ಬೆಂಗಳೂರು: ಜಮ್ಮು-ಕಾಶ್ಮೀರದ ಪಹಲ್ಗಾಮ್ನಲ್ಲಿ ಪ್ರವಾಸಿಗರ ಮೇಲೆ ನಡೆದ ಭಯೋತ್ಪಾದಕರ ದಾಳಿಯಲ್ಲಿ (Pahalgam Terror Attack) ಶಿವಮೊಗ್ಗದ ಉದ್ಯಮಿಯೊಬ್ಬರು ಮೃತಪಟ್ಟಿದ್ದಾರೆ. ಪತ್ನಿ ಹಾಗೂ ಮಗನ ಕಣ್ಣೆದುರೇ ಉದ್ಯಮಿ ಮಂಜುನಾಥ್ ಅವರನ್ನು ಉಗ್ರರು ಕೊಂದಿದ್ದಾರೆ. ಈ ವೇಳೆ ನನ್ನ ಹಾಗೂ ಮಗನನ್ನೂ ಕೊಂದುಬಿಡಿ ಎಂದು ಮಂಜುನಾಥ್ ಪತ್ನಿ ಪಲ್ಲವಿ ಹೇಳಿದಾಗ, ನಿಮ್ಮನ್ನು ಕೊಲ್ಲಲ್ಲ, ಹೋಗಿ ಮೋದಿಗೆ ಹೇಳಿ ಎಂದು ಉಗ್ರರು ಹೇಳಿರುವುದಾಗಿ ತಿಳಿದುಬಂದಿದೆ.
ಹೌದು, ಈ ಬಗ್ಗೆ ಉದ್ಯಮಿ ಮಂಜುನಾಥ್ ಅವರ ಪತ್ನಿ ಪಲ್ಲವಿ ಮಾಹಿತಿ ಹಂಚಿಕೊಂಡಿದ್ದಾರೆ. ಏ.19ರಂದು ಪ್ರವಾಸಕ್ಕೆ ಹೋಗಿದ್ದೆವು. ನಮ್ಮ ಕಣ್ಣೆದುರಿಗೇ ಪತಿಯ ತಲೆಗೆ ಗುಂಡಿಟ್ಟು ಕೊಂದರು. ನೀವು ಹಿಂದುಗಳಾ ಎಂದು ಕೇಳಿ ಗಂಡಸರನ್ನು ಕೊಂದಿದ್ದಾರೆ. ಪತಿಯನ್ನು ಕೊಲ್ಲುವಾಗ ನನ್ನ ಹಾಗೂ ಮಗನನ್ನು ಕೊಂದುಬಿಡಿ ಎಂದು ನಾವು ಉಗ್ರರಿಗೆ ಹೇಳಿದೆವು. ಆಗ ಅವರು ನಿಮ್ಮನ್ನು ಕೊಲ್ಲಲ್ಲ, ಹೋಗಿ ಮೋದಿಗೆ ಹೇಳಿ ಎಂದರು. ನನ್ನ ಪತಿ ಮೃತದೇಹವನ್ನು ಶಿವಮೊಗ್ಗಕ್ಕೆ ಸಾಗಿಸಲು ರಾಜ್ಯ ಸರ್ಕಾರ ಫ್ಲೈಟ್ ವ್ಯವಸ್ಥೆ ಮಾಡಬೇಕು ಎಂದು ಮನವಿ ಮಾಡಿದ್ದಾರೆ.
ಇನ್ನು ರಾಜ್ಯದ ಪ್ರವಾಸಿಗರು ಸಂಕಷ್ಟದಲ್ಲಿರುವ ಹಿನ್ನೆಲೆಯಲ್ಲಿ ನವದೆಹಲಿಯ ಕರ್ನಾಟಕ ಭವನದಲ್ಲಿರುವ ಅಧಿಕಾರಿಗಳ ತಂಡವನ್ನು ಜಮ್ಮು ಮತ್ತು ಕಾಶ್ಮೀರಕ್ಕೆ ತೆರಳಲು ರಾಜ್ಯ ಸರ್ಕಾರ ಸೂಚಿಸಿದೆ. ಸಿಎಂ ಸಿದ್ದರಾಮಯ್ಯ ನೇತೃತ್ವದ ಸಭೆಯಲ್ಲಿ ಈ ಬಗ್ಗೆ ತೀರ್ಮಾನ ಕೈಗೊಳ್ಳಲಾಗಿದೆ.
ಈ ಬಗ್ಗೆ ಸಚಿವ ಎಚ್.ಕೆ.ಪಾಟೀಲ್ ಪ್ರತಿಕ್ರಿಯಿಸಿ, ಅಧಿಕಾರಿಗಳ ತಂಡ ಜಮ್ಮು ಮತ್ತು ಕಾಶ್ಮೀರಕ್ಕೆ ತೆರಳಲಿದೆ. ಶಿವಮೊಗ್ಗ ನಿವಾಸಿ ಮೃತದೇಹವನ್ನು ಇಲ್ಲಿಗೆ ತೆಗೆದುಕೊಂಡು ಬರಲು ಸರ್ಕಾರ ವ್ಯವಸ್ಥೆ ಮಾಡಲಿದೆ ಎಂದು ಭರವಸೆ ನೀಡಿದ್ದಾರೆ.
ಈ ಸುದ್ದಿಯನ್ನೂ ಓದಿ | Pahalgam Terror Attack: ಓರ್ವ ಪ್ರವಾಸಿಗ ಸಾವು, ದಾಳಿ ಹೊಣೆ ಹೊತ್ತ ಲಷ್ಕರ್ ಫ್ರಂಟ್ ಟಿಆರ್ಎಫ್