ನವದೆಹಲಿ: ಭಾರತ ತಂಡದ ಸ್ಟಾರ್ ಬ್ಯಾಟ್ಸ್ಮನ್ ಶ್ರೇಯಸ್ ಅಯ್ಯರ್ ಅವರು, ನೆಟ್ ಬೌಲರ್ ಜಾಸ್ಕಿರಣ್ ಸಿಂಗ್ಗೆ ಹೊಸ ಶೂಗಳನ್ನು ಉಡುಗೊರೆಯಾಗಿ ನೀಡುವ ಮೂಲಕ ಎಲ್ಲರ ಹೃದಯವನ್ನು ಗೆದ್ದಿದ್ದಾರೆ. ಶುಕ್ರವಾರ ಲಾಂಗ್ ಆನ್ನಲ್ಲಿ ಫೀಲ್ಡಿಂಗ್ನಲ್ಲಿ ತೊಡಗಿದ್ದ ವೇಳೆ ಅವರಿಗೆ ಶ್ರೇಯಸ್ ಅಯ್ಯರ್ ಹೊಸ ಸ್ಪೈಕ್ಸ್ ಅನ್ನು ನೀಡಿದರು. ಭಾರತದ ಮೂಲದ ಜಾಸ್ಕಿರಣ್ ಅವರು ವೃತ್ತಿಯಲ್ಲಿ ಚಾರ್ಟರ್ಡ್ ಅಕೌಂಟೆಂಟ್ ಆಗಿದ್ದಾರೆ. ಆದರೆ, ಅವರಿಗೆ ಕ್ರಿಕೆಟ್ ಎಂದರೆ ಪಂಚಪ್ರಾಣ.
ಬಾಂಗ್ಲಾದೇಶ ಮತ್ತು ಪಾಕಿಸ್ತಾನ ವಿರುದ್ಧದ ಪಂದ್ಯಗಳ ನಿಮಿತ್ತ ಭಾರತ ತಂಡಕ್ಕೆ ನೆಟ್ ಬೌಲರ್ಗಳು ಸಂಪೂರ್ಣವಾಗಿ ಭರ್ತಿಯಾಗಿದ್ದರು. ಈ ಹಿನ್ನೆಲೆಯಲ್ಲಿ ಭಾರತ ತಂಡದ ಬ್ಯಾಟ್ಸ್ಮನ್ಗಳಿಗೆ ಬೌಲ್ ಮಾಡಲು ಜಾಸ್ಕಿರಣ್ ಸಿಂಗ್ಗೆ ಅವಕಾಶ ಸಿಕ್ಕಿರಲಿಲ್ಲ. ಆದರೆ, ನ್ಯೂಜಿಲೆಂಡ್ ವಿರುದ್ಧದ ಪಂದ್ಯದ ನಿಮಿತ್ತ ಭಾರತದ ಅಂತಿಮ ಅಭ್ಯಾಸದ ಸೆಷನ್ನಲ್ಲಿ ಸ್ಪಿನ್ನರ್ ಜಾಸ್ಕಿರಣ್ ಸಿಂಗ್ ಭಾಗವಹಿಸಿದ್ದರು. ಈ ವೇಳೆ ಶ್ರೇಯಸ್ ಅಯ್ಯರ್ ಶೂಗಳನ್ನು ನೀಡಿದ್ದಾರೆ.
IND vs ENG: 4ನೇ ಕ್ರಮಾಂಕದಲ್ಲಿ ಯಾರಿಂದಲೂ ಸಾಧ್ಯವಾಗದ ದಾಖಲೆ ಬರೆದ ಶ್ರೇಯಸ್ ಅಯ್ಯರ್!
"ಸಹೋದರ ಹೇಗಿದ್ದೀರಾ? ಎಲ್ಲವೂ ಚೆನ್ನಾಗಿದೆಯಾ?" ಎಂದು ಹೇಳುವ ಮೂಲಕ ಶ್ರೇಯಸ್ ಅಯ್ಯರ್ ನನ್ನ ಬಳಿ ಬಂದು, ʻನಿಮ್ಮ ಶೂ ಗಾತ್ರ ಎಷ್ಟು ಎಂದು ಕೇಳಿದರು. ನಾನು ಅದಕ್ಕೆ 10 ಎಂದು ಹೇಳಿದೆ. ಅವರು ನಿಮಗಾಗಿ ನಾನು ಏನೋ ಒಂದನ್ನು ತಂದಿದ್ದೇನೆ ಎಂದು ಹೇಳಿ ಈ ಸ್ಪೈಕ್ಸ್ ಕೊಟ್ಟರು. ಇದು ನನ್ನ ಪಾಲಿಗೆ ಅತ್ಯಂತ ದೊಡ್ಡದು," ಎಂದು ಐಸಿಸಿ ನೆಟ್ ಬೌಲರ್ ಆಗಿರುವ ಜಾಸ್ಕಿರಣ್ ಸಿಂಗ್ ಹೇಳಿರುವುದನ್ನು ಪಿಟಿಐ ವರದಿ ಮಾಡಿದೆ.
ನನ್ನ ಜೀವನದ ಅತ್ಯಂತ ವಿಶೇಷ ಕ್ಷಣ
ಶ್ರೇಯಸ್ ಅಯ್ಯರ್ ನನಗೆ ಶೂ ನೀಡಿದ್ದ ಕ್ಷಣ ನನ್ನ ಜೀವನದ ಅತ್ಯಂತ ವಿಶೇಷ ಕ್ಷಣವಾಗಿದೆ. ಭಾರತ ತಂಡದ ಬ್ಯಾಟಿಂಗ್ ಕ್ರಮಾಂಕದಲ್ಲಿ ಶ್ರೇಯಸ್ ಅಯ್ಯರ್ ಅತ್ಯಂತ ಪ್ರಮುಖ ಆಟಗಾರ ಎಂದು ಇದೇ ವೇಳೆ ಜಾಸ್ಕಿರಣ್ ಸಿಂಗ್ ತಿಳಿಸಿದ್ದಾರೆ. "ಚಾಂಪಿಯನ್ಸ್ ಟ್ರೋಫಿ ಟೂರ್ನಿಯ ನಿಮಿತ್ತ ನಾನು ನೆಟ್ ಬೌಲರ್ ಆಗಿದ್ದೆ. ಇಂದು (ಶುಕ್ರವಾರ) ನನ್ನ ಪಾಲಿಗೆ ಅತ್ಯಂತ ವಿಶೇಷ ಕ್ಷಣವಾಗಿದೆ. ಶ್ರೇಯಸ್ ಅಯ್ಯರ್ ಅವರಿಂದ ಹೊಸ ಸ್ಪೈಕ್ಸ್ ಅನ್ನು ಪಡೆದುಕೊಂಡಿದ್ದೇನೆ," ಎಂದು ಜಾಸ್ಕಿರಣ್ ಸಿಂಗ್ ತಿಳಿಸಿದ್ದಾರೆ.
"ಈ ಟೂರ್ನಿಯಲ್ಲಿ ನಾನು ಭಾರತ ತಂಡದ ಪರ ಕ್ಷೇತ್ರ ರಕ್ಷಣೆಯನ್ನು ಮಾಡಿದ್ದೇನೆ. ಆದರೆ, ಬೌಲ್ ಮಾಡುವ ಅವಕಾಶಕ್ಕಾಗಿ ನಾನು ಕಾಯುತ್ತಿದ್ದೇನೆ. ಬಾಂಗ್ಲಾದೇಶ ಮತ್ತು ಪಾಕಿಸ್ತಾನ ತಂಡಗಳಿಗೆ ನೆಟ್ ಬೌಲರ್ ಆಗಿ ಬೌಲ್ ಮಾಡಿದ್ದೇನೆ. ಅದು ನಿಜಕ್ಕೂ ಅದ್ಭುತ ಅನುಭವವಾಗಿದೆ. ಇದೀಗ ಶ್ರೇಯಸ್ ಬಾಯ್ಗೆ ಬೌಲ್ ಮಾಡಿರುವುದು ನನ್ನ ಪಾಲಿಗೆ ದೊಡ್ಡ ಸಂಗತಿ," ಎಂದು ಜಾಸ್ಕಿರಣ್ ಸಂತಸ ವ್ಯಕ್ತಪಡಿಸಿದ್ದಾರೆ.
"ಭಾರತ ತಂಡದ ಎಲ್ಲಾ ಬ್ಯಾಟ್ಸ್ಮನ್ಗಳಿಗೂ ಬೌಲ್ ಮಾಡುವುದು ವಿಶೇಷ, ಆದರೆ, ರಿಷಭ್ ಪಂತ್ ಅವರಂತಹ ಎಡಗೈ ಬ್ಯಾಟ್ಸ್ಮನ್ಗೆ ಬೌಲ್ ಮಾಡಲು ಎದುರು ನೋಡುತ್ತಿದ್ದೇನೆ. ಅವರು ಎಡಗೈ ಬ್ಯಾಟ್ಸ್ಮನ್ ಹಾಗೂ ಸ್ವಾಭಾವಿಕವಾಗಿ ಆಂಗಲ್ನಲ್ಲಿ ನಿಲ್ಲುತ್ತಾರೆ. ಚೆಂಡು ಅವರಿಗಿಂತ ಸ್ವಲ್ಪ ದೂರದಲ್ಲಿ ಸಾಗಲಿದೆ. ಈ ಕಾರಣದಿಂದ ನಾನು ಅವರಿಗೆ ಬೌಲ್ ಮಾಡಲು ತುಂಬಾ ಇಷ್ಟಪಡುತ್ತೇನೆ," ಎಂದು ಅವರು ತಿಳಿಸಿದ್ದಾರೆ.
"ಮೊದಲನೇ ಸೆಷನ್ನಿಂದಲೂ ನಾವು ಭಾರತ ತಂಡದ ಜೊತೆ ಇದ್ದೇವೆ. ಇದು ನಮ್ಮದು ನಾಲ್ಕನೇ ಸೆಷನ್. ಶ್ರೇಯಸ್ ಅಯ್ಯರ್ ನಿಜಕ್ಕೂ ಮೋಜಿನಿಂದ ಇರುತ್ತಾರೆ ಹಾಗೂ ಚೆಂಡು ನನ್ನ ಬಳಿ ಬಂದಾಗಲೆಲ್ಲಾ, ಕ್ಯಾಚ್ ಪಡೆಯಿರಿ ಎಂದು ಹುರಿದುಂಬಿಸುತ್ತಿದ್ದರು," ಎಂದು ಜಾಸ್ಕಿರಣ್ ಹೇಳಿದ್ದಾರೆ.