ಧರ್ಮಸ್ಥಳ: ಧರ್ಮಸ್ಥಳದಲ್ಲಿ ಹಲವು ಶವಗಳನ್ನು ಹೂತಿದ್ದಾಗಿ ಹೇಳಿದ್ದ ಮಾಸ್ಕ್ ಮ್ಯಾನ್ ಚಿನ್ನಯ್ಯ ಬಂಧನದ ಬಗ್ಗೆ ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ (Veerendra Heggade) ಅವರು ಮೊದಲ ಪ್ರತಿಕ್ರಿಯೆ ನೀಡಿದ್ದಾರೆ. ಈಗ ಒಂದೊಂದೆ ಸತ್ಯ ಹೊರಗೆ ಬರುತ್ತಿವೆ. ಎಲ್ಲಾ ಆರೋಪಗಳಿಂದ ತೊಳೆದಂತಾಗಿದೆ. ಇದರ ಬಗ್ಗೆ ನಾನು ಈಗ ಹೆಚ್ಚು ಮಾತನಾಡಲ್ಲ. ಸತ್ಯಕ್ಕೆ ಜಯ ಸಿಕ್ಕಿದೆ ಎಂದು ಹೇಳಿದ್ದಾರೆ.
ಜನರ ಪ್ರೀತಿ ಕ್ಷೇತ್ರದ ಮೇಲೆ ಹೀಗೆಯೇ ಇರಲಿ. ಬೆಂಬಲಕ್ಕೆ ನಿಂತ ಎಲ್ಲರಿಗೂ ಧನ್ಯವಾದಗಳು. ಎಸ್ಐಟಿ ತನಿಖೆ ಹಂತದಲ್ಲಿರುವುದರಿಂದ ಈ ಬಗ್ಗೆ ನಾನು ಹೆಚ್ಚು ಮಾತನಾಡಲ್ಲ ಎಂದು ಹೇಳಿದ್ದಾರೆ.
ಬುರುಡೆ ಚಿನ್ನಯ್ಯನನ್ನು 10 ದಿನ ಎಸ್ಐಟಿ ಕಸ್ಟಡಿಗೆ ನೀಡಿದ ಕೋರ್ಟ್

ಮಂಗಳೂರು: ಧರ್ಮಸ್ಥಳ ಅಸ್ಥಿಪಂಜರ (Dharmasthala Case) ಪ್ರಕರಣದಲ್ಲಿ ಮುಸುಕುಧಾರಿಯಾಗಿ (Mask man) ಬಂದಿದ್ದ ಚಿನ್ನಯ್ಯನನ್ನು ಬೆಳ್ತಂಗಡಿ ನ್ಯಾಯಾಲಯ 10 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ (police custody) ನೀಡಿ ಆದೇಶಿಸಿದೆ. ನಿನ್ನೆ ರಾತ್ರಿ ಆತನನ್ನು ಸತತ ವಿಚಾರಣೆ ನಡೆಸಿದ್ದ ಎಸ್ಐಟಿ (SIT) ಪೊಲೀಸರು ಇಂದು ಬೆಳಗ್ಗೆ ಚಿನ್ನಯ್ಯನನ್ನು ಬಂಧಿಸಿದ್ದರು. ಬಂಧನ ಬಳಿಕ ವೈದ್ಯಕೀಯ ಪರೀಕ್ಷೆ ನಡೆಸಿದ ಪೊಲೀಸರು ನ್ಯಾಯಾಲಯಕ್ಕೆ ಹಾಜರು ಪಡಿಸಿದರು. ಧರ್ಮಸ್ಥಳ ದೇವಸ್ಥಾನದ ವಿರುದ್ಧ ನಡೆಸಿದ ಷಡ್ಯಂತ್ರದಲ್ಲಿ ಈತ ಭಾಗಿಯಾಗಿರುವ ಕಾರಣ ಎಸ್ಐಟಿ ಪೊಲೀಸರು ವಶಕ್ಕೆ ಕೇಳಿದ್ದರು.
ಪೊಲೀಸರ ಮನವಿಯನ್ನು ಪುರಸ್ಕರಿಸಿದ ಕೋರ್ಟ್ 10 ದಿನಗಳ ಕಾಲ ಎಸ್ಐಟಿ ಕಸ್ಟಡಿಗೆ ನೀಡಿ ಆದೇಶ ಪ್ರಕಟಿಸಿದೆ. ಈ ಪ್ರಕರಣದಲ್ಲಿ ಇನ್ನಷ್ಟು ಮಂದಿ ಷಡ್ಯಂತ್ರದಲ್ಲಿ ಭಾಗಿಯಾಗಿದ್ದಾರೆ. ತಮಿಳುನಾಡಿನಿಂದ ಚಿನ್ನಯ್ಯನನ್ನು ಕರೆತಂದು ಧರ್ಮಸ್ಥಳದ ಬಗ್ಗೆ ಕಥೆ ಕಟ್ಟಿ ಅದನ್ನು ಜಾರಿಗೆ ತರಲು ಈತನನ್ನು ಮುಂದು ಮಾಡಲಾಗಿದೆ. ಈತನಿಗೆ ಹಣದ ನೆರವನ್ನೂ ಕೆಲವರು ಒದಗಿಸಿದ್ದಾರೆ. ಈ ಪ್ರಕರಣದ ಸೂತ್ರಧಾರಿಗಳೇ ಬೇರೆ ಇದ್ದಾರೆ. ಅವರ ಮಾಹಿತಿ ಪಡೆಯಲು ಚಿನ್ನಯ್ಯ ಪೊಲೀಸ್ ಕಸ್ಟಡಿಗೆ ಬೇಕಾಗಿದ್ದಾನೆ ಎಂದು ಎಸ್ಐಟಿ ತಿಳಿಸಿತ್ತು.
ಇದರೊಂದಿಗೆ ಗಿರೀಶ್ ಮಟ್ಟೆಣವರ್ಗೆ ಢವಢವ ಶರುವಾಗಿದೆ. ತನ್ನನ್ನು ಧರ್ಮಸ್ಥಳಕ್ಕೆ ಕರೆತರುವಲ್ಲಿ ಗಿರೀಶ್ ಪಾತ್ರವಿದೆ ಎಂದು ಚಿನ್ನಯ್ಯ ತಿಳಿಸಿದ್ದಾನೆ ಎಂದು ತಿಳಿದುಬಂದಿದೆ. ಧರ್ಮಸ್ಥಳ ವಿರೋಧ ಹೋರಾಟದಲ್ಲಿ ಗುರುತಿಸಿಕೊಂಡ ಸಾಮಾಜಿಕ ಹೋರಾಟಗಾರ ಮಹೇಶ್ ತಿಮರೋಡಿ ಅವರನ್ನು ಕೂಡ ಪೊಲೀಸರು ಬಂಧಿಸಿದ್ದಾರೆ. ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಅವರ ವಿರುದ್ಧ ಅವಹೇಳನಕಾರಿ ಹೇಳಿಕೆ ಹಿನ್ನೆಲೆ ಬಂಧಿಸಲಾಗಿದೆ. ಧರ್ಮಸ್ಥಳ ಕೇಸ್ನಲ್ಲಿ ಬಂಧಿತನಾಗಿರೋ ಚಿನ್ನಯ್ಯನಿಗೂ ಮಹೇಶ್ ತಿಮರೋಡಿಗೂ ಲಿಂಕ್ ಇತ್ತು ಎನ್ನಲಾಗುತ್ತಿದ್ದು, ಚಿನ್ನಯ್ಯನಿಗೆ ಮಹೇಶ್ ತಿಮರೋಡಿನೇ ಆಶ್ರಯ ನೀಡಿದ್ದರು ಎಂಬ ಸ್ಫೋಟಕ ಮಾಹಿತಿ ರಿವೀಲ್ ಆಗಿದೆ.
ಡಿಸೆಂಬರ್ ಕೊನೆಯ ವಾರದಲ್ಲಿ ತಮಿಳುನಾಡಿನಲ್ಲಿದ್ದ ನನ್ನನ್ನು ಧರ್ಮಸ್ಥಳ ದೇವಸ್ಥಾನದ ವಿರೋಧಿ ಗ್ಯಾಂಗ್ ಸಂಪರ್ಕಿಸಿತ್ತು. ಮಾತುಕತೆ ನಡೆಸುವ ವೇಳೆ ಹಣದ ಆಮಿಷ ಒಡ್ಡಿದ್ದರು. ಈ ಪ್ರಕರಣದ ಮುಖ್ಯ ನಾಯಕ ನೀನು. ನಿನ್ನಿಂದಲೇ ಈ ಪ್ರಕರಣಕ್ಕೆ ರೋಚಕ ತಿರುವು ಸಿಗುತ್ತದೆ ಎಂದು ಹೇಳಿದ್ದರು. ಯಾವುದೇ ಕಾರಣಕ್ಕೂ ನೀನು ಭಯ ಪಡುವ ಅಗತ್ಯವಿಲ್ಲ. ತನಿಖೆಯಾದ ನಂತರ ಹಲವು ಜನ ದೂರುದಾರರು ಬರುತ್ತಾರೆ. ಎಲ್ಲ ತನಿಖೆ ನಡೆಯುತ್ತದೆ ಎಂದು ಭರವಸೆ ನೀಡಿದ್ದರು. ಆರಂಭದಲ್ಲಿ ಬೆಂಗಳೂರಿನಲ್ಲಿ ನನಗೆ ಸ್ವಲ್ಪ ತರಬೇತಿ ನೀಡಲಾಗಿತ್ತು. ಪೊಲೀಸರು ಕೇಳಿದಾಗ ಯಾವ ರೀತಿ ಉತ್ತರ ಹೇಳಬೇಕು ಎನ್ನುವುದನ್ನು ತಿಳಿಸಲಾಗಿತ್ತು. ನಂತರ ಸೂತ್ರಧಾರರು ಹೇಳಿದಂತೆ ನಾನು ಪಾತ್ರ ಮಾಡುತ್ತಿದ್ದೆ. ಅವರು ಹೇಳಿದಂತೆ ನಾನು ಮಾಹಿತಿ ನೀಡುತ್ತಿದ್ದೆ ಎಂದು ಚಿನ್ನಯ್ಯ ತಿಳಿಸಿದ್ದ.
ಇದನ್ನೂ ಓದಿ: Dharmasthala case: ಮುಸುಕುಧಾರಿ ಬಂಧನ ನಿಜ, ಇದರ ಹಿಂದಿರುವ ಜಾಲ ಪತ್ತೆಗೆ ಕ್ರಮ: ಜಿ. ಪರಮೇಶ್ವರ್