ಚೆನ್ನೈ, ಜೂ. 2: ಐಪಿಎಸ್ ಅಧಿಕಾರಿಯಾಗಿದ್ದಾಗ ತಮ್ಮ ಕಟ್ಟುನಿಟ್ಟಾದ ಕಾರ್ಯಶೈಲಿಯಿಂದ ʼಸಿಂಗಂ ಅಣ್ಣʼ ಎಂದು ಬಿರುದು ಪಡೆದ ನಿವೃತ್ತ ಪೊಲೀಸ್ ಅಧಿಕಾರಿ, ತಮಿಳುನಾಡಿನ ಪ್ರಮುಖ ಬಿಜೆಪಿ ನಾಯಕ ಕೆ. ಅಣ್ಣಾಮಲೈ (K Annamalai) ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡುವ ಮೂಲಕ ರಾಷ್ಟ್ರೀಯ ಮಟ್ಟದಲ್ಲಿ ಮತ್ತೊಮ್ಮೆ ಸುದ್ದಿಯಾಗಿದ್ದಾರೆ. 1984ರ ಜೂನ್ 4ರಂದು ತಮಿಳುನಾಡಿನ ಕರೂರು ಜಿಲ್ಲೆಯ ರೈತ ಕುಟುಂಬದಲ್ಲಿ ಜನಿಸಿದ ಅಣ್ಣಾಮಲೈ ಕೊಯಮತ್ತೂರಿನ ಪಿಎಸ್ಜಿ ಕಾಲೇಜ್ ಆಫ್ ಟೆಕ್ನಾಲಜಿ ಮತ್ತು ಲಖನೌ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ನಲ್ಲಿ ಶೀಕ್ಷಣ ಪೂರೈಸಿದರು.
2011ರ ಬ್ಯಾಚ್ನ ಐಪಿಎಸ್ ಅಧಿಕಾರಿಯಾಗಿ ಕರ್ನಾಟಕ ಕ್ಯಾಡರ್ಗೆ ಸೇರಿದ ಅಣ್ಣಾಮಲೈ, ಉಡುಪಿ ಮತ್ತು ಚಿಕ್ಕಮಗಳೂರು ಜಿಲ್ಲೆಗಳ ಎಸ್ಪಿ ಆಗಿ ಸೇವೆ ಸಲ್ಲಿಸಿದರು. ಬಳಿಕ ಬೆಂಗಳೂರಿನ ದಕ್ಷಿಣ ವಿಭಾಗದ ಡಿಸಿಪಿಯಾಗಿ ಕಾರ್ಯನಿರ್ವಹಿಸಿದರು. ಶಿಸ್ತಿನ ಕಾರ್ಯವೈಖರಿ, ಯಾವ ಪ್ರಭಾವಕ್ಕೂ ಒಳಗಾಗದ ಅವರ ವ್ಯಕ್ತಿತ್ವವನ್ನು ಗಮನಿಸಿ ಅವರಿಗೆ ʼಸಿಂಗಂʼ ಎಂಬ ಬಿರುದನ್ನು ಅಭಿಮಾನಿಗಳು ನೀಡಿದ್ದಾರೆ. ಅವರ ಬದುಕಿನ ಕುತೂಹಲದ ವಿವರ ಇಲ್ಲಿದೆ.
ಬಿಜೆಪಿಗೆ ಗುಡ್ ಬೈ ಹೇಳಿದ ಅಣ್ಣಾಮಲೈ; ನಿತಿನ್ ನಬಿನ್ಗೆ ರಾಜೀನಾಮೆ ಪತ್ರ ಹಸ್ತಾಂತರಿಸಿದ ʼಸಿಂಗಂʼ
- ಅಣ್ಣಾಮಲೈ ಅವರಿಗೆ ಈಗ 42 ವರ್ಷ. 2021ರಲ್ಲಿ ಅವರು ತಮಿಳುನಾಡಿನ ಅತ್ಯಂತ ಕಿರಿಯ ಬಿಜೆಪಿ ಅಧ್ಯಕ್ಷ ಎನಿಸಿಕೊಂಡರು.
- ಕೆ. ಅಣ್ಣಾಮಲೈ 2020ರಲ್ಲಿ ಬಿಜೆಪಿಗೆ ಸೇರ್ಪಡೆಗೊಂಡರು. ಯುವಜನತೆಯ ಅಪಾರ ಬೆಂಬಲ ಪಡೆದ ಅವರು ತಮಿಳುನಾಡಿನಲ್ಲಿ ಬಿಜೆಪಿಗೆ ಶಕ್ತಿ ತುಂಬಿದರು. ಬಹಳ ವೇಗವಾಗಿ ಜನಪ್ರಿಯತೆಯನ್ನೂ ಗಳಿಸಿದರು. ಫೈರ್ ಬ್ರ್ಯಾಂಡ್ ಎಂಬ ಹೆಸರೂ ಅವರಿಗಿದೆ.
- ಕರ್ನಾಟಕ ಕೇಡರ್ನ 2011ರ ಬ್ಯಾಚ್ ಐಪಿಎಸ್ ಅಧಿಕಾರಿ ಅಣ್ಣಾಮಲೈ ಚಿಕ್ಕಮಗಳೂರು ಮತ್ತು ಉಡುಪಿ ಜಿಲ್ಲೆಗಳಲ್ಲಿ ಪೊಲೀಸ್ ವರಿಷ್ಠಾಧಿಕಾರಿಯಾಗಿ ಕಾರ್ಯ ನಿರ್ವಹಿಸಿ ಜನಪ್ರಿಯತೆ ಪಡೆದರು. ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ಜನರ ವಿಶ್ವಾಸ ಗಳಿಸಿದರು. ಬೆಂಗಳೂರು ದಕ್ಷಿಣ ಉಪ ಪೊಲೀಸ್ ಆಯುಕ್ತರಾಗಿಯೂ ಗಮನಾರ್ಹ ಸೇವೆ ಸಲ್ಲಿಸಿದರು.
- ಪೊಲೀಸ್ ಅಧಿಕಾರಿಯಾಗಿ ಗಮನಾರ್ಯ ಸೇವೆ ಸಲ್ಲಿಸುತ್ತಿದ್ದ ಅಣ್ಣಾಮಲೈ 2019ರಲ್ಲಿ ದಿಢೀರ್ ಆಗಿ ರಾಜೀನಾಮೆ ಸಲ್ಲಿಸುವ ಮೂಲಕ ಅಚ್ಚರಿ ಮೂಡಿಸಿದರು.
- ಎಂಜಿನಿಯರಿಂಗ್ ಪದವೀಧರರಾಗಿರುವ ಅಣ್ಣಾಮಲೈ ಐಐಎಂ ಲಕ್ನೋದಲ್ಲಿ ಎಂಬಿಎ ಶಿಕ್ಷಣ ಪಡೆದಿದ್ದಾರೆ.
- ಪೊಲೀಸ್ ಫೋರ್ಸ್ನಲ್ಲಿ ಕೆಲಸ ಮಾಡುವಾಗ ಕೆ ಅಣ್ಣಾಮಲೈ ಅವರ ಕಟ್ಟುನಿಟ್ಟಾದ ಕಾರ್ಯಶೈಲಿಯ ಕಾರಣಕ್ಕೆ ʼಸಿಂಗಂ ಅಣ್ಣʼ ಎಂದೇ ಜನಪ್ರಿಯರಾದರು.
- ಅಣ್ಣಾಮಲೈ ಉಡುಪಿಯಲ್ಲಿ ಸೇವೆ ಸಲ್ಲಿಸುತ್ತಿರುವಾಗ ಧಾರ್ಮಿಕ ಗ್ರಂಥಗಳ ತಪ್ಪು ವ್ಯಾಖ್ಯಾನವನ್ನು ತಪ್ಪಿಸಲು ಇಸ್ಲಾಂ ಧರ್ಮದ ಅಧ್ಯಯನ ಮಾಡಿದರು. ಧಾರ್ಮಿಕ ವಿದ್ವಾಂಸರ ಸಹಾಯದಿಂದ ಖುರಾನ್ ಮತ್ತು ಹದೀಸ್ ಓದಿದರು.
- 2018ರಲ್ಲಿ ಕೈಗೊಂಡಿದ್ದ ಕೈಲಾಸ ಮಾನಸ ಸರೋವರ ಪ್ರವಾಸವು ಅಣ್ಣಾಮಲೈ ಅವರ ಜೀವನಕ್ಕೆ ಮಹತ್ವದ ತಿರುವು ನೀಡಿತು. ಪೊಲೀಸ್ ಅಧಿಕಾರಿ ಹುದ್ದೆಗೆ ರಾಜೀನಾಮೆ ನೀಡುವಾಗ ಅವರು, ʼʼಇದು ನಾನು ತಕ್ಷಣ ತೆಗೆದುಕೊಂಡು ನಿರ್ಧಾರವಲ್ಲ. 2018ರಲ್ಲಿ ಕೈಗೊಂಡಿದ್ದ ಕೈಲಾಸ ಮಾನಸ ಸರೋವರ ಪ್ರವಾಸವು ನನ್ನ ಜೀವನವನ್ನು ಹಿಂತಿರುಗಿ ನೋಡುವಂತೆ ಮಾಡಿದೆʼʼ ಎಂದು ಉಲ್ಲೇಖಿಸಿದ್ದರು.
- 2023ರಲ್ಲಿ ಅಣ್ಣಾಮಲೈ ‘ಎನ್ ಮನ್ ಎನ್ ಮಕ್ಕಳ್ʼ (ನನ್ನ ಭೂಮಿ ನನ್ನ ಜನರು) ಯಾತ್ರೆಯನ್ನು ತಮಿಳುನಾಡಿನಾದ್ಯಂತ ಯಶಸ್ವಿಯಾಗಿ ನಡೆಸಿದರು.