ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Murder case: 15 ಲಕ್ಷಕ್ಕಾಗಿ ಗಂಡನಿಗೆ ವಿಷವಿಕ್ಕಿ ಕೊಂದು ಹುಲಿ ದಾಳಿಯಿಂದ ಸತ್ತ ಎಂದು ನಟಿಸಿದ ಹೆಂಡತಿ!

ಮೈಸೂರಿನ ಹುಣಸೂರು ಗ್ರಾಮಾಂತರ ಪೊಲೀಸರು ಮಳವಳ್ಳಿ ತಾಲೂಕು ಕದಂಪುರ ಗ್ರಾಮದ ನಿವಾಸಿ ವೆಂಕಟಸ್ವಾಮಿ ಕೊಲೆ ಮಾಡಿದ ಪ್ರಕರಣದಲ್ಲಿ ಸಲ್ಲಾಪುರಿ (40) ಯನ್ನು ಬಂಧಿಸಿದ್ದಾರೆ. ಕಾಡು ಪ್ರಾಣಿಗಳ ದಾಳಿಯಿಂದ ಮೃತಪಟ್ಟರೆ ಸರ್ಕಾರದಿಂದ ದೊರೆಯುವ 15 ಲಕ್ಷ ರೂ. ಪರಿಹಾರ ಮೊತ್ತ ಪಡೆಯಲು ಈಕೆ ಸಂಚು ರೂಪಿಸಿದ್ದಳು.

ಆರೋಪಿ ಸೊಲ್ಲಾಪುರಿ, ಮೃತ ವೆಂಕಟಸ್ವಾಮಿ

ಮೈಸೂರು: 15 ಲಕ್ಷ ರೂ. ಪರಿಹಾರದ ಮೊತ್ತ ಸಿಗುತ್ತದೆ ಎಂಬ ದುರಾಸೆಯಿಂದ ಪತಿಯನ್ನು ವಿಷ ಹಾಕಿ ಕೊಂದು (murder case), ಬಳಿಕ ಹುಲಿ ದಾಳಿ ನಡೆಸಿ ಕೊಂದಿದೆ ಎಂದು ಕಥೆ ಕಟ್ಟಿದ ಚಾಲಾಕಿ ಪತ್ನಿ ಸಿಕ್ಕಿಬಿದ್ದ ಘಟನೆ ಮೈಸೂರಿನಲ್ಲಿ ನಡೆದಿದೆ. ಹುಣಸೂರು (Hunasuru) ತಾಲ್ಲೂಕಿನ ಚಿಕ್ಕಹೆಜ್ಜೂರು ಗ್ರಾಮದ ಮಹಿಳೆಯೊಬ್ಬಳು ತನ್ನ ಗಂಡನನ್ನು ಕೊಲೆ ಮಾಡಿ, ಹುಲಿ (tiger attack) ಅವನನ್ನು ಎಳೆದುಕೊಂಡು ಹೋಗಿದೆ ಎಂದು ಕಥೆ ಹೆಣೆದು, ಕಾಡು ಪ್ರಾಣಿಗಳ ದಾಳಿಗೆ ಬಲಿಯಾದ ಕುಟುಂಬಗಳಿಗೆ ಸರ್ಕಾರದಿಂದ ನೀಡಲಾದ 15 ಲಕ್ಷ ರೂ. ಪರಿಹಾರ ಪಡೆಯಲು ಪ್ರಯತ್ನಿಸಿದ್ದಾಳೆ.

ಮೈಸೂರಿನ ಹುಣಸೂರು ಗ್ರಾಮಾಂತರ ಪೊಲೀಸರು ಮಳವಳ್ಳಿ ತಾಲೂಕು ಕದಂಪುರ ಗ್ರಾಮದ ನಿವಾಸಿ ವೆಂಕಟಸ್ವಾಮಿ ಕೊಲೆ ಮಾಡಿದ ಪ್ರಕರಣದಲ್ಲಿ ಸಲ್ಲಾಪುರಿ (40) ಯನ್ನು ಬಂಧಿಸಿದ್ದಾರೆ. ಕಾಡು ಪ್ರಾಣಿಗಳ ದಾಳಿಯಿಂದ ಮೃತಪಟ್ಟರೆ ಸರ್ಕಾರದಿಂದ ದೊರೆಯುವ 15 ಲಕ್ಷ ರೂ. ಪರಿಹಾರ ಮೊತ್ತ ಪಡೆಯಲು ಸಂಚು ರೂಪಿಸಿದ ಸಲ್ಲಾಪುರಿ, ಪತಿಯನ್ನು ಹತ್ಯೆಗೈದು ಹುಲಿ ಕೊಂದಿರುವ ಕಥೆ ಕಟ್ಟಿ ಪೊಲೀಸರನ್ನ ಯಾಮಾರಿಸಲು ಯತ್ನಿಸಿದ್ದಾಳೆ.

ಹುಣಸೂರು ಗ್ರಾಮಾಂತರ ಠಾಣೆ ಇನ್ಸ್ಪೆಕ್ಟರ್ ಮುನಿಯಪ್ಪ ಮತ್ತು ತಂಡ ನಡೆಸಿದ ತನಿಖೆಯಲ್ಲಿ ಪತ್ನಿಯ ಸಂಚು ಬಯಲಾಗಿದೆ. ಪತಿಯನ್ನು ಹತ್ಯೆಗೈದ ಪತ್ನಿ ಇದೀಗ ಪೊಲೀಸರ ಅತಿಥಿಯಾಗಿದ್ದಾಳೆ. ದಂಪತಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ. ಹುಣಸೂರು ತಾಲೂಕಿನ ಹನಗೂಡು ಹೋಬಳಿಯ ಚಿಕ್ಕಹೆಜ್ಜೂರಿನ ಹಾಡಿಯಲ್ಲಿ (ಇದು ನಾಗರಹೊಳೆ ಕಾಡಿನಂಚಿನಲ್ಲಿರುವ ಜಮೀನು) ಬೆಂಗಳೂರಿನ ಬಿಡದಿಯ ಅರುಣ್, ರವಿ ಮತ್ತಿಬ್ಬರು ಸ್ನೇಹಿತರು ಸೇರಿ 4-10 ಗುಂಟೆ ಜಮೀನನ್ನು ಖರೀದಿಸಿದ್ದರು.

ಜಮೀನನ್ನು ನೋಡಿಕೊಳ್ಳಲು ಈ ದಂಪತಿಗಳನ್ನು ನೇಮಿಸಿದ್ದರು. ಐಷಾರಾಮಿ ಜೀವನದ ಕನಸು ಕಾಣುತ್ತಿದ್ದ ಈಕೆ ಸರ್ಕಾರದ ಯೋಜನೆಗಳಲ್ಲಿ ಹಣ ಪಡೆಯುವ ಉದ್ದೇಶಗಳನ್ನು ಇಟ್ಟುಕೊಂಡು ಆಗಾಗ ಸರ್ಕಾರಿ ಕಚೇರಿಗಳಿಗೆ ಭೇಟಿ ನೀಡಿ ಮಾಹಿತಿ ಪಡೆಯುತ್ತಿದ್ದಳು.

ಕಾಡುಪ್ರಾಣಿಗಳ ದಾಳಿಯಲ್ಲಿ ಮೃತಪಟ್ಟರೆ 15 ಲಕ್ಷ ಪರಿಹಾರ ದೊರೆಯವ ಯೋಜನೆಯ ಮಾಹಿತಿ ಈಕೆಗೆ ದೊರೆತಿದೆ. ಪತಿಯನ್ನು ಕೊಲೆಗೈಯ್ಯುವ ಸ್ಕೆಚ್ ತಯಾರಿಸಿದ ಸಲ್ಲಾಪುರಿ ಕಳೆದ ಮಂಗಳವಾರ ಪತ್ನಿಗೆ ವಿಷ ಹಾಕಿ ಕೊಂದಿದ್ದಾಳೆ. ನಂತರ ಮನೆಯಿಂದ ಮೃತದೇಹವನ್ನು ಹೊರಕ್ಕೆ ಎಳೆದೊಯ್ದು ವಿರೂಪಗೊಳಿಸಿ ಗುಂಡಿಯಲ್ಲಿ ಮುಚ್ಚಿಹಾಕಿ ಕಾಡು ಪ್ರಾಣಿ ದಾಳಿಯಿಂದ ಮೃತಪಟ್ಟಂತೆ ಬಿಂಬಿಸಿದ್ದಾಳೆ.

ನಂತರ ಠಾಣೆಗೆ ಆಗಮಿಸಿ ಪತಿ ನಾಪತ್ತೆಯಾದ ಬಗ್ಗೆ ಮಿಸ್ಸಿಂಗ್ ಕಂಪ್ಲೇಂಟ್ ಕೊಟ್ಟಿದ್ದಾಳೆ. ದೂರಿನಲ್ಲಿ ಹುಲಿ ಎಳೆದೊಯ್ದಿರಬಹುದೆಂದು ಅನುಮಾನ ವ್ಯಕ್ತಪಡಿಸಿದ್ದಾಳೆ. ಸಲ್ಲಾಪುರಿ ಮಾತನ್ನ ನಂಬಿದ ಪೊಲೀಸರು ಸ್ಥಳಕ್ಕೆ ಹೋಗಿ ಗ್ರಾಮಸ್ಥರು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿಗಳ ನೆರವಿನಿಂದ ಹುಡುಕಾಟ ನಡೆಸಿದ್ದಾರೆ.

ಹುಲಿ ದಾಳಿ ನಡೆಸಿದ ಯಾವುದೇ ಕುರುಹುಗಳು ಪೊಲೀಸರಿಗೆ ಸಿಕ್ಕಿಲ್ಲ. ಮಳೆ ಸುರಿದ ಕಾರಣ ಕುರುಹುಗಳು ನಾಶವಾಗಿರಬಹುದೆಂದು ಪೊಲೀಸರು ಊಹಿಸಿದ್ದಾರೆ. ಆದರೆ ಸಿಸಿ ಕ್ಯಾಮರಾದಲ್ಲಿ ಕೇವಲ ಪತ್ನಿ ಸಲ್ಲಾಪುರಿ ಮಾತ್ರ ಓಡಾಡಿರುವುದು ಕಂಡು ಬಂದಿದೆ. ಇನ್‌ಸ್ಪೆಕ್ಟರ್ ಮುನಿಯಪ್ಪ ಸಲ್ಲಾಪುರಿಯನ್ನು ತೀವ್ರ ವಿಚಾರಣೆಗೆ ಒಳಪಡಿಸಿದಾಗ ವಿಷ ಕೊಟ್ಟು ಕೊಂದಿರುವುದಾಗಿ ಒಪ್ಪಿಕೊಂಡಿದ್ದಾಳೆ.

ಕಾಡು ಪ್ರಾಣಿಗಳ ದಾಳಿಯಿಂದ ಮೃತಪಟ್ಟರೆ ಸರ್ಕಾರದಿಂದ ಸಿಗುವ 15 ಲಕ್ಷ ಪರಿಹಾರ ಹಣ ಪಡೆಯುವ ಹುನ್ನಾರದಿಂದ ಕೃತ್ಯ ನಡೆಸಿರುವುದಾಗಿ ವಿಚಾರಣೆ ವೇಳೆ ತಿಳಿಸಿದ್ದಾಳೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್, ಅಡಿಷನಲ್ ಎಸ್ಪಿ ಮಲ್ಲಿಕ್ ಹಾಗೂ ಡಿವೈಎಸ್ಪಿ ಗೋಪಾಲಕೃಷ್ಣ ಮಾರ್ಗದರ್ಶನದಲ್ಲಿ ಇನ್‌ಸ್ಪೆಕ್ಟರ್ ಮುನಿಯಪ್ಪ, ರಾಧಾ, ಮಂಜು ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

ಇದನ್ನೂ ಓದಿ: Cauvery Wildlife Sanctuary: ಕಾವೇರಿ ವನ್ಯಧಾಮದಲ್ಲಿ ಎರಡು ಹುಲಿ ಮರಿಗಳ ಸಾವು

ಹರೀಶ್‌ ಕೇರ

View all posts by this author