ಬೆಂಗಳೂರು, ಮಾ.19: ಇಂದು ನಾಡಿನೆಲ್ಲೆಡೆ ಯುಗಾದಿ ಹಬ್ಬದ (Ugadi Festival) ಸಂಭ್ರಮ ಮನೆ ಮಾಡಿದೆ. ಬೆಂಗಳೂರಿನ (Bengaluru) ಮಾರುಕಟ್ಟೆಗಳಲ್ಲಿ ಇಂದು ಬೆಳ್ಳಂಬೆಳಿಗ್ಗೆಯಿಂದಲೇ ಹೂವು, ಹಣ್ಣು ಖರೀದಿಗಾಗಿ ಜನಸಾಗರವೇ ಹರಿದುಬಂದಿದ್ದು, ಹಬ್ಬದ ಕಳೆ ಕಳೆಗಟ್ಟಿದೆ. ಆದರೆ, ಈ ಹಬ್ಬದ ಸಂಭ್ರಮದ ನಡುವೆಯೂ ಗ್ರಾಹಕರಿಗೆ ಬೆಲೆ ಏರಿಕೆಯ (price hike) ಬಿಸಿ ಜೋರಾಗಿ ತಟ್ಟಿದೆ. ಹಬ್ಬಕ್ಕೆ ಅತಿ ಅವಶ್ಯಕವಾದ ಹೂವು ಮತ್ತು ಹಣ್ಣುಗಳ ಬೆಲೆ ಏಕಾಏಕಿ ಏರಿಕೆಯಾಗಿದ್ದು, ಜನಸಾಮಾನ್ಯರ ಜೇಬಿಗೆ ಕತ್ತರಿ ಬಿದ್ದಂತಾಗಿದೆ.
ಮಧ್ಯರಾತ್ರಿಯಿಂದಲೇ ಬೆಂಗಳೂರಿನ ಕೆ.ಆರ್ ಮಾರ್ಕೆಟ್ನಲ್ಲಿ ವ್ಯಾಪಾರ ಆರಂಭಗೊಂಡಿದ್ದು, ಬೆಂಗಳೂರು ಅಕ್ಕಪಕ್ಕದ ಹೂವಿನ ಬೆಳೆಗಾರರು ನೇರ ಮಾರಾಟ ಮಾಡುತ್ತಿದ್ದಾರೆ. ಸಾವಿರಾರು ಸಂಖ್ಯೆಯಲ್ಲಿ ಬೆಂಗಳೂರಿಗರು ಆಗಮಿಸಿದ್ದು, ಹೂವು, ಹಣ್ಣು, ಮಾವಿನ ಸೊಪ್ಪು, ಬೇವಿನಸೊಪ್ಪು ಖರೀದಿಸಲು ಮುಗಿಬಿದ್ದಿದ್ದಾರೆ. ನಗರದ ಪ್ರಮುಖ ವಾಣಿಜ್ಯ ಕೇಂದ್ರಗಳಾದ ಕೆ.ಆರ್. ಮಾರುಕಟ್ಟೆ, ಗಾಂಧಿ ಬಜಾರ್ ಹಾಗೂ ಮಲ್ಲೇಶ್ವರಂನಲ್ಲಿ ಹೂವುಗಳ ದರ ದುಪ್ಪಟ್ಟಾಗಿದೆ.
ದರ:
ಮಲ್ಲಿಗೆ: 1,500- 1,800 ರೂ.
ಮಲ್ಲಿಗೆ ಹೂವಿನ ಹಾರ: 300-500 ರೂ.
ಸೇವಂತಿಗೆ: 200-250 ರೂ.
ಗುಲಾಬಿ: 250 ರೂ.
ಸೇವಂತಿಗೆ ₹200
ಚೆಂಡು ಹೂ: 40-50 ರೂ.
ದಾಳಿಂಬೆ ₹240
ಏಲಕ್ಕಿ ಬಾಳೆ ₹80
ಒಂದು ಕಟ್ಟು ಬೇವಿನ ಸೊಪ್ಪು: 20 ರೂ.
ಒಂದು ಕಟ್ಟು ಮಾವಿನ ಸೊಪ್ಪು: 25 ರೂ.
ಹಬ್ಬದ ವಿಶೇಷವಾದ ‘ಬೇವು-ಬೆಲ್ಲ’ಕ್ಕೂ ಭಾರಿ ಬೇಡಿಕೆ ವ್ಯಕ್ತವಾಗಿದ್ದು, ಬೇವಿನ ಸೊಪ್ಪು ಮತ್ತು ಮಾವಿನ ಸೊಪ್ಪಿನ ದರವೂ ಏರಿಕೆ ಕಂಡಿದೆ. ಅಚ್ಚರಿಯ ಬೆಳವಣಿಗೆಯಾಗಿ ತರಕಾರಿ ಬೆಲೆಯಲ್ಲಿ ಅಂತಹ ದೊಡ್ಡ ಏರಿಕೆ ಕಂಡುಬಂದಿಲ್ಲವಾದರೂ, ಹೂವು-ಹಣ್ಣುಗಳ ಬೆಲೆ ಗ್ರಾಹಕರ ಬಜೆಟ್ ಅನ್ನು ತಲೆಕೆಳಗಾಗಿಸಿದೆ.
Ugadi 2026 Do's and Don'ts: ಯುಗಾದಿ ದಿನ ಈ ತಪ್ಪುಗಳು ಮಾಡಿದ್ರೆ ದುರದೃಷ್ಟ ಕಾಡೀತು ಎಚ್ಚರಿಕೆ!
ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧದ ಹಿನ್ನೆಲೆಯಲ್ಲಿ ಅಡುಗೆ ಎಣ್ಣೆಯ ಬೆಲೆಯಲ್ಲಿ ಏರಿಕೆ ಕಂಡಿದೆ. ಇದರೊಂದಿಗೆ ಹಬ್ಬದ ಪ್ರಮುಖ ಖಾದ್ಯವಾದ ‘ಹೋಳಿಗೆ’ಗೆ ಬೇಕಾದ ಬೆಲ್ಲ ಮತ್ತು ಮೈದಾ ಬೆಲೆಯೂ ಏರಿರುವುದು ಹಬ್ಬದೂಟದ ರುಚಿಗೆ ತುಸು ಕಹಿ ಉಣಿಸಿದಂತಾಗಿದೆ. ಬೆಲೆ ಏರಿಕೆಯ ನಡುವೆಯೂ ಮೆಜೆಸ್ಟಿಕ್, ಚಿಕ್ಕಪೇಟೆ ಮತ್ತು ವಿವಿಧ ಮಾಲ್ಗಳು ಜನರಿಂದ ಕಿಕ್ಕಿರಿದು ತುಂಬಿದ್ದು, ಜನರು ಸಂಪ್ರದಾಯದಂತೆ ಹಬ್ಬ ಆಚರಿಸಲು ಉತ್ಸುಕರಾಗಿದ್ದಾರೆ.