ಬೆಂಗಳೂರು, ಏ.21: ಸಚಿವ ಜಮೀರ್ ಅಹಮದ್ ಖಾನ್ (Zameer Ahmed Khan) ಕಾಂಗ್ರೆಸ್ ತೊರೆದು ಮತ್ತೆ ಜೆಡಿಎಸ್ಗೆ ಹೋಗುತ್ತಿದ್ದಾರೆ. ಕೇಂದ್ರ ಸಚಿವ ಹಾಗೂ ಜೆಡಿಎಸ್ (JDS) ವರಿಷ್ಠ ಹೆಚ್ಡಿ ಕುಮಾರಸ್ವಾಮಿ (HD Kumaraswamy) ಜೊತೆ ಕೂಡ ಈ ಬಗ್ಗೆ ಗೌಪ್ಯ ಮಾತುಕತೆ ನಡೆದಿದೆ ಎನ್ನುವ ಊಹಾಪೋಹ ಇತ್ತೀಚೆಗೆ ರಾಜಕೀಯ ವಲಯದಲ್ಲಿ ಹರಿದಾಡಿತ್ತು. ಇದೀಗ ಈ ಸುದ್ದಿಗೆ ಸ್ವತಃ ಸಚಿವ ಜಮೀರ್ ತೆರೆ ಎಳೆದಿದ್ದಾರೆ.
ಕಾಂಗ್ರೆಸ್ನಲ್ಲಿ (Congress) ಅಲ್ಪಸಂಖ್ಯಾತ ನಾಯಕರ ವಿರುದ್ಧ ಶಿಸ್ತು ಕ್ರಮ ತೆಗೆದುಕೊಂಡ ಬೆಳವಣಿಗೆಗೆ ಬೇಸತ್ತು ಜಮೀರ್ ಪಕ್ಷ ತೊರೆಯುವ ಸಾಧ್ಯತೆ ಇದೆ ಎನ್ನಲಾಗಿತ್ತು. ಕಾಂಗ್ರೆಸ್ ತೊರೆದು ಜೆಡಿಎಸ್ಗೆ ಹೋಗ್ತಿದ್ದೀರಾ ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಸಚಿವ ಜಮೀರ್ ಖಾನ್, ''ಥೂ.. ಥೂ.. ಥೂ.. ಹಾಗೇನು ಇಲ್ಲ. ಇದೆಲ್ಲಾ ಊಹಾಪೋಹದ ಸುದ್ದಿ. ನಾನು ಯಾಕೆ ಜೆಡಿಎಸ್ಗೆ ಹೋಗಲಿ?'' ಎಂದು ಮರು ಪ್ರಶ್ನೆ ಮಾಡಿದ್ದಾರೆ.
ʼನಾನು ಯಾಕೆ ಜೆಡಿಎಸ್ಗೆ ಹೋಗಲಿ, ಈಗಾಗಲೇ ಜೆಡಿಎಸ್ ಪಕ್ಷ ಬಿಟ್ಟು ಬಂದಿದ್ದೇನೆ. ಕಾಂಗ್ರೆಸ್ ಪಕ್ಷ ನನಗೇನು ಕಡಿಮೆ ಮಾಡಿದೆ? 2017ರಲ್ಲಿ ಕಾಂಗ್ರೆಸ್ ಗೆ ಬಂದೆ. 2018ರಲ್ಲಿ ಸಮ್ಮಿಶ್ರ ಸರ್ಕಾರ ಇತ್ತು. ಕುಮಾರಸ್ವಾಮಿ ಸಿಎಂ ಆಗಿದ್ರು. ಆಗ ನನ್ನನ್ನು ಮಂತ್ರಿ ಮಾಡ್ತಾರೆಂದು ನಾನು ನಿರೀಕ್ಷೆ ಮಾಡಿರಲಿಲ್ಲ. ನಾನು ಯಾರ ಬಳಿನೂ ಕೇಳಿಯೂ ಇರಲಿಲ್ಲʼ ಎಂದರು.
ʼಆ ಟೈಮ್ನಲ್ಲಿ ನನ್ನನ್ನು ಮಂತ್ರಿ ಮಾಡಿ ಐದು ಖಾತೆಗಳನ್ನು ಕೊಟ್ಟಿದ್ರು. ಇದೇ ಜೆಡಿಎಸ್ ಜೊತೆ ಇದ್ದಾಗ ವಕ್ಫ್ ಮತ್ತೆ ಹಜ್ ಖಾತೆ ಕೊಟ್ಟಿದ್ರು. ಬಳಿಕ ಕಾಂಗ್ರೆಸ್ ಪಕ್ಷದಲ್ಲಿ ನಾನು ನಿರೀಕ್ಷೆ ಮಾಡದ ರೀತಿ ಖಾತೆಗಳನ್ನು ಕೊಟ್ಟಿದ್ದಾರೆ. ಮತ್ತೆ 2023ರಲ್ಲಿ ನಾಲ್ಕು ಖಾತೆಗಳನ್ನು ಕೊಟ್ಟಿದ್ದಾರೆ. ಈ ರೀತಿ ಇರುವಾಗ ನನಗೆ ಕಾಂಗ್ರೆಸ್ ಏನು ಕಡಿಮೆ ಮಾಡಿದೆ ಅಂತ ಜೆಡಿಎಸ್ ಗೆ ಹೋಗಲಿ?ʼ ಎಂದು ಜಮೀರ್ ಹೇಳಿದ್ದಾರೆ.
ʼಬಹಳ ಜನ ನನಗಿಂತಲೂ ಸೀನಿಯರ್ ಇದ್ದರು. 2018ರಲ್ಲಿ ನನ್ನನ್ನು ಮಂತ್ರಿ ಮಾಡಿದಾಗ ರೋಷನ್ ಬೇಗ್ ಹಿರಿಯರು. ತನ್ವೀರ್ ಸೇಠ್, ಹ್ಯಾರೀಸ್ ಎಲ್ಲರೂ ಇದ್ದರು. ಆದರೂ ನನ್ನನ್ನು ಮಂತ್ರಿ ಮಾಡಿರಬೇಕಾದ್ರೆ ಅದನ್ನು ನಾನು ಮರೆಯೋಕೆ ಆಗುತ್ತಾ? ನಾನು ಯಾಕ್ರೀ ರಹಸ್ಯವಾಗಿ ಕುಮಾರಸ್ವಾಮಿ ಜೊತೆ ಮಾತಾಡಲಿ. ಇದೆಲ್ಲವೂ ಊಹಾಪೋಹದ ಸುದ್ದಿ ಅಷ್ಟೇ, ಪಕ್ಷ ನನಗೇನು ಕಡಿಮೆ ಮಾಡಿಲ್ಲ ಹೀಗಿರುವಾಗ ನಾನು ಎಲ್ಲೂ ಹೋಗಲ್ಲʼ ಎಂದು ಜಮೀರ್ ಸ್ಪಷ್ಟನೆ ನೀಡಿದ್ದಾರೆ.
Zameer ahmed khan: ದಾವಣಗೆರೆ ದಂಗಲ್: ಜಮೀರ್ ಅಹಮದ್ ರಾಜೀನಾಮೆ ಬಾಂಬ್