ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Price Hike: ಸಿಲಿಂಡರ್‌ ದುಬಾರಿ ಪರಿಣಾಮ, ಹೋಟೆಲ್‌ ಕಾಫಿ- ತಿಂಡಿ ಬೆಲೆ ಏರಿಕೆಗೆ ಸಿದ್ಧತೆ

ವಾಣಿಜ್ಯ ಬಳಕೆಯ 19 ಕೆಜಿ ಎಲ್‌ಪಿಜಿ ಸಿಲಿಂಡರ್ ದರದಲ್ಲಿ 115 ರೂ. ಹೆಚ್ಚಳವಾಗಿದೆ. ಇದರ ಜೊತೆಗೆ ಈ ಹಿಂದೆ ನೀಡಲಾಗುತ್ತಿದ್ದ 150 ರೂ.ಗಳ ರಿಯಾಯಿತಿಯನ್ನು ಮಾರ್ಚ್ 1ರಿಂದ ರದ್ದುಗೊಳಿಸಲಾಗಿದೆ. ಇದರಿಂದಾಗಿ ಹೋಟೆಲ್ ಉದ್ಯಮಿಗಳಿಗೆ ಪ್ರತಿ ಸಿಲಿಂಡರ್ ಮೇಲೆ ಒಟ್ಟು 265 ರೂ.ಗಳ ಹೆಚ್ಚುವರಿ ಹೊರೆ ಬೀಳುತ್ತಿದೆ.

ಪ್ರಾತಿನಿಧಿಕ ಚಿತ್ರ

ಬೆಂಗಳೂರು, ಮಾರ್ಚ್‌ 9: ರಾಜ್ಯ ರಾಜಧಾನಿಯಲ್ಲಿ (Bengaluru) ಹೋಟೆಲ್ ಕಾಫಿ- ತಿಂಡಿ ಪ್ರಿಯರ ಜೇಬಿಗೆ ಕತ್ತರಿ ಬೀಳುವ ಸಾಧ್ಯತೆ ದಟ್ಟವಾಗಿದೆ. ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್ ಬೆಲೆ (LPG Cylinder price hike) ಗಣನೀಯವಾಗಿ ಏರಿಕೆಯಾಗಿರುವುದು ಹಾಗೂ ಅಗತ್ಯ ವಸ್ತುಗಳ ಬೆಲೆ ಹೆಚ್ಚಳವಾಗಿರುವ ಹಿನ್ನೆಲೆಯಲ್ಲಿ, ಹೋಟೆಲ್ (Hotels) ತಿಂಡಿ-ತಿನಿಸುಗಳ ದರವನ್ನು ಹೆಚ್ಚಿಸಲು ಹೋಟೆಲ್ ಮಾಲೀಕರ ಸಂಘ ಚಿಂತನೆ ನಡೆಸಿದೆ.

ಸಿಲಿಂಡರ್ ದರ ಏರಿಕೆಯ ಬರೆ

ವಾಣಿಜ್ಯ ಬಳಕೆಯ 19 ಕೆಜಿ ಎಲ್‌ಪಿಜಿ ಸಿಲಿಂಡರ್ ದರದಲ್ಲಿ 115 ರೂ. ಹೆಚ್ಚಳವಾಗಿದೆ. ಇದರ ಜೊತೆಗೆ ಈ ಹಿಂದೆ ನೀಡಲಾಗುತ್ತಿದ್ದ 150 ರೂ.ಗಳ ರಿಯಾಯಿತಿಯನ್ನು ಮಾರ್ಚ್ 1ರಿಂದ ರದ್ದುಗೊಳಿಸಲಾಗಿದೆ. ಇದರಿಂದಾಗಿ ಹೋಟೆಲ್ ಉದ್ಯಮಿಗಳಿಗೆ ಪ್ರತಿ ಸಿಲಿಂಡರ್ ಮೇಲೆ ಒಟ್ಟು 265 ರೂ.ಗಳ ಹೆಚ್ಚುವರಿ ಹೊರೆ ಬೀಳುತ್ತಿದೆ. ಗೃಹ ಬಳಕೆಯ ಸಿಲಿಂಡರ್ ಬೆಲೆಯೂ ಕೂಡ 60 ರೂ. ಏರಿಕೆಯಾಗಿರುವುದು ಆತಂಕಕ್ಕೆ ಕಾರಣವಾಗಿದೆ.

ಅಗತ್ಯ ವಸ್ತುಗಳ ಬೆಲೆ ಗಗನಕ್ಕೆ

ಕೇವಲ ಗ್ಯಾಸ್ ಮಾತ್ರವಲ್ಲದೆ, ಅಡುಗೆಗೆ ಬಳಸುವ ಇತರೆ ಮೂಲ ಪದಾರ್ಥಗಳ ಬೆಲೆಯೂ ಏರಿಕೆಯಾಗಿದೆ:

ಅಡುಗೆ ಎಣ್ಣೆ: ಪ್ರತಿ ಕೆಜಿಗೆ 15 ರಿಂದ 20 ರೂ. ಏರಿಕೆ.

ಡ್ರೈಫ್ರೂಟ್ಸ್: ಶೇ. 20 ರಿಂದ 25 ರಷ್ಟು ಬೆಲೆ ಏರಿಕೆ.

ವಿದ್ಯುತ್ ದರ: ಪ್ರತಿ ಯೂನಿಟ್‌ಗೆ 1 ರೂ. ಹೆಚ್ಚಳವಾಗುವ ಸಾಧ್ಯತೆ ಇದೆ.

ಬಾಡಿಗೆ: ನಗರ ಪ್ರದೇಶಗಳಲ್ಲಿ ಹೋಟೆಲ್ ಕಟ್ಟಡಗಳ ಬಾಡಿಗೆ ಕೂಡ ಗಗನಕ್ಕೇರುತ್ತಿದೆ.

ಹೋಟೆಲ್ ಮಾಲೀಕರ ಸಂಘದ ಹೇಳಿಕೆ

ಎಲ್ಲಾ ವಸ್ತುಗಳ ಬೆಲೆ ಹೆಚ್ಚಾಗಿರುವುದರಿಂದ ಹಳೆಯ ದರದಲ್ಲೇ ತಿಂಡಿ ನೀಡುವುದು ಅಸಾಧ್ಯದ ಮಾತು. ಕಾರ್ಯಾಚರಣೆ ವೆಚ್ಚ ಸರಿದೂಗಿಸಲು ಬೆಲೆ ಏರಿಕೆ ಅನಿವಾರ್ಯವಾಗಬಹುದು. ಆದರೆ, ಗ್ರಾಹಕರ ಹಿತದೃಷ್ಟಿಯಿಂದ ತಕ್ಷಣವೇ ದರ ಏರಿಸದೆ ಇನ್ನು ಕೆಲವು ದಿನ ಪರಿಸ್ಥಿತಿಯನ್ನು ಗಮನಿಸುತ್ತೇವೆ. ತೀರಾ ಅನಿವಾರ್ಯವಾದರೆ ಮಾತ್ರ ದರ ಹೆಚ್ಚಳದ ನಿರ್ಧಾರ ಕೈಗೊಳ್ಳುತ್ತೇವೆ,” ಎಂದು ಹೋಟೆಲ್ ಮಾಲೀಕರ ಸಂಘ ತಿಳಿಸಿದೆ.

ಒಂದೆಡೆ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಸಾಮಾನ್ಯ ಜನರು ಕಂಗಾಲಾಗಿದ್ದಾರೆ. ಇದರ ಬೆನ್ನಲ್ಲೇ ಹೋಟೆಲ್ ತಿಂಡಿಗಳ ಬೆಲೆಯೂ ಹೆಚ್ಚಾದರೆ ಹೊರಗಡೆ ಊಟ ಮಾಡುವುದು ಮಧ್ಯಮ ವರ್ಗದವರಿಗೆ ಮತ್ತು ಉದ್ಯೋಗಸ್ಥರಿಗೆ ಕಷ್ಟಸಾಧ್ಯವಾಗಲಿದೆ. “ಎಲ್ಲವೂ ದುಬಾರಿಯಾದರೆ ನಮ್ಮ ಗತಿ ಏನು?” ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.

ಹರೀಶ್‌ ಕೇರ

View all posts by this author