ಹೊಸಪೇಟೆ, ಫೆ.11: ಹಂಪಿಯ ಪವಿತ್ರ ತುಂಗಭದ್ರಾ ನದಿಗೆ ಗೌರವ ಸಲ್ಲಿಸಲು ಮತ್ತು ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಲು ತುಂಗಾರತಿ ಕಾರ್ಯಕ್ರಮವನ್ನು ಹಂಪಿ ಉತ್ಸವದ (Hampi Utsav) ಅಂಗವಾಗಿ ವಿರೂಪಾಕ್ಷೇಶ್ವರ ದೇವಸ್ಥಾನದ ಹತ್ತಿರವಿರುವ ತುಂಗಭದ್ರಾ ನದಿಯ ಸ್ನಾನಘಟ್ಟದ ಬಳಿ ಬುಧವಾರ ಸಂಜೆ ನಡೆಯಿತು.
ಅರ್ಚಕರು ಸಾಲಾಗಿ ನಿಂತು, ಮಂತ್ರಘೋಷಗಳ ನಡುವೆ ದೊಡ್ಡದಾದ ಕಂಚಿನ ದೀಪಗಳಿಂದ ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿ, ಮಾಜಿ ಶಾಸಕರು, ಅಧಿಕಾರಿಗಳು ನದಿಗೆ ಆರತಿ ಬೆಳಗಿದರು. ನದಿಯ ನೀರಿನಲ್ಲಿ ಪ್ರತಿಫಲಿಸುವ ದೀಪದ ಬೆಳಕು, ಮಂತ್ರಗಳ ಪಠಣ ಮತ್ತು ಶಂಖನಾದವು ಭಕ್ತರಲ್ಲಿ ಹಾಗೂ ಪ್ರವಾಸಿಗರಲ್ಲಿ ಭಕ್ತಿಭಾವ ಮೂಡಿಸಿತು.
ಹಂಪಿ ಉತ್ಸವದ ಸಮಯದಲ್ಲಿ ಈ ತುಂಗಾರತಿಗೆ ವಿಶೇಷ ಪ್ರಾಮುಖ್ಯತೆ ಇರುತ್ತದೆ. ಸಾವಿರಾರು ಪ್ರವಾಸಿಗರು ಈ ದೃಶ್ಯವನ್ನು ನೋಡಲು ಸೇರುತ್ತಾರೆ. ತುಂಗಾರತಿಯಲ್ಲಿ ಭಾಗವಹಿಸಿದ ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹ್ಮದ್ ಖಾನ್, ಸತತವಾಗಿ ಮೂರನೇ ಹಂಪಿ ಉತ್ಸವವನ್ನು ಯಶಸ್ವಿಯಾಗಿ ಆಚರಿಸಲಾಗುತ್ತಿದೆ. ಪ್ರತಿ ವರ್ಷ ವಿಶೇಷವಾಗಿ ಉತ್ಸವ ಆಚರಣೆ ಮಾಡಲಾಗುತ್ತಿದೆ ಎಂದು ತಿಳಿಸಿದರು.
Hampi Utsav 2026: ಫೆ.13ರಿಂದ ಮೂರು ದಿನಗಳ ಕಾಲ ಅದ್ಧೂರಿಯಾಗಿ 'ಹಂಪಿ ಉತ್ಸವ-2026'
ಈ ಸಂದರ್ಭದಲ್ಲಿ ಮಾಜಿ ಶಾಸಕ ಭೀಮಾ ನಾಯ್ಕ್, ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ, ಸಿಇಓ ಮಹ್ಮದ್ ಅಲಿ ಅಕ್ರಂ ಷಾ, ಜಿಲ್ಲಾ ಎಸ್ಪಿ ಜಾಹ್ನವಿ, ಎಸಿ ವಿವೇಕಾನಂದ ಹಾಗೂ ಇತರೆ ಗಣ್ಯರು ಉಪಸ್ಥಿತರಿದ್ದರು.