ಹೊಸಪೇಟೆ, ಫೆ.14: ಐತಿಹಾಸಿಕ ವಿಜಯನಗರದ ವೈಭವವನ್ನು ಸಾರುವ 'ಹಂಪಿ ಉತ್ಸವ - 2026' ರ (Hampi Utsav 2026) ಅಂಗವಾಗಿ ಹೊಸಪೇಟೆ ನಗರದ ವಿಜಯನಗರ ಕಾಲೇಜು ಮೈದಾನದಲ್ಲಿ ಶನಿವಾರ ಗಾಳಿಪಟ ಉತ್ಸವಕ್ಕೆ ಶಾಸಕ ಎಚ್.ಆರ್. ಗವಿಯಪ್ಪ ಚಾಲನೆ ನೀಡಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ವಿಜಯನಗರ ಜಿಲ್ಲಾ ಆಡಳಿತದ ಜಂಟಿ ಆಶ್ರಯದಲ್ಲಿ ಆಯೋಜಿಸಲಾಗಿರುವ ಈ ಕಾರ್ಯಕ್ರಮವು ನೋಡುಗರ ಕಣ್ಮನ ಸೆಳೆಯುತ್ತಿದೆ.
ಬೆಳಗ್ಗೆಯಿಂದಲೇ ಮೈದಾನದಲ್ಲಿ ನೂರಾರು ಗಾಳಿಪಟ ಪ್ರೇಮಿಗಳು ಜಮಾಯಿಸಿದ್ದು, ಆಕಾಶದಲ್ಲಿ ವಿವಿಧ ವಿನ್ಯಾಸದ ಹಾಗೂ ಬಣ್ಣ ಬಣ್ಣದ ಗಾಳಿಪಟಗಳು ಪೈಪೋಟಿಗೆ ಬಿದ್ದಂತೆ ಹಾರಾಡುತ್ತಿವೆ. ಮೈದಾನದಲ್ಲಿ ಜಮಾಯಿಸಿದ್ದ ಪ್ರವಾಸಿಗರು ಹಾಗೂ ಸ್ಥಳೀಯರು ಆಕಾಶದಲ್ಲಿ ತೇಲುತ್ತಿದ್ದ ಬೃಹತ್ ಗಾಳಿಪಟಗಳನ್ನು ನೋಡಿ ಸಂಭ್ರಮಿಸಿದರು.
ಬೆಂಗಳೂರಿನ ಕೈಟ್ ಕ್ಲಬ್, ಪಂಜಾಬ್, ಗುಜರಾತ್, ಒಡಿಶಾ ಆಂಧ್ರಪ್ರದೇಶ ಗಾಳಿಪಟ ಪಟುಗಳು ಹಾರಿಸಿದ ಬೃಹತ್ ಆಕೃತಿಗಳು ಈ ಬಾರಿಯ ಗಾಳಿಪಟ ಉತ್ಸವದ ವಿಶೇಷವಾಗಿದ್ದವು. ಹತ್ತಾರು ಅಡಿ ಉದ್ದದ ಕೆಂಪು ಬಣ್ಣದ ಆಕ್ಟೋಪಸ್, ಆಕಾಶದಲ್ಲಿ ಜಿಗಿಯುತ್ತಿರುವಂತೆ ಭಾಸವಾಗುತ್ತಿದ್ದ ಚಿರತೆ ಹಾಗೂ ಗಾಳಿಪಟಗಳು ಮಕ್ಕಳನ್ನು ವಿಶೇಷವಾಗಿ ಆಕರ್ಷಿಸಿದವು.
ಪ್ರತಿ ವರ್ಷದ ನವೆಂಬರ್ 3, 4, 5ರಂದು ಹಂಪಿ ಉತ್ಸವ ಆಯೋಜನೆ: ಸಿಎಂ ಸಿದ್ದರಾಮಯ್ಯ ಘೋಷಣೆ
ಗಾಳಿಪಟ ಉತ್ಸವದ ಚಾಲನೆ ವೇಳೆ ಜಿಲ್ಲಾಧಿಕಾರಿ ಕವಿತಾ.ಎಸ್. ಮನ್ನಿಕೇರಿ, ಉಪವಿಭಾಗಾಧಿಕಾರಿ ವಿವೇಕ್, ನಗರಸಭೆಯ ಅಧ್ಯಕ್ಷ ರೂಪೇಶ್ ಕುಮಾರ್, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಮನೋಹರ್, ನಗರ ಸಭೆ ಆಯುಕ್ತ ಶಿವಕುಮಾರ್, ಬೆಂಗಳೂರಿನ ಕೈಟ್ ಕ್ಲಬ್ನ ವಿ.ಕೆ. ರಾವ್ ಸೇರಿದಂತೆ ಮತ್ತಿತರು ಇದ್ದರು.