ಸಿಂಧನೂರು (ರಾಯಚೂರು) ನ.25: ತುಂಗಭದ್ರಾ ಅಣೆಕಟ್ಟೆ ಕ್ರಸ್ಟ್ ಗೇಟ್ ಶೀಘ್ರ ಅಳವಡಿಕೆ, ರೈತರ 2ನೇ ಬೆಳೆಗೆ ನೀರು, ನೀರು ಕೊಡದಿದ್ದರೇ ಎಕರೆಗೆ 50 ಸಾವಿರ ರೂ. ಪರಿಹಾರ, ಭತ್ತಕ್ಕೆ 500 ರೂ. ಪ್ರೋತ್ಸಾಹ ಧನ ಮತ್ತು ಭತ್ತ ಖರೀದಿ ಕೇಂದ್ರ ಆರಂಭಿಸುವುದು ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ, ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ನೇತೃತ್ವದಲ್ಲಿ ಸಿಂಧನೂರಿನ ಎಪಿಎಂಸಿ ಆವರಣದಲ್ಲಿ ರೈತರಿಂದ ಮಂಗಳವಾರ ಬೃಹತ್ ಪ್ರತಿಭಟನೆ (JDS Protest) ನಡೆಸಲಾಯಿತು.
ಈ ವೇಳೆ ಮಾತನಾಡಿ ನಿಖಿಲ್ ಕುಮಾರಸ್ವಾಮಿ ಅವರು, ರೈತರಿಗೆ ಬೇಕಿರೋದು ನಿಮ್ಮ ಗ್ಯಾರಂಟಿಗಳಲ್ಲ, ಅವರಿಗೆ ನೀರು ಕೊಡಿ, ಅವರೇ ನಿಮ್ಮ ಗ್ಯಾರಂಟಿಗಳಿಗೆ ಹಣ ಕೊಡ್ತಾರೆ. ಕಲ್ಯಾಣ ಕರ್ನಾಟಕದ 4 ಜಿಲ್ಲೆಯ ರೈತರ ಬದುಕು ಬೀದಿಗೆ ಬಂದಿದೆ. ರಾಯಚೂರು, ಕೊಪ್ಪಳ, ಬಳ್ಳಾರಿ, ವಿಜಯನಗರ ಜಿಲ್ಲೆಯ ರೈತರು ಸಂಕಷ್ಟದಲ್ಲಿದ್ದಾರೆ. ಈ ಸರ್ಕಾರಕ್ಕೆ ಮಾನ ಮರ್ಯಾದೆ ಇಲ್ಲ. ಇದು ದಪ್ಪ ಚರ್ಮದ ಸರ್ಕಾರ ಎಂದು ಕಿಡಿಕಾರಿದರು.
ರೈತರಿಗೆ ಸೂಕ್ತ ನ್ಯಾಯ ಕೊಡಿಸುವ ನಿಟ್ಟಿನಲ್ಲಿ ಕಾಂಗ್ರೆಸ್ ಸರ್ಕಾರಕ್ಕೆ 8 ರಿಂದ 10 ದಿನಗಳ ಕಾಲ ಗಡುವು ನೀಡುತಿದ್ದೇವೆ. ಒಂದು ವೇಳೆ ನಮ್ಮ ಬೇಡಿಕೆಗಳಿಗೆ ಸ್ಪಂದಿಸದಿದ್ದರೇ ತುಂಗಭದ್ರಾ ಆಣೆಕಟ್ಟಿಗೆ ಮುತ್ತಿಗೆ ಹಾಕುತ್ತೇವೆ ಎಂದು ನಿಖಿಲ್ ಅವರು ಎಚ್ಚರಿಕೆ ನೀಡಿದರು.:
ಬೆಂಗಳೂರು ಉಸ್ತುವಾರಿ ಸಚಿವರಿಗೆ ಪರಿಜ್ಞಾನ ಇಲ್ವಾ? ನಿಖಿಲ್ ವಾಗ್ದಾಳಿ
ತುಂಗಭದ್ರಾ ನದಿ ರೈತರ ತಾಯಿ
ತುಂಗಭದ್ರಾ ನದಿ ಈ ಭಾಗದ ಜೀವನಾಡಿ. ರೈತರು ಭೂಮಿ ತಾಯಿಯನ್ನ ಮಾತ್ರ ನಂಬಿ ಬದುಕುತ್ತಿದ್ದಾನೆ. ಈ ಸರ್ಕಾರ ರೈತನ ಬದುಕು ಕಸಿದುಕೊಳ್ಳಲು ಮುಂದಾಗಿದೆ. ಡ್ಯಾಂನಲ್ಲಿ 70 ಟಿಎಂಸಿ ನೀರಿದೆ. ಕುಮಾರಣ್ಣ ಸಿಎಂ ಆಗಿದ್ದ ವೇಳೆ 70 ಟಿಎಂಸಿಗೂ ಕಡಿಮೆ ನೀರು ಇತ್ತು. ಆಗ ರೈತರ ಎರಡು ಬೆಳೆಗೆ ನೀರು ಕೊಟ್ಟರು ಎಂದು ಹೇಳಿದರು.

ಶಾಸಕರ ಖರೀದಿಗೆ 50 ಕೋಟಿ
ಆಂಧ್ರ- ತೆಲಂಗಾಣ ಭಾಗಕ್ಕೆ ಶೇ.33ರಷ್ಟು ನೀರು ಹೋಗುತ್ತೆ. ಆದರೂ ಅಲ್ಲಿನ ರೈತರಿಗೆ ನೀರು ಕೊಡಬಹುದು. ಆದ್ರೆ ಸರ್ಕಾರ ಕಣ್ಣು ಮುಚ್ಚಿಕೊಂಡು ಕುಳಿತಿದೆ. ತುಂಗಾಭದ್ರಾ ಕ್ರಸ್ಟ್ ಗೇಟ್ ರಿಪೇರಿಗೆ 11ಕೋಟಿ ರೂ.ಕೊಡಲು ಈ ಸರ್ಕಾರಕ್ಕೆ ಶಕ್ತಿ ಇಲ್ಲ. 50 ಕೋಟಿ ರೂ. ಶಾಸಕರಿಗೆ ಕೊಟ್ಟು ಖರೀದಿಗೆ ಕಾಂಗ್ರೆಸ್ ಸಿದ್ಧವಾಗಿದೆ ಎಂದು ಸರ್ಕಾರದ ವಿರುದ್ಧ ನಿಖಿಲ್ ಕುಮಾರಸ್ವಾಮಿ ಅವರು ಗುಡುಗಿದರು.
ಸರ್ಕಾರ ತನ್ನ ತಪ್ಪನ್ನು ಮುಚ್ಚಿಟ್ಟುಕೊಳ್ಳುವ ಮೂಲಕ ಎರಡನೇ ಬೆಳೆಗೆ ನೀರಿಲ್ಲ ಎಂದು ರೈತರ ದಾರಿ ತಪ್ಪಿಸುವ ಕೆಲಸ ಮಾಡಿದೆ. ಜಲಸಂಪನ್ಮೂಲ ಸಚಿವರು,ಉಸ್ತುವಾರಿ ಮಂತ್ರಿಗಳು , ಅಧಿಕಾರಿಗಳು ಸ್ಥಳಕ್ಕೆ ಬಂದು ರೈತರಿಗೆ ನ್ಯಾಯ ಕೊಡುವವರೆಗೆ ಹೋರಾಟವನ್ನು ಕೈ ಬಿಡುವುದಿಲ್ಲ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಲಾಯಿತು.
ಜನತಾದಳ ಪಕ್ಷ ರೈತರ ಪಕ್ಷ. ರೈತರಿಗೆ ಅನ್ಯಾಯವಾಗಲು ನಾವು ಬಿಡುವುದಿಲ್ಲ. ಕೊನೆಯ ಉಸಿರು ಇರುವವರೆಗೆ ರೈತರಿಗಾಗಿ ಹೋರಾಟ ಮಾಡುತ್ತೇನೆ ಎಂದು ನಿಖಿಲ್ ಕುಮಾರಸ್ವಾಮಿ ಅವರು ಹೇಳಿದರು.
ರಾಜ್ಯ ರಾಜಕೀಯದಲ್ಲಿ ಸ್ಫೋಟಕ ಬೆಳವಣಿಗೆ; ಸಿಎಂ ಬದಲಾವಣೆ ಸುಳಿವು ಕೊಟ್ಟ ಎಚ್ಡಿಕೆ
ಪ್ರತಿಭಟನೆಯಲ್ಲಿ ಮಾಜಿ ಸಚಿವರಾದ ಹನುಮಂತಪ್ಪ ಆಲ್ಕೋಡ ಅವರು, ಸುರೇಶ್ ಬಾಬು , ಶರಣಗೌಡ ಕಂದಕೂರು, ನೇಮಿರಾಜ್ ನಾಯ್ಕ್ , ಕರೆಮ್ಮ ಜೆ. ನಾಯ್ಕ್ , ಜೆ.ಕೆ. ಕೃಷ್ಣ ರೆಡ್ಡಿ, ರಾಜಾ ವೆಂಕಟಪ್ಪ ನಾಯಕ್ ಅವರು, ಸಿ.ವಿ. ಚಂದ್ರಶೇಖರ್, ಮಹಾಂತೇಶ್ ಪಾಟೀಲ್, ಸಿದ್ದು ಬಂಡಿ ಸೇರಿದಂತೆ ಪಕ್ಷದ ಪ್ರಮುಖರು ಹಾಗೂ ಸಹಸ್ರಾರು ಸಂಖ್ಯೆಯಲ್ಲಿ ರೈತರು, ಮುಖಂಡರು ಭಾಗಿಯಾಗಿದ್ದರು.