ಅಮೃತಸರ: ಸಿಖ್ಖರ ಪವಿತ್ರ ಸ್ಥಳ ಸ್ವರ್ಣ ಮಂದಿರದಲ್ಲಿ(Amritsar Golden Temple) ವ್ಯಕ್ತಿಯೊಬ್ಬ ಏಕಾಏಕಿ ಕಬ್ಬಿಣದ ರಾಡ್ನಿಂದ ದಾಳಿ ನಡೆಸಿದ್ದು, ಐವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಕಿಡಿಗೇಡಿಯನ್ನು ತಕ್ಷಣ ಪೊಲೀಸರು ಅರೆಸ್ಟ್ ಮಾಡಿದ್ದು, ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲಾಗಿದೆ. ಭಕ್ತರು ಮತ್ತು ಸ್ಥಳೀಯರು ಸೇರಿದ್ದ ಅಡುಗೆಮನೆ ಅಥವಾ ಗುರು ರಾಮ್ ದಾಸ್ ಲಂಗರ್ ಬಳಿ ಕಿಡಿಗೇಡಿ ಏಕಾಏಕಿ ದಾಳಿ ನಡೆಸಲು ಶುರು ಮಾಡಿದ್ದಾನೆ. ಈ ಬೆನ್ನಲ್ಲೇ ಅಲ್ಲಿದ್ದ ಜನ ಭಯಭೀತಗೊಂಡಿದ್ದಾರೆ. ಇನ್ನು ಘಟನೆಯಲ್ಲಿ ಶಿರೋಮಣಿ ಗುರುದ್ವಾರ ಪ್ರಬಂಧಕ್ ಸಮಿತಿಯ (SGPC) ಇಬ್ಬರು ಸೇವಾದಾರರು (ಸ್ವಯಂಸೇವಕರು) ಗಾಯಗೊಂಡಿದ್ದು, ಅಮೃತಸರದ ಶ್ರೀ ಗುರು ರಾಮ್ ದಾಸ್ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಗೆ ದಾಖಲಿಸಲಾಗಿದೆ.
ಇನ್ನು ದಾಳಿಕೋರರ ಮತ್ತು ಆತನ ಸಹಚರನನ್ನು ಅಲ್ಲಿ ನೆರೆದಿದ್ದ ಜನ ಸೆರೆ ಹಿಡಿದಿದ್ದು, ಸರಿಯಾಗಿ ಥಳಿಸಿದ್ದಾರೆ. ಬಳಿಕ ಅವರನ್ನು ಪೊಲೀಸರಿಗೆ ಒಪ್ಪಿಸಲಾಗಿದೆ. ಸ್ಥಳಕ್ಕೆ ಧಾವಿಸಿದ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಕೆಲವು ತಿಂಗಳ ಹಿಂದೆಯಷ್ಟೇ ಇದೇ ಸ್ವರ್ಣಮಂದಿರದಲ್ಲಿ ಇಂತಹದ್ದೇ ಒಂದು ಘಟನೆ ವರದಿಯಾಗಿತ್ತು. ಸಿಕ್ಖ್ ಧಾರ್ಮಿಕ ಸಂಸ್ಥೆ ಅಕಾಲ್ ತಖ್ತ್ನಿಂದ ಧರ್ಮದ್ರೋಹಕ್ಕಾಗಿ ಶಿಕ್ಷೆಗೆ ಗುರಿಯಾಗಿದ್ದ ಪಂಜಾಬ್ನ ಮಾಜಿ ಡಿಸಿಎಂ ಸುಖ್ಬೀರ್ ಸಿಂಗ್ ಬಾದಲ್(Sukhbir Singh Badal) ಮೇಲೆ ವ್ಯಕ್ತಿಯೊಬ್ಬ ಗುಂಡಿನ ದಾಳಿ ನಡೆಸಿ ಹತ್ಯೆಗೆ ಯತ್ನಿಸಿದ್ದ.2007-17ರವರೆಗೆ ಪಂಜಾಬ್ನ ಎಸ್ಎಡಿ ಸರ್ಕಾರವು ಸಿಖ್ ಧರ್ಮಗ್ರಂಥಕ್ಕೆ ಅವಮಾನಿಸಿದೆ ಮತ್ತು ಡೇರಾ ಸಚ್ಚಾ ಸೌದಾ ಮುಖ್ಯಸ್ಥ ಗುರ್ಮೀತ್ ರಾಮ್ ರಹೀಮ್ಗೆ ಬೆಂಬಲಿಸುವ ಮೂಲಕ ಧರ್ಮನಿಂದನೆ ನಡೆಸಿದೆ ಎಂದು ಅಕಾಲ್ ತಖ್ತ್ ಆಗಸ್ಟ್ನಲ್ಲಿ ತೀರ್ಪು ಪ್ರಕಟಿಸಿತ್ತು.
ಈ ಸುದ್ದಿಯನ್ನೂ ಓದಿ: ಸ್ವರ್ಣಮಂದಿರದ ಬಳಿ ಖಾಲಿಸ್ತಾನ್ ಪರ ಘೋಷಣೆ !
ಕುತ್ತಿಗೆಗೆ ಫಲಕ, ಕೈಯಲ್ಲಿ ಈಟಿ ಹಿಡಿದ ಸುಖ್ಬೀರ್ ಸಿಂಗ್, ತಮ್ಮ ಗಾಲಿ ಕುರ್ಚಿಯಲ್ಲಿ ಕುಳಿತೇ ಅಮೃತಸರದ ಸ್ವರ್ಣ ಮಂದಿರದ ಪ್ರವೇಶದ್ವಾರದ ಸೇವಾದಾರನ ವೃತ್ತಿ ನಿಭಾಯಿಸಿದ್ದರು. ಮತ್ತೋರ್ವ ಅಕಾಲಿ ದಳ ನಾಯಕ ಬಿಕ್ರಮ್ ಸಿಂಗ್ ಮಜೀಠಿಯಾ ಕೂಡ ಗುರುದ್ವಾರದ ಪಾತ್ರೆಗಳನ್ನು ತೊಳೆಯುವ ಮೂಲಕ ಶಿಕ್ಷೆಯನ್ನು ಪ್ರಾರಂಭಿಸಿದ್ದರು. ಅದರ ಮರು ದಿನವೇ ಬಾದಲ್ ಹತ್ಯೆಗೆ ಯತ್ನಿಸಲಾಗಿದೆ. ಅದೃಷ್ಟವಶಾತ್ ಅವರು ಅಪಾಯದಿಂದ ಪಾರಾಗಿದ್ದರು.