ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Kothalavadi Teaser: ಯಶ್ ತಾಯಿ ನಿರ್ಮಾಣದ 'ಕೊತ್ತಲವಾಡಿ' ಟೀಸರ್ ರಿಲೀಸ್; ಪೃಥ್ವಿ ಅಂಬಾರ್‌ ಚಿತ್ರಕ್ಕೆ ʼಅಧ್ಯಕ್ಷʼ ಶರಣ್‌ ಸಾಥ್‌

Pruthvi Ambaar: ರಾಕಿಂಗ್‌ ಸ್ಟಾರ್‌ ಯಶ್‌ ಅವರ ತಾಯಿ ಪುಷ್ಪಾ ಅರುಣ್‌ ಕುಮಾರ್‌ ಹುಟ್ಟು ಹಾಕಿರುವ ಪಿಎ ಪ್ರೊಡಕ್ಷನ್ಸ್‌ ನಿರ್ಮಾಣದ ಮೊದಲ ಚಿತ್ರ ʼಕೊತ್ತಲವಾಡಿʼ. ʼದಿಯಾʼ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ನ ಗಮನ ಸೆಳೆದ ಪೃಥ್ವಿ ಅಂಬಾರ್‌ ನಾಯಕನಾಗಿ ನಟಿಸುತ್ತಿರುವ ಈ ಚಿತ್ರದ ಟೀಸರ್‌ ರಿಲೀಸ್‌ ಆಗಿದ್ದು, ಗಮನ ಸೆಳೆಯುತ್ತಿದೆ.

ಬೆಂಗಳೂರು: ಭಾರತೀಯ ಚಿತ್ರರಂಗವನ್ನು ಕನ್ನಡದತ್ತ ತಿರುಗಿ ನೋಡುವಂತೆ ಮಾಡಿರುವ ನಟ ರಾಕಿಂಗ್‌ ಸ್ಟಾರ್‌ ಯಶ್‌ (Yash) ಅವರ ತಾಯಿ ಪುಷ್ಪಾ ಅರುಣ್‌ ಕುಮಾರ್‌ ತಮ್ಮದೇ ಪಿಎ ಪ್ರೊಡಕ್ಷನ್ಸ್‌ (PA Productions) ಚಿತ್ರ ನಿರ್ಮಾಣ ಸಂಸ್ಥೆ ಸ್ಥಾಪಿಸಿದ್ದು, ಚೊಚ್ಚಲ ಪ್ರಯತ್ನವಾಗಿ ʼಕೊತ್ತಲವಾಡಿʼ ಸಿನಿಮಾ ತಯಾರಾಗಿದೆ. ಈ ಚಿತ್ರದ ಟೀಸರ್‌ ಬಿಡುಗಡೆ (Kothalavadi Teaser) ಬೆಂಗಳೂರಿನ ಒರೆಯನ್‌ ಮಾಲ್‌ನಲ್ಲಿ ನಡೆಯಿತು. ನಿರ್ಮಾಪಕಿ ಪುಷ್ಪಾ ಅರುಣ್‌ ಕುಮಾರ್‌, ಯಶ್‌ ಅವರ ತಂದೆ ಅರುಣ್‌ ಕುಮಾರ್‌, ನಾಯಕ ಪೃಥ್ವಿ ಅಂಬಾರ್‌, ನಾಯಕಿ ಕಾವ್ಯಾ ಶೈವ, ಕಲಾವಿದರಾದ ಗೋಪಾಲಕೃಷ್ಣ ದೇಶಪಾಂಡೆ, ರಾಜೇಶ್ ನಟರಂಗ, ನಿರ್ದೇಶಕ ಶ್ರೀರಾಜ್ ಭಾಗಿಯಾಗಿದ್ದರು. ನಟ ಶರಣ್‌ ಟೀಸರ್‌ ವಿಶೇಷ ಅತಿಥಿಯಾಗಿ ಆಗಮಿಸಿ ಟೀಸರ್‌ ಅನಾವರಣ ಮಾಡಿ ಶುಭಾಶಯ ತಿಳಿಸಿದರು.

ಶರಣ್‌ ಮಾತನಾಡಿ ʼʼಒಂದು ಹೊಸ ಶುರುವಾತಿನ ವೈಬ್‌ ಇಲ್ಲಿ ಕಾಣಿಸುತ್ತಿದೆ. ನಮ್ಮ ಯಶಸ್ಸಿನ ಗುಟ್ಟು ಈ ಒಗ್ಗಟ್ಟು. ಈ ಚಿತ್ರಕ್ಕೆ ಕೆಲಸ ಮಾಡಿರುವ ಮುಖದಲ್ಲಿ ಕುತೂಹಲ, ಪಾಸಿಟಿವ್‌ ಎನರ್ಜಿ, ಭಕ್ತಿ, ಆತ್ಮೀಯತೆ, ಪ್ರೀತಿ ಇದೆ. ಇಷ್ಟು ಸಾಕು ಒಂದು ಯಶಸ್ವಿಗೆ. ಇಷ್ಟು ವರ್ಷದ ಕನಸು ಲೋಕಾರ್ಪಣೆ ಮಾಡುತ್ತಿರುವ ಖುಷಿ ಚಿತ್ರತಂಡದ ಮುಖದಲ್ಲಿ ಕಾಣಿಸುತ್ತದೆ. ಇಡೀ ತಂಡಕ್ಕೆ ದೊಡ್ಡ ಯಶಸ್ಸು ಸಿಗಲಿʼʼ ಎಂದು ಶುಭ ಹಾರೈಸಿದರು.

ʼಕೊತ್ತಲವಾಡಿʼ ಸಿನಿಮಾದ ಟೀಸರ್‌ ಇಲ್ಲಿದೆ:



ಈ ಸುದ್ದಿಯನ್ನೂ ಓದಿ: Kothalavadi Movie: ರಾಕಿಂಗ್ ಸ್ಟಾರ್ ಯಶ್ ತಾಯಿ ನಿರ್ಮಾಣದ ಮೊದಲ ಚಿತ್ರಕ್ಕೆ ʼಕೊತ್ತಲವಾಡಿʼ ಶೀರ್ಷಿಕೆ; ಮಾಸ್ ಅವತಾರದಲ್ಲಿ ಪೃಥ್ವಿ ಅಂಬರ್

ನಿರ್ಮಾಪಕಿ ಪುಷ್ಪಾ ಅರುಣ್‌ ಕುಮಾರ್‌ ಮಾತನಾಡಿ, ʼʼಕೆಲಸ ಮಾತನಾಡಬೇಕು; ನಾವು ಮಾತನಾಡಬಾರದು. ಯಶ್‌ ಮನೆ ಸಿನಿಮಾ ಅಂದರೆ ಇಡೀ ದೇಶವೇ ನೋಡುತ್ತದೆ. ಅದಕ್ಕೆ ತಕ್ಕ ರೀತಿ ಮಾಡಿ. ಇಲ್ಲ ಅಂದರೆ ಮಾಡಬೇಡಿ ಎಂದಿದ್ದೇನೆ. ಯಶ್‌ನಿಂದ ನಾವು ಏನು ಕಲಿತಿದ್ದೇವೆ ಎಂದರೆ ಸಿನಿಮಾ ಏನು ಕೇಳುತ್ತದೆಯೋ ಅದು ಕೊಡಬೇಕು. ಸಿನಿಮಾಗೆ ಮೋಸ ಮಾಡಬಾರದು ಎನ್ನುವುದು. 10 ರೂಪಾಯಿ ಜಾಸ್ತಿಯಾಗಲಿ. ತೊಂದರೆ ಇಲ್ಲ. ಆದರೆ ಕ್ವಾಲಿಟಿ ಕೊಡಬೇಕು. ಕಥೆ ಮಾತನಾಡಬೇಕು. ಅದೇ ರೀತಿ ನೀವು ಮಾಡುತ್ತೇವೆ ಎಂದರೆ ನಿಮಗೆ ಕೊಡುತ್ತೇವೆ ಎಂದು ಹೇಳಿದ್ದೆ. ಅದರಂತೆ ಚಿತ್ರ ಚೆನ್ನಾಗಿ ಮೂಡಿ ಬಂದಿದೆ. ಆಡಿಯನ್ಸ್‌ ರಿಸಲ್ಟ್‌ಗೆ ನಾವು ಕಾಯುತ್ತೇವೆʼʼ ಎಂದು ಹೇಳಿದರು.

ಅರುಣ್‌ ಕುಮಾರ್‌ ಮಾತನಾಡಿ, ʼʼನಿನಗೆ ಖುಷಿಯಾದರೆ ಮಾಡಮ್ಮ. ನಾನು ರೈತ. ನೀನು ಏನ್‌ ಬೇಕಾದರೂ ಮಾಡು ಎಂದು ಪತ್ನಿಗೆ ಬೆಂಬಲವಾಗಿ ನಿಂತಿದ್ದೇನೆʼʼ ಎಂದು ತಿಳಿಸಿದರು.

ನಟ ಪೃಥ್ವಿ ಅಂಬಾರ್‌ ಮಾತನಾಡಿ, ʼʼರಾಜು ಸರ್‌ ನನಗೆ ಮೊದಲಿನಿಂದ ಪರಿಚಯ. ನನಗೆ ಅವರು ಹೇಳಿರುವ ಎರಡನೇ ಕಥೆ ಇದು. ಹಳ್ಳಿಯ ಸೊಡಗಿರುವ, ಹಳ್ಳಿಯ ಮುಗ್ದ, ಪವರ್‌ ಫುಲ್‌ ಸ್ಟ್ರಾಂಗ್‌ ಕ್ಯಾರೆಕ್ಟರ್‌ ಪ್ಲೇ ಮಾಡಬೇಕು ಎಂಬ ಮನಸ್ಸು ಇತ್ತು. ಎಲ್ಲರೂ ಚೆನ್ನಾಗಿ ಪಾತ್ರ ಮಾಡಿದ್ದಾರೆ. ಸಿನಿಮಾ ಮುಗಿದ್ರು ಪ್ರೊಡ್ಯೂಸರ್‌ ಯಾರು ಎಂದು ಗೊತ್ತಿರಲಿಲ್ಲ. ಪ್ರೊಡಕ್ಷನ್‌ ಹೌಸ್‌ ಮೀಟ್‌ ಮಾಡೋಣಾ ಎಂದು ರಾಜು ಸರ್‌ ಹೇಳುತ್ತಿದ್ದರು. ಪುಷ್ಪಾ ಅವರ ಹಾಸನದ ಮನೆಗೆ ಹೋದೆವು. ಮೀಟಿಂಗ್‌ ಮುಗಿಸಿ ಹೊರಟ ಬಳಿಕ ಅವರ ಕಾಲಿಗೆ ಬಿದ್ದಾಗ ನನ್ನ ಮಗನಿಗಿಂತ ಚೆನ್ನಾಗಿ ಬೆಳೆಯಪ್ಪ ಎಂದರು. ಅವರು ಬ್ಯಾಕ್‌ಗ್ರೌಂಡ್‌ ಇಲ್ಲದವರ ಜತೆ ನಿಲ್ಲುತ್ತಾರೆ ಎಂಬ ನಂಬಿಕೆ ಇದೆ. ಸಿನಿಮಾ ಕಥೆಗೆ ಏನೋ ಬೇಕು ಎಲ್ಲವನ್ನೂ ಕೊಟ್ಟಿದ್ದಾರೆ. ಬಹಳ ಪ್ರೀತಿಯಿಂದ ಎಲ್ಲರೂ ಈ ಸಿನಿಮಾಕ್ಕೆ ಕೆಲಸ ಮಾಡಿದ್ದಾರೆʼʼ ಎಂದು ಹೇಳಿದರು.

Kothalavadi 1

ನಿರ್ದೇಶಕ ಶ್ರೀರಾಜ್‌ ಮಾತನಾಡಿ, ''ನನಗೆ ಮೊದಲ ಬಾರಿಗೆ ಅವಕಾಶ ಕೊಟ್ಟಿರುವುದಕ್ಕೆ ಅಪ್ಪಾಜಿ-ಅಮ್ಮನಿಗೆ ಧನ್ಯವಾದ. ಅಮ್ಮ ಕಥೆಗಯನ್ನು ಚೆನ್ನಾಗಿ ಜಡ್ಜ್‌ಮೆಂಟ್‌ ಮಾಡುತ್ತಾರೆ. ಆಗ ನಾನು ಕಥೆ ಹೇಳಿದೆ. ಅವರು ಇದು ವರ್ಕ್‌ ಆಗಲ್ಲ ಎಂದರು. ʼಕೊತ್ತಲವಾಡಿʼ ಒನ್‌ ಲೈನ್‌ ಕಥೆ ಹೇಳಿದೆ. ಅವರಿಗೆ ಇಷ್ಟವಾಯ್ತು. ಅದಕ್ಕೆ ಓಂಕಾರ ಹಾಕಿದರು. ಕಥೆ ಬರೆಯೋದಿಕ್ಕೆ ಎಂಟು ತಿಂಗಳು ಟೈಮ್‌ ತೆಗೆದುಕೊಂಡೆ. ಕಥೆ ಪೂರ್ತಿಯಾದಾಗ ಬಾ ಎಂದಿದ್ದರು. ಅಮ್ಮನಿಗೆ ಪೂರ್ತಿಯಾಗಿ ಕಥೆ ಹೇಳಿದೆ ಅವರಿಗೆ ಇಷ್ಟವಾಯ್ತು. ಅಲ್ಲಿಂದ ಈ ಜರ್ನಿ ಶುರುವಾಯ್ತುʼʼ ಎಂದು ವಿವರಿಸಿದರು.

ಹೇಗಿದೆ ಟೀಸರ್?

ʼಕೊತ್ತಲವಾಡಿʼ ಟೀಸರ್‌ ಅನ್ನು ಅದ್ಭುತವಾಗಿ ಕಟ್ಟಿಕೊಡಲಾಗಿದೆ. ಇಷ್ಟು ದಿನ ರೋಸ್‌ ಹಿಡಿಯುತ್ತಿದ್ದ ಪೃಥ್ವಿ ಈಗ ಕಂಪ್ಲೀಟ್‌ ರಗಡ್‌ ಹಾಗೂ ಮಾಸ್‌ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ʼಕೊತ್ತಲವಾಡಿʼ ಎಂಬ ಹಳ್ಳಿಯಲ್ಲಿ ನಡೆಯುವ ಕಥೆಯನ್ನು ನಿರ್ದೇಶಕ ಶ್ರೀರಾಜ್‌ ಹೇಳೋದಿಕ್ಕೆ ಹೊರಟಿದ್ದಾರೆ. ವಿಕಾಸ್‌ ವಸಿಷ್ಠ ಸಂಗೀತ, ಅಭಿನಂದನ್‌ ಕಶ್ಯಪ್‌ ಹಿನ್ನೆಲೆ ಸಂಗೀತ ಟೀಸರ್‌ ಹೈಲೆಟ್.

Kothalavadi 2

ಹಿರಿಯ ನಿರ್ದೇಶಕರಾದ ಕೆವಿ ರಾಜು, ರವಿಶ್ರೀವತ್ಸ ಗರಡಿಯಲ್ಲಿ ಕೆಲಸ ಮಾಡಿರುವ ಶ್ರೀರಾಜ್ ಈ ಚಿತ್ರದ ಮೂಲಕ ಸ್ವತಂತ್ರ ನಿರ್ದೆಶಕರಾಗಿ ಮೊದಲ ಹೆಜ್ಜೆ ಇಡುತ್ತಿದ್ದಾರೆ. ಕನ್ನಡದ ಪ್ರತಿಭಾನ್ವಿತ ನಟ ಪೃಥ್ವಿ ಅಂಬಾರ್‌ಗೆ ನಾಯಕಿಯಾಗಿ ಕಿರುತೆರೆ ನಟಿ ಕಾವ್ಯಾ ಶೈವ ಅಭಿನಯಿಸುತ್ತಿದ್ದಾರೆ. ಗೋಪಾಲಕೃಷ್ಣ ದೇಶಪಾಂಡೆ, ರಾಜೇಶ್ ನಟರಂಗರಂತಹ ಅನುಭವಿ ತಾರಾಬಳಗ ಚಿತ್ರದಲ್ಲಿದೆ. ಯುವ ನಿರ್ದೇಶಕರ ಜತೆಗೆ ಹಿನ್ನೆಲೆ ಸಂಗೀತ ಕೊಟ್ಟಿರುವ ಅಭಿನಂದನ್ ಕಶ್ಯಪ್, ಸಾಹಸ ನಿರ್ದೇಶಕ ಸಾಗರ್ ಕೂಡ ಹೊಸಬರೇ ಎನ್ನುವುದು ವಿಶೇಷ.

ಹಳ್ಳಿ ಹಿನ್ನೆಲೆಯಲ್ಲಿ ಸಾಗುವ ಕಥೆಯಲ್ಲಿ ಪೃಥ್ವಿ ಅಂಬಾರ್‌ ಆ್ಯಕ್ಷನ್‌ ಹೀರೋ ಆಗಿ ಕಾಣಿಸಿಕೊಳ್ಳುತ್ತಾರೆ. ಕಾರ್ತಿಕ್ ಎಸ್. ಕ್ಯಾಮೆರಾ ಕೈಚಳಕ, ರಾಮಿಸೆಟ್ಟಿ ಪವನ್ ಸಂಕಲನ, ವಿಕಾಸ್ ವಸಿಷ್ಠ ಸಂಗೀತ, ರಘು ನಿಡುವಳ್ಳಿ ಸಂಭಾಷಣೆ, ಡಾ.ವಿ.ನಾಗೇಂದ್ರ ಪ್ರಸಾದ್, ಕಿನ್ನಾಳ್ ರಾಜ್, ಪ್ರಮೋದ್ ಮರವಂತೆ, ಗೌಸ್ ಪಿರ್ ಸಾಹಿತ್ಯ ʼಕೊತ್ತಲವಾಡಿʼ ಸಿನಿಮಾಕ್ಕೆ ಇದೆ.

Ramesh Ballamoole

View all posts by this author