ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Dr Ayyappan: ಪದ್ಮಶ್ರೀ ಪುರಸ್ಕೃತ ಕೃಷಿ ವಿಜ್ಞಾನಿ ಡಾ. ಅಯ್ಯಪ್ಪನ್‌ ಕಾವೇರಿ ನದಿಯಲ್ಲಿ ಶವವಾಗಿ ಪತ್ತೆ

‌ಕೃಷಿ ವಿಜ್ಞಾನಿ ಡಾ. ಎಸ್. ಅಯ್ಯಪ್ಪನ್‌ ಅವರು ನದಿಯಲ್ಲಿ ಕಾಲು ಜಾರಿ ಬಿದ್ದಿರಬಹುದು ಅಥವಾ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಮೃತರ ಸಂಬಂಧಿ ನೀಡಿದ ದೂರಿನ ಮೇರೆಗೆ ಶ್ರೀರಂಗಪಟ್ಟಣ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ಕೃಷಿ ವಿಜ್ಞಾನಿ ಡಾ. ಅಯ್ಯಪ್ಪನ್‌ ಕಾವೇರಿ ನದಿಯಲ್ಲಿ ಶವವಾಗಿ ಪತ್ತೆ

ಡಾ. ಅಯ್ಯಪ್ಪನ್

ಹರೀಶ್‌ ಕೇರ ಹರೀಶ್‌ ಕೇರ May 11, 2025 7:48 AM

ಮಂಡ್ಯ: ಕೃಷಿ ವಿಜ್ಞಾನಿ (agricultural scientist) ಮತ್ತು ಪದ್ಮಶ್ರೀ ಪ್ರಶಸ್ತಿ (padma shri awardee) ಪುರಸ್ಕೃತ ಡಾ.ಎಸ್‌ ಅಯ್ಯಪ್ಪನ್‌ (70) (Dr Ayyappan) ಅವರ ಶವ ಶ್ರೀರಂಗಪಟ್ಟಣದ ಪಶ್ಚಿಮ ವಾಹಿನಿಯಲ್ಲಿ (Kaveri river) ಪತ್ತೆಯಾಗಿದೆ. ಮೇ 7ರಂದು ಮನೆಯಿಂದ ತೆರಳಿದ್ದ ಅವರು ವಾಪಸ್‌ ಬರದೆ ನಾಪತ್ತೆಯಾಗಿದ್ದರು. ಪೊಲೀಸರು ಹುಡುಕಾಟ ನಡೆಸುತ್ತಿದ್ದರೂ ಪತ್ತೆಯಾಗದ ಅವರು ಇದೀಗ ನಿಗೂಢ ರೀತಿಯಲ್ಲಿ ಶವವಾಗಿ ಪತ್ತೆಯಾಗಿದ್ದು, ಅವರ ಅಸಹಜ ಸಾವು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಅವರ ಅಂತ್ಯಕ್ರಿಯೆ ಚಾಮುಂಡಿಬೆಟ್ಟದ ತಪ್ಪಲಿನಲ್ಲಿ ಭಾನುವಾರ ನಡೆಯಲಿದೆ. ಅವರ ನಿಧನಕ್ಕೆ ಕೃಷಿ ಕ್ಷೇತ್ರದಲ್ಲಿ ಸಂತಾಪ ವ್ಯಕ್ತವಾಗಿದೆ.

ಅಯ್ಯಪ್ಪನ್‌ ಅವರು ಪತ್ನಿಯೊಂದಿಗೆ ಮೈಸೂರಿನ ವಿದ್ಯಾರಣ್ಯಪುರಂನ ಮನೆಯಲ್ಲಿ ವಾಸವಿದ್ದರು. ಮೇ 7ರಂದು ಮೊಬೈಲ್‌ ಅನ್ನು ಮನೆಯಲ್ಲಿಯೇ ಇಟ್ಟು ಸ್ಕೂಟರ್‌ನಲ್ಲಿ ತೆರಳಿದ್ದ ಅಯ್ಯಪ್ಪನ್‌ ಅವರು ರಾತ್ರಿಯಾದರೂ ವಾಪಸ್‌ ಬಂದಿರಲಿಲ್ಲ. ಅವರು ನಾಪತ್ತೆಯಾಗಿದ್ದಾರೆ ಎಂದು ಅವರ ಸಂಬಂಧಿ ಶ್ರೀನಿ ದೂರು ನೀಡಿದ್ದರು. ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿದ್ದ ವಿದ್ಯಾರಣ್ಯಪುರಂ ಠಾಣೆ ಪೊಲೀಸರು ಎಲ್ಲೆಡೆ ಪತ್ತೆ ಕಾರ್ಯ ನಡೆಸಿದ್ದರು. ಅವರು ಮೈಸೂರು-ಬೆಂಗಳೂರು ರಸ್ತೆಯ ರಿಂಗ್‌ ರೋಡ್‌ ಜಂಕ್ಷನ್‌ನಲ್ಲಿ ಸ್ಕೂಟರ್‌ನಲ್ಲಿ ತೆರಳುವುದನ್ನು ಸಿಸಿ ಟಿವಿ ಕ್ಯಾಮೆರಾದಲ್ಲಿ ಪತ್ತೆ ಹಚ್ಚಿದ್ದ ಪೊಲೀಸರು, ಶ್ರೀರಂಗಪಟ್ಟಣ ಠಾಣೆ ಪೊಲೀಸರಿಗೆ ಮಾಹಿತಿ ನೀಡಿದ್ದರು.

ಶನಿವಾರ ಬೆಳಗ್ಗೆ ಪಶ್ಚಿಮ ವಾಹಿನಿಯ ಕಾವೇರಿ ನದಿಯಲ್ಲಿ ಶವ ಸಿಕ್ಕಿದ್ದು, ಶ್ರೀರಂಗಪಟ್ಟಣ ಠಾಣೆ ಪೊಲೀಸರಿಗೆ ಪರಿಶೀಲನೆ ವೇಳೆ ಅದು ಅಯ್ಯಪ್ಪನ್‌ ಅವರ ಶವ ಎಂದು ಗೊತ್ತಾಗಿದೆ. ಈ ಸಂಬಂಧ ವಿದ್ಯಾರಣ್ಯಪುರಂ ಠಾಣೆ ಪೊಲೀಸರಿಗೆ ಹಾಗೂ ಕುಟುಂಬದವರಿಗೆ ಮಾಹಿತಿ ನೀಡಲಾಗಿದೆ. ಅಯ್ಯಪ್ಪನ್‌ ಅವರು ನದಿಯಲ್ಲಿ ಕಾಲು ಜಾರಿ ಬಿದ್ದಿರಬಹುದು ಅಥವಾ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಮೃತರ ಸಂಬಂಧಿ ನೀಡಿದ ದೂರಿನ ಮೇರೆಗೆ ಶ್ರೀರಂಗಪಟ್ಟಣ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ಅವರು ಮೈಸೂರಿನ ರಾಮಕೃಷ್ಣ ಆಶ್ರಮ ಹಾಗೂ ಕಾವೇರಿ ನದಿ ದಡಕ್ಕೆ ಧ್ಯಾನ ಮಾಡಲು ಹೋಗುತ್ತಿರುತ್ತಿದ್ದರು ಎಂದು ಗೊತ್ತಾಗಿದೆ. ಡಾ.ಎಸ್‌. ಅಯ್ಯಪ್ಪನ್‌ ಅವರಿಗೆ ಪತ್ನಿ, ಇಬ್ಬರು ಪುತ್ರಿಯರು ಇದ್ದಾರೆ. ಮರಣೋತ್ತರ ಪರೀಕ್ಷೆ ಬಳಿಕ ಪಾರ್ಥಿವ ಶರೀರವನ್ನು ವಾರಸುದಾರರಿಗೆ ಹಸ್ತಾಂತರಿಸಲಾಯಿತು. ಅಂತ್ಯಕ್ರಿಯೆ ಚಾಮುಂಡಿಬೆಟ್ಟದ ತಪ್ಪಲಿನ ರುದ್ರಭೂಮಿಯಲ್ಲಿ ಭಾನುವಾರ ನಡೆಯಲಿದೆ ಎಂದು ಕುಟುಂಬ ಸದಸ್ಯರು ತಿಳಿಸಿದರು.

ಪ್ರಭಾವಿ ಕೃಷಿ ವಿಜ್ಞಾನಿ

ಕೃಷಿ ವಿಜ್ಞಾನಿಯಾಗಿ, ಭಾರತೀಯ ಕೃಷಿ ಸಂಶೋಧನಾ ಸಂಸ್ಥೆಯ ಮಹಾ ನಿರ್ದೇಶಕರಾಗಿ ಸೇವೆ ಸಲ್ಲಿಸಿ, ಕೃಷಿಯಲ್ಲಿ ಸಾಕಷ್ಟು ಸಂಶೋಧನೆಗಳನ್ನು ಕೈಗೊಂಡಿದ್ದವರು ಡಾ.ಎಸ್‌. ಅಯ್ಯಪ್ಪನ್‌. ಚಾಮರಾಜನಗರದ ಸಾಮಾನ್ಯ ಹಳ್ಳಿಯಲ್ಲಿ ಹುಟ್ಟಿದ ವ್ಯಕ್ತಿ ಕೇಂದ್ರ ಸರಕಾರದ ದೊಡ್ಡ ಇಲಾಖೆಯ ಮಹಾ ನಿರ್ದೇಶಕ ಹುದ್ದೆಯವರೆಗೆ ಬೆಳೆದಿದ್ದರು. ಭಾರತದ ʼನೀಲಿ ಕ್ರಾಂತಿʼಯಲ್ಲಿ ಅವರ ಪಾತ್ರವಿತ್ತು.

ಚಾಮರಾಜನಗರ ಜಿಲ್ಲೆ ಯಳಂದೂರು ತಾಲೂಕಿನ ಆಲ್ಕೆರೆ ಅಗ್ರಹಾರ ಎಂಬ ಪುಟ್ಟ ಗ್ರಾಮದಲ್ಲಿ ಜನಿಸಿದವರು ಅಯ್ಯಪ್ಪನ್‌. ಅವರ ತಂದೆ ಸುಬ್ಬಣ್ಣ ಅವರು ಚಾಮರಾಜನಗರದಲ್ಲಿ ವ್ಯಾಪಾರ ನಡೆಸುತ್ತಿದ್ದರು. ಅಯ್ಯಪ್ಪನ್‌ ಅವರು ಪೂರ್ವ ಪ್ರಾಥಮಿಕ ವಿದ್ಯಾಭ್ಯಾಸವನ್ನು ಚಾ.ನಗರದಲ್ಲಿ ನಡೆಸಿ, ಪ್ರಾಥಮಿಕ ಶಿಕ್ಷಣವನ್ನು ನಂಜನಗೂಡಿನ ದಳವಾಯಿ ಸಂಸ್ಥೆಯಲ್ಲಿ ಪೂರೈಸಿದರು. ಬಳಿಕ ಅವರ ಕುಟುಂಬ ಬೆಂಗಳೂರಿನಲ್ಲಿ ನೆಲೆಸಿತು.

ಪ್ರಸಿದ್ಧ ಕೃಷಿ ವಿಜ್ಞಾನಿಯಾಗಿ ಭಾರತೀಯ ಕೃಷಿ ಸಂಶೋಧನಾ ಸಂಸ್ಥೆಯ ಮಹಾನಿರ್ದೇಶಕ ಹುದ್ದೆಯವರೆಗೂ ಅವರು ಬೆಳೆದರು. ಅವರ ಕೃಷಿ ಕ್ಷೇತ್ರದ ಸಂಶೋಧನೆ, ಸೇವೆಗಾಗಿ 2022ರಲ್ಲಿ ಅವರಿಗೆ ಭಾರತ ಸರಕಾರ ಪದ್ಮಶ್ರೀ ಪ್ರಶಸ್ತಿ ನೀಡಿ ಪುರಸ್ಕರಿಸಿತ್ತು. ಇದಕ್ಕೂ ಮೊದಲು ಸಂಸದರಾಗಿದ್ದ ಆರ್‌. ಧ್ರುವನಾರಾಯಣ ಅವರು ಡಾ.ಅಯ್ಯಪ್ಪನ್‌ ಅವರನ್ನು ಚಾ.ನಗರಕ್ಕೆ ಆಹ್ವಾನಿಸಿ, ಕೃಷಿಗೆ ಸಂಬಂಧಿಸಿದ ದೊಡ್ಡ ಕಾರ್ಯಕ್ರಮ ಆಯೋಜಿಸಿ, ಅವರಿಂದ ಉಪನ್ಯಾಸ ಕೊಡಿಸಿದ್ದರು. ತವರೂರಿನಿಂದ ಅಯ್ಯಪ್ಪನ್‌ ಅವರನ್ನು ಸನ್ಮಾನಿಸಲಾಗಿತ್ತು.

ಡಾ.ಅಯ್ಯಪ್ಪನ್‌ ಅವರು ವಿಶೇಷವಾಗಿ ಮೀನುಗಾರಿಕೆ ಮತ್ತು ಜಲಕೃಷಿ ಸಂಶೋಧನೆ ಮತ್ತು ಅಭಿವೃದ್ಧಿಯಲ್ಲಿ ಹಲವಾರು ಹೊಸ ಯೋಜನೆಗಳನ್ನು ಮುನ್ನಡೆಸಿದರು. ಅವರು ಕೇಂದ್ರೀಯ ಸಮುದ್ರ ಮೀನುಗಾರಿಕೆ ಸಂಶೋಧನಾ ಸಂಸ್ಥೆ ನಿರ್ದೇಶಕರಾಗಿಯೂ ಕಾರ್ಯನಿರ್ವಹಿಸಿದ್ದರು. ಮೀನುಗಾರಿಕೆ ಕ್ಷೇತ್ರದಲ್ಲಿ ಸುಸ್ಥಿರ ಅಭಿವೃದ್ಧಿಗೆ ಕೊಡುಗೆ ನೀಡಿದ್ದರು. ಜಲಕೃಷಿ ಮತ್ತು ಮೀನುಗಾರಿಕೆ ಸಂಶೋಧನೆಯಲ್ಲಿ ಅವರ ಕೆಲಸವು ಭಾರತದ ಕರಾವಳಿ ಪ್ರದೇಶಗಳಲ್ಲಿ ಆರ್ಥಿಕ ಸಬಲೀಕರಣಕ್ಕೆ ಸಹಾಯಕವಾಯಿತು. ರಾಷ್ಟ್ರೀಯ ಮೀನುಗಾರಿಕೆ ಅಭಿವೃದ್ಧಿ ಮಂಡಳಿಯ ಕಾರ್ಯಕ್ರಮಗಳಿಗೆ ಮಾರ್ಗದರ್ಶನ ನೀಡಿದ್ದರು.

ಇದನ್ನೂ ಓದಿ: ಕ್ರಿಕೆಟ್ ಅಂಕಿ ಅಂಶ ತಜ್ಞ ಚನ್ನಗಿರಿ ಕೇಶವಮೂರ್ತಿ ಇನ್ನಿಲ್ಲ