ಬೆಂಗಳೂರು: ಸಂಸದ ತೇಜಸ್ವಿ ಸೂರ್ಯ (Tejaswi Surya) ಮತ್ತು ಶಿವಶ್ರೀ ಸ್ಕಂದಪ್ರಸಾದ್ (Sivashree Skandaprasad) ದಂಪತಿ ಮುದ್ದಾದ ಅತಿಥಿಯೊಬ್ಬರನ್ನು ಮನೆಗೆ ಬರಮಾಡಿಕೊಂಡಿದ್ದಾರೆ. ಅತಿಥಿಯನ್ನು ಬರಮಾಡಿಕೊಳ್ಳುವ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ತೇಜಸ್ವಿ ಸೂರ್ಯ ಹಂಚಿಕೊಂಡಿದ್ದಾರೆ. ಇದ್ಯಾರು ಅಂತೀರಾ? ಅದೊಂದು ಮುದ್ದಾದ ಕರು. ಆಂಧ್ರಪ್ರದೇಶದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಈ ಕರುವನ್ನು ತೇಜಸ್ವಿಗೆ ಉಡುಗೊರೆಯಾಗಿ ನೀಡಲಾಗಿತ್ತು.
ಆಷಾಢ ಶುಕ್ರವಾರದಂದು ಸಂಸದ ತೇಜಸ್ವಿ ಸೂರ್ಯ ಮನೆಗೆ ಹೊಸ ಅತಿಥಿಯನ್ನು ಕರೆದುಕೊಂಡು ಬಂದಿದ್ದಾರೆ. ಮನೆಗೆ ಬಂದಿರುವ ಅತಿಥಿಯನ್ನು ಶಿವಶ್ರೀ ಚೆಂದದ ಹಾಡು ಹೇಳಿ ಬರಮಾಡಿಕೊಂಡಿದ್ದಾರೆ. ʼಶುಭ ಆಷಾಢ ಶುಕ್ರವಾರದಂದು, ನಮ್ಮ ಕುಟುಂಬಕ್ಕೆ ಹೊಸ ಸದಸ್ಯರನ್ನು ಸ್ವಾಗತಿಸಿದ್ದೇವೆ. ನಾವು ಕರುವನ್ನು ಗೌರಿ, ಲಕ್ಷ್ಮಿ, ರಾಧೆ ಸೇರಿದಂತೆ ಎಲ್ಲಾ ಹೆಸರುಗಳಿಂದ ಕರೆಯುತ್ತಿದ್ದೇವೆ. ಮನೆಗೆ ಆಗಮಿಸಿರುವ ಹೊಸ ಅತಿಥಿ ತುಂಬಾ ದೈವಿಕಳು. ಆಕೆ ಹಾಡುಗಳನ್ನು ಇಷ್ಟಪಡುತ್ತಾಳೆʼ ಎಂದು ತೇಜಸ್ವಿ ಸೂರ್ಯ ಇನ್ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ.
ಒಂದು ವಾರದ ಹಿಂದೆ ಆಂಧ್ರ ಪ್ರದೇಶದ ಕಾರ್ಯಕ್ರಮವೊಂದರಲ್ಲಿ ಮುದ್ದಾದ ಕರುವನ್ನು ತೇಜಸ್ವಿ ಸೂರ್ಯ ಅವರಿಗೆ ಉಡುಗೊರೆಯಾಗಿ ನೀಡಲಾಗಿತ್ತು. ಆಂಧ್ರ ಪ್ರದೇಶದ ಬಿಜೆಪಿ ನಾಯಕ ಎಂ. ವಂಶಿ ಕೃಷ್ಣ ಅವರ ಇದನ್ನು ಉಡುಗೊರೆಯನ್ನು ನೀಡಿದ್ದರು. ಈ ಉಡುಗೊರೆಯನ್ನು ನೀಡಿರುವ ವಂಶಿ ಕೃಷ್ಣ ಅವರಿಗೆ ತೇಜಸ್ವಿ ಸೂರ್ಯ ಧನ್ಯವಾದಗಳನ್ನು ಸಲ್ಲಿಸಿದ್ದಾರೆ.
ತೇಜಸ್ವಿ ಸೂರ್ಯ ಹಂಚಿಕೊಂಡಿರುವ ವಿಡಿಯೋ ವೈರಲ್ ಆಗಿದ್ದು, ಕರು ತುಂಬಾ ಮುದ್ದಾಗಿದೆ. ಗೌರಿ ಎಂದು ಹೆಸರಿಟ್ಟರೆ ಒಳ್ಳೆಯದು. ಕರು ನಿಜವಾಗಿಯೂ ದೈವಿಕ ಕಳೆಯನ್ನು ಹೊಂದಿದೆ ಎಂದು ನೆಟ್ಟಿಗರು ಕಮೆಂಟ್ ಮಾಡಿದ್ದಾರೆ. ಈವರೆಗೆ ಈ ವಿಡಿಯೋಗೆ 1.5 ಲಕ್ಷಕ್ಕೂ ಅಧಿಕ ವ್ಯೂವ್ ಬಂದಿವೆ.
ಇದನ್ನೂ ಓದಿ: Bengaluru-Tumkur Metro Project: ಸ್ಟುಪಿಡ್ ಐಡಿಯಾ; ತುಮಕೂರಿಗೆ ನಮ್ಮ ಮೆಟ್ರೋ ವಿಸ್ತರಣೆಗೆ ಸಂಸದ ತೇಜಸ್ವಿ ಸೂರ್ಯ ಆಕ್ಷೇಪ