ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ಪೊಲೀಸ್ ಠಾಣೆಯ (Haliyal Police Station) ಪಿಎಸ್ಐಗಳ ಪೋಸ್ಟಿಂಗ್ ಹಾಗೂ ಲಂಚದ ವ್ಯವಹಾರಕ್ಕೆ ಸಂಬಂಧಿಸಿದಂತೆ ಆಡಿಯೊ ವೈರಲ್ ಅದ ಬೆನ್ನಲ್ಲಿಯೇ ಮೂವರು ಪಿಎಸ್ಐಗಳನ್ನು ಅಮಾನತು ಮಾಡಲಾಗಿದೆ.
ಲಂಚದ ಆಡಿಯೊ ಮಾಧ್ಯಮಗಳಲ್ಲಿ ಪ್ರಸಾರವಾಗಿದ್ದರಿಂದ ಎಚ್ಚೆತ್ತಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, ಗಂಭೀರ ಆರೋಪ ಎದುರಿಸುತ್ತಿದ್ದ ಮೂರು ಪಿಎಸ್ಐಗಳನ್ನು ಅಮಾನತುಗೊಳಿಸಿ ಆದೇಶಿಸಿದ್ದಾರೆ.
ಆಡಿಯೋದಲ್ಲಿ ಏನಿದೆ?
ಹಳಿಯಾಳ ಠಾಣೆಯ ಕಾನೂನು ಮತ್ತು ಸುವ್ಯವಸ್ಥೆ ಪಿಎಸ್ಐ ಕಿರಣ್ ಪಾಟೀಲ್, ಕ್ರೈಂ ಪಿಎಸ್ಐ ಕೃಷ್ಣ ಹಾಗೂ ಈ ಹಿಂದೆ ಹಳಿಯಾಳದಲ್ಲಿ ಪಿಎಸ್ಐ ಆಗಿ ಕಾರ್ಯನಿರ್ವಹಿಸಿ ವರ್ಗಾವಣೆಗೊಂಡಿದ್ದ ವಿನೋದ್ ರೆಡ್ಡಿ ಎಂಬುವವರು ಮಾತನಾದ್ದಾರೆ ಎನ್ನಲಾದ ಆಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಠಾಣೆಯ ಕಾನೂನು ಮತ್ತು ಸುವ್ಯವಸ್ಥೆ ಪಿಎಸ್ಐ ಸ್ಥಾನಕ್ಕಾಗಿ ನಡೆದ ಹಣದ ಭಾರಿ ವ್ಯವಹಾರ, ಸ್ಟೇಷನ್ ಹಪ್ತಾ ಹಾಗೂ ಪೊಲೀಸ್ ಇಲಾಖೆಯಲ್ಲಿ ಮೇಲಾಧಿಕಾರಿಗಳಿಗೆ ಮುಟ್ಟಿಸಬೇಕಾದ 'ಮಂತ್ಲಿ' ಮಾಮೂಲಿ ಬಗ್ಗೆ ಈ ಮೂವರು ಪಿಎಸ್ಐಗಳು ಚರ್ಚೆ ನಡೆಸಿದ್ದರು. ಈ ಆಡಿಯೋ ಸಂಭಾಷಣೆ ಪೊಲೀಸ್ ಇಲಾಖೆಯಲ್ಲಿ ತೀವ್ರ ಸಂಚಲನ ಮೂಡಿಸಿತ್ತು.
ತನಿಖೆಗೆ ಆದೇಶಿಸಿದ್ದ ಎಸ್ಪಿ
ಪೊಲೀಸ್ ಇಲಾಖೆಯ ಘನತೆಗೆ ಕುತ್ತು ತಂದಿರುವ ಈ ಆಡಿಯೋ ವೈರಲ್ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು (SP), ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕೃಷ್ಣಮೂರ್ತಿ ಅವರ ನೇತೃತ್ವದಲ್ಲಿ ಸಮಗ್ರ ತನಿಖೆಗೆ ಆದೇಶಿಸಿದ್ದರು.
ರೈಲು ಸೀಟ್ನ ಕೆಳಗೆ ಮಹಿಳೆಯ ಮೃತದೇಹ ಪತ್ತೆ; ನಿಗೂಢ ಸಾವಿನಿಂದ ಬೆಚ್ಚಿಬಿದ್ದ ಧಾರವಾಡ
ಎಡಿಎಸ್ಪಿ ನೇತೃತ್ವದ ತನಿಖಾ ತಂಡವು ನಡೆಸಿದ ತನಿಖೆಯಲ್ಲಿ ಪಿಎಸ್ಐಗಳ ಅಕ್ರಮ ಮತ್ತು ಕರ್ತವ್ಯಲೋಪ ಮೇಲ್ನೋಟಕ್ಕೆ ಸಾಬೀತಾಗಿದೆ. ತನಿಖಾ ವರದಿಯ ಆಧಾರದ ಮೇಲೆ ಎಚ್ಚೆತ್ತ ಉತ್ತರ ಕನ್ನಡ ಜಿಲ್ಲಾ ಎಸ್ಪಿ ದೀಪನ್ ಎಂ.ಎನ್. ಅವರು, ಕರ್ತವ್ಯ ಲೋಪ ಹಾಗೂ ಇಲಾಖೆಗೆ ಕಳಂಕ ತಂದ ಹಿನ್ನೆಲೆಯಲ್ಲಿ ಹಳಿಯಾಳ ಪಿಎಸ್ಐ ಕಿರಣ್ ಪಾಟೀಲ್, ಕ್ರೈಂ ಪಿಎಸ್ಐ ಕೃಷ್ಣ ಹಾಗೂ ವಿನೋದ್ ರೆಡ್ಡಿ ಅವರನ್ನು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.