂಡ ಹಿನ್ನೆಲೆ ಇವರನ್ನು ಕುಷ್ಟಗಿಯ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು. ಆದರೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.


ಕೊಪ್ಪಳ: ಹಾಸನ ಮಾತ್ರವಲ್ಲದೆ ರಾಜ್ಯದ ಇತರ ಜಿಲ್ಲೆಗಳಲ್ಲೂ ಹೃದಯಾಘಾತ ಪ್ರಕರಣಗಳ ಸಂಖ್ಯೆ ಹೆಚ್ಚಳವಾಗಿರುವುದು ಕಂಡುಬಂದಿದೆ. ಈ ನಡುವೆ ಜಿಲ್ಲೆಯ ಕುಷ್ಟಗಿ ತಾಲೂಕಿನ ನಿವಾಸಿ ಚಂದ್ರಕಾಂತ ವಡ್ಡಿಗೇರಿ (46) ಎಂಬುವವರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಇವರು ಕುಷ್ಟಗಿ ಬಿಜೆಪಿ ಶಾಸಕ ದೊಡ್ಡನಗೌಡ ಪಾಟೀಲ್ ಅವರ ಬಳಿ ಪಿಎ ಆಗಿ ಕೆಲಸ ಮಾಡುತ್ತಿದ್ದರು.
ಕಳೆದ 20 ವರ್ಷಗಳಿಂದ ದೊಡ್ಡನಗೌಡ ಪಾಟೀಲ್ರ ಬಳಿಯೇ ಕೆಲಸ ಮಾಡುತ್ತಿದ್ದ ಚಂದ್ರಕಾಂತ ವಡ್ಡಿಗೇರಿ ಅವರಿಗೆ ಎದೆ ನೋವು ಕಾಣಿಸಿಕೊಂಡಿತ್ತು. ಕೂಡಲೇ ಅವರನ್ನು ಕುಷ್ಟಗಿಯ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು. ಆದರೆ ಆಸ್ಪತ್ರೆಯಲ್ಲಿ ಚಂದ್ರಕಾಂತ ವಡ್ಡಿಗೇರಿ ಕೊನೆಯುಸಿರೆಳೆದಿದ್ದಾರೆ. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಚಂದ್ರಕಾಂತ ವಡ್ಡಿಗೇರಿ ಅವರು ಪುರಸಭೆ ಮಾಜಿ ಸದಸ್ಯರೂ ಆಗಿದ್ದರು.
ಈ ಬಗ್ಗೆ ಕುಷ್ಟಗಿ ಶಾಸಕ ದೊಡ್ಡನಗೌಡ ಪಾಟೀಲ್ ಅವರು ಸಂತಾಪ ಸೂಚಿಸಿದ್ದಾರೆ. ನನ್ನ ಆಪ್ತ ಸಹಾಯಕನಾಗಿ, ಕುಷ್ಟಗಿ ಬಿಜೆಪಿ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ ಚಟುವಟಿಕೆಯಿಂದ ಸಕ್ರಿಯನಾಗಿ ಕಾರ್ಯ ನಿರ್ವಹಿಸುತ್ತಿದ್ದ ಚಂದ್ರಕಾಂತ ವಡ್ಡಿಗೇರಿ ಇಂದು ನಮ್ಮನ್ನು ಅಗಲಿದ ಸುದ್ದಿ ಅತೀವ ದುಃಖ ತಂದಿದೆ. ಆತನ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಭಗವಂತನಲ್ಲಿ ಕೇಳಿಕೊಳ್ಳುತ್ತೇನೆ. ಆತನಿಲ್ಲದ ನಮ್ಮ ಕಚೇರಿ, ಪಕ್ಷದ ಕಾರ್ಯಾಲಯವನ್ನು ಊಹಿಸಿಕೊಳ್ಳಲು ಅಸಾಧ್ಯ. ನೀರವ ಮೌನ, ದುಃಖ, ಬೇಸರ ಆವರಿಸಿಕೊಂಡಿದೆ ಎಂದು ಹೇಳಿದ್ದಾರೆ.