ಬೆಂಗಳೂರು: ಕತೆ ಕದ್ದ ಆರೋಪ ಪ್ರಕರಣಕ್ಕೆ (Dhurandhar 2 script row) ಸಂಬಂಧಿಸಿ ಧುರಂಧರ್ ಚಿತ್ರತಂಡಕ್ಕೆ ಬಿಗ್ ರಿಲೀಫ್ ಸಿಕ್ಕಿದೆ. 'ಧುರಂಧರ್' ಚಿತ್ರದ ಸೆನ್ಸಾರ್ ಪ್ರಮಾಣಪತ್ರ ರದ್ದುಗೊಳಿಸಲು ಕೋರಿ ಚಲನಚಿತ್ರ ನಿರ್ಮಾಪಕ ಸಂತೋಷ್ ಕುಮಾರ್ ಅವರ ಸಲ್ಲಿಸಿದ್ದ ಅರ್ಜಿಯನ್ನು ಕರ್ನಾಟಕ ಉಚ್ಚ ನ್ಯಾಯಾಲಯ (Karnataka High Court) ವಜಾಗೊಳಿಸಿದೆ.
ಆದಿತ್ಯ ಧರ್ ಅವರು ತಮ್ಮ 'ಡಿ-ಸಾಹೇಬ್' ಚಿತ್ರಕಥೆಯ ಕಥಾವಸ್ತುವನ್ನು ಕದ್ದಿದ್ದಾರೆ ಎಂದು ಆರೋಪಿಸಿ ನಿರ್ಮಾಪಕ ಸಂತೋಷ್ ಕುಮಾರ್ ಅವರು ರಿಟ್ ಅರ್ಜಿ ಸಲ್ಲಿಸಿದ್ದರು. ಆದರೆ ನ್ಯಾಯಮೂರ್ತಿ ಕೆ.ಎಸ್. ಹೇಮಲೇಖಾ ಅವರಿದ್ದ ಏಕಸದಸ್ಯ ಪೀಠವು ಈ ದೂರಿನಲ್ಲಿ ಯಾವುದೇ ಸಾರಾಂಶವಿಲ್ಲ ಎಂದು ಅಭಿಪ್ರಾಯಪಟ್ಟು ಅರ್ಜಿಯನ್ನು ವಜಾಗೊಳಿಸಿದೆ.
ಮತ್ತೊಂದೆಡೆ ಈ ವಿವಾದಕ್ಕೆ ಸಂಬಂಧಿಸಿ ಮುಂಬೈ ಹೈಕೋರ್ಟ್ನಲ್ಲೂ ವಿಚಾರಣೆ ನಡೆದಿದೆ. ಆದಿತ್ಯ ಧರ್ ಅವರು ಸಂತೋಷ್ ಕುಮಾರ್ ವಿರುದ್ಧ ಹೂಡಿದ್ದ ಮಾನನಷ್ಟ ಮೊಕದ್ದಮೆಯಲ್ಲಿ, ಪ್ರಕರಣವು ನ್ಯಾಯಾಲಯದಲ್ಲಿ ಬಾಕಿ ಇರುವವರೆಗೆ ತಾವು ಆದಿತ್ಯ ಧರ್ ವಿರುದ್ಧ ಯಾವುದೇ ಅವಹೇಳನಕಾರಿ ಹೇಳಿಕೆಗಳನ್ನು ನೀಡುವುದಿಲ್ಲ ಎಂದು ಸಂತೋಷ್ ಕುಮಾರ್ ಭರವಸೆ ನೀಡಿದ್ದಾರೆ. ಆದಾಗ್ಯೂ ಸಂತೋಷ್ ಕುಮಾರ್ ಅವರ ಕಾನೂನು ತಂಡವು ಆದಿತ್ಯ ಧರ್ ಅವರನ್ನು 'ಚೋರ್' ಎಂದು ಕರೆದಿದ್ದಕ್ಕಾಗಿ ಕ್ಷಮೆಯಾಚಿಸಲು ನಿರಾಕರಿಸಿದೆ ಮತ್ತು ತಮ್ಮ ಕಕ್ಷಿದಾರರು ತಾವು ಸರಿಯಾಗಿದ್ದೇವೆ ಎಂದು ನಂಬುತ್ತಾರೆ ಎಂದು ತಿಳಿಸಿದೆ.
ಈ ವಿವಾದವು ರಣವೀರ್ ಸಿಂಗ್ ಅಭಿನಯದ 'ಧುರಂಧರ್' ಮತ್ತು ಅದರ ಮುಂದುವರಿದ ಭಾಗ 'ಧುರಂಧರ್ 2' ಚಿತ್ರಗಳ ಕಥೆಗೆ ಸಂಬಂಧಿಸಿದ್ದಾಗಿದೆ. ಈ ಚಿತ್ರಗಳು ಬಾಕ್ಸ್ ಆಫೀಸ್ನಲ್ಲಿ ಭಾರಿ ಯಶಸ್ಸು ಕಂಡಿದ್ದು, ಸುಮಾರು 1300 ಕೋಟಿ ರೂಪಾಯಿ ಗಳಿಸಿವೆ. ಸಂತೋಷ್ ಕುಮಾರ್ ಅವರು ತಮ್ಮ ಚಿತ್ರಕಥೆಯನ್ನು ಸ್ಕ್ರೀನ್ ರೈಟರ್ಸ್ ಅಸೋಸಿಯೇಷನ್ ಆಫ್ ಇಂಡಿಯಾದಲ್ಲಿ ನೋಂದಾಯಿಸಲಾಗಿದೆ ಎಂದು ಹೇಳಿಕೊಂಡಿದ್ದು, ಈ ಕುರಿತು ಕಾನೂನು ಹೋರಾಟವನ್ನು ಮುಂದುವರಿಸಿದ್ದಾರೆ.