ದುಬೈ: ಭಾರತ ತಂಡ 2025ರ ಚಾಂಪಿಯನ್ಸ್ ಟ್ರೋಫಿ ಟೂರ್ನಿಯ ಫೈನಲ್ಗೆ ಪ್ರವೇಶ ಮಾಡಿದೆ. ಆಸ್ಟ್ರೇಲಿಯಾ ವಿರುದ್ಧ ದುಬೈ ಇಂಟರ್ನ್ಯಾಷನಲ್ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದಿದ್ದ ಸೆಮಿಫೈನಲ್ ಪಂದ್ಯದಲ್ಲಿ 4 ವಿಕೆಟ್ ಗೆಲುವು ಪಡೆಯುವ ಮೂಲಕ ಟೀಮ್ ಇಂಡಿಯಾ ಪ್ರಶಸ್ತಿ ಸುತ್ತಿಗೆ ಲಗ್ಗೆ ಇಟ್ಟಿದೆ. 84 ರನ್ ಗಳಿಸಿ ಭಾರತ ತಂಡದ ಗೆಲುವಿನಲ್ಲಿ ಮಹತ್ತರ ಪಾತ್ರವಹಿಸಿದ ವಿರಾಟ್ ಕೊಹ್ಲಿ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಆದರೆ, ವಿರಾಟ್ ಕೊಹ್ಲಿ ಶತಕ ವಂಚಿತರಾದ ಕಾರಣ ಕೆಎಲ್ ರಾಹುಲ್ ಭಾರಿ ನಿರಾಶೆಗೊಂಡರು ಹಾಗೂ ತಮ್ಮ ಸಹ ಆಟಗಾರನ ವಿರುದ್ಧ ಅಸಮಾಧಾನವನ್ನು ವ್ಯಕ್ತಪಡಿಸಿದರು.
ಸೆಮಿಫೈನಲ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಭಾರತ ತಂಡದ ಪರ ಅತಿದೊಡ್ಡ ಇನಿಂಗ್ಸ್ ಆಡಿದರು. ಮೂರನೇ ಕ್ರಮಾಂಕದಲ್ಲಿ ಬಂದ ವಿರಾಟ್ ಕೊಹ್ಲಿ ಜವಾಬ್ದಾರಿಯುತ ಬ್ಯಾಟಿಂಗ್ ಪ್ರದರ್ಶನ ತೋರಿದರು. ಶುಭಮನ್ ಗಿಲ್ ನಂತರ, ರೋಹಿತ್ ಶರ್ಮಾ ಕೂಡ ಬೇಗನೆ ಔಟಾದರು. ಎರಡು ವಿಕೆಟ್ಗಳು ಬಿದ್ದ ನಂತರ, ವಿರಾಟ್ ಕೊಹ್ಲಿ ಹಾಗೂ ಶ್ರೇಯಸ್ ಅಯ್ಯರ್ ಜೊತೆಗೂಡಿ 91 ರನ್ಗಳ ನಿರ್ಣಾಯಕ ಜೊತೆಯಾಟವನ್ನು ಆಡಿದರು. ಶ್ರೇಯಸ್ ಅಯ್ಯರ್ 45 ರನ್ ಗಳಿಸಿ ವಿಕೆಟ್ ಒಪ್ಪಿಸಿದ ಬಳಿಕ ಅಕ್ಷರ್ ಪಟೇಲ್ (27), ಕೆಎಲ್ ರಾಹುಲ್ (42) ಹಾಗೂ ಹಾರ್ದಿಕ್ ಪಾಂಡ್ಯ (28) ಅಬ್ಬರಿಸಿದರು.
IND vs AUS: ಆಸ್ಟ್ರೇಲಿಯಾ ವಿರುದ್ಧ ಸೇಡು ತೀರಿಸಿ ಫೈನಲ್ ಪ್ರವೇಶಿಸಿದ ಟೀಮ್ ಇಂಡಿಯಾ!
ಶತಕ ವಂಚಿತರಾದ ವಿರಾಟ್ ಕೊಹ್ಲಿ
ಒಂದು ತುದಿಯಲ್ಲಿ ಗಟ್ಟಿಯಾಗಿ ನಿಂತು ಬ್ಯಾಟ್ ಮಾಡುತ್ತಿದ್ದ ವಿರಾಟ್ ಕೊಹ್ಲಿ ಎಲ್ಲರ ಗಮನ ಸೆಳೆದರು. ಅವರು ಆಡಿದ 98 ಎಸೆತಗಳಲ್ಲಿ ಐದು ಬೌಂಡರಿಯೊಂದಿಗೆ 84 ರನ್ ಗಳಿಸಿದರು. ಆ ಮೂಲಕ ಶತಕದಂಚಿನಲ್ಲಿದ್ದರು. ಆದರೆ, 43ನೇ ಓವರ್ನಲ್ಲಿ ಆಡಮ್ ಝಂಪಾ ಬೌಲಿಂಗ್ನಲ್ಲಿ ತಾಳ್ಮೆ ಕಳೆದುಕೊಂಡರು. ಲಾಂಗ್ ಆನ್ ಮೇಲೆ ದೊಡ್ಡ ಹೊಡೆತಕ್ಕೆ ಕೈ ಹಾಕಿ ವಿರಾಟ್ ಕೊಹ್ಲಿ ಕ್ಯಾಚ್ ಕೊಟ್ಟರು.
ವಿರಾಟ್ ಕೊಹ್ಲಿ ವಿರುದ್ದ ಕೆಎಲ್ ರಾಹುಲ್ ಗರಂ
ವಿರಾಟ್ ಕೊಹ್ಲಿ ಜೊತೆ ಕೆಲಕಾಲ ಬ್ಯಾಟ್ ಮಾಡಿದ್ದ ಕೆಎಲ್ ರಾಹುಲ್ ಕೂಡ ಅಬ್ಬರಿಸಿದರು. ಒಂದು ತುದಿಯಲ್ಲಿ ವಿರಾಟ್ ಕೊಹ್ಲಿ ಆಡುತ್ತಿದ್ದರೆ, ಮತ್ತೊಂದು ತುದಿಯಲ್ಲಿ ರಾಹುಲ್ ಇದ್ದರು. ಈ ವೇಳೆ ವಿರಾಟ್ ಕೊಹ್ಲಿ ಶತಕ ಸಿಡಿಸಬೇಕೆಂಬುದು ಕೆಎಲ್ ರಾಹುಲ್ ಬಯಕೆಯಾಗಿತ್ತು. ಆದರೆ, ವಿರಾಟ್ ಕೊಹ್ಲಿ ತಾಳ್ಮೆ ಕಳೆದುಕೊಂಡು ದೊಡ್ಡ ಹೊಡೆತಕ್ಕೆ ಹಾಕಿ ವಿಕೆಟ್ ಒಪ್ಪಿಸಿದರು. ನಾನ್ಸ್ಟ್ರೈಕ್ನಲ್ಲಿ ನಿಂತಿದ್ದ ರಾಹುಲ್ಗೂ ಕೊಹ್ಲಿ ಔಟ್ ಆದ ಬಗ್ಗೆ ಆಘಾತ ವ್ಯಕ್ತಪಡಿಸಿದರು. ಅಲ್ಲದೆ ಶತಕ ಸಿಡಿಸಬಹುದಾದ ಅವಕಾಶವನ್ನು ಕೈ ಚೆಲ್ಲಿದ್ದರಿಂದ ಕೊಹ್ಲಿ ವಿರುದ್ದ ರಾಹುಲ್ ಅಸಮಾಧಾನವನ್ನು ವ್ಯಕ್ತಪಡಿಸಿದರು.
ವಿರಾಟ್ ಕೊಹ್ಲಿಗೆ ಟೂರ್ನಿಯಲ್ಲಿ ಎರಡನೇ ಶತಕ ಗಳಿಸುವ ಅವಕಾಶ ಸಿಕ್ಕಿತ್ತು. ಅವರು ಔಟಾದಾಗ ಭಾರತ ತಂಡದ ಮುಖ್ಯ ಕೋಚ್ ಗೌತಮ್ ಗಂಭೀರ್ ಕೂಡ ನಿರಾಶೆಗೊಂಡರು. ಕ್ರೀಡಾಂಗಣದಲ್ಲಿ ನೆರೆದಿದ್ದ ಪ್ರೇಕ್ಷಕರು ಕೂಡ ಬೇಸರಗೊಂಡರು.