SL Bhyrappa: ಜೀವಿತದ ಉಳಿತಾಯದ ಹಣ ಕನ್ನಡ- ಅಕ್ಷರ ಸೇವೆಗೆ ಮೀಸಲಿಟ್ಟ ಭೈರಪ್ಪ: ವಿಶ್ವೇಶ್ವರ ಭಟ್
SL Bhyrappa: ತಮ್ಮ ಹೆಸರಿನ ಪ್ರತಿಷ್ಠಾನ ರಚಿಸಿ, ತಾವು ಜೀವಿತದಲ್ಲಿ ಬರಹದ ಮೂಲಕ ಉಳಿಸಿದ ಹಣವನ್ನು ಅದರ ಮೂಲಕ ಬಡ ವಿದ್ಯಾರ್ಥಿಗಳ ಕಲಿಕೆಗೆ, ವೈದ್ಯಕೀಯ ನೆರವಿಗೆ ಬಳಸಬೇಕು ಎಂಬುದು ಅವರ ಅಪರೂಪದ ಧ್ಯೇಯ, ಆಶಯವಾಗಿದೆ ಎಂದು ವಿಶ್ವೇಶ್ವರ ಭಟ್ ನುಡಿದರು.

ಭೈರಪ್ಪ ಪ್ರತಿಷ್ಠಾನದ ಉದ್ಘಾಟನೆ ಕಾರ್ಯಕ್ರಮದಲ್ಲಿ ವಿಶ್ವೇಶ್ವರ ಭಟ್ ಮಾತನಾಡಿದರು.

ಬೆಂಗಳೂರು: ಹಿರಿಯ ಸಾಹಿತಿ ಎಸ್.ಎಲ್ ಭೈರಪ್ಪನವರ (SL Bhyrappa) ಉದಾತ್ತ ಆಶಯ, ಧ್ಯೇಯಗಳ ಮೂರ್ತರೂಪವಾಗಿ ʼಡಾ.ಎಸ್.ಎಲ್ ಭೈರಪ್ಪ ಪ್ರತಿಷ್ಠಾನʼ ಮೂಡಿಬರುತ್ತಿದೆ. ತಮ್ಮ ಮುಂದಿನ ಜೀವನವನ್ನು ಸಂಪೂರ್ಣವಾಗಿ ಅಕ್ಷರ ಸೇವೆ, ವಿದ್ಯಾಸೇವೆ, ಕನ್ನಡ ಸೇವೆಗೆ ಮೀಸಲಾಗಿಡುವ ಭೈರಪ್ಪನವರ ಬಹಳ ದಿನಗಳ ಕನಸು ಈ ಪ್ರತಿಷ್ಠಾನದ ಮೂಲಕ ನನಸಾಗುತ್ತಿದೆ ಎಂದು ವಿಶ್ವವಾಣಿಯ ಪ್ರಧಾನ ಸಂಪಾದಕ ವಿಶ್ವೇಶ್ವರ ಭಟ್ (Vishweshwara Bhat) ನುಡಿದರು.
ಬೆಂಗಳೂರಿನ ಬಸವನಗುಡಿಯ ಬಿಎಂಎಸ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ನಡೆದ, ಸಾಹಿತಿ ಎಸ್.ಎಲ್.ಭೈರಪ್ಪ ಪ್ರತಿಷ್ಠಾನ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು. ಇನ್ನೆರಡು ತಿಂಗಳು ಕಳೆದರೆ ಭೈರಪ್ಪನವರಿಗೆ 95 ವರ್ಷ ತುಂಬುತ್ತದೆ. ಪ್ರತಿಷ್ಠಾನ ರಚಿಸಿ, ತಾವು ಜೀವಿತದಲ್ಲಿ ಬರಹದ ಮೂಲಕ ಉಳಿಸಿದ ಹಣವನ್ನು ಅದರ ಮೂಲಕ ಬಡ ವಿದ್ಯಾರ್ಥಿಗಳ ಕಲಿಕೆಗೆ, ವೈದ್ಯಕೀಯ ನೆರವಿಗೆ ಬಳಸಬೇಕು ಎಂಬುದು ಅವರ ಅಪರೂಪದ ಧ್ಯೇಯ, ಆಶಯವಾಗಿದೆ. ಅವರ ಕೋರಿಕೆ, ಆಶಯದಂತೆ ಇದು ಈಡೇರುತ್ತಿದೆ ಎಂದರು.
ತಾವು ಉಳಿಸಿದ ಹಣದಿಂದ ಅವರು ಮನಸು ಮಾಡಿದ್ದರೆ ಬೆಂಗಳೂರಿನಲ್ಲಿ ಫ್ಲ್ಯಾಟ್ ಕೊಳ್ಳಬಹುದಿತ್ತು. ಆದರೆ ಇಂಥ ಅನ್ಯ ಉದ್ದೇಶಕ್ಕೆ ಚಿಕ್ಕಾಸನ್ನೂ ಬಳಸುವುದಿಲ್ಲ. ಅದು ಅಕ್ಷರ ಸೇವೆಗೆ ಮುಡಿಪಾಗಿರಲಿ ಎಂದಿದ್ದಾರೆ. ಹೀಗಾಗಿ ಅವರೇ ಸೂಚಿಸಿದ ಟ್ರಸ್ಟಿಗಳನ್ನು ಮುಂದಿಟ್ಟುಕೊಂಡು ಈ ಪ್ರತಿಷ್ಠಾನ ರಚನೆ ಆಗುತ್ತಿದೆ. ಈ ಉದಾತ್ತ ಆಶಯ ಸಮರ್ಪಕವಾಗಿ ಈಡೇರಲಿ ಎಂದು ನುಡಿದರು.
ಮೂರುವರೆ ವರ್ಷದ ಹಿಂದೆ ಭೈರಪ್ಪನವರು ಫೋನ್ ಮಾಡಿ, ನನಗೊಂದು ಕೊನೆಯ ಆಸೆಯಿದೆ. ನಾನು ಹುಟ್ಟಿದ ಊರಿನಿಂದ ಸಾಕಷ್ಟು ಉಪಕೃತನಾಗಿದ್ದೇನೆ. ಆದರೆ ಅಲ್ಲಿನವರ ಕುಡಿಯುವ ನೀರಿನ ಬವಣೆ ನೋಡಲಾರೆ. ಹುಟ್ಟಿದ ಊರಿಗೆ ಕುಡಿಯುವ ನೀರು ಒದಗಿಸಿಕೊಡಬೇಕು ಎಂದುಕೊಂಡಿದ್ದೇನೆ. ಈ ಯೋಜನೆ ಈಡೇರಲು 25 ಕೋಟಿ ರೂ. ಹಣ ಬೇಕು. ಮುಖ್ಯಮಂತ್ರಿಗಳನ್ನು ಭೇಟಿ ಮಾಡಿಸಿ ಎಂದರು. ಸಾಮಾನ್ಯವಾಗಿ ರಾಜಕಾರಣಿಗಳು ಸಾಹಿತಿಗಳನ್ನು ಭೇಟಿಯಾದರೆ ಯಾವುದಾದರೂ ಅವಾರ್ಡ್ ಕೊಟ್ಟು ಸಾಗಹಾಕುತ್ತಾರೆ. ಆದರೆ ಭೈರಪ್ಪನವರ ಮನವಿಯಂತೆ ಆಗಿನ ಮುಖ್ಯಮಂತ್ರಿ ಬೊಮ್ಮಾಯಿಯವರು ಸಮಯ ಕೊಟ್ಟು ಭೈರಪ್ಪನವರ ಮಾತುಗಳನ್ನು ಗಮನ ಕೊಟ್ಟು ಕೇಳಿಸಿಕೊಂಡು ಮನವಿ ಪಡೆದರು. ಬೊಮ್ಮಾಯಿಯವರು ಹಿಂದೆಮುಂದೆ ಯೋಚಿಸದೆ 25 ಕೋಟಿ ರೂ. ಅನುದಾನ ನೀಡಿದರು. ಬೊಮ್ಮಾಯಿಯವರ ಮನೆಯಿಂದ ಹೊರಗೆ ಬರುವಾಗ ಭೈರಪ್ಪನವರ ಕಣ್ಣುಗಳಲ್ಲಿ ನೀರಿತ್ತು. ತಮ್ಮ ಬೇಡಿಕೆಗೆ ದೊರೆತ ಮನ್ನಣೆಯಿಂದ ಅವರು ಮನಸ್ಸು ಆರ್ದ್ರವಾಗಿತ್ತು. ನಂತರ ಅನುದಾನ ದೊರೆತು ಕೆರೆಯ ಜೀರ್ಣೋದ್ಧಾರ ಆಯಿತು ಎಂದು ಅವರು ನೆನಪಿಸಿಕೊಂಡರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಹಾಜರಿದ್ದ ಬಸವರಾಜ ಬೊಮ್ಮಾಯಿ ಅವರು ಭೈರಪ್ಪನವರ ಸಾಹಿತ್ಯದ ಶ್ರೇಷ್ಠತೆಯನ್ನು ಕೊಂಡಾಡಿದರು. ಶತಾವಧಾನಿ ಆರ್.ಗಣೇಶ್ ಅವರು ʼಭೈರಪ್ಪನವರ ಸಾಹಿತ್ಯದಲ್ಲಿ ಮೌಲ್ಯ ವಿವೇಚನೆʼ ಕುರಿತು ಉಪನ್ಯಾಸ ನೀಡಿದರು. ಸಾಹಿತಿ ಎಸ್.ಎಲ್.ಭೈರಪ್ಪ ಪ್ರತಿಷ್ಠಾನದ ಅಧ್ಯಕ್ಷ ಅರುಣ, ಕಾರ್ಯದರ್ಶಿ ಸಹನಾ ವಿಜಯಕುಮಾರ್, ಖಜಾಂಚಿ ಕೃಷ್ಣಪ್ರಸಾದ್ ಹಾಜರಿದ್ದರು.
ಇದನ್ನೂ ಓದಿ: SL Bhyrappa: ಭೈರಪ್ಪನವರದು ಶ್ರೀಮಂತ ಬದುಕು ಹಾಗೂ ಬರಹ: ಬಸವರಾಜ ಬೊಮ್ಮಾಯಿ