ಮೈಸೂರು, ಡಿ.10: ಮೈಸೂರು (Mysore news) ಜಿಲ್ಲೆಯ ಹುಣಸೂರು ತಾಲೂಕಿನ ಗೌಡನಕಟ್ಟೆ ಗ್ರಾಮದಲ್ಲಿ ನ.29ರಂದು ತಾಯಿಯೊಂದಿಗೆ 4 ಹುಲಿ ಮರಿಗಳು ಸೆರೆ ಸಿಕ್ಕಿದ್ದವು. ಆಹಾರ ಸೇವಿಸದೆ ಅಸ್ವಸ್ಥಗೊಂಡಿದ್ದ ಹುಲಿಮರಿಗಳೀಗ (Tiger death) ಮೃತಪಟ್ಟಿವೆಯೆಂದು ತಿಳಿದುಬಂದಿದೆ. ಮರಿಗಳ ಸಾವಿಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ. ಪಶುವೈದ್ಯರು ಮೃತ ಹುಲಿ ಮರಿಗಳ ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ.
ನವೆಂಬರ್ 28ರಂದು ಈ ನಾಲ್ಕು ಮರಿಗಳ ಜೊತೆಗೆ ತಾಯಿ ಹುಲಿಯೂ ಕಾಣಿಸಿಕೊಂಡಿದ್ದು, ನವೆಂಬರ್ 29 ಮತ್ತು 30ರಂದು ಗೌಡನಕಟ್ಟೆಯ ಪ್ರಕಾಶ್ ಅವರ ಜೋಳದ ಹೊಲದ ಬಳಿ ಕಾಣಿಸಿಕೊಂಡಿದ್ದ ಹುಲಿ ಮರಿಗಳನ್ನು ಸ್ಥಳೀಯರು ಮತ್ತು ಅರಣ್ಯ ಸಿಬ್ಬಂದಿ ಪತ್ತೆ ಮಾಡಿದ್ದರು. ಮಧ್ಯರಾತ್ರಿ ನಡೆದ ಕಾರ್ಯಾಚರಣೆಯಲ್ಲಿ ತಾಯಿ ಹುಲಿಯನ್ನು ಸೆರೆ ಹಿಡಿದು ಪುನರ್ವಸತಿ ಕೇಂದ್ರಕ್ಕೆ ರವಾನಿಸಲಾಗಿತ್ತು.
ಹುಲಿ ಮರಿಗಳ ಮರಣೋತ್ತರ ಪರೀಕ್ಷೆ
ತಾಯಿ ಹುಲಿ ಸೆರೆ ಸಿಕ್ಕಿದ ಬಳಿಕ ಎರಡು ದಿನಗಳ ಕಾಲ ತಾಯಿಯಿಂದ ದೂರವಿದ್ದ ಹುಲಿಮರಿಗಳು, ಆಹಾರವಿಲ್ಲದೆ, ಜನರ ಕಿರುಚಾಟ ಮತ್ತು ಓಡಾಟದಿಂದ ಗಾಬರಿಯಿಂದ ನಿತ್ರಾಣಗೊಂಡಿದ್ದವು. ನಂತರ ಅವುಗಳನ್ನು ಕೂಡ ಕೂರ್ಗಳ್ಳಿ ಪುನರ್ವಸತಿ ಕೇಂದ್ರಕ್ಕೆ ಕಳುಹಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಗಾಬರಿಯಿಂದ ಮತ್ತು ಆಹಾರ ಸೇವಿಸದೆ ಅಸ್ವಸ್ಥಗೊಂಡ ಕಾರಣ ಕಳೆದ ನಾಲ್ಕು ದಿನಗಳ ಒಳಗೆ ಒಂದಾದ ಮೇಲೆ ಒಂದು ಮರಿಗಳು ಪ್ರಾಣ ಕಳೆದುಕೊಂಡಿವೆ ಎಂದು ಹೇಳಲಾಗುತ್ತಿದೆ. ಪಶುವೈದ್ಯರು ನಾಲ್ಕೂ ಹುಲಿ ಮರಿಗಳ ಮರಣೋತ್ತರ ಪರೀಕ್ಷೆ ನಡೆಸುತ್ತಿದ್ದು, ಮರಿಗಳ ಸಾವಿಗೆ ನಿಖರ ಕಾರಣ ಇನ್ನೂ ಸ್ಪಷ್ಟವಾಗಿಲ್ಲ. ತಾಯಿ ಹುಲಿ ಮಾತ್ರ ಸಧ್ಯಕ್ಕೆ ಆರೋಗ್ಯವಾಗಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.