ಹೈದರಾಬಾದ್, ಜೂ. 14: ಇತ್ತೀಚೆಗೆ ಹಸೆಮಣೆಗೇರಿದ ವಿಜಯ್ ದೇವರಕೊಂಡ (Vijay Deverakonda)-ರಶ್ಮಿಕಾ ಮಂದಣ್ಣ (Rashmika Mandanna) ಜೋಡಿ ನುಡಿದಂತೆ ನಡೆಯುವ ಮೂಲಕ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ. ಮದುವೆ ವೇಳೆ ವಿಜಯ್ ದೇವಕೊಂಡ ಅವರ ಹುಟ್ಟೂರು ತೆಲಂಗಾಣದ ಅಚ್ಚಂಪೇಟ ತಾಲೂಕಿನ ಸರ್ಕಾರಿ ಶಾಲೆಗಳ 9 ಮತ್ತು 10ನೇ ತರಗತಿಯ ವಿದ್ಯಾರ್ಥಿಗಳಿಗೆ 'ವಿದ್ಯಾರ್ಥಿ ವೇತನ' ಯೋಜನೆ ಘೋಷಿಸಿದ್ದ ದಂಪತಿ ಇದೀಗ ಅದನ್ನು ವಿತರಿಸುವ ಮೂಲಕ ಕೊಟ್ಟ ಮಾತನ್ನು ಉಳಿಸಿಕೊಂಡಿದ್ದಾರೆ. ಖುದ್ದು ವಿಜಯ್ ಮತ್ತು ರಶ್ಮಿಕಾ 44 ಸರ್ಕಾರಿ ಶಾಲೆಗಳ 9 ಮತ್ತು 10ನೇ ತರಗತಿಯ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಿಸಿದ್ದಾರೆ.
ವಿಜಯ್ ದೇವರಕೊಂಡ ಅವರ ದೇವಕೊಂಡ ಫೌಂಡೇಷನ್ ಮೂಲಕ ಅಚ್ಚಂಪೇಟ ಮಂಡಲದ 9 ಮತ್ತು 10ನೇ ತರಗತಿಯಲ್ಲಿ ಉತ್ತಮ ಸಾಧನೆ ಮಾಡಿದ ಒಟ್ಟು 180 ವಿದ್ಯಾರ್ಥಿಗಳಿಗೆ ಸ್ಕಾಲರ್ಶಿಪ್ ವಿತರಿಸಲಾಗಿದೆ.
ವಿಜಯ್ ದೇವರಕೊಂಡ ಅವರ ಎಕ್ಸ್ ಪೋಸ್ಟ್:
ಈ ಬಗ್ಗೆ ವಿಜಯ್ ದೇವರಕೊಂಡ ತಮ್ಮ ಎಕ್ಸ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ʼʼನನ್ನ ತಂದೆ ಜನಿಸಿದ ನಾಗರ್ಕರ್ನೂಲ್ ಜಿಲ್ಲೆಯ ತುಮ್ಮನಪೇಟೆಗೆ ಹೋಗುತ್ತಿದ್ದೇವೆ. ಈ ಫೆಬ್ರವರಿಯಲ್ಲಿ ನಾನು ಮತ್ತು ರಶ್ಮಿಕಾ ಮಂದಣ್ಣ ನಮ್ಮ ಚಿಕ್ಕ ಕನಸೊಂದನ್ನು ಘೋಷಿಸಿದ್ದೆವು. ತೆಲಂಗಾಣದ ಅಚ್ಚಂಪೇಟ ಮಂಡಲದ ಪ್ರತಿಭಾವಂತ 9 ಮತ್ತು 10ನೇ ತರಗತಿ ವಿದ್ಯಾರ್ಥಿಗಳಿಗೆ ಸ್ಕಾಲರ್ಶಿಪ್ ನೀಡುವುದಾಗಿ ಹೇಳಿದ್ದೆವು. ಅದರಂತೆ ಇದೀಗ ಸ್ಕಾಲರ್ಶಿಪ್ ವಿತರಿಸುತ್ತಿದ್ದೇವೆʼʼ ಎಂದಿದ್ದಾರೆ. ಜತೆಗೆ ಸ್ಕಾಲರ್ಶಿಪ್ಗೆ ಅರ್ಹರಾದ, ತಮ್ಮ ಹೆತ್ತವರಿಗೆ ಕೀರ್ತಿ ತಂದ ವಿದ್ಯಾರ್ಥಿಗಳ ಪಟ್ಟಿ ನೀಡಿದ್ದಾರೆ. ಸದ್ಯ ನುಡಿದಂತೆ ನಡೆದ ಸ್ಟಾರ್ ದಂಪತಿಯ ನಡೆಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಅಭಿಮಾನಿಗಳು ಅವರಿಬ್ಬರನ್ನು ಅಭಿನಂದಿಸಿದ್ದಾರೆ.
ಹುಟ್ಟೂರಿನ ಶಾಲಾ ಮಕ್ಕಳಿಗೆ ಸ್ಕಾಲರ್ಶಿಪ್ ಘೋಷಣೆ ಮಾಡಿದ ವಿಜಯ್ ದೇವರಕೊಂಡ
ಮದುವೆ ಬಳಿಕ ತುಮ್ಮನಪೇಟೆಗೆ ಭೇಟಿ ನೀಡಿದ್ದ ದಂಪತಿ
ಮದುವೆಯಾದ ಬಳಿಕ ನಟ ವಿಜಯ್ ದೇವರಕೊಂಡ ಮತ್ತು ನಟಿ ರಶ್ಮಿಕಾ ಮಂದಣ್ಣ ಮಾರ್ಚ್ 2ರಂದು ತೆಲಂಗಾಣದ ಅಚ್ಚಂಪೇಟ ತಾಲೂಕಿನ ತುಮ್ಮನಪೇಟೆಗೆ ಭೇಟಿ ನೀಡಿದ್ದರು. ತುಮ್ಮನಪೇಟೆಯಲ್ಲಿ ವಿಜಯ್ ಹೊಸದಾಗಿ ಒಂದು ಫಾರ್ಮ್ಹೌಸ್ ನಿರ್ಮಾಣ ಮಾಡಿದ್ದಾರೆ. ಹಾಗಾಗಿ ಮದುವೆ ಬಳಿಕ ಅದರ ʻಗೃಹ ಪ್ರವೇಶ’ ಮತ್ತು ‘ಸತ್ಯನಾರಾಯಣ ವ್ರತ’ ಪೂಜೆಯನ್ನು ನೆರವೇರಿಸಿದ್ದರು. ಹುಟ್ಟೂರಿಗೆ ಬಂದ ವಿಜಯ್ ಮತ್ತು ರಶ್ಮಿಕಾಗೆ ಅದ್ದೂರಿಯಾಗಿ ಸ್ವಾಗತ ಕೋರಲಾಗಿತ್ತು. ಇದೇ ವೇಳೆ ವಿದ್ಯಾರ್ಥಿಗಳಿಗೆ ವಿಜಯ್ ಸ್ಕಾಲರ್ಶಿಪ್ ಘೋಷಣೆ ಮಾಡಿದ್ದರು.
ಸ್ಕಾಲರ್ಶಿಪ್ ವಿತರಿಸಿದ ವಿಜಯ್-ರಶ್ಮಿಕಾ:
ಮತ್ತೆ ತೆರೆ ಮೇಲೆ ಒಂದಾದ ಗೀತಾ-ಗೋವಿಂದಂ
ಸದ್ಯ ರಿಯಲ್ ಆಗಿ ಸತಿ-ಪತಿಗಳಾಗಿರುವ ವಿಜಯ್ ಮತ್ತು ರಶ್ಮಿಕಾ ತೆರೆಮೇಲೆಯೂ ಒಂದಾಗಿದ್ದಾರೆ. ʼರಣಬಾಲಿʼ ಚಿತ್ರದಲ್ಲಿ ಇವರಿಬ್ಬರು ನಟಿಸುತ್ತಿದ್ದಾರೆ. ರಾಹುಲ್ ಸಾಂಕೃತ್ಯಾಯನ್ ನಿರ್ದೇಶನದ ತೆಲುಗಿನ ಈ ಪ್ಯಾನ್ ಇಂಡಿಯಾ ಸಿನಿಮಾವನ್ನು ಮೈತ್ರಿ ಮೂವಿ ಮೇಕರ್ಸ್ ಸಂಸ್ಥೆ ನಿರ್ಮಾಣ ಮಾಡುತ್ತಿದೆ. ಸೆಪ್ಟೆಂಬರ್ 11ರಂದು ಈ ಚಿತ್ರವನ್ನು ಗ್ರ್ಯಾಂಡ್ ಆಗಿ ರಿಲೀಸ್ ಮಾಡಲು ಚಿತ್ರತಂಡ ಪ್ಲ್ಯಾನ್ ಮಾಡಿಕೊಂಡಿದೆ. 19ನೇ ಶತಮಾನದ ರಣಬಾಲಿ ಎಂಬ ಸ್ವಾತಂತ್ರ್ಯ ಹೋರಾಟಗಾರನ ಕಥೆಯನ್ನು ಈ ಸಿನಿಮಾ ಹೊಂದಿದೆ. ಮದುವೆ ಬಳಿಕ ವಿಜಯ್ ಮತ್ತು ರಶ್ಮಿಕಾ ಮೊದಲ ಬಾರಿ ಒಟ್ಟಾಗಿ ಕಾಣಿಸಿಕೊಳ್ಳುವ ಚಿತ್ರ ಇದಾಗಿರುವುದರಿಂದ ಸಾಕಷ್ಟು ನಿರೀಕ್ಷೆ ಮೂಡಿದೆ.
ಮನರಂಜನೆಯ ಇನ್ನಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
ʼಪ್ರವಾಸಿ ಪ್ರಪಂಚʼ ವೆಬ್ಸೈಟ್ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ.