ಬಾಗಲಕೋಟೆ : ಬಿಜೆಪಿಯವರು (BJP) ಕಾಂಗ್ರೆಸ್ನ (Congress) 55 ಶಾಸಕರನ್ನು ಪಟ್ಟಿ ಮಾಡಿದ್ದಾರೆ. ಬಿಜೆಪಿ ಏಜೆಂಟ್ಗಳನ್ನು ಅವರ ಮನೆಗೆ ಕಳುಹಿಸಿ ಹೆದರಿಸಿದ್ದಾರೆ. ಬಿಜೆಪಿಗೆ ಬರದೇ ಹೋದರೆ ಸಿಬಿಐ, ಇಡಿ ದಾಳಿ ಮಾಡಿಸಿ ಅಕ್ರಮ ಆಸ್ತಿ ಹೊರಗೆಳೆಯುತ್ತೇವೆ ಎಂದು ಬೆದರಿಸಿದ್ದಾರೆ. ಆದರೆ ಇದಕ್ಕೆ ನಾನು ಜಗ್ಗೋದಿಲ್ಲ, ಬಗ್ಗೋದಿಲ್ಲ ಎಂದು ಬಾಗಲಕೋಟೆ ಜಿಲ್ಲೆಯ ಹುನಗುಂದದ ಶಾಸಕ ವಿಜಯಾನಂದ ಕಾಶಪ್ಪನವರ (vijayanand kashappanavar) ಬಾಂಬ್ ಹಾಕಿದ್ದಾರೆ.
ಬಾಗಲಕೋಟೆ ಜಿಲ್ಲೆಯ ಹುಣಸುಂದದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಿಜೆಪಿಯ ಆ ಲಿಸ್ಟ್ನಲ್ಲಿ ನಾನು ಇದ್ದರೂ ಇರಬಹುದು. ನಾನು ಅದಕ್ಕೆ ಭಯಪಟ್ಟಿಲ್ಲ, ಅವರು ಮಾಡುತ್ತಿದ್ದಾರೆ. ನಮ್ಮ ಬಳ್ಳಾರಿ ಶಾಸಕರು, ಭರತ ರೆಡ್ಡಿ, ಸಂಸದ ತುಕಾರಾಮ್, ನಾಗೇಂದ್ರ ಅವರ ಮೇಲೆ ದಾಳಿ ಮಾಡಿದರು. ಇವೆಲ್ಲ ಉದ್ದೇಶಪೂರ್ವಕ ದ್ವೇಷದ ರಾಜಕಾರಣ, ಕುತಂತ್ರ ರಾಜಕಾರಣ. ಬಿಜೆಪಿಯವರಿಗೆ ತಾಕತ್, ಧಮ್ ಇದ್ದರೆ ಜನರ ಮಧ್ಯೆ ಬರಲಿ. 2028ಕ್ಕೆ ಚುನಾವಣೆ ಆಗಲಿ ಎಂದು ಟೀಕಿಸಿದರು.
ಯಾರನ್ನಾದರೂ ಎತ್ತಿ ಕಟ್ಟಿ ಸರ್ಕಾರ ಬೀಳಿಸುವ ಪ್ರಯತ್ನ ಮಾಡುವುದು, ಸಿಬಿಐ, ಇಡಿ ದಾಳಿಗಳ ಮೂಲಕ ಹೆದರಿಸೋಕೆ ಮಾಡ್ತಿದ್ದಾರೆ. ಬಿಜೆಪಿಗೆ ಕಾಂಗ್ರೆಸ್ ಶಾಸಕರು ಬರದೇ ಹೋದರೆ ಇಡಿ, ಸಿಬಿಐ ದಾಳಿಯಿಂದ ಹೆದರಿಸಿದ್ದಾರೆ. ಹಾಗಾಗಿ ನನ್ನನ್ನು ಸೇರಿ ನಮ್ಮೆಲ್ಲ ಶಾಸಕರಿಗೆ ಭಯ ಇದೆ. ನನ್ನ ಮೇಲೆ ಇಡಿ ದಾಳಿಯಾದ್ರೂ ಮಾಡಲಿ ಐಟಿ ದಾಳಿ ಆದ್ರೂ ಆಗಲಿ, ಎಲ್ಲವನ್ನು ಎದುರಿಸಲು ನಾನು ಸಜ್ಜಾಗಿದ್ದೇನೆ ಎಂದು ಅವರು ಹೇಳಿದರು.
ಕಾಂಗ್ರೆಸ್ನಲ್ಲಿ ಡಿಕೆಶಿ & ಸಿದ್ದು ಬಣದಿಂದ ಕುದುರೆ ವ್ಯಾಪಾರ ನಡೀತಿದೆ ಎಂದಿರೋ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿಕೆ ಕುರಿತು ಮಾತನಾಡಿದ ಅವರು, ಬಿಜೆಪಿಯವರು ಒಮ್ಮೆಯಾದ್ರೂ ಸ್ಪಷ್ಟ ಬಹುಮತದಿಂದ ಅಧಿಕಾರಕ್ಕೆ ಬಂದಿದ್ದಾರಾ ಎಂದು ಪ್ರಶ್ನೆ ಮಾಡಿದರು. ಸಮ್ಮಿಶ್ರ ಸರ್ಕಾರ ಮಾಡೋದು, ಹಿಂಬಾಗಿಲಿನಿಂದ ಅಧಿಕಾರಕ್ಕೆ ಬರುವುದು ಅವರಿಗೆ ರೂಢಿ. ರಾಜ್ಯದಲ್ಲಿ ಯಾವತ್ತೂ ಅವರಿಗೆ ನಿಚ್ಚಳ ಬಹುಮತ ಇರಲಿಲ್ಲ ಎಂದು ಕಾಶಪ್ಪನವರ್ ಟೀಕಿಸಿದರು.
ಇದನ್ನೂ ಓದಿ: ED Raid: ಕಾಂಗ್ರೆಸ್ ಶಾಸಕ ಸುಬ್ಬಾರೆಡ್ಡಿ ಮನೆ ಮೇಲೆ ಇಡಿ ದಾಳಿ