ಗೋಕರ್ಣ: ತುಪ್ಪ ಹೃದಯಕ್ಕೆ ಹಿತ ಎಂಬುದು ಪ್ರಾಚೀನ ಭಾರತದ ಅಭಿಮತವಾದರೆ, ತುಪ್ಪದಿಂದ ಕೊಬ್ಬು ಹೆಚ್ಚಾಗಿ ಹೃದಯಕ್ಕೆ ತೊಂದರೆಯಾಗಬಹುದು ಎಂಬುದು ಆಧುನಿಕರ ವಾದವಾಗಿದೆ. ಜರ್ಸಿ ದನದ ತುಪ್ಪ, ವನಸ್ಪತಿ, ಕಲಬೆರೆಕೆ ತುಪ್ಪವನ್ನು ಸೇವಿಸಿ, ದೇಸಿ ಗೋವಿನ ತುಪ್ಪವನ್ನೂ ಸೇರಿಸಿಕೊಂಡು ತುಪ್ಪ ಆರೋಗ್ಯಕ್ಕೆ ಹಾನಿಕರ ಎಂದು ಹೇಳುವುದು ತಪ್ಪು ಎಂದು ಶ್ರೀರಾಮಚಂದ್ರಾಪುರ ಮಠದ ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು (Raghaveshwara Bharati Swamiji) ಹೇಳಿದರು.
ಗೋಕರ್ಣದ ಅಶೋಕೆಯ ಮೂಲಮಠದ ಪರಿಸರದಲ್ಲಿ ನಡೆಯುತ್ತಿರುವ 'ಅನ್ನಬ್ರಹ್ಮ ಚಾತುರ್ಮಾಸ್ಯ'ದ ಧರ್ಮಸಭೆಯಲ್ಲಿ ಭಾನುವಾರ 'ಅನ್ನಂ ಬ್ರಹ್ಮ' ಮಾಲಿಕೆಯಲ್ಲಿ ಪ್ರವಚನ ಅನುಗ್ರಹಿಸಿದ ಶ್ರೀಗಳು, ತುಪ್ಪದ ಬಗ್ಗೆ ಅಪಪ್ರಚಾರ ಹೆಚ್ಚಾಗಿದ್ದು, ತುಪ್ಪದಿಂದ ಕೊಬ್ಬು ಹೆಚ್ಚಾಗುತ್ತದೆ ಎಂಬ ತಪ್ಪು ಕಲ್ಪನೆ ಹಬ್ಬಿದೆ. ಇದರಿಂದಾಗಿ ಕೋಟ್ಯಂತರ ಜನರು ತುಪ್ಪವನ್ನು ದೂರವಿಟ್ಟಿದ್ದಾರೆ. ತುಪ್ಪದ ಕಲಬೆರೆಕೆ, ತುಪ್ಪದ ಮೂಲವಾದ ಗೋವಿನ ವರ್ಣಸಂಕರಗಳು ಬಹುದೊಡ್ಡ ಅಪಚಾರವಾಗಿದ್ದು, ಸಮಾಜ ಎಚ್ಚೆತ್ತುಕೊಳ್ಳಬೇಕು. ಪ್ರಕೃತಿ ನಮಗೆ ಕೊಟ್ಟಿರುವಂತದ್ದನ್ನು ನಾವು ಬಳಸದೇ ಇದ್ದರೆ ಆ ವಸ್ತುಗಳು ನಮ್ಮಿಂದ ದೂರವಾಗುತ್ತಾ ಸಾಗುತ್ತದೆ. ಬಳಸುವ ಜನರು ಇದ್ದಾಗ ಮಾತ್ರ ಪ್ರಕೃತಿಯು ಸುವಸ್ತುಗಳನ್ನು ಒದಗಿಸಿಕೊಡುತ್ತದೆ ಎಂದು ಅಭಿಪ್ರಾಯಪಟ್ಟರು.

ಭಾಗವತದಲ್ಲಿ ಶ್ರೀಕೃಷ್ಣನ ದಿನಚರಿಯ ಉಲ್ಲೇಖವಿದ್ದು, ಪ್ರಾತಃಕಾಲದಲ್ಲಿ ಶೌಚಾದಿಗಳ ನಂತರ ತುಪ್ಪದಲ್ಲಿ ಮುಖವನ್ನು ನೋಡಿಕೊಂಡ ಎಂಬ ವಿವರ ಇದೆ. ಭಾರತೀಯವಾದ ಹಲವಾರು ಪ್ರಾಚೀನ ಗ್ರಂಥಗಳಲ್ಲಿಯೂ ಪ್ರಾತಃ ಕಾಲ ತುಪ್ಪದಲ್ಲಿ ಮುಖವನ್ನು ನೋಡಿ ಕೊಳ್ಳುವುದು ಪರಮ ಶುಭ ಎಂದು ಹೇಳಲಾಗಿದ್ದು, ಮಂಗಲ ದ್ರವ್ಯದ ದರ್ಶನದಿಂದ ಜೀವನವು ಮಂಗಲಮಯವಾಗುತ್ತದೆ. ಸುಗಂಧ ಮನಸ್ಸನ್ನು ಸಂತುಷ್ಟಗೊಳಿಸುವ ಜೊತೆಗೆ ಸತ್ವಗುಣವನ್ನೂ ಜಾಗೃತಗೊಳಿಸುತ್ತದೆ ಎಂದರು.
ಹಾಲಿನಿಂದ ಮೊಸರು, ಮೊಸರಿನಿಂದ ಬೆಣ್ಣೆ, ಬೆಣ್ಣೆಯಿಂದ ತುಪ್ಪ ಎಂಬಂತೆ ಅನೇಕ ಸಂಸ್ಕಾರದಿಂದ ಪಾರಂಪರಿಕವಾಗಿ ತುಪ್ಪ ಬರುತ್ತದೆ. ಆದರೆ ಇಂದು ಹಾಲಿನ ಕೆನೆಯನ್ನು ದಿನಗಳ ಕಾಲ ತಂಪು ಬೆಟ್ಟಿಗೆಯಲ್ಲಿ ಸಂಗ್ರಹಿಸುತ್ತಾ ಹೋಗಿ, ಕೆನೆಯಿಂದ ನೇರವಾಗಿ ತುಪ್ಪವನ್ನು ಮಾಡುವ ಕ್ರಮ ಜನಪ್ರಿಯವಾಗಿದೆ. ಇದು ಸರಿಯಲ್ಲ ಹಾಗೂ ಅದು ನಿಜವಾದ ತುಪ್ಪವೂ ಅಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ವೇದ ವಾಙ್ಮಯದಲ್ಲಿ ಅತೀ ಹೆಚ್ಚು ಉಲ್ಲೇಖಿತವಾಗಿರುವ ವಸ್ತು ತುಪ್ಪ. ಇದು ತುಪ್ಪದ ಮಹತ್ವವನ್ನು ತಿಳಿಸುತ್ತದೆ. ಗೃಹಸ್ಥನಾದವನು ತುಪ್ಪವಿಲ್ಲದ ಊಟವನ್ನು ಸ್ವೀಕರಿಸಬಾರದು ಎಂಬ ನಿಯಮವಿದ್ದು, ತುಪ್ಪದ ಬಳಕೆಯಿಂದ ಜಠರಾಗ್ನಿಯೂ ವೃದ್ಧಿಯಾಗುತ್ತದೆ ಹಾಗೂ ಬುದ್ಧಿಯೂ ವೃದ್ಧಿಯಾಗುತ್ತದೆ. ಆಯಸ್ಸಿಗೂ ತುಪ್ಪಕ್ಕೂ ವಿಶೇಷವಾದ ಸಂಬಂಧವಿದ್ದು, ಶಂಕರಾಚಾರ್ಯರು ತಮ್ಮ ಕೃತಿಯಲ್ಲಿ ತುಪ್ಪವನ್ನೇ ಆಯಸ್ಸು ಎಂಬುದಾಗಿ ಉಲ್ಲೇಖಿಸಿದ್ದಾರೆ ಎಂದರು.
ಮೈಸೂರು, ದಾವಣಗೆರೆ, ಹರಿಹರ ಹವ್ಯಕ ವಲಯಗಳ ಪರವಾಗಿ ಶಂಕರನಾರಾಯಣ ಶಾಸ್ತ್ರಿ ಗುರುಭಿಕ್ಷಾ ಸೇವೆ ಸಮರ್ಪಿಸಿದರು. ರಾಧೇಶ್ಯಾಮ್ ಅಗರ್ವಾಲ್, ಮುಂಟು ಅಗರ್ವಾಲ್, ಅರುಣ್ ಹೆಗಡೇ ದಾವಣಗೆರೆ, ಡಾ. ಎಸ್. ಆರ್. ಹೆಗಡೆ ದಾವಣಗೆರೆ, ಗೋಕರ್ಣದ ಪೋಲಿಸ್ ಅಧಿಕಾರಿ ಅನಿಲ್ ಕುಮಾರ್, ನಾಗರಾಜ ಪೆದಮಲೆ ದಂಪತಿಗಳು ದಿನಪ್ರಧಾನರಾಗಿ ಉಪಸ್ಥಿತರಿದ್ದರು.
ಬದಲಾವಣೆ ನಮ್ಮ ಮನೆಯಿಂದಲೇ ಆರಂಭವಾಗಲಿ: ರಾಘವೇಶ್ವರ ಭಾರತೀ ಶ್ರೀ
ದೇಶಭಂಡಾರಿ ಸಮಾಜದಿಂದ ಸ್ವರ್ಣಪಾದುಕಾ ಪೂಜೆ: ಶ್ರೀಮಠಕ್ಕೆ ಪಾರಂಪರಿಕವಾಗಿ ನಡೆದುಕೊಳ್ಳುತ್ತಿರುವ ದೇಶಭಂಡಾರಿ ಸಮಾಜದಿಂದ ಗುರುಪರಂಪರೆಗೆ ಸ್ವರ್ಣಪಾದುಕಾ ಪೂಜೆ ಸಮರ್ಪಿತವಾಯಿತು. ಪಾದುಕಾ ಪೂಜೆ ಸ್ವೀಕರಿಸಿದ ಶ್ರೀಗಳು, ಸಮಾಜವನ್ನು ಆಶೀರ್ವದಿಸಿದರು. ಬಾಬು ಭಂಡಾರಿ ಸೇರಿದಂತೆ ಸಮಾಜದ ಪ್ರಮುಖರು ಉಪಸ್ಥಿತರಿದ್ದರು.