ವಿದೇಶ ಫ್ಯಾಷನ್‌ ಲೋಕ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್‌ ಹೌಸ್‌ ಸಂಪಾದಕೀಯ

IND vs AUS: ʻದುಬೈ ನಮ್ಮ ತವರು ಅಂಗಣವಲ್ಲʼ-ಟೀಕಾಕಾರರಿಗೆ ರೋಹಿತ್‌ ಶರ್ಮಾ ತಿರುಗೇಟು!

Rohit sharma statement: 2025ರ ಐಸಿಸಿ ಚಾಂಪಿಯನ್ಸ್‌ ಟ್ರೋಫಿ ಟೂರ್ನಿಯನ್ನು ಆಡಲು ಪಾಕಿಸ್ತಾನಕ್ಕೆ ಪ್ರಯಾಣ ಬೆಳೆಸದೆ, ತನ್ನ ಎಲ್ಲಾ ಪಂದ್ಯಗಳನ್ನು ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಆಡುತ್ತಿರುವ ಭಾರತ ತಂಡವನ್ನು ಹಲವರು ಟೀಕಿಸುತ್ತಿದ್ದಾರೆ. ಇದೀಗ ಟೀಮ್‌ ಇಂಡಿಯಾ ನಾಯಕ ರೋಹಿತ್ ಶರ್ಮಾ ಟೀಕಾಕಾರರಿಗೆ ತಿರುಗೇಟು ನೀಡಿದ್ದಾರೆ.

'ದುಬೈ ನಮ್ಮ ತವರು ಅಂಗಣವಲ್ಲ'-ರೋಹಿತ್‌ ಶರ್ಮಾ ತಿರುಗೇಟು!

ದುಬೈನಲ್ಲಿ ಮಾತ್ರ ಆಡುತ್ತಿರುವ ಬಗ್ಗೆ ರೋಹಿತ್‌ ಶರ್ಮಾ ಹೇಳಿಕೆ.

Profile Ramesh Kote Mar 3, 2025 9:14 PM

ನವದೆಹಲಿ: ಭಾರತ ತಂಡ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ತನ್ನ ಎಲ್ಲಾ ಪಂದ್ಯಗಳನ್ನು ದುಬೈನ ಇಂಟರ್‌ನ್ಯಾಷನಲ್‌ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ಲ್ಲಿ ಆಡುವುದರಿಂದ ಲಾಭ ಪಡೆಯುತ್ತಿದೆ ಎಂಬ ಕಲ್ಪನೆಯನ್ನು ನಾಯಕ ರೋಹಿತ್ ಶರ್ಮಾ ತಿರಸ್ಕರಿಸಿದ್ದಾರೆ. ಇದು ನಮ್ಮ ತವರು ಮೈದಾನವಲ್ಲ ಮತ್ತು ಪಿಚ್‌ಗಳು ತಮ್ಮ ತಂಡಕ್ಕೆ ವಿಭಿನ್ನ ಸವಾಲುಗಳನ್ನು ನೀಡುತ್ತಿವೆ ಎಂದು ಅವರು ಹೇಳಿದ್ದಾರೆ. ತನ್ನ ಎಲ್ಲಾ ಪಂದ್ಯಗಳನ್ನು ಒಂದೇ ಸ್ಥಳದಲ್ಲಿ ಆಡುವುದರಿಂದ ಭಾರತ ತಂಡ ಇತರೆ ತಂಡಗಳಿಗಿಂತ ಪರಿಸ್ಥಿತಿಗಳಿಗೆ ಉತ್ತಮವಾಗಿ ಹೊಂದಿಕೊಳ್ಳಲು ಸಹಾಯವಾಗುತ್ತದೆ ಎಂದು ಪಾಕಿಸ್ತಾನ, ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್‌ನ ಮಾಜಿ ಆಟಗಾರರು ಗಂಭೀರ ಆರೋಪ ಮಾಡಿದ್ದಾರೆ.

ಆಸ್ಟ್ರೇಲಿಯಾ ವಿರುದ್ಧದ ಸೆಮಿಫೈನಲ್ ಪಂದ್ಯಕ್ಕೂ ಮುನ್ನ ರೋಹಿತ್ ಶರ್ಮಾ. "ಪ್ರತಿ ಬಾರಿಯೂ ಪಿಚ್ ವಿಭಿನ್ನ ಸವಾಲನ್ನು ಒಡ್ಡುತ್ತದೆ. ನಾವು ಇಲ್ಲಿ ಮೂರು ಪಂದ್ಯಗಳನ್ನು ಆಡಿದ್ದೇವೆ ಮತ್ತು ಮೂರು ಪಂದ್ಯಗಳಲ್ಲಿ ಪಿಚ್‌ನ ಸ್ವರೂಪ ವಿಭಿನ್ನವಾಗಿದೆ. ಇದು ನಮ್ಮ ಮನೆಯಂಗಣವಲ್ಲ. ನಾವು ಇಲ್ಲಿ ಅಷ್ಟೊಂದು ಪಂದ್ಯಗಳನ್ನು ಆಡಿಲ್ಲ. ಇದು ನಮಗೂ ಹೊಸದು. ಆಸ್ಟ್ರೇಲಿಯಾ ವಿರುದ್ಧದ ಸೆಮಿಫೈನಲ್‌ಗೆ ಮುನ್ನ ತಮ್ಮ ತಂಡವು ಪರಿಸ್ಥಿತಿಗಳಿಗೆ ತಕ್ಷಣವೇ ಹೊಂದಿಕೊಳ್ಳಬೇಕಾಗುತ್ತದೆ," ಎಂದು ತಿಳಿಸಿದ್ದಾರೆ.

IND vs AUS: ಆಸ್ಟ್ರೇಲಿಯಾ ವಿರುದ್ಧದ ಸೆಮಿಫೈನಲ್‌ಗೆ ಭಾರತದ ಸಂಭಾವ್ಯ ಪ್ಲೇಯಿಂಗ್‌ XI ವಿವರ!

"ಇಲ್ಲಿ ನಾಲ್ಕು ಅಥವಾ ಐದು ಪಿಚ್‌ಗಳನ್ನು ಬಳಸಲಾಗುತ್ತಿದೆ. ಸೆಮಿಫೈನಲ್‌ನಲ್ಲಿ ಪಿಚ್ ಹೇಗಿರುತ್ತದೆ ಎಂದು ನನಗೆ ತಿಳಿದಿಲ್ಲ. ಆದರೆ ಅದು ಏನೇ ಇರಲಿ, ನಾವು ಅದಕ್ಕೆ ಹೊಂದಿಕೊಂಡು ಆಡಬೇಕಾಗುತ್ತದೆ," ಎಂದು ಹೇಳಿದ ರೋಹಿತ್‌ ಶರ್ಮಾ ನ್ಯೂಜಿಲೆಂಡ್ ವಿರುದ್ಧದ ಕೊನೆಯ ಲೀಗ್‌ ಪಂದ್ಯದ ಉದಾಹರಣೆಯಾಗಿ ತೆಗೆದುಕೊಂಡರು. "ಬೌಲರ್‌ಗಳು ಬೌಲ್‌ ಮಾಡುವಾಗ ಚೆಂಡು ಸ್ವಿಂಗ್ ಆಗುತ್ತಿತ್ತು ಎಂದು ನಾವು ನೋಡಿದ್ದೇವೆ. ಮೊದಲ ಎರಡು ಪಂದ್ಯಗಳಲ್ಲಿ ಈ ರೀತಿ ಇರಲಿಲ್ಲ. ಕಳೆದ ಪಂದ್ಯದಲ್ಲಿ ನಮಗೆ ಅಷ್ಟೊಂದು ಸ್ಪಿನ್ ಇರಲಿಲ್ಲ ಎಂದು ನಾವು ನೋಡಿದ್ದೇವೆ. ಆದ್ದರಿಂದ ವಿಭಿನ್ನ ಪಿಚ್‌ಗಳಲ್ಲಿ ವಿಭಿನ್ನ ಸವಾಲುಗಳಿವೆ. ಪಿಚ್ ಹೇಗಿರುತ್ತದೆಯೋ ಇಲ್ಲವೋ ನಮಗೆ ತಿಳಿದಿಲ್ಲ," ಎಂದು ಟೀಮ್‌ ಇಂಡಿಯಾ ಕಪ್ತಾನ ವಿವರಿಸಿದ್ದಾರೆ.

"ಬೌಲರ್‌ಗಳಿಗೂ ಪಿಚ್‌ ಸಹಾಯಕವಾಗಿದ್ದರೆ ಪಂದ್ಯಗಳು ಹೆಚ್ಚು ಆಸಕ್ತಿದಾಯಕವಾಗಿರುತ್ತಿದ್ದವು. ಸವಾಲಿನ ಪಿಚ್‌ಗಳು ಒಳ್ಳೆಯದು ಏಕೆಂದರೆ ನಾವು ಉತ್ತಮ ಪಂದ್ಯಗಳನ್ನು ಬಯಸುತ್ತೇವೆ," ಎಂದು ಹೇಳಿದ ಅವರು, ತಂಡದಲ್ಲಿ ಐದು ಸ್ಪಿನ್ನರ್‌ಗಳನ್ನು ಆಯ್ಕೆ ಮಾಡುವ ನಿರ್ಧಾರವನ್ನು ಸಮರ್ಥಿಸಿಕೊಂಡರು. ಐಎಲ್‌ಟಿ 20 ಪಂದ್ಯಗಳನ್ನು ನೋಡಿದ ಮೇಲೆ ದುಬೈನಲ್ಲಿನ ಪಿಚ್‌ಗಳ ಬಗ್ಗೆ ತನಗೆ ಒಂದು ಕಲ್ಪನೆ ಬಂದಿತ್ತು ಎಂದು ತಿಳಿಸಿದ್ದಾರೆ.



"ಕಳೆದ ಎರಡು ತಿಂಗಳುಗಳಲ್ಲಿ ಪಿಚ್‌ಗಳು ನಿಧಾನವಾಗಿರುವುದನ್ನು ನಾವು ನೋಡಿದ್ದೇವೆ. ನಾವು ಇಲ್ಲಿ ನಡೆದಿದ್ದ ಐಎಲ್‌ಟಿ 20 ಅನ್ನು ನೋಡುತ್ತಿದ್ದೆವು ಮತ್ತು ಸ್ಪಿನ್ನರ್‌ಗಳು ಸಹಾಯಕವಾಗುತ್ತಾರೆ ಎಂದು ನಾವು ಭಾವಿಸಿದ್ದೇವೆ. ನಮಗೆ ಹೆಚ್ಚುವರಿ ಬ್ಯಾಟ್ಸ್‌ಮನ್ ಬೇಕಾದರೆ ರಿಷಭ್ ಪಂತ್ ಇದ್ದಾರೆ, ಆದ್ದರಿಂದ ನಾವು ಹೆಚ್ಚುವರಿ ಸ್ಪಿನ್ನರ್ ಅನ್ನು ಆಯ್ಕೆ ಮಾಡಿದ್ದೇವೆ," ಎಂದು ರೋಹಿತ್‌ ಶರ್ಮಾ ವಿವರಿಸಿದ್ದಾರೆ.