ದೆಹಲಿ, ಏ. 16: ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (Delhi Airport) ಗುರುವಾರ (ಏಪ್ರಿಲ್ 16) ದುರಂತವೊಂದು ನಡೆದಿದ್ದು, ಆಕಾಸ-ಸ್ಪೈಸ್ಜೆಟ್ ವಿಮಾನಗಳು ಪರಸ್ಪರ ಡಿಕ್ಕಿ ಹೊಡೆದಿವೆ. ಅದೃಷ್ಟವಶಾತ್ ಯಾವುದೇ ಹಾನಿ ಸಂಭವಿಸಿಲ್ಲ. ಘಟನೆಯಲ್ಲಿ ಎರಡೂ ವಿಮಾನದ ರೆಕ್ಕೆಗಳಿಗೆ ಹಾನಿಯಾಗಿದೆ ಎಂದು ಮೂಲಗಳು ತಿಳಿಸಿವೆ. ಸ್ಪೈಸ್ಜೆಟ್ ಬಿ737-700 ವಿಮಾನದ ಬಲ ಭಾಗದ ರೆಕ್ಕೆಗೆ ಹಾನಿಯಾದರೆ, ಅಕಾಸ ಏರ್ ವಿಮಾನದ ಎಡ ಭಾಗ ಹಾನಿಗೊಳಗಾಗಿದೆ. ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದು, ತನಿಖೆಗೆ ಆದೇಶಿಸಲಾಗಿದೆ.
ʼʼಇದು ಸಣ್ಣ ಮಟ್ಟದ ಡಿಕ್ಕಿಯಾಗಿದ್ದು, ಯಾರಿಗೂ ಗಾಯವಾಗಿಲ್ಲʼʼ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಮಧ್ಯಾಹ್ನ ಸುಮಾರು 2 ಗಂಟೆ ವೇಳೆಗೆ ಈ ಅಪಘಾತ ಸಂಭವಿಸಿದೆ. ಘಟನೆ ವೇಳೆ ಲೇಹ್ನಿಂದ ಆಗಮಿಸಿದ ಸ್ಪೈಸ್ಜೆಟ್ ವಿಮಾನ ರನ್ವೇಯಿಂದ ಪಾರ್ಕಿಂಗ್ ಬೇ ಕಡೆಗೆ ಸಾಗುತ್ತಿತ್ತು. ಇದೇ ವೇಳೆ ಹೈದರಾಬಾದ್ಗೆ ಹೊರಡಲು ಸಿದ್ಧವಾಗುತ್ತಿದ್ದ ಆಕಾಸ ಏರ್ ಸಂಸ್ಥೆಯ QP 1406 ವಿಮಾನಕ್ಕೆ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ. ಡಿಕ್ಕಿಯ ತೀವ್ರತೆ ಕಡಿಮೆ ಇದ್ದುದರಿಂದ ಯಾವುದೇ ಅನಾಹುತ ಸಂಭವಿಸಿಲ್ಲ.
ಘಟನೆ ವಿವರ:
ಪರ್ಯಾಯ ವ್ಯವಸ್ಥೆ
"ಘಟನೆಯ ಬಳಿಕ ಎಲ್ಲ ಪ್ರಯಾಣಿಕರು ಮತ್ತು ಸಿಬ್ಬಂದಿಯನ್ನು ಸುರಕ್ಷಿತವಾಗಿ ಕೆಳಗೆ ಇಳಿಸಲಾಯಿತು. ನಮ್ಮ ಪ್ರಯಾಣಿಕರಿಗೆ ಪರ್ಯಾಯ ವ್ಯವಸ್ಥೆ ಮಾಡಲಾಗುತ್ತಿದೆ. ಅವರನ್ನು ಆದಷ್ಟು ಬೇಗ ಹೈದರಾಬಾದ್ಗೆ ಕರೆದೊಯ್ಯಲು ಕಾರ್ಯ ಪ್ರವೃತ್ತರಾಗಿದ್ದೇವೆ" ಎಂದು ಆಕಾಸ ಏರ್ ಸಂಸ್ಥೆಯ ವಕ್ತಾರರು ಹೇಳಿದ್ದಾರೆ. ಪ್ರಯಾಣಿಕರ ಸುರಕ್ಷತೆ ತನ್ನ ಪ್ರಮುಖ ಆದ್ಯತೆ ಎಂದು ವಿಮಾನಯಾನ ಸಂಸ್ಥೆ ತಿಳಿಸಿದೆ.
ಸ್ಪೈಸ್ಜೆಟ್ ವಕ್ತಾರರು ಹೇಳಿದ್ದೇನು?
ಇದಕ್ಕೂ ಮೊದಲು, ಸ್ಪೈಸ್ಜೆಟ್ ವಿಮಾನಯಾನ ಸಂಸ್ಥೆಯ ಅಪಘಾತದ ಬಗ್ಗೆ ಮಾಹಿತಿ ಹಂಚಿಕೊಂಡಿತ್ತು. “ದೆಹಲಿ ವಿಮಾನ ನಿಲ್ದಾಣದಲ್ಲಿ ಟ್ಯಾಕ್ಸಿ ಮಾಡುವಾಗ ಸ್ಪೈಸ್ಜೆಟ್ B737-700 ವಿಮಾನವು ಚಿಕ್ಕ ಆಪಘಾತಕ್ಕೆ ಒಳಗಾಗಿದೆ. ಇದರ ಪರಿಣಾಮವಾಗಿ ವಿಮಾನದ ಬಲ ಭಾಗದ ರೆಕ್ಕೆಗೆ ಹಾನಿಯಾಗಿದೆ” ಎಂದು ಹೇಳಿತ್ತು. ಅಪಘಾತದ ಬಗ್ಗೆ ನಾಗರಿಕ ವಿಮಾನಯಾನ ನಿರ್ದೇಶನಾಲಯ (DGCA) ಇನ್ನೂ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿಲ್ಲ.
ವಿಮಾನದಲ್ಲೇ ಕುಸಿದು ಬಿದ್ದ ಪೈಲಟ್, ಬೆಂಗಳೂರು- ದಿಲ್ಲಿ ವಿಮಾನ ವಿಳಂಬ
ತುರ್ತು ಭೂಸ್ಪರ್ಶ ಮಾಡಿದ್ದ ಸ್ಪೈಸ್ಜೆಟ್ ವಿಮಾನ
ಕಳೆದ ವರ್ಷ ಸೆಪ್ಟೆಂಬರ್ನಲ್ಲಿ ಸ್ಪೈಸ್ಜೆಟ್ ವಿಮಾನದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡು ಅದನ್ನು ಮುಂಬೈಯಲ್ಲಿ ತುರ್ತು ಭೂಸ್ಪರ್ಶ ಮಾಡಲಾಗಿತ್ತು. ಗುಜರಾತ್ನ ಕಾಂಡ್ಲಾದಿಂದ 75 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ವೇಳೆ ಈ ಘಟನೆ ನಡೆದಿತ್ತು. ಕಾಂಡ್ಲಾ ವಿಮಾನ ನಿಲ್ದಾಣದಲ್ಲಿ ಟೇಕ್ ಆಫ್ ಆಗುವ ಸಮಯದಲ್ಲಿ ವಿಮಾನದ ಹೊರ ಚಕ್ರಗಳಲ್ಲಿ ಒಂದು ಕಳಚಿ ಬಿದ್ದಿತು. ಕಾಂಡ್ಲಾದಿಂದ ಮುಂಬೈಗೆ ಹಾರುತ್ತಿದ್ದ ಎಸ್ ಜಿ 2906 ವಿಮಾನವು ಟೇಕ್ ಆಫ್ ಆಗುವಾಗ ಈ ಘಟನೆ ನಡೆದಿತ್ತು. ಹೀಗಾಗಿ ತಕ್ಷಣ ಸ್ಪೈಸ್ ಜೆಟ್ ವಿಮಾನವನ್ನು ತುರ್ತು ಲ್ಯಾಂಡಿಂಗ್ ಮಾಡಲಾಗಿತ್ತು. ಆ ಮೂಲಕ ಭಾರಿ ದುರಂತವೊಂದು ತಪ್ಪಿತ್ತು.
ʼʼವಿಮಾನವು ಟರ್ಮಿನಲ್ ಗೆ ಟ್ಯಾಕ್ಸಿ ಮಾಡಿದ್ದು ಪ್ರಯಾಣಿಕರು ಸುರಕ್ಷಿತವಾಗಿ ಇಳಿದಿದ್ದಾರೆ. ಮುನ್ನೆಚ್ಚರಿಕೆ ಕ್ರಮವಾಗಿ ವಿಮಾನ ನಿಲ್ದಾಣದಲ್ಲಿ ಪೂರ್ಣ ತುರ್ತು ಪರಿಸ್ಥಿತಿಯನ್ನು ಘೋಷಿಸಲಾಯಿತುʼʼ ಎಂದು ವಕ್ತಾರರು ತಿಳಿಸಿದ್ದರು.
ದೇಶದ ಇನ್ನಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
ʼಪ್ರವಾಸಿ ಪ್ರಪಂಚʼ ವೆಬ್ಸೈಟ್ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ.