ಹಿರಿಯೂರು, ಜ.11 : ಚಿತ್ರದುರ್ಗ (chitradurga) ಜಿಲ್ಲೆ ಹಿರಿಯೂರು ತಾಲೂಕಿನ ಬಳಿ ಇನ್ನೊಂದು ಭೀಕರ ಅಪಘಾತ (Road Accident) ಸಂಭವಿಸಿದೆ. ಹಿಂಡಸಕಟ್ಟೆ ಬಳಿ ಲಾರಿ ಹಾಗೂ ಕಾರು ಮುಖಾಮುಖಿ ಡಿಕ್ಕಿಯಾಗಿ ಕಾರಿನಲ್ಲಿದ್ದ ನಾಲ್ವರು ಪ್ರಯಾಣಿಕರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ನಡೆದಿದೆ. ಹಿರಿಯೂರು ಕೊಟ್ಟಿಗೆ ಮೂಲದ ವಿಶಾಲ್ (24) ಯಶವಂತ (22) ನಂಜುಂಡಿ (22) ರಾಹುಲ್ (19) ಮೃತರು ಎಂದು ಗೊತ್ತಾಗಿದೆ.
ಕಾರು ಮೈಸೂರು ಕಡೆಯಿಂದ ಹಿರಿಯೂರಿನತ್ತ ಬರುತ್ತಿತ್ತು. ಲಾರಿ ಮೈಸೂರು ಕಡೆಗೆ ತೆರಳುತ್ತಿತ್ತು. ಯುವಕರ ತಂಡ ಹಳ್ಳಿಯೊಂದರಲ್ಲಿ ಊಟ ಮುಗಿಸಿಕೊಂಡು ಸ್ವಿಫ್ಟ್ ಡಿಸೈರ್ ಕಾರಿನಲ್ಲಿ ಪಟ್ಟಣದ ಕಡೆಗೆ ಬರುವಾಗ ಘಟನೆ ನಡೆದಿದೆ. ಡಿಕ್ಕಿಯ ರಭಸಕ್ಕೆ ಕಾರು ಸಂಪೂರ್ಣವಾಗಿ ಜಖಂಗೊಂಡಿದೆ. ಹಿರಿಯೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇತ್ತೀಚೆಗೆ ಹಿರಿಯೂರು ಬಳಿಯೇ ಹೆದ್ದಾರಿಯಲ್ಲಿ ಕಂಟೈನರ್ ಡಿಕ್ಕಿಯಾಗಿ ಖಾಸಗಿ ಸ್ಲೀಪರ್ ಬಸ್ ಹೊತ್ತಿ ಉರಿದು ಏಳು ಮಂದಿ ಸಜೀವ ದಹನಗೊಂಡಿದ್ದರು.
ಗುಂಡಿಗೆ ಬಿದ್ದ ಕಾರು: ಒಬ್ಬ ಸಾವು, ನಾಲ್ವರಿಗೆ ಗಾಯ
ಚಾಲಕನ ನಿಯಂತ್ರಣ ತಪ್ಪಿ ಹೊಂಡಾ ಸಿಟಿ ಕಾರು ಗುಂಡಿಗೆ ಬಿದ್ದ ಪರಿಣಾಮ ಕಾರಿನಲ್ಲಿದ್ದ ಓರ್ವ ವ್ಯಕ್ತಿ ಸಾವನ್ನಪ್ಪಿದ್ದು, ನಾಲ್ವರಿಗೆ ಗಂಭೀರ ಗಾಯಗಳಾಗಿರುವ ಘಟನೆ ಕೋಲಾರದಲ್ಲಿ ನಡೆದಿದೆ. ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕು ಕಪ್ಪಲ್ಲಿ ಗ್ರಾಮದ ಬಳಿ ಘಟನೆ ನಡೆದಿದ್ದು, ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿಯ ಕುಶಾಲ್ (25) ಮೃತ ಯುವಕ.
ಓರ್ವ ಯುವತಿ ಸೇರಿ ನಾಲ್ವರಿಗೆ ಗಂಭೀರ ಗಾಯಗಳಾಗಿದ್ದು, ಗಾಯಾಳುಗಳು ಕೋಲಾರದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗಿದೆ. ಇನ್ನು ಚಿಂತಾಮಣಿಯಿಂದ ಲಕ್ಷ್ಮೀಪುರ ಕ್ರಾಸ್ ಬಳಿ ರೆಸ್ಟೋರೆಂಟ್ಗೆ ತೆರಳಿ ಬಳಿಕ ವಾಪಸ್ ಆಗುವ ವೇಳೆ ಘಟನೆ ನಡೆದಿದೆ.