KSRTC Strike: ಸಾರಿಗೆ ಮುಷ್ಕರ: ಕಲಬುರಗಿಯಲ್ಲಿ ಜನರಿಗೆ ತಟ್ಟಿದ ಬಿಸಿ; ವಿದ್ಯಾರ್ಥಿಗಳು, ನೌಕರರ ಪರದಾಟ
Kalaburagi: ಕೇಂದ್ರ ಬಸ್ ನಿಲ್ದಾಣದಲ್ಲಿ ಬೆಳಗಿನ ಜಾವದಿಂದಲೇ ಎಂದಿನಂತೆ ಪ್ರಯಾಣಿಕರು ಆಗಮಿಸಿದರು. ಆದರೆ, ನಮ್ಮ ಬೇಡಿಕೆ ಈಡೇರುವವರೆಗೂ ನಾವು ಬಸ್ ಹತ್ತುವುದಿಲ್ಲ ಎಂದು ನೌಕರರು ಪಟ್ಟು ಹಿಡಿದರು. ಅಧಿಕಾರಿಗಳು ಹಾಗೂ ಪೊಲೀಸ್ ಅಧಿಕಾರಿಗಳು ಮನವೊಲಿಸಲು ಯತ್ನಿಸಿದರೂ ಯಾವುದೇ ಪ್ರಯೋಜನವಾಗಲಿಲ್ಲ.


ಕಲಬುರಗಿ: ಸಾರಿಗೆ ಇಲಾಖೆಯ ನೌಕರರು ತಮ್ಮ 38 ತಿಂಗಳ ಹಿಂಬಾಕಿ ಸೇರಿ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಮಂಗಳವಾರ ರಾಜ್ಯದಾದ್ಯಂತ ಕೈಗೊಂಡ ಅನಿರ್ಧಿಷ್ಟಾವಧಿ ಮುಷ್ಕರದ (KSRTC Strike) ಬಿಸಿ ಕಲ್ಯಾಣ ನಾಡಿನ ಕೇಂದ್ರ ಸ್ಥಾನ ಕಲಬುರಗಿಗೂ (Kalaburagi news) ತಟ್ಟಿದೆ. ಕಲಬುರಗಿಯಲ್ಲೂ ಬಂದ್ ಬಿಸಿ ಭಾರಿ ಪ್ರಮಾಣದಲ್ಲಿ ತಟ್ಟಿದ್ದು, ಒಂದೇ ಒಂದು ಬಸ್ ಸಹ ರಸ್ತೆಗೆ ಇಳಿಯದ ಹಿನ್ನಲೆ ಪ್ರತಿನಿತ್ಯ ಬೆಳಗಿನ ಜಾವವೇ ಎದ್ದು ದೂರದ ಶಾಲಾ, ಕಾಲೇಜ್, ನೌಕರಿಗಳಿಗೆ ಹೋಗುವವರು ಭಾರಿ ಪರದಾಟ ನಡೆಸಿದರು. ಜತೆಗೆ ದೂರದೂರಿನಿಂದ ಕಲಬುರಗಿಗೆ ಆಸ್ಪತ್ರೆ ಸೇರಿ ವಿವಿಧ ಕಾರ್ಯ ನಿಮಿತ್ತ ಆಗಮಿಸಿ ಮರಳಿ ತಮ್ಮ ಊರಿಗೆ ಹೋಗುವ ಪ್ರಯಾಣಿಕರು ಸಹ ಗೋಳಾಡಿದರು.
ಕೇಂದ್ರ ಬಸ್ ನಿಲ್ದಾಣದಲ್ಲಿ ಬೆಳಗಿನ ಜಾವದಿಂದಲೇ ಎಂದಿನಂತೆ ಪ್ರಯಾಣಿಕರು ಆಗಮಿಸಿದರು. ಆದರೆ, ನಮ್ಮ ಬೇಡಿಕೆ ಈಡೇರುವವರೆಗೂ ನಾವು ಬಸ್ ಹತ್ತುವುದಿಲ್ಲ ಎಂದು ನೌಕರರು ಪಟ್ಟು ಹಿಡಿದರು. ಅಧಿಕಾರಿಗಳು ಹಾಗೂ ಪೊಲೀಸ್ ಅಧಿಕಾರಿಗಳು ಮನವೊಲಿಸಲು ಯತ್ನಿಸಿದರೂ ಯಾವುದೇ ಪ್ರಯೋಜನವಾಗಲಿಲ್ಲ. ಬಸ್ ಗಳ ಸಂಚಾರ ಇಲ್ಲದೇ ಪ್ರಯಾಣಿಕರಂತೂ ತೊಂದರೆಗೆ ಸಿಲುಕಿದ ದೃಶ್ಯ ಕಂಡು ಬಂತು.
ಸಾರಿಗೆ ನೌಕರರ ಮುಷ್ಕರ ಹಿನ್ನಲೆ ಕಲಬುರಗಿ ಕೇಂದ್ರ ಬಸ್ ನಿಲ್ದಾಣಕ್ಕೆ ನಗರ ಪೊಲೀಸ್ ಆಯುಕ್ತ ಡಾ.ಶರಣಪ್ಪ ಎಸ್ಡಿ ಭೇಟಿ ನೀಡಿ, ಬಸ್ಗಳ ಪ್ರಯಾಣದ ಬಗ್ಗೆ ಮಾಹಿತಿ ಪಡೆದುಕೊಂಡರು.
ಖಾಸಗಿ ವಾಹನಗಳ ಮೊರೆ
ಕೆ ಎಸ್ ಆರ್ ಟಿ ಸಿ ನೌಕರರ ಮುಷ್ಕರ ಹಿನ್ನಲೆ ಕಲಬುರಗಿಯ ಯಾವ ಬೀದಿಯಲ್ಲೂ ಬಸ್ ಗಳ ಸಂಚಾರದ ಲಕ್ಷಣ ಕಾಣದೇ ಇರುವುದರಿಂದ ಬೇರೆ ಜಿಲ್ಲೆ, ಊರುಗಳಲ್ಲಿ ಸರಕಾರಿ ನೌಕರಿ ಮಾಡುವ ನೌಕರರೆಲ್ಲ ಸೇರಿ ಖಾಸಗಿ ವಾಹನಗಳ ಮೊರೆ ಹೋದರು. ನಾಲ್ಕೈದು ಜನರು ಸೇರಿ ಒಂದು ಖಾಸಗಿ ವಾಹನ ಬುಕ್ ಮಾಡಿ ತಮ್ಮ ಕೆಲಸಗಳಿಗೆ ತೆರಳಿದ ಪ್ರಸಂಗ ಸಹ ನಡೆದಿದೆ. ಇನ್ನು ಕೆಲ ಸಾರ್ವಜನಿಕರು ಕೂಡ ಬಸ್ ಗಾಗಿ ಕಾಯದೆ, ಖಾಸಗಿ ವಾಹನ, ಪರಿಚಿತರ ವಾಹನ, ಸ್ವಂತ ವಾಹನಗಳಲ್ಲಿ ತಮ್ಮ ಕೆಲಸಗಳನ್ನು ಪೂರೈಸಿಕೊಳ್ಳಲು ಮುಂದಾದರು.
ದುಪ್ಪಟ್ಟಾದ ಆಟೋ ರೇಟ್
ಬಸ್ ಮುಷ್ಕರ ಪ್ರಯುಕ್ತ ಜನರು ಅನಿವಾರ್ಯ ಕಾರಣ ಖಾಸಗಿ ವಾಹನಗಳ ಮೊರೆ ಹೋದರೆ, ವಾಹನಗಳ ಸೌಲಭ್ಯ ಪಡೆಯಲು ಆಗದ ಕೆಲವರು ಆಟೋಗಳ ಮೊರೆ ಹೋದರು. ಆದರೆ, ನಿತ್ಯವೂ ಒಂದಿದ್ದ ಆಟೋ ದರ ಮುಷ್ಕರ ಹಿನ್ನಲೆ ದುಪ್ಪಟ್ಟಾಗಿತ್ತು. ೨೦ ರು. ಜಾಗದಲ್ಲಿ ೨೦೦ ರು. ೫೦ ಜಾಗದಲ್ಲಿ ೫೦೦ ರು. ದರ ನಿಗದಿ ಮಾಡಿದ ಆಟೋ ಚಾಲಕರು ಮುಷ್ಕರದ ದುರುಪಯೋಗ ಮಾಡಿಕೊಂಡ ಘಟನೆ ಸಹ ನಡೆಯಿತು. ಬಸ್ ಸೇವೆ ಇಲ್ಲದೇ, ವಾಹನಗಳ ಸೌಲಭ್ಯ ಪಡೆಯಲು ಆಗದೆ, ಆಟೋಗಳಿಗೆ ದುಪ್ಪಟು ಹಣ ನೀಡುವ ಪರಿಸ್ಥಿತಿಯಿಂದಾಗಿ ಶ್ರೀ ಸಾಮಾನ್ಯ ಪರದಾಡಿದರು.
ಕಾನೂನು ಕೈಗೆತ್ತಿಕೊಂಡರೆ ಕ್ರಮ: ಆಯುಕ್ತರು
ಮುಷ್ಕರದಿಂದಾಗಿ ನಗರದ ಎಲ್ಲೆಡೆ ಸೂಕ್ತ ಪೊಲೀಸ್ ಬಂದೋಬಸ್ತ್ ನಿಯೋಜನೆ ಮಾಡಲಾಗಿದೆ. ಯಾರೇ ಬಂದ್ ಮಾಡುವಂತ ಕೆಲಸಕ್ಕೆ ಕೈಹಾಕಬಾರದು. ಕಾನೂನು ಕೈಗೆತ್ತಿಕೊಂಡರೆ ಕ್ರಮ ಕೈಗೊಳ್ಳುತ್ತೇವೆ. ಸದ್ಯ ಶೇ.10ರಷ್ಟು ಮಾತ್ರ ಬಸ್ ಸಂಚಾರ ಮಾಡುತ್ತಿವೆ. ಸಾರಿಗೆ ಇಲಾಖೆ ಅಧಿಕಾರಿಗಳ ಜತೆಗೆ ಚೆರ್ಚೆ ಮಾಡಿ ಪರ್ಯಾಯ ವ್ಯವಸ್ಥೆಗೆ ಕ್ರಮ ಕೈಗೊಳ್ಳುತ್ತೇವೆ ಎಂದು ಕಲಬುರಗಿ ನಗರ ಪೊಲೀಸ್ ಆಯುಕ್ತ ಡಾ. ಶರಣಪ್ಪ ಎಸ್.ಡಿ ಹೇಳಿದ್ದಾರೆ.
ಪರ್ಯಾಯ ವ್ಯವಸ್ಥೆ
ನಿತ್ಯ ಬೆಳಗ್ಗೆ 5 ಗಂಟೆಯಿಂದ ೮ ಗಂಟೆಗೆ ವರೆಗೆ ನಿತ್ಯ ೨೨೦ ಬಸ್ ಸಂಚಾರ ಮಾಡುತ್ತಿದ್ದವು. ಮುಷ್ಕರದಿಂದ ಕೇವಲ 20 ಬಸ್ ಮಾತ್ರ ಸಂಚರಿಸಿವೆ. ಪರ್ಯಾಯವಾಗಿ ಖಾಸಗಿ ಬಸ್ ಹಾಗು ಕ್ರೂಸರ್ಗಳ ಬಳಕ್ಕೆ ಮಾಡುತ್ತಿದ್ದೇವೆ. ಪ್ರಯಾಣಿಕರಿಗೆ ತೊಂದರೆ ಆಗದಂತೆ ಮಾಡುತ್ತಿದ್ದೇವೆ ಎಂದು ಕೆಕೆಆರ್ಟಿಸಿ ವಿಭಾಗ-೧ರ ಗಂಗಾಧರ್ ಡಿಸಿ ತಿಳಿಸಿದ್ದಾರೆ.
ಇದನ್ನೂ ಓದಿ: kSRTC Strike: ಸಾರಿಗೆ ಮುಷ್ಕರದಲ್ಲಿ ಪಾಲ್ಗೊಂಡ ನೌಕರರ ಸಂಬಳ ಕಟ್, ರಜೆ ರದ್ದು, ಎಸ್ಮಾ ಜಾರಿ