Kamal Hassan Controversy: ʼನಿಮ್ಮ ಹೇಳಿಕೆಯಿಂದ ಶಿವರಾಜ್ ಕುಮಾರ್ಗೂ ಸಮಸ್ಯೆʼ ಎಂದ ಹೈಕೋರ್ಟ್; ಮಧ್ಯಾಹ್ನಕ್ಕೆ ವಿಚಾರಣೆ ಮುಂದೂಡಿಕೆ
Kamal Hassan Controversy: ಕರ್ನಾಟಕ ಹೈಕೋರ್ಟ್ ಕಮಲ್ ಹಾಸನ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದು, ʼನಿಮ್ಮಿಂದಾಗಿ ಶಿವರಾಜ್ ಕುಮಾರ್ ಅವರಿಗೂ ಸಮಸ್ಯೆ ಉಂಟಾಗಿದೆʼ ಎಂದು ಟೀಕಿಸಿದೆ. ಕ್ಷಮೆ ಕೇಳುವ ಕುರಿತು ನಿಲುವು ತೆಗೆದುಕೊಳ್ಳಲು ಮಧ್ಯಾಹ್ನದವರೆಗೆ ಸಮಯ ನೀಡಿದ್ದು, ವಿಚಾರಣೆಯನ್ನು ಮಧ್ಯಾಹ್ನ 2.30ಕ್ಕೆ ಮುಂದೂಡಿದೆ.


ಬೆಂಗಳೂರು: ʼಕನ್ನಡದ ತಾಯಿ ತಮಿಳುʼ ಎಂದು ಹೇಳಿಕೆ ನೀಡಿದ್ದ, ಈ ಮಾತಿಗೆ ಕನ್ನಡಿಗರಿಂದ ವಿರೋಧ ವ್ಯಕ್ತವಾದ ಬಳಿಕವೂ ಕ್ಷಮೆ ಕೇಳದೆ ಉದ್ಧಟತನ ತೋರಿದ ತಮಿಳು ನಟ ಕಮಲ್ ಹಾಸನ್ (Kamal Hassan Controversy) ಅವರನ್ನು ಕರ್ನಾಟಕ ಹೈಕೋರ್ಟ್ (Karnataka high court) ಕೂಡ ತರಾಟೆಗೆ ತೆಗೆದುಕೊಂಡಿದ್ದು, ʼನಿಮ್ಮಿಂದಾಗಿ ಶಿವರಾಜ್ ಕುಮಾರ್ (Shiva Rajkumar) ಅವರಿಗೂ ಸಮಸ್ಯೆ ಉಂಟಾಗಿದೆʼ ಎಂದು ಹೇಳಿದೆ. ಕ್ಷಮೆ ಕೇಳುವ ಕುರಿತು ನಿಲುವು ತೆಗೆದುಕೊಳ್ಳಲು ಮಧ್ಯಾಹ್ನದವರೆಗೆ ಸಮಯ ನೀಡಿದ್ದು, ವಿಚಾರಣೆಯನ್ನು ಮಧ್ಯಾಹ್ನ 2.30ಕ್ಕೆ ಮುಂದೂಡಿದೆ.
ಕಮಲ್ ಹೊಸ ಸಿನಿಮಾ ‘ಥಗ್ ಲೈಫ್‘ ರಿಲೀಸ್ಗೆ ಭದ್ರತೆ ಕೋರಿ ರಿಟ್ ಅರ್ಜಿ ಸಲ್ಲಿಕೆ ಮಾಡಿರುವ ಅರ್ಜಿಯ ವಿಚಾರಣೆ ಇಂದು (ಜೂನ್ 3) ಹೈಕೋರ್ಟ್ ಏಕಸದಸ್ಯ ಪೀಠದಲ್ಲಿ ನಡೆದಿದೆ. ಈ ವೇಳೆ ಕಮಲ್ ಹಾಸನ್ಗೆ ಕೋರ್ಟ್ ತರಾಟೆಗೆ ತೆಗೆದುಕೊಂಡಿದೆ. ಮಧ್ಯಾಹ್ಹ 2.30ರವರೆಗೆ ಕಮಲ್ ಹಾಸನ್ ವಕೀಲರಿಗೆ ಗಡುವು ನೀಡಿದ್ದು, ಕ್ಷಮೆಯಾಚನೆಯ ಕುರಿತು ನಿಲುವು ತಿಳಿಸುವಂತೆ ಸೂಚಿಸಿದೆ.
‘ಸಿ. ರಾಜಗೋಪಾಲಚಾರಿ ಇದೇ ರೀತಿಯ ಹೇಳಿಕೆ ನೀಡಿದ್ದರು. ನಂತರ ಅವರು ಕ್ಷಮಾಯಾಚನೆ ಮಾಡಿದ್ದರು. ಆದರೆ ಕಮಲಹಾಸನ್ ಯಾವುದೇ ಕ್ಷಮಾಯಾಚನೆ ಮಾಡಿಲ್ಲ. ಅವರು ಸಿನಿಮಾ ಮಾಡಿರೋದು ವಾಣಿಜ್ಯ ಉದ್ದೇಶದಿಂದ. ಈಗ ತಪ್ಪು ಮಾಡಿದ್ದಾರೆ. ಅವರು ಮಾಡಿದ ತಪ್ಪಿಗೆ ಪೊಲೀಸರು ಭದ್ರತೆ ನೀಡಬೇಕೇ’ ಎಂದು ನ್ಯಾ. ಎಂ. ನಾಗಪ್ರಸನ್ನ ಅವರಿದ್ದ ಪೀಠ ಕಮಲ್ ಅವರ ವಕೀಲ ಧ್ಯಾನ್ ಚಿನ್ನಪ್ಪ ಅವರನ್ನು ತರಾಟೆಗೆ ತೆಗೆದುಕೊಂಡಿತು.
‘ನಿಮ್ಮ ಹೇಳಿಕೆಯಿಂದ ಶಿವರಾಜಕುಮಾರ್ ಸಮಸ್ಯೆ ಅನುಭವಿಸುವಂತಾಗಿದೆ. ನೀವು ನಿಮ್ಮ ಹೇಳಿಕೆಯನ್ನು ನಿರಾಕರಿಸಿಲ್ಲ, ಒಪ್ಪಿಕೊಂಡಿದ್ದೀರಾ. ಆದರೆ ಕ್ಷಮೆಯಾಚನೆ ಮಾಡಲು ಸಿದ್ಧರಿಲ್ಲ. ಬೇರೆಯವರ ಭಾವನೆಗಳಿಗೆ ಧಕ್ಕೆ ತಂದು ಸಿನಿಮಾ ಬಿಡುಗಡೆ ಬಯಸುತ್ತಿದ್ದೀರಾ? 300 ಕೋಟಿ ರೂಪಾಯಿಯ ಸಿನಿಮಾ ಎನ್ನುತ್ತಿದ್ದೀರಾ, ಕ್ಷಮೆಯಾಚನೆ ಮಾಡಿ. ಆಗ ಸಮಸ್ಯೆಯೇ ಇರುವುದಿಲ್ಲ’ ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ.
‘ಯಾರೊಬ್ಬರ ಭಾವನೆಯ ಮೇಲೆ ಸವಾರಿ ಮಾಡಬಾರದು. ಆದೇಶ ಹೊರಡಿಸಲು ನಮಗೆ ಸಮಸ್ಯೆ ಇಲ್ಲ. ಕ್ಷಮೆ ಕೇಳಲಾಗದಿದ್ದರೆ ಬಿಡಿ. ಕರ್ನಾಟಕದಲ್ಲಿ ಬಿಡುಗಡೆ ಏಕೆ ಬೇಕು’ ಎಂದು ಕಮಲ್ ಹಾಸನ್ ವಕೀಲರಿಗೆ ನ್ಯಾ. ನಾಗಪ್ರಸನ್ನ ಪ್ರಶ್ನೆ ಮಾಡಿದ್ದಾರೆ. ‘ಅಗತ್ಯಕ್ಕಿಂತ ಹೆಚ್ಚಿಗೆ ಈ ವಿಷಯವನ್ನು ಬೆಳಸಲಾಗಿದೆʼ ಎಂದು ಕಮಲ್ ಹಾಸನ್ ಪರ ವಕೀಲ ಧ್ಯಾನ್ ಚಿನ್ನಪ್ಪ ವಾದ ಮಾಡಿದ್ದಾರೆ. ಸದ್ಯ ಕೋರ್ಟ್ ವಿಚಾರಣೆಯನ್ನು 2.30ಕ್ಕೆ ನಿಗದಿ ಮಾಡಿದೆ. ಈ ವೇಳೆ ನಿಲುವು ತಿಳಿಸಲು ಹೈಕೋರ್ಟ್ ಸೂಚನೆ ನೀಡಿದೆ.
ಇದನ್ನೂ ಓದಿ: Kamal Hassan Controversy: ಕಮಲ್ ಹಾಸನ್ಗೆ ಹೈಕೋರ್ಟ್ ತೀವ್ರ ತರಾಟೆ: ʼಕ್ಷಮೆ ಕೇಳಿʼ ಎಂದ ನ್ಯಾಯಾಧೀಶರು