ಜೈಪುರ, ಫೆ. 26: ನ್ಯಾಶನಲ್ ಕ್ರಶ್ ರಶ್ಮಿಕಾ ಮಂದಣ್ಣ ಇದೀಗ ಅಧಿಕೃತವಾಗಿ ವಿಜಯ್ ದೇವರಕೊಂಡ ಪತ್ನಿಯಾಗಿದ್ದಾರೆ. ಹೌದು, ರಾಜಸ್ಥಾನದ ಉದಯಪುರದಲ್ಲಿ ಫೆಬ್ರವರಿ 26ರಂದು ನಡೆದ ಸಮಾರಂಭದಲ್ಲಿ ವಿಜಯ್ ದೇವರಕೊಂಡ ಮತ್ತು ಕನ್ನಡತಿ ರಶ್ಮಿಕಾ ಮಂದಣ್ಣ ವೈವಾಹಿಕ ಜೀವನಕ್ಕೆ ಕಾಲಿಟ್ಟದ್ದಾರೆ. ಸಂಪ್ರದಾಯಿಕವಾಗಿ ನಡೆದ ಈ ಸಮಾರಂಭದ ಫೋಟೊಗಳನ್ನು ಇದೀಗ ಈ ಜೋಡಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದೆ. ಜತೆಗೆ ರಶ್ಮಿಕಾ ಭಾವುಕ ಪೋಸ್ಟ್ ಶೇರ್ ಮಾಡಿದ್ದಾರೆ. ನಿಜವಾದ ಪ್ರೀತಿ ತೋರಿಸಿಕೊಟ್ಟ ವ್ಯಕ್ತಿ ಎಂದು ವಿಜಯ್ ದೇವರಕೊಂಡ ಅವರನ್ನು ಹೊಗಳಿದ್ದಾರೆ.
ʼʼವಿಜಯ್ ದೇವರಕೊಂಡ-ನನ್ನ ಪತಿಯನ್ನು ಈಗ ಪರಿಚಯಿಸುತ್ತಿದ್ದೇನೆʼʼ ಎಂದು ರಶ್ಮಿಕಾ ತಮ್ಮ ಪೋಸ್ಟ್ ಆರಂಭಿಸಿದ್ದಾರೆ. ʼʼನಿಜವಾದ ಪ್ರೀತಿ ಏನು ಎನ್ನುವುದನ್ನು ಕಲಿಸಿದ ವ್ಯಕ್ತಿ ಇವರು. ಮನಃಶಾಂತಿ ಜತೆ ದೊಡ್ಡ ಕನಸು ಕಾಣಲು ಪ್ರೇರಪಿಸಿ, ಅದನ್ನು ಸಾಧಿಸುವ ಸಾಮರ್ಥ್ಯ ನನಗಿದೆ ಎಂದು ಪ್ರತಿ ದಿನ ನಂಬಿಸಿ, ಹುರಿದುಂಬಿಸಿದ ವ್ಯಕ್ತಿ ಇವರು. ನಾನು ಮನಸಾರೆ ಕುಣಿಯುವುದನ್ನು ಸಂಭ್ರಮಿಸಿ ಪ್ರೋತ್ಸಾಹಿಸಿದ ವ್ಯಕ್ತಿ ಇವರುʼʼ ಎಂದಿದ್ದಾರೆ.
ವಿಜಯ್ ದೇವರಕೊಂಡ ಅವರ ಇನ್ಸ್ಟಾಗ್ರಾಮ್ ಪೋಸ್ಟ್:
ʼʼಸ್ನೇಹಿತರೊಂದಿಗಿನ ಪ್ರವಾಸ ಸ್ಮರಣೀಯ ಎಂದು ಹೇಳಿಕೊಟ್ಟವರು ಇವರು. ನಾನು ಕಂಡ ಕನಸಿನಂತೆ ಬದುಕಲು ಸ್ವಾತಂತ್ರ್ಯ, ಅವಕಾಶವನ್ನು ನೀಡಿದ ವ್ಯಕ್ತಿ ಇವರು. ನಾನು ನಿಜವಾಗಿಯೂ ಲಕ್ಕಿʼʼ ಎಂದು ಹೇಳಿದ್ದಾರೆ.
ʼʼವಿಜ್ಜು, ನಿನ್ನ ಬಗ್ಗೆ ನನಗಿರುವ ಭಾವನೆ ವಿವರಿಸಲು ಪದಗಳು ಸಾಲುತ್ತಿಲ್ಲ. ನನ್ನ ಎಲ್ಲ ಸಾಧನೆ, ಹೋರಾಟ, ಸುಖ ದುಃಖ, ಸಂತೋಷ ಜೀವನ ಎಲ್ಲದ್ದಕ್ಕೂ ಈಗ ಅರ್ಥ ಸಿಕ್ಕಿದೆ. ಎಲ್ಲದಕ್ಕೂ ನೀನು ಸಾಕ್ಷಿಯಾಗಿದ್ದಿʼʼ ಎಂದು ರಶ್ಮಿಕಾ ಮಂದಣ್ಣ ಭಾವುಕರಾಗಿದ್ದಾರೆ.
ರಶ್ಮಿಕಾ ಮಂದಣ್ಣ ಮದುವೆಯ ವಿಡಿಯೊ:
ಈಗ ಪಾರ್ಟಿ ಸಮಯ
ʼʼನಿನ್ನ ಪತ್ನಿಯಾಗಲು ನಾನು ಅತೀವ ಉತ್ಸುಕಳಾಗಿದ್ದೇನೆ. ನಿನ್ನ ಪತ್ನಿ ಎಂದು ಕರೆಯಿಸಿಕೊಳ್ಳುವುದೇ ನನ್ನ ಪಾಲಿಗೆ ದೊಡ್ಡ ಹೆಮ್ಮೆ. ಈಗ ಪಾರ್ಟಿ ಸಮಯ. ಅತ್ಯುತ್ತಮ ಬದುಕನ್ನು ಇಬ್ಬರೂ ಬಾಳೋಣ. ಲವ್ ಯೂʼʼ ಎಂದು ರಶ್ಮಿಕಾ ಮಂದಣ್ಣ ಹೇಳಿಕೊಂಡಿದ್ದಾರೆ.
ವೈರಲ್
ಸದ್ಯ ರಶ್ಮಿಕಾ ಅವರ ಈ ಪೋಸ್ಟ್ ವೈರಲ್ ಆಗಿದೆ. ಜತೆಗೆ ಕೆಲವೊಂದಿಷ್ಟು ಅನುಮಾನಗಳನ್ನೂ ಹುಟ್ಟು ಹಾಕಿದೆ. ಈ ಪೋಸ್ಟ್ ಮೂಲಕ ಕೆಲವೊಂದು ಟೀಕೆಗೆ, ಪ್ರಶ್ನೆಗಳಿಗೆ ರಶ್ಮಿಕಾ ಉತ್ತರಿಸಿದ್ದಾರಾ ಎಂದು ಅಭಿಮಾನಿಗಳು ಮಾತನಾಡಿಕೊಳ್ಳುತ್ತಿದ್ದಾರೆ. ಎಲ್ಲರಿಗೂ ತಿಳಿದಿರುವಂತೆ ಕೆಲವು ವರ್ಷಗಳ ಹಿಂದೆ ಸ್ಯಾಂಡಲ್ವುಡ್ ನಟ ರಕ್ಷಿತ್ ಶೆಟ್ಟಿ ಜತೆ ರಶ್ಮಿಕಾ ವಿವಾಹ ನಿಶ್ಚಿತಾರ್ಥ ನಡೆದಿತ್ತು. ಬಳಿಕ ಈ ಸಂಬಂಧ ಮುರಿದು ಬಿದ್ದಿತ್ತು. ಈ ಬಗ್ಗೆ ಸ್ಪಷ್ಟ ಕಾರಣ ಗೊತ್ತಾಗಿಲ್ಲವಅದರೂ ಹಲವರು ರಶ್ಮಿಕಾ ಅವರನ್ನೇ ನೇರವಾಗಿ ಟೀಕಿಸಿದ್ದರು. ಈ ಬಗ್ಗೆ ಇದುವರೆಗೆ ತುಟಿ ಬಿಚ್ಚದ ಅವರು ಈ ಪೋಸ್ಟ್ ಮೂಲಕ ಟೀಕೆಗಳಿಗೆ ಉತ್ತರ ನೀಡಿದ್ದಾರೆ ಎನ್ನಲಾಗಿದೆ. ನೈಜ ಪ್ರೀತಿ ಹೇಗಿರುತ್ತದೆ ಎನ್ನುವುದನ್ನು ತೋರಿಸಿಕೊಟ್ಟ ವ್ಯಕ್ತಿ ದೇವರಕೊಂಡ ಎನ್ನುವ ಮೂಲಕ ತಮ್ಮ ಆಯ್ಕೆ ಸರಿಯಾಗಿದೆ ಎಂದು ಹೇಳಿಕೊಂಡಿದ್ದಾರೆ.