ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Mysuru News: ಮೈಸೂರು ಕುರುಬರಹಳ್ಳಿ 24 ಎಕರೆ ಜಮೀನು ವಿವಾದ; ಕಾನೂನು ಕ್ರಮಕ್ಕೆ ಟಿ.ಎಸ್. ಶ್ರೀವತ್ಸ ಆಗ್ರಹ

ಸರ್ಕಾರದ ಜಮೀನು ಉಳಿಸುವ ನಿಟ್ಟಿನಲ್ಲಿ ಇದನ್ನು ಗಂಭೀರವಾಗಿ ಪರಿಗಣಿಸಬೇಕು. ತರಾತುರಿಯಲ್ಲಿ ನೋಂದಣಿ ರದ್ದಾಗಿರುವುದರ ಹಿಂದೆ ಅಕ್ರಮದ ವಾಸನೆ ಇದೆ. ಈ ಬೆಳವಣಿಗೆಗಳ ಹಿಂದೆ ಯಾರು ಇದ್ದಾರೆ ಎಂಬುದು ತಿಳಿಯಬೇಕು ಎಂದು ಶಾಸಕ ಟಿ.ಎಸ್. ಶ್ರೀವತ್ಸ ಆಗ್ರಹಿಸಿದ್ದಾರೆ.

ಮೈಸೂರಿನಲ್ಲಿ ಶಾಸಕ ಟಿ.ಎಸ್. ಶ್ರೀವತ್ಸ ಸುದ್ದಿಗೋಷ್ಠಿ.

ಮೈಸೂರು: ಮೈಸೂರಿನ ಕುರುಬರಹಳ್ಳಿ ಗ್ರಾಮದ ಸರ್ವೇ ನಂಬರ್ 4ರಲ್ಲಿನ 24 ಎಕರೆ 10 ಗುಂಟೆ ಜಮೀನು ನೋಂದಣಿ ಮತ್ತು ರದ್ದಾಗಿರುವುದರ ಹಿಂದೆ ಅಕ್ರಮ ನಡೆದಿದೆ. ಸರ್ಕಾರಿ ಜಮೀನು ನೋಂದಣಿ ಹೇಗೆ ಆಯಿತು ಮತ್ತು ಅದೇ ನೋಂದಣಿ ಹೇಗೆ ರದ್ದು ಆಯಿತು. ಈ ಬಗ್ಗೆ ಸರ್ಕಾರ ಸಮಗ್ರ ತನಿಖೆ ನಡೆಸಬೇಕು ಎಂದು ಎಂದು ಕೃಷ್ಣರಾಜ ಕ್ಷೇತ್ರದ ಶಾಸಕ ಟಿ.ಎಸ್. ಶ್ರೀವತ್ಸ (MLA T.S. Srivatsa) ಅವರು ಆಗ್ರಹಿಸಿದರು.

ಮೈಸೂರಿನಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಈ ಪ್ರಕರಣದ ಬಗ್ಗೆ ವಿಧಾನಸಭೆಯ ಅಧಿವೇಶನದಲ್ಲೂ ಪ್ರಸ್ತಾಪ ಮಾಡಲಾಗುವುದು. ಈಗಾಗಲೇ ವಿರೋಧಪಕ್ಷದ ನಾಯಕರ ಗಮನಕ್ಕೆ ತಂದಿದ್ದೇನೆ. ಸುಮಾರು 900 ಕೋಟಿ ಮೌಲ್ಯದ ಹಗರಣದ ಬಗ್ಗೆ ಕೂಲಂಕುಶ ತನಿಖೆಯನ್ನು ಸರ್ಕಾರ ನಡೆಸಬೇಕು ಎಂದು ಒತ್ತಾಯಿಸಿದರು.

ಸರ್ಕಾರದ ಜಮೀನು ಉಳಿಸುವ ನಿಟ್ಟಿನಲ್ಲಿ ಇದನ್ನು ಗಂಭೀರವಾಗಿ ಪರಿಗಣಿಸಬೇಕು. ತರಾತುರಿಯಲ್ಲಿ ನೋಂದಣಿ ರದ್ದಾಗಿರುವುದರ ಹಿಂದೆ ಅಕ್ರಮದ ವಾಸನೆ ಇದೆ. ಈ ಬೆಳವಣಿಗೆಗಳ ಹಿಂದೆ ಯಾರು ಇದ್ದಾರೆ ಎಂಬುದು ತಿಳಿಯಬೇಕು. ಜಮೀನು ನೋಂದಣಿ ಆಗುವಾಗ ಕುಟುಂಬದ ಸದಸ್ಯರು ಸಹಿ ಮಾಡಿದ್ದಾರೆ. ಆದರೆ ರದ್ದಾಗುವಾಗ ಕೇವಲ ಒಬ್ಬರೇ ಸಹಿ ಮಾಡಿದ್ದಾರೆ. ಇದು ಕಾನೂನು ಪ್ರಕಾರ ಎಷ್ಟು ಸರಿ. ಇದು ಸಹ ಅನುಮಾನಕ್ಕೆ ಕಾರಣವಾಗಿದೆ ಎಂದು ಹೇಳಿದರು.

ದೊಡ್ಡ ಮಟ್ಟದ ಹಣದ ವ್ಯವಹಾರ ನಡೆದಾಗ ಆದಾಯ ತೆರಿಗೆ, ಜಾರಿ ನಿರ್ದೇಶನಾಲಯಗಳ ಕಾನೂನು ಇದೆ. ಇಲ್ಲೂ ದೊಡ್ಡ ಮಟ್ಟದ ಹಣದ ವ್ಯವಹಾರ ನಡೆದಿದೆ. ಆದಾಯ ತೆರಿಗೆ ಕಾನೂನಿನ ಕಟ್ಟಳೆಗಳ ಪ್ರಕಾರ ಇರಬೇಕು. ಆದರೆ ಇಲ್ಲಿ ಏಕ್ ದಂ ವಾಪಸ್ ಪಡೆಯಲಾಗಿದೆ. ಇಂತಹ ಅಕ್ರಮ ಮೈಸೂರು ನಗರದ ಒಳಗೆ, ಚಾಮುಂಡಿ ಬೆಟ್ಟದ ತಪ್ಪಲಲ್ಲಿ. ಮುಖ್ಯಮಂತ್ರಿಗಳ ಮೂಗಿನ ನೇರಕ್ಕೆ ನಡೆದಿದೆ. ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರು ಗಮನಹರಿಸಬೇಕಿತ್ತು ಎಂದು ನುಡಿದರು.

ಕಾನೂನಿನ ಲಾಭ ಪಡೆಯಲು ಈ ರೀತಿ ನೋಂದಣಿ ರದ್ದಾಗಿರಬಹುದೇ ಎಂಬ ಅನುಮಾನ ಹುಟ್ಟುತ್ತಿದೆ. ಇಲ್ಲಿ ಕಾನೂನು ಉಲ್ಲಂಘನೆಯಾಗಿದ್ದರೆ ಸಂಬಂಧಿಸಿದವರನ್ನು ಯಾಕೆ ಬಂಧಿಸಿಲ್ಲ. ಕಾನೂನು ಕ್ರಮಕ್ಕೆ ಒಳಪಡಿಸಿಲ್ಲ ಎಂದು ಪ್ರಶ್ನಿಸಿದರು.

ಮೈಸೂರಿನಲ್ಲಿ ಇದೇ ರೀತಿಯ ಪ್ರಕರಣಗಳು ಈಗಾಗಲೇ ಎರಡು ನಡೆದಿವೆ. ಈಗ ಇದೂ ಒಂದು ಸೇರ್ಪಡೆ. ಜಮೀನು ಸರ್ಕಾರದ ಸುಪರ್ದಿಗೆ ಬಂದರೆ ಎಲ್ಲವೂ ಬದಲಾಗಬೇಕು. ಆದರೆ ಬದಲಾಗಿಲ್ಲ. ವೆಬ್ ಸೈಟ್ ನಲ್ಲಿ ಹೆಸರು ಯಾಕೆ ತೆಗೆಸಿಲ್ಲ. ಇದರಲ್ಲಿ ಕಂದಾಯ ಅಧಿಕಾರಿಗಳ ಕೈವಾಡ ಎಷ್ಟಿದೆ ತಂತ್ರಾಂಶದಲ್ಲಿ ತೊಡಕಾಗಿದೆ ಅಂತ ಜಿಲ್ಲಾಧಿಕಾರಿ ಹೇಳ್ತಾರೆ. ಮೈಸೂರು ಜಿಲ್ಲೆಯಲ್ಲಿ ತಪ್ಪು ಮಾಡಿದವರು ಮಾಡ್ತಾನೆ ಇರಬಹುದೇ ಎಂದು ಪ್ರಶ್ನಿಸಿದರು.

‘ಮುಡಾ’ ಪ್ರಕರಣದ ಬಗ್ಗೆ ದೂರು ಆಯಿತು. ಆಗ ಸೈಟ್ ವಾಪಸ್ ಕೊಟ್ಟರು. ಯಾರ ಮೇಲಾದರೂ ಕ್ರಮ ಬೇಡವಾ? ಜಿಲ್ಲಾಡಳಿತಕ್ಕೆ ಭಯ ಇರಬೇಕು. ಒಟ್ಟು ವ್ಯವಸ್ಥೆ ಹೀಗೆ ನಡೆಯುತ್ತಿರುವುದರಿಂದ ಅನುಮಾನ ಜಾಸ್ತಿ ಆಗ್ತಿದೆ. ತಪ್ಪು ಮಾಡಿದವರಿಗೆ ಶಿಕ್ಷೆ ಆಗಬೇಕು. ಒತ್ತುವರಿ ಮಾಡೋದು ಜಾಗ ಬಿಡೋದು. ಇದೇ ಮಾದರಿಯೇ ಎಂದರು.

ಮುಖ್ಯಮಂತ್ರಿಗಳ ತವರು ಜಿಲ್ಲೆಯಲ್ಲೇ ಹೀಗೆ ಆದರೆ ಇನ್ನು ಬೇರೆ ಕಡೆ ಕಥೆ ಏನು? ಜಿಲ್ಲೆಯಲ್ಲಿ ಭಯವೇ ಇಲ್ಲದೇ ಅಧಿಕಾರಿಗಳು ತಪ್ಪು ಮಾಡಿದರೆ ಹೇಗೆ. ಇಂತಹ ಪ್ರಕರಣದ ಹಿಂದೆ ಯಾರು ಹಿಂದೆ ಇದ್ದಾರೆ. ಈ ಪ್ರಕರಣವನ್ನೂ ಕೆದಕಿದರೆ ಇನ್ನೂ ಅನೇಕ ಸಂಗತಿಗಳು ಹೊರಗೆ ಬರುತ್ತವೆ ಎಂದು ವಿವರಿಸಿದರು.

ಈ ಹಿಂದೆ ನಾವು ಬೇರೆ ರಾಜ್ಯದಲ್ಲಿ ಇಂತಹವು ನಡಿತೀವೆ ಅಂತ ಕೇಳ್ತಾ ಇದ್ದೆವು. ಬಿಹಾರದಲ್ಲಿ, ಯುಪಿಯಲ್ಲಿ ನಡೆಯುತ್ತಿದ್ದವು. ಕೆಲವು ಕಡೆ ಭೂಗತ ಡಾನ್ ಗಳು ಇಂತಹವುಗಳ ಹಿಂದೆ ಇರುತ್ತಾರೆ ಎಂದು ಕೇಳಿದ್ದೆವು. ಈ ಪ್ರಕರಣವನ್ನೂ ಹುಡುಕುತ್ತಾ ಹೋದರೆ ಬ್ರಹ್ಮಾಂಡ ಹಗರಣದ ವಾಸನೆ ಇದೆ ಎಂದರು.

ಮೈಸೂರಿನಲ್ಲಿ ಮಾದಕ ವಸ್ತುಗಳ ಹಾವಳಿ ಜಾಸ್ತಿ ಆಗುತ್ತಿರುವ ಬಗ್ಗೆ ವರದಿಯಾಗಿತ್ತು. ಈಗ ಇಂತಹವು ನಡೆಯುತ್ತಿವೆ. ಮೈಸೂರಲ್ಲಿ ಎಷ್ಟು ಆಡಳಿತ ಹಳಿ ತಪ್ಪಿದೆ ಎನ್ನುವುದನ್ನು ಇದು ತೋರಿಸುತ್ತದೆ. ತಪ್ಪು ಮಾಡಿರುವ ಕಂದಾಯ ಅಧಿಕಾರಿ, ನೋಂದಣಾಧಿಕಾರಿ ಅವರ ವಿರುದ್ಧ ಕ್ರಿಮಿನಿಲ್ ಪ್ರಕರಣ ದಾಖಲಿಸಿ, ಮುಖ್ಯಮಂತ್ರಿಗಳು, ಕಂದಾಯ ಸಚಿವರು, ಜಿಲ್ಲಾ ಉಸ್ತುವಾರಿ ಸಚಿವರು ಜನರಿಗೆ ಕಠಿಣ ಸಂದೇಶ ನೀಡಬೇಕು ಎಂದು ಒತ್ತಾಯಿಸಿದರು.

Hotels bandh: ರಾಜಧಾನಿಯಲ್ಲಿ ಬೆಳಗ್ಗೆ ತೆರೆದ ಹೋಟೆಲ್‌ಗಳು, ಮಧ್ಯಾಹ್ನದ ಹೊತ್ತಿಗೆ ಗ್ಯಾಸ್‌ ಖಾಲಿ!

ಮೈಸೂರು ನಗರ ಜಿಲ್ಲಾ ಅಧ್ಯಕ್ಷ ಎಲ್. ನಾಗೇಂದ್ರ, ನಗರ ವಕ್ತಾರ ಎಂ.ಎ. ಮೋಹನ್, ಮಂಡಲ ಅಧ್ಯಕ್ಷ ಗೋಪಾಲ್ ರಾಜೇ ಅರಸ್, ಮಾಜಿ ಮಹಾಪೌರ ಶಿವಕುಮಾರ್, ನಗರ ಪ್ರಧಾನ ಕಾರ್ಯದರ್ಶಿ ಸೋಮಸುಂದರ್, ನಗರ ಉಪಾಧ್ಯಕ್ಷ ವಿಶ್ವೇಶ್ವರಯ್ಯ, ಮಾಧ್ಯಮ ಸಂಚಾಲಕ ಮಹೇಶ್ ರಾಜೇ ಅರಸ್, ಮಾಧ್ಯಮ ಸಹ ಸಂಚಾಲಕ ಸಂತೋμï ಕುಮಾರ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.